Advertisement

ಸರಕಾರಿ ಶಾಲಾ ಮಕ್ಕಳಿಗೆ ಇಂಗ್ಲಿಷ್‌ ಸಂವಹನ ತರಬೇತಿ : ಬ್ರಹ್ಮಾವರ ವಲಯದ ಮಾದರಿ ಯೋಜನೆ

11:58 PM Jul 21, 2021 | Team Udayavani |

ಕೋಟ: ಪ್ರಾಥಮಿಕ ಕನ್ನಡ ಶಾಲಾ ಶಿಕ್ಷಕರಿಗೆ ಉತ್ತಮ ತರಬೇತಿ ನೀಡಿ, ವಿದ್ಯಾರ್ಥಿಗಳ ಇಂಗ್ಲಿಷ್‌ ಸಂವಹನ ಕೌಶಲ ವೃದ್ಧಿಸುವ ಉದ್ದೇಶದ “ಇಂಗ್ಲಿಷ್‌ ಸಂವಹನ ಸಾಮರ್ಥ್ಯ ವೃದ್ಧಿ ಯೋಜನೆ’ಯನ್ನು ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಅಳವಡಿಸಿಕೊಂಡಿದ್ದು, ರಾಜ್ಯಕ್ಕೆ ಮಾದರಿಯಾಗಿದೆ.

Advertisement

ಮಕ್ಕಳು ಇಂಗ್ಲಿಷ್‌ನಲ್ಲಿ ಸುಲಲಿತವಾಗಿ ಮಾತ ನಾಡಬೇಕು ಎನ್ನುವ ಬಯಕೆ ಹೆತ್ತವರದು. ಇದೇ ಕಾರಣಕ್ಕೆ ಅನೇಕರು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿ ಸಲು ಹಿಂದೆ ಸರಿಯುತ್ತಾರೆ. ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರು ಆಂಗ್ಲಭಾಷೆ ಕಲಿಸಲು ಸಶಕ್ತರಾಗಿದ್ದರೂ ಸಂವಹನ ಕೌಶಲ ತರಬೇತಿಯ ಕೊರತೆ ಇದೆ.

“ನ್ಪೋಕನ್‌ ಇಂಗ್ಲಿಷ್‌ ಎಂಪವರ್‌ ಮೆಂಟ್‌ ಪೋಗ್ರಾಮ್‌’ನಲ್ಲಿ ಶಿಕ್ಷಕರಿಗೆ ನಿಯಮ ಬದ್ಧ, ನಿರಂತರವಾಗಿ ವಿಶೇಷ ತರಬೇತಿ ನೀಡಲಾಗುತ್ತಿದೆ.

ಶಿಕ್ಷಕರಿಗೆ ತರಬೇತಿ
ಬ್ರಹ್ಮಾವರ ವಲಯದಲ್ಲಿ 93 ಸರಕಾರಿ ಪ್ರಾ. ಶಾಲೆಗಳಿದ್ದು, 25 ಶಾಲೆ ಗಳನ್ನು ಆಯ್ದು ಕೊಂಡು, ವರ್ಷವಿಡೀ ಇಂಗ್ಲಿಷ್‌ ಚಟುವಟಿಕೆ ನಡೆಸಲು ಬದ್ಧರಾಗಿರುವ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲಾಯಿತು. 2021ರ ಎ. 3ರಿಂದ ಪ್ರತೀ ಶನಿವಾರ ಅಪರಾಹ್ನ ಬ್ರಹ್ಮಾವರದ ಬಿ.ಆರ್‌.ಸಿ. ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ಅತ್ಯುತ್ತಮ ಇಂಗ್ಲಿಷ್‌ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಸಂವಹನ ತಂತ್ರಗಳ ತರಬೇತಿ ನೀಡಲಾಯಿತು.

ಲಾಕ್‌ಡೌನ್‌ ಕಾರಣ ಕಾರ್ಯಕ್ರಮ ಸ್ಥಗಿತಗೊಳ್ಳಲು ಬಿಡದೆ ಆನ್‌ಲೈನ್‌ ಆಗಿ ಹಮ್ಮಿಕೊಳ್ಳಲಾಯಿತು. ಬಿಇಒ ಒ.ಆರ್‌. ಪ್ರಕಾಶ್‌, ಸಮನ್ವ ಯಾಧಿಕಾರಿ ಅರ್ಚನಾ ಹೆಗ್ಡೆ, ಬಿಆರ್‌ಪಿ ಮಂಜುನಾಥ ಹೊಳ್ಳ, ಲಕ್ಷ್ಮೀ, ಶಂಭು ಶಂಕರ್‌ ಕಾರ್ಯಕ್ರಮದ ಅನುಷ್ಠಾನಕ್ಕೆ ಸಹಕರಿಸಿದ್ದಾರೆ. ಬಿಆರ್‌ಪಿ ಉದಯ ಕೋಟ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿದ್ದರು.

Advertisement

ವಿದ್ಯಾರ್ಥಿಗಳಿಗೆ ಅನುಷ್ಠಾನ
ಆರಂಭದಲ್ಲಿ ಇದ್ದುದು ಶಾಲೆಗಳಲ್ಲಿ ನೇರ ತರಗತಿಯ ಮೂಲಕ ಮಕ್ಕಳಿಗೆ ಇಂಗ್ಲಿಷ್‌ ಸಂವಹನ ಕೌಶಲ ಹೆಚ್ಚಿಸುವ ಗುರಿ. ಕೋವಿಡ್‌ ಸಮಸ್ಯೆ ಎದುರಾದಾಗ ಜೂ. 15ರಿಂದ ಅದನ್ನು ಆನ್‌ಲೈನ್‌ ಆಗಿ ಮುಂದುವರಿಸಲಾಯಿತು. ಪ್ರತೀ ದಿನ ಒಂದೆರಡು ತಾಸು ಇಂಗ್ಲಿಷ್‌ ತರಬೇತಿಗೆ ಮೀಸಲಿಟ್ಟಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ತೊಡಗಿಕೊಳ್ಳುತ್ತಿದ್ದಾರೆ. ಹೆತ್ತವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಂತಹಂತವಾಗಿ ಎಲ್ಲ ಶಾಲೆಗಳಿಗೆ
ಬ್ರಹ್ಮಾವರ ವಲಯದ ಕೋಡಿ ಬೆಂಗ್ರೆ, ಚೇರ್ಕಾಡಿ, ಬಾಳುದ್ರು, ಮಿಯಾರ ಬೆಟ್ಟು, ಹಂಗಾರಕಟ್ಟೆ, ಕಾರ್ಕಡ, ಸಗ್ರಿ ನೋಳೆ, ಶಿರಿ ಯಾರ, ಪಡುಕರೆ-ಮಣೂರು, ಕೋಟತಟ್ಟು, ಕುಕ್ಕೆಹಳ್ಳಿ, ಸಾೖಬ್ರಕಟ್ಟೆ, ಹೊಸಾಳ, ಕೋಟ, ನುಕ್ಕೂರು, ಹೊಸಾಳ ಸೇರಿದಂತೆ ಒಟ್ಟು 25 ಪ್ರಾಥಮಿಕ ಶಾಲೆಗಳ ಶಿಕ್ಷಕರು ತರಬೇತಿ ಪಡೆದು ಮಕ್ಕಳಿಗೆ ಅನುಷ್ಠಾನಗೊಳಿಸಿದ್ದಾರೆ. ಕಾರ್ಯಕ್ರಮವನ್ನು ಉಳಿದ 68 ಶಾಲೆಗಳಿಗೂ ವಿಸ್ತರಿಸುವ ಇರಾದೆ ಕ್ಷೇತ್ರ ಶಿಕ್ಷಣ ಇಲಾಖೆಗಿದೆ. ನೇರ ತರಗತಿ ಆರಂಭವಾದ ಬಳಿಕ ವಾರದಲ್ಲಿ ಮೂರ್‍ನಾಲ್ಕು ಅವಧಿಗಳನ್ನು ಇದಕ್ಕೆ ಮೀಸಲಿಡಲು ನಿರ್ಧರಿಸಲಾಗಿದೆ.

ಸರಕಾರಿ ಶಾಲೆಗಳ ಮಕ್ಕಳು ನಿರರ್ಗಳವಾಗಿ ಇಂಗ್ಲಿಷ್‌ ಸಂವಹನ ನಡೆಸಬೇಕು, ನಮ್ಮ ಮಕ್ಕಳಲ್ಲೂ ಆತ್ಮವಿಶ್ವಾಸ ಬೆಳೆಸಬೇಕು ಎಂದು ಯೋಜನೆ ಆರಂಭಿಸಿದೆವು. ಪ್ರಥಮ ಹಂತದ ತರಬೇತಿ ಮತ್ತು ಅನುಷ್ಠಾನ ಯಶಸ್ವಿಯಾಗಿ ನಡೆದಿದೆ.
– ಒ.ಆರ್‌. ಪ್ರಕಾಶ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಬ್ರಹ್ಮಾವರ

ಆಂಗ್ಲ ಸಂವಹನ ತರಗತಿ ಉತ್ತಮವಾಗಿ ನಡೆಯುತ್ತಿದೆ. ಶಿಕ್ಷಕರು ಹೇಳಿ ಕೊಡುವು ದನ್ನು ಮಕ್ಕಳು ಚೆನ್ನಾಗಿ ಗ್ರಹಿಸು ತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳಲ್ಲೂ ಆಂಗ್ಲ ಮಾಧ್ಯಮಕ್ಕೆ ಸರಿಸಾಟಿಯಾದ ಗುಣಮಟ್ಟದ ಶಿಕ್ಷಣ ಪಡೆಯಲು ಇದು ಸಹಕಾರಿ.
– ಆಶಾ ಮಣಿಕಾಂತ್‌, ಕೋಡಿಬೆಂಗ್ರೆ, ವಿದ್ಯಾರ್ಥಿಯ ಹೆತ್ತವರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next