Advertisement

ಆರೆಸ್ಸೆಸ್‌ ಸಂಸ್ಕಾರದಿಂದ ಶಕ್ತಿ ನಿರ್ಮಾಣ

03:54 PM Oct 18, 2021 | Team Udayavani |

ಧಾರವಾಡ: ದೇಶದಲ್ಲಿ ಆರೆಸ್ಸೆಸ್‌ ಚಟುವಟಿಕೆ ಗಮನಿಸಿರುವ ತಾಲಿಬಾನ್‌ ಉಗ್ರಗಾಮಿಗಳಿಗೆ ಸಹ ಸದ್ಯಕ್ಕೆ ಭಾರತಕ್ಕೆ ಏನೂ ಮಾಡಲು ಸಾಧ್ಯವಿಲ್ಲ ಎಂಬುದು ಅನಿಸಿದೆ ಎಂದು ಧಾರವಾಡ ವಿಭಾಗ ಬೌದ್ಧಿಕ್‌ ಪ್ರಮುಖ ಗುರುರಾಜ ಕುಲಕರ್ಣಿ ಹೇಳಿದರು. ನಗರದ ಕರ್ನಾಟಕ ಹೈಸ್ಕೂಲ್‌ ಮೈದಾನದಲ್ಲಿ ವಿಜಯದಶಮಿ ಪ್ರಯುಕ್ತ ಆರೆಸ್ಸೆಸ್‌ ಹಮ್ಮಿಕೊಂಡಿದ್ದ ಪಥಸಂಚಲನ ಮುಕ್ತಾಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಆರೆಸ್ಸೆಸ್‌ ಸಂಸ್ಕಾರದ ಪರಿಣಾಮದಿಂದ ದೇಶದಲ್ಲಿ ಶಕ್ತಿ ನಿರ್ಮಾಣವಾಗುತ್ತದೆ ಎಂಬುದು ಅನೇಕರಿಗೆ ಮನವರಿಕೆಯಾಗಿದೆ. ಸಾವಿರಾರು ಸಂಖ್ಯೆಯ ಸ್ವಯಂ ಸೇವಕರು ಐಎಎಸ್‌ ಅಧಿಕಾರಿಗಳಾಗಿ ಸರ್ಕಾರದಲ್ಲಿದ್ದಾರೆ ಎನ್ನುವುದು ಕೆಲವರಿಗೆ ಈಗ ತಿಳಿದಿದೆ.

ನಿತ್ಯದ ಶಾಖೆಯಲ್ಲಿ ಸಿಗುವ ಸಂಸ್ಕಾರದ ಕಾರಣಕ್ಕೆ ತಮ್ಮ ಕಾರ್ಯ ಕ್ಷೇತ್ರದಲ್ಲಿ ಸ್ವಯಂ ಸೇವಕತ್ವದ ಪ್ರಕಟೀಕರಣದಿಂದ ಈ ಮಾನ್ಯತೆ ಗಳಿಸಿದ್ದಾರೆ ಎಂದರು. ಜಗತ್ತಿನ ಇತಿಹಾಸ ನೋಡಿದಾಗ ನಾಗರಿಕತೆ ಇತ್ತು ಎನ್ನುವುದನ್ನು ತಿಳಿಯುತ್ತೇವೆ ಹೊರತು ಅದರ ಅಸ್ತಿತ್ವ ನೋಡಲು ಸಿಗುವುದಿಲ್ಲ. ಅನೇಕ ದಾಳಿಗಳು, ದುರಾಕ್ರಮಿಗಳ ಕ್ರೌರ್ಯದಿಂದ ನಾಗರಿಕತೆಗಳು ಅಸ್ತಿತ್ವ ಕಳೆದುಕೊಂಡಿವೆ. ಸ್ವಾತಂತ್ರ್ಯನಮ್ಮ ಸ್ವತ್ತ, ನಮ್ಮ ಕಾರಣಕ್ಕೆ ಬಂತು ಎಂದು ಅನೇಕರು ಹೇಳುತ್ತಾರೆ. ಈ ರೀತಿ ಹೇಳುವುದು ಸ್ವಾತಂತ್ರ್ಯಹೋರಾಟಕ್ಕೆ ಮತ್ತು ಬಲಿದಾನ ಮಾಡಿದ ಹೋರಾಟಗಾರರಿಗೆ ಮಾಡಿದ ಅಪಚಾರ ಎಂದು ಹೇಳಿದರು.

ಭಾರತವನ್ನು ವಿಶ್ವಗುರುವನ್ನಾಗಿ ನೋಡುವ ಹಂಬಲದೊಂದಿಗೆ 1925ರಲ್ಲಿ ವಿಜಯದಶಮಿಯಂದು ಡಾ| ಕೇಶವ ಹೆಡಗೆವಾರ್‌ ಕಟ್ಟಿದ ಸಂಘ 96 ವರ್ಷಗಳಿಂದ ವಿವಿಧ ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿದೆ. ಸಮಾಜಕ್ಕಾಗಿ ಸಮಯ ಕೊಡುವಂತಹ ವ್ಯಕ್ತಿಗಳನ್ನು ಶಾಖೆಗಳ ಮೂಲಕ ಸಂಘ ನಿರ್ಮಾಣ ಮಾಡುತ್ತಿದೆ ಎಂದರು. ಅತಿಥಿಯಾಗಿದ್ದ ಮನೋವೈದ್ಯ ಡಾ| ಆದಿತ್ಯ ಪಾಂಡುರಂಗಿ ಮಾತನಾಡಿ, ಇಂದಿನ ಯುವಕರು ಭವಿಷ್ಯದ ನಾಯಕರಾಗಿದ್ದಾರೆ. ಅವರಲ್ಲಿ ನಿಸ್ವಾರ್ಥ ಮತ್ತು ಒಂದಾಗಿ ಮುನ್ನಡೆಯುವ ಮನೋಭಾವ ಬೆಳೆಸಬೇಕು. ಇದರಿಂದ ಅವರೂ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದರು.

ಬಾಲ್ಯದಿಂದಲೇ ಆರೆಸ್ಸೆಸ್‌ ಮೌಲ್ಯಗಳೊಂದಿಗೆ ಬೆಳೆದಿದ್ದೇನೆ. ಆದರೆ ಕೋವಿಡ್‌ ಸಮಯದಲ್ಲಿ ಆರೆಸ್ಸೆಸ್‌ ಜತೆಗೆ ಕೆಲಸ ಮಾಡುವ ಅವಕಾಶ ಲಭಿಸಿತ್ತು ಶಾರೀರಿಕ ಆರೋಗ್ಯ ಮಾತ್ರ ಮುಖ್ಯವಲ್ಲ. ಮಾನಸಿಕ ಆರೋಗ್ಯವೂ ಮುಖ್ಯ ಎಂಬುದನ್ನು ಸೇವಾ ಭಾರತಿ ಮೂಲಕ ಜನರಿಗೆ ತಿಳಿಸಿ ಕೋವಿಡ್‌ ಬಗ್ಗೆ ಧೈರ್ಯ ತುಂಬುವ ಕೆಲಸ ಮಾಡಿದ್ದು ಶ್ಲಾಘನೀಯ ಎಂದು ಹೇಳಿದರು. ಶಾಸಕ ಅಮೃತ ದೇಸಾಯಿ ಸೇರಿದಂತೆ ಸ್ವಯಂ ಸೇವಕರು, ಇತರರು ಇದ್ದರು. ಇದಕ್ಕೂ ಪೂರ್ವದಲ್ಲಿ ಸ್ವಯಂ ಸೇವಕರು ನಡೆಸಿದ ಘೋಷ, ದಂಡ ಪ್ರಯೋಗಗಳು, ವ್ಯಾಯಾಮಗಳ ಪ್ರದರ್ಶನ ಆಕರ್ಷಕವಾಗಿತ್ತು. ಬಸವರಾಜ ಸ್ವಾಗತಿಸಿದರು. ಶ್ರೀಶ ಬಳ್ಳಾರಿ ವಂದಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next