Advertisement

ಆಧುನಿಕ ತಂತ್ರೋಪಕರಣ ಬಳಸಿ ಇಂಗ್ಲಿಷ್ ಸಂವಹನ ತರಬೇತಿ: ಅಶ್ವತ್ಥನಾರಾಯಣ

03:42 PM Jan 07, 2023 | Team Udayavani |

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಸಂವಹನ ಕೌಶಲವನ್ನು ಹೆಚ್ಚಿಸಿ ಅವರ ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಆಧುನಿಕ ತಂತ್ರೋಪಕರಣಗಳ ನೆರವಿನಿಂದ ತರಬೇತಿ ಕೊಡಲು ಒತ್ತು ನೀಡಲಾಗಿದೆ ಎಂದು ಕೌಶಲಾಭಿವೃದ್ಧಿ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ ಶನಿವಾರ ಹೇಳಿದರು.

Advertisement

ಮಲ್ಲೇಶ್ವರದ 13ನೇ ಕ್ರಾಸ್ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೌಶಲಾಭಿವೃದ್ಧಿ ನಿಗಮದ ವತಿಯಿಂದ ‘ಸಂಕಲ್ಪ್’ ಉಪಕ್ರಮದಡಿ ಸ್ಥಾಪಿಸಿರುವ ಭಾಷಾ ಪ್ರಯೋಗಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 2022ರ ಜನವರಿಯಿಂದ ಈಚೆಗೆ 6 ಕಡೆಗಳಲ್ಲಿ ಇಂತಹ ಭಾಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಈ ಸಾಲಿನಲ್ಲಿ ಇದುವರೆಗೆ ಈ ಪ್ರಯೋಗಾಲಯಗಳಲ್ಲಿ 784 ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗಿದೆ ಎಂದು ವಿವರಿಸಿದರು.

ಈ ಪ್ರಯೋಗಾಲಯಗಳಲ್ಲಿ ಹೆಡ್ ಸೆಟ್, ಮೈಕ್ರೋಫೋನ್, ಪ್ರೊಜೆಕ್ಟರ್ ಇತ್ಯಾದಿಗಳನ್ನು ಬಳಸಿ ಇಂಗ್ಲಿಷ್ ಸಂವಹನ ಕಲಿಸಲಾಗುವುದು. ಇಂಗ್ಲಿಷ್ ಉಚ್ಚಾರಣೆ ಸೇರಿದಂತೆ ಹಲವು ಅಂಶಗಳಿಗೆ ಗಮನ ಕೊಡಲಾಗುತ್ತದೆ. ನಮ್ಮ ಮಾತೃಭಾಷೆ ಕನ್ನಡದಂತೆಯೇ ವಿದ್ಯಾರ್ಥಿಗಳು ಇಂಗ್ಲೀಷ್ ನಲ್ಲಿಯೂ ಹಿಡಿತ ಸಾಧಿಸಬೇಕೆಂಬ ಆಶಯದೊಂದಿಗೆ ತರಬೇತಿಯನ್ನು ಕೊಡಲಾಗುತ್ತದೆ ಎಂದರು.

ಈ ಕೇಂದ್ರವನ್ನು ಹೊರತುಪಡಿಸಿ ಚಳ್ಳಕೆರೆ, ಕೊಪ್ಪಳ, ಯಾದಗಿರಿಗಳಲ್ಲಿರುವ ಜಿಟಿಟಿಸಿ ಗಳು, ಕೊಳ್ಳೇಗಾಲದಲ್ಲಿರುವ ಸರ್ಕಾರಿ ಐಟಿಐ ಮತ್ತು ಮಂಗಳೂರಿನಲ್ಲಿರುವ ಸರ್ಕಾರಿ ಮಹಿಳಾ ಐಟಿಐ ಗಳಲ್ಲಿ ಈ ಭಾಷಾ ಪ್ರಯೋಗಗಳು ಕಾರ್ಯಾಚರಿಸುತ್ತಿವೆ. ಮಂಡ್ಯ ವಿಶ್ವವಿದ್ಯಾಲಯದಲ್ಲಿ ಇಂತಹ ಪ್ರಯೋಗಾಲಯ ಶೀಘ್ರವೇ ಸ್ಥಾಪನೆಯಾಗಲಿದೆ ಎಂದು ಸಚಿವರು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ನಿಗಮ ಜಂಟಿ ನಿರ್ದೇಶಕ ಕೃಷ್ಣಮೂರ್ತಿ, ಕಾಲೇಜಿನ ಪ್ರಾಂಶುಪಾಲರಾದ ರವಿ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next