Advertisement

ಆಮಿಷವೊಡ್ಡಿ ಮತಾಂತರ; ಠಾಣೆಗೆ ಮುತ್ತಿಗೆ; ಮತಾಂತರಿಗಳ ವಿರುದ್ಧ ಕ್ರಮಕ್ಕೆ ದೂರು

06:19 PM Nov 16, 2022 | Team Udayavani |

ಹುಬ್ಬಳ್ಳಿ: ಶಿಕ್ಕಲಗಾರ ಸಮಾಜದವರನ್ನೇ ಗುರಿಯಾಗಿಸಿಕೊಂಡು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಮಾಜದವರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ಮಂಗಳವಾರ ಹಳೇಹುಬ್ಬಳ್ಳಿ ಠಾಣೆಗೆ ಮುತ್ತಿಗೆ ಹಾಕಿದರು.

Advertisement

ಶಿಕ್ಕಲಗಾರ ಸಮಾಜದವರು ಮುಖಂಡ ರೊಂದಿಗೆ ಸಭೆ ನಡೆಸಿ, ನಂತರ ಹಳೇಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಬಳಿಯ ಶಿವಶಂಕರ ಕಾಲೋನಿಯಿಂದ ಹಳೇಹುಬ್ಬಳ್ಳಿ ಠಾಣೆಗೆ ಆಗಮಿಸಿದರು. ಆರ್ಥಿಕವಾಗಿ, ಶೈಕ್ಷಣಿ ಕವಾಗಿ ಹಿಂದುಳಿದಿರುವ ಸಮಾಜದವರ ಬಡತನವನ್ನೇ ನೆಪವಾಗಿಸಿಕೊಂಡು ಕೆಲವು ಕ್ರಿಶ್ಚಿಯನ್‌ ಮಿಷನರಿಗಳು ಹಲವು ಬಗೆಯ ಆಸೆ-ಆಮಿಷವೊಡ್ಡಿ ಹಾಗೂ ಮೂಢನಂಬಿಕೆ ಮೂಡಿಸಿ 30ಕ್ಕೂ ಹೆಚ್ಚು ಕುಟುಂಬಗಳನ್ನು ಮತಾಂತರಗೊಳಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನೇ ಗುರಿಯಾಸಿ ಆ ಕುಟುಂಬವನ್ನೇ ಒಡೆದು ಮತಾಂತರ ಮಾಡುತ್ತಿದ್ದಾರೆ. ಸಮಾಜದ ಕೆಲವರನ್ನು ಫಾಸ್ಟರ್‌ನ್ನಾಗಿ ಮಾಡಿ ಅವರ ಮೂಲಕ ಸಮಾಜದ ಇತರರ ಮೇಲೆ ಪ್ರಭಾವ ಬೀರುವ ಕುತಂತ್ರ ಮಾಡುತ್ತಿದ್ದಾರೆ. ಮತಾಂತರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದರು.

ಪೊಲೀಸರು ಅವರ ಮನವೊಲಿಸಿ, ನೀವು ದೂರು ಕೊಟ್ಟರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ತದನಂತರ ಹಿಂದುಪರ ಸಂಘಟನೆಗಳ ಮುಖಂಡರು, ಶ್ರೀ ಗುರುಭಜಕ ಶಿಕ್ಕಲಗಾರ ಸಮಾಜ ಸುಧಾರಣಾ ಹಾಗೂ ಸೇವಾ ಸಂಘದ ಪದಾಧಿಕಾರಿಗಳು, ಇತರರು ಕೆಲವು ಚರ್ಚ್‌ಗಳ ಪಾದ್ರಿ, ಫಾಸ್ಟರ್‌ಗಳ ವಿರುದ್ಧ ದೂರು ಸಲ್ಲಿಸಿದರು.

ಸಮಾಜದ ಅಧ್ಯಕ್ಷ ಜೈರಾಜ ಡೋಂಗಿ, ಉಪಾಧ್ಯಕ್ಷ ಕೃಷ್ಣ ಕನಾನ, ಕಾರ್ಯದರ್ಶಿ ಬಸವರಾಜ ರಾಮಜಿ, ಖಜಾಂಚಿ ಚಂದ್ರು ಪೂಜಾರ, ಸಂಘಟನಾ ಕಾರ್ಯದರ್ಶಿ ದ್ಯಾಮಣ್ಣ ಡೋಂಗಿ, ಪ್ರಕಾಶ ಕಟ್ಟಿಮನಿ, ಗುರು ವೀರಾಪುರ, ಹರೀಶ ಜಂಗ್ಲಿ, ಅಶೋಕ ಕಟ್ಟಿಮನಿ, ಪ್ರಕಾಶ ಒಂಟಮನಿ, ಶಾಮ ಕನಾನ, ಕಿಶನ ಬಿಲಾನಾ, ಮಂಜುನಾಥ ಕೌದಿ, ದುರ್ಗಪ್ಪ ಮುದ್ದಿ, ನಾಗೇಶ ಕಟ್ಟಿಮನಿ, ಅಶೋಕ ಮುದ್ದಿ, ರಾಮಚಂದ್ರ ದೊಡ್ಡಮನಿ ಹಾಗೂ ಹಿಂದುಪರ ಸಂಘಟನೆಗಳ
ಮುಖಂಡರಾದ ಜಯತೀರ್ಥ ಕಟ್ಟಿ, ವಿಜಯ ಕ್ಷೀರಸಾಗರ ಮೊದಲಾದವರಿದ್ದರು.

ಬಯಲಾದದ್ದು ಹೇಗೆ?
ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಪತ್ನಿ ಪಟ್ಟು ಹಿಡಿದಿದ್ದರಿಂದ ನೊಂದ ಪತಿಯು ಸಮಾಜದವರ ಗಮನಕ್ಕೆ ತಂದಾಗಲೇ ಮತಾಂತರ ಪ್ರಕರಣ ಬಯಲಾಗಿದೆ. ಹಳೇ ಹುಬ್ಬಳ್ಳಿ ಶಿವಶಂಕರ ಕಾಲೋನಿಯ ಸಂಪತ್‌ ಬಗನಿ ಎನ್ನುವರ ಪತ್ನಿಯು ನೀನು ಮತಾಂತರವಾಗಬೇಕು. ಇಲ್ಲವಾದರೆ ಸಂಸಾರ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಈ ವಿಚಾರವಾಗಿ ದಂಪತಿಯು ಠಾಣೆ ಮೆಟ್ಟಿಲೇರಿದ್ದರು. ಆಗ ಪೊಲೀಸರು ಅವರನ್ನು ಸಮಾಧಾನಪಡಿಸಿ ಕಳುಹಿಸಿದ್ದರು. ಆದರೂ ಮತಾಂತರಕ್ಕೆ ಪತ್ನಿಯ ಕಿರುಕುಳ ಹೆಚ್ಚಾಗಿದ್ದರಿಂದ ರೋಸಿಹೋದ ಸಂಪತ್‌ ಶಿಕ್ಕಲಗಾರ ಸಮಾಜದ ಮುಖಂಡರ ಗಮನಕ್ಕೆ ತಂದಿದ್ದಾರೆ. ಆಗ ಸಮಾಜದ ಮುಖಂಡರು, ಸಮಾಜದವರು ಒಗ್ಗೂಡಿ ಠಾಣೆಗೆ ಬಂದು ಮತಾಂತರ ಮಾಡುತ್ತಿರುವ 28 ಜನರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಾಹಿಲ್‌ ಬಾಗ್ಲಾ ಅವರ ಮೂಲಕ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

Advertisement

ನಗರದಲ್ಲಿ ಶಿಕ್ಕಲಗಾರ ಸಮಾಜದವರು ವಾಸಿಸುತ್ತಿರುವ ಆರೇಳು ಓಣಿಗಳಲ್ಲಿ ಕ್ರಿಶ್ಚಿಯನ್‌ ಮಿಷನರಿಗಳ ಫಾಸ್ಟರ್‌ಗಳು ಮನೆ ಮನೆಗೆ ತೆರಳಿ ಆಮಿಷವೊಡ್ಡಿ ಮನಸಾಂತರ ಎಂಬ ಹೊಸ ಹೆಸರಲ್ಲಿ ಮತಾಂತರ ಮಾಡುತ್ತಿದ್ದಾರೆ. ಕುಟುಂಬ ಒಡೆಯುವ ಕೆಲಸ ಮಾಡುತ್ತಿದ್ದಾರೆ. 3-4 ತಿಂಗಳ ಹಿಂದೆ ನವನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇಂತಹ ಘಟನೆ ನಡೆದಿತ್ತು. ಮತಾಂತರ ಮಾಡುತ್ತಿರುವವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಪೊಲೀಸರು ಕ್ರಮಕೈಗೊಳ್ಳಬೇಕು. ಅಕ್ರಮವಾಗಿ ನಡೆಯುತ್ತಿರುವ ಚರ್ಚ್‌ಗಳನ್ನು ಮುಚ್ಚಬೇಕು. ಇಲ್ಲವಾದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ.
ಜಯತೀರ್ಥ ಕಟ್ಟಿ,
ಹಿಂದುಪರ ಸಂಘಟನೆ ಮುಖಂಡ

ಶಿಕ್ಕಲಗಾರ ಸಮಾಜ ಅತೀ ಹಿಂದುಳಿದ ಹಾಗೂ ಕಡಿಮೆ ಜನಸಂಖ್ಯೆ ಇರುವ ಸಮಾಜ. ಆದರೆ ಸಮಾಜದವರಿಗೆ ಇನ್ನಿಲ್ಲದ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ. ಈಗಾಗಲೇ ನಗರದ ವಿವಿಧ ಪ್ರದೇಶಗಳಲ್ಲಿ ವಾಸುತ್ತಿರುವ ಸಮಾಜದ 30 ಜನರನ್ನು ಕ್ರಿಶ್ಚಿಯನ್‌ ಸಮಾಜಕ್ಕೆ ಮತಾಂತರ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದನ್ನು ತಡೆಗಟ್ಟಬೇಕು.
ಜೈರಾಜ ಡೋಂಗಿ, ಅಧ್ಯಕ್ಷ,
ಶ್ರೀ ಗುರುಭಜಕ ಶಿಕ್ಕಲಗಾರ ಸಮಾಜ
ಸುಧಾರಣಾ ಹಾಗೂ ಸೇವಾ ಸಂಘ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next