Advertisement

Endless Borders; ಅಂತ್ಯವಿರದ ಗಡಿಗಳು; ಮುಗಿವಿರದ ಕನಸುಗಳು

11:37 PM Dec 09, 2023 | Team Udayavani |

ಎಂಡ್‌ಲೆಸ್‌ ಬಾರ್ಡರ್ಸ್ ಹೆಸರು ಸೂಚ್ಯವಾಗಿ ಅಂತ್ಯಗಳಿಲ್ಲದ ಗಡಿಗಳ ಬಗ್ಗೆ ಮಾತನಾಡಿದರೂ ವಿವರಿಸುವುದು ಆ ಗಡಿಗಳಲ್ಲಿನ ಜನರ ಸಂಕಷ್ಟಗಳಿಗೆ ಅಂತ್ಯವಿರದ ಕಥೆಗಳನ್ನು. ಯುದ್ಧ, ಅಸ್ಥಿರತೆ, ಅರಾಜಕತೆಯ ಸುಡುಕಾವಿನಲ್ಲಿ ಕರಗಿ ಹೋಗುತ್ತಿರುವ ಅವರ ಕನಸುಗಳನ್ನು. ಭೀಕರತೆಯ ಗರ್ಭದೊಳಗೆ ದಿನೇದಿನೆ ಹುದುಗಿ ಹೋಗುತ್ತಿರುವ ಅವರ ಹಕ್ಕುಗಳ ಕ್ಷೀಣ ಧ್ವನಿಯನ್ನು. ಎಂಡ್‌ಲೆಸ್‌ ಬಾರ್ಡರ್ಸ್ ಪರ್ಷಿಯನ್‌ ಭಾಷೆಯ ಚಿತ್ರದ ಶೀರ್ಷಿಕೆ. ಇದರ ನಿರ್ದೇಶಕ ಅಬ್ಟಾಸ್‌ ಅಮಿನಿ. ಇರಾನಿನವನು. ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ 54 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರವಾಗಿ ಆಯ್ಕೆಯಾಗಿ ಸುವರ್ಣ ಮಯೂರ ಪ್ರಶಸ್ತಿ ಪಡೆದುಕೊಂಡ ಚಿತ್ರ.

Advertisement

ಕಥೆ ಆರಂಭವಾಗುವುದು ಬಲೂಚಿಸ್ಥಾನದಲ್ಲಿ. ಈ ಚಿತ್ರದ ಶೀರ್ಷಿಕೆಗೂ ಈ ಪ್ರದೇಶಕ್ಕೂ ವಿಚಿತ್ರವಾದ ಸಂಬಂಧವಿದೆ. ಯಾಕೆಂದರೆ ಬಲೂಚಿಸ್ಥಾನದ್ದೂ ಹಾಗೆಯೇ. ಅಂತ್ಯವಿಲ್ಲದ ಗಡಿಗಳಲ್ಲೇ ಅಲ್ಲಿನವರ ಬದುಕು. ಬಲೂಚಿಸ್ಥಾನ ಮೂರು ರಾಷ್ಟ್ರಗಳೊಂದಿಗೆ ಗಡಿಯನ್ನಷ್ಟನ್ನೇ ಹಂಚಿಕೊಂಡಿಲ್ಲ; ಗುರುತುಗಳನ್ನೂ ಸಹ. ಇರಾನ್‌ನ ಗಡಿಗೆ ಹೊಂದಿಕೊಂಡ ಪ್ರದೇಶದ ಕಥೆಯೇ ಬೇರೆ, ಪಾಕಿಸ್ಥಾನದೊಂದಿಗಿನ ಪ್ರದೇಶವೇ ಬೇರೆ. ಅಫ್ಘಾನಿಸ್ಥಾನದ ಗಡಿಯೊಂದಿಗಿನ ಸಂಬಂಧಗಳದ್ದೇ ಬೇರೆ ಕಥೆ.

ಇಂಥ ಇರಾನ್‌ ಮತ್ತು ಅಫ್ಘಾನಿಸ್ಥಾನದ ಗಡಿಗೆ ಹೊಂದಿಕೊಂಡ ಒಂದು ಪುಟ್ಟ ಹಳ್ಳಿಯಲ್ಲಿ ನಡೆಯುವ ತೀರಾ ಸಣ್ಣದೆನಿಸುವ, ಅಲಕ್ಷ್ಯ ಮಾಡಿಬಿಡಬಹುದಾದಂಥ ಕಥೆ. ಈ ಮಾತಿಗೆ ಕಾರಣವೆಂದರೆ, ಯುದ್ಧ, ಅರಾಜಕತೆ, ರಾಜಕೀಯ ಅಸ್ಥಿರತೆ ಹಾಗೂ ಭಯೋತ್ಪಾದನೆಯ ಬೆಂಕಿಗೆ ಸಿಕ್ಕ ದೇಶಗಳಲ್ಲಿ ಎಲ್ಲರ ಕಥೆಗಳೂ ಹೀಗೆ ಇರುತ್ತವೆ. ಅಂಥ ಸಾಮಾನ್ಯ ಕಥೆಯನ್ನೇ ಒಪ್ಪ ಓರಣಗೊಳಿಸಿ ಕಟ್ಟಿಕೊಟ್ಟಿರುವುದು ಈ ಸಿನೆಮಾದ ಹೆಗ್ಗಳಿಕೆ.

ಕಥಾ ನಾಯಕ ಅಹ್ಮದ್‌ ಒಬ್ಬ ಶಿಕ್ಷಕ. ಬದುಕಿನ ಬಗ್ಗೆ ಸಕಾರಾತ್ಮಕತೆಯನ್ನು ಹಾಗೂ ಜಗತ್ತಿನ ಬಗ್ಗೆ ಭರವಸೆಯನ್ನು ಇನ್ನೂ ಇಟ್ಟುಕೊಂಡಿರುವವನು. ಹಾಗಾಗಿ ತಾಲಿಬಾನಿಗಳ ಜಗತ್ತಿನಲ್ಲೂ ವಿಶಿಷ್ಟವೆನ್ನುವಂತೆ ತೋರುತ್ತಾನೆ. ಮಕ್ಕಳಿಗೆ ಪಾಠ ಮಾಡುತ್ತಾ, ಕಲೆ, ಸಂಸ್ಕೃತಿಯ ಕುರಿತೂ ವಿವರಿಸುತ್ತಾ ಮಕ್ಕಳ ಬದುಕನ್ನು ಭವ್ಯವಾಗಿ ರೂಪಿಸಲು ಯತ್ನಿಸುತ್ತಿರುವಾತ. ಗಡೀಪಾರಿಗೆ ಒಳಗಾದವನು.

ತನ್ನ ಪಾಠದ ಮಧ್ಯೆಯೂ ಕ್ಷೀಣವೆನಿಸಿದರೂ ಅಪ್ರ ಸ್ತುತವೆನ್ನಿಸದ ಹಾಗೆ ಯುದ್ಧ, ಭಯೋತ್ಪಾದನೆ, ಅರಾಜಕತೆಯ ಬಗ್ಗೆಯೂ ಗಮನ ಸೆಳೆಯಲು ಮರೆಯಲಾರ. ಪ್ರಭುತ್ವದ ಸರ್ವಾಧಿಕಾರಿ ಧೋರಣೆಯ ಬಗೆಗೂ ಅಸಾಧ್ಯ ಸಿಟ್ಟಿದೆ. ಅಹ್ಮದ್‌ನ ಜತೆಗಾತಿ ನಿಲೋಫ‌ರ್‌ ಸಹ ಇರಾನಿನಲ್ಲಿ ಸರಕಾರದ ಕೆಂಗಣ್ಣಿಗೆ ಗುರಿಯಾದವಳು. ಸರಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ಧ್ವನಿಯೆತ್ತಿ ಜೈಲುವಾಸ ಅನುಭವಿಸಿ ಬಂದವಳು.

Advertisement

ಒಂದು ದಿನ ಕುಟುಂಬವೊಂದು ತಾಲಿಬಾನಿಗಳಿಂದ ತಪ್ಪಿಸಿ ಕೊಂಡು ಈ ಊರಿಗೆ ಬರುತ್ತದೆ. ಅಹ್ಮದ್‌ ಆ ಕುಟುಂಬಕ್ಕೆ ಆಶ್ರಯ ನೀಡುತ್ತಾನೆ. ಆ ಕುಟುಂಬದೊಳಗಿನ ವಿವಾಹಿತೆ (ವಯೋವೃದ್ಧ ಪತಿ) ಆ ಊರಿನ ತರುಣನೊಂದಿಗಿನ ಅನುರಾಗ, ಅದರ ಮಧ್ಯೆ ನಿರಾಶ್ರಿತರಿಗೆ ತನ್ನ ಮಗನನ್ನು ಕೊಡಲು ಒಪ್ಪದ ಅಪ್ಪನ ಕಟುಕತನ, ಕ್ರೌರ್ಯ, ಅಮಾನವೀಯತೆ, ಇವನ ಕ್ರೌರ್ಯದಿಂದ ಪಾರಾಗಲು ತಾಲಿಬಾನ್‌ ಸೈನಿಕರನ್ನೇ ಆಶ್ರಯಿಸಬೇಕಾದ ಅಹ್ಮದನ ಅನಿವಾರ್ಯತೆ, ಇಬ್ಬರು ಪ್ರೇಮಿಗಳನ್ನು ಇರಾನಿನ ಗಡಿ ತಲುಪಿಸುವ ಪ್ರಯತ್ನ- ಎಲ್ಲವೂ ಗಡಿ ಪ್ರದೇಶದ ತೀರದ ಸಂಕಷ್ಟಗಳನ್ನು ಕಟ್ಟಿಕೊಡುತ್ತದೆ. ಕೊನೆಗೂ ಇಬ್ಬರು ಪ್ರೇಮಿಗಳು ಒಂದು ಹಂತದಲ್ಲಿ ಇರಾನಿನ ಪಟ್ಟಣ ಸೇರಿ ಗುರಿ ಮುಟ್ಟಿದರೂ ಅಹ್ಮದ್‌ ಮತ್ತು ನಿಲೋಫ‌ರ್‌ ಮಾತ್ರ ಎಂದಿಗೂ ಮುಗಿಯದ ಹೋರಾಟದ ಹಾದಿಯಲ್ಲೇ ಸಾಗುತ್ತಾರೆ. ಅವರದ್ದು ಕೊನೆಯಿಲ್ಲದ ಹಾದಿ.
ಹಾಗೆಂದು ಕಥೆ, ತೀರಾ ಆದರ್ಶವೆನಿಸುವ, ವೈಯಕ್ತಿಕ ನೆಲೆಯದೆನ್ನಿಸುವ “ನಮ್ಮ ಬದ್ಧತೆ ಎಂಬುದು ಸಮಾಜಕ್ಕೋ ಅಥವಾ ತಮ್ಮ ಬದುಕಿಗೋ?’ ಎಂಬ ಪ್ರಶ್ನೆಯನ್ನು ಸಾರ್ವತ್ರಿ ಕಗೊಳಿಸುತ್ತಲೇ ಪ್ರಭುತ್ವದ ಎದುರೂ ಬೃಹದಾಕಾರವಾಗಿ ನಿಲ್ಲಿಸುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯಲ್ಲ; ಹಾಗೆಂದರೆ ಏನು ಎಂದು ಅಚ್ಚರಿ ಪಡುವಂಥ ನತದೃಷ್ಟರ ಬದುಕಿನ ಚಿತ್ರಣ ದೀಪದ ಬುಡದ ಕತ್ತಲೆಯನ್ನು ವಿವರಿಸಬಲ್ಲದು.

ದಿ ಲಾಸ್ಟ್‌ ಬರ್ತ್‌ಡೇ
ಇದೂ ಸಹ ಮತ್ತೂಂದು ಪರ್ಷಿಯನ್‌ ಸಿನೆಮಾದ ಶೀರ್ಷಿಕೆ. ಎರಡು ವರ್ಷಗಳ ಹಿಂದೆ ಅಮೆರಿಕದ ಅಧ್ಯಕ್ಷ ಬೈಡೆನ್‌ ತಮ್ಮ ಸೇನೆಗೆ ಅಫ್ಘಾನಿಸ್ಥಾನದಿಂದ ವಾಪಸು ಬರಲು ಸೂಚಿಸಿದ ಸಂದರ್ಭ. ತಾಲಿಬಾನಿಗಳು ಮತ್ತೆ ಅಫ್ಘಾನಿಸ್ಥಾನದ ಒಂದೊಂದೇ ಪ್ರದೇಶವನ್ನು ವಶಪಡಿಸಿಕೊಳ್ಳುತ್ತಿದ್ದ ಹೊತ್ತು. ಅಫ್ಘಾನಿಸ್ಥಾನರ ಸ್ವತಂತ್ರ ಬದುಕಿನ ಕೊನೆ ದಿನಗಳ (ತಾಲಿಬಾನಿಗಳು ಅಧಿಪತ್ಯ ಮರುಸ್ಥಾಪಿಸುವರೆಗಿನ) ಘಟನಾವಳಿಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ಚಿತ್ರವಿದು. ತಾಲಿಬಾನಿಗಳ ಹೊರವೇಷ ಬದಲಾಗಬಹುದು, ಒಳರೂಪವಲ್ಲ ಎಂಬುದನ್ನು ವಿವರಿಸಲು ಯತ್ನಿಸಿದ ಚಿತ್ರ. ಯಾರ ಹಕ್ಕುಗಳಿಗೂ, ಬದುಕಿಗೂ ಬೆಲೆಯನ್ನೇ ಕೊಡದ ತಾಲಿಬಾನಿಗಳ ಬಗೆಗಿನ ಭಯವನ್ನು, ಕ್ರೌರ್ಯವನ್ನು ಹೇಳಲು ಹೊರಟವರು ಇದರ ನಿರ್ದೇಶಕ ನವೀದ್‌ ಮಹ್ಮೌದಿ.

ಸೊರಯ್ನಾಳ ಹುಟ್ಟುಹಬ್ಬಕ್ಕೆ ಇಡೀ ಮನೆ ಸಿದ್ಧಗೊಳ್ಳುತ್ತಿದೆ. ಆ ಮನೆ ಸದಾ ಲವಲವಿಕೆಯಿಂದ ಕೂಡಿರುವಂಥದ್ದು. ನಟಿಯರು, ಪತ್ರಕರ್ತರು, ಹೋರಾಟಗಾರರೆಲ್ಲರೂ ಕೂಡಿ ಖುಷಿಪಟ್ಟು, ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವಂಥ ಒಂದು ಚಾವಡಿ-ಕೂಟ ಎಂದೇ ಹೇಳಬಹುದು. ಒಬ್ಬಳ ಸಿನೆಮಾ ಬಿಡುಗಡೆಗೆ ಸಜ್ಜಾಗಿದೆ, ಮತ್ತೂಬ್ಬಳೂ ಸಿನೆಮಾ ನಟಿಯಾಗುವ ಕನಸು ಕಾಣುತ್ತಿದ್ದಾಳೆ, ಮತ್ತೂಬ್ಬಳು ಮದುವೆಗೆ ಸಜ್ಜಾಗುತ್ತಿದ್ದಾಳೆ-ಹೀಗೆ ನಾನಾ ಕನಸುಗಳು ಬಣ್ಣ ಪಡೆದುಕೊಳ್ಳುತ್ತಿವೆ. ಇವೆಲ್ಲದರ ಮಧ್ಯೆ ಬರುವ ಸೊರಯ್ನಾಳ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಬೇಕು ಎನ್ನುವಾಗಲೇ ತಾಲಿಬಾನಿಗಳ ಪುನರಾಗಮನ ಸುದ್ದಿಯಾಗುತ್ತದೆ. ಎಲ್ಲರೂ ಕಂಗಾಲಾಗುತ್ತಾರೆ. ತಾಲಿಬಾನಿಗಳು ಪ್ರವೇಶಿಸಿದ ಪ್ರತೀ ಪಟ್ಟಣದಲ್ಲೂ ಮೊದಲು ದಾಳಿ ಮಾಡುವುದು ಇಂಥ ಕೂಟಗಳ ಮೇಲೆಯೇ.

ತಾಲಿಬಾನಿಗಳು ತಮ್ಮ ಮನೆಗೂ ನುಗ್ಗಿಯಾರು ಎಂದು ಎಲ್ಲರೂ ತಮ್ಮ ಸೌಂದರ್ಯ ಸಾಧನಗಳನ್ನು, ರೂಪದರ್ಶಿಯಂತೆ ತೆಗೆಸಿಕೊಂಡ ಭಾವಚಿತ್ರಗಳನ್ನು, ತಾಲಿಬಾನರ ಕೆಂಗಣ್ಣಿಗೆ ಗುರಿಯಾಗುವ ಎಲ್ಲ ವಸ್ತುಗಳನ್ನೂ ಸುಡತೊಡಗುತ್ತಾರೆ. ಜತೆಗೆ ಸೊರಯ್ನಾ ತನ್ನೊಂದಿಗಿನ ಎಲ್ಲರನ್ನೂ ತನ್ನ ಗೆಳೆಯನ ಸಹಕಾರದಿಂದ ಬೇರೆ ದೇಶಕ್ಕೆ ಪಲಾಯನವಾಗಲು ಸಹಾಯ ಮಾಡುತ್ತಾಳೆ. ಇನ್ನೇನೂ ತಾನೂ ಹೊರಡಬೇಕೆನ್ನುವಷ್ಟರಲ್ಲಿ ತಾಲಿಬಾನಿಗಳು ಮನೆಗೆ ನುಗ್ಗುತ್ತಾರೆ. ಅವಳು ತನ್ನ ಕೊನೆಯ ಸೆಲ್ಫಿ ಚಿತ್ರ ತೆಗೆದುಕೊಳ್ಳುತ್ತಾಳೆ. ಗುಂಡಿನ ಶಬ್ದ ಮೊರೆಯುತ್ತದೆ. ಅನಂತರ ಎಲ್ಲವೂ ಮೌನ.

ಎರಡೂ ಚಿತ್ರಗಳು ಯುದ್ಧ, ಸರ್ವಾಧಿಕಾರಿತನ, ಅರಾಜಕತೆ ಹಾಗೂ ಅದರ ಬಹು ಆಯಾಮಗಳ ಪರಿಣಾಮಗಳ ಕುರಿತು ಹೇಳಲು ಯತ್ನಿಸಿವೆ. ಆ ಬೆಂಕಿಯಲ್ಲಿ ಕರಟಿ ಹೋಗುವ ಅಸಂಖ್ಯಾತ ಕನಸುಗಳ ಚಿತ್ರ ಬಿಡಿಸಲು ಪ್ರಯತ್ನಿಸಿವೆ. ಆದರೆ ಬೆಂಕಿಯಲ್ಲಿ ಸುಟ್ಟು ಹೋದ ಬಣ್ಣ ಒಂದೇ ಕಪ್ಪು, ರೂಪುಗೊಳ್ಳುವ ಚಿತ್ರದ ಬಣ್ಣವೂ ಒಂದೇ. ಅದೇ ಕಪ್ಪು. ಹಾಗಾಗಿಯೇ ಏನೋ ಆ ಕನಸುಗಳ ಕಣ್ಣೀರೂ ಧಗಧಗನೆ ಉರಿಯುತ್ತಿರುವ ಬೆಂಕಿಗೆ ಮತ್ತೂಂದಿಷ್ಟು ಉತ್ಸಾಹ ತುಂಬುವಂತೆ ಕಂಡು ಬಣ್ಣವನ್ನು ಮತ್ತಷ್ಟು ಕೆಂಪಗಾಗಿಸುತ್ತದಷ್ಟೇ. ಆ ಏಕವರ್ಣದೊಳಗಿನ ಬಹುವರ್ಣ ಯಾರಿಗೂ ಕಾಣಿಸುವುದೇ ಇಲ್ಲ.

ಇತಿಹಾಸದಲ್ಲಿ ಎಂದೋ ಆರಂಭವಾದ ಯುದ್ಧಗಳ ಅಧ್ಯಾಯ ಇಂದಿಗೂ ಮುಗಿದಿಲ್ಲ. ಕೋಟೆ ಕೊತ್ತಲಗಳು ಉರುಳಿ ಹೋದರೂ ಪ್ರಯೋಜನವಾಗಿಲ್ಲ. ವಿಪರ್ಯಾ ಸವೆಂದರೆ ಅದರ ಸ್ವರೂಪ ಮತ್ತಷ್ಟು ಭೀಕರಗೊಳ್ಳುತ್ತಿದೆ. ಪ್ರಭುತ್ವಗಳೂ ಯುದ್ಧವನ್ನು ದೂರವಿಡಬೇಕೆಂದೇ ಆಧುನಿಕ ಶಸ್ತಾಸ್ತ್ರಗಳನ್ನು ಕೋಠಿಯಲ್ಲಿ ಪೇರಿಸಿಡುತ್ತಿವೆ. ವಿಶ್ವದ ಎರಡು ಮಹಾ ಯುದ್ಧಗಳ ಕುರೂಪ ಕಂಡ ಮೇಲೂ ಯಾಕೋ ಮೋಹ ಹೋಗಿಲ್ಲ. ಈಗಲೂ ಜಗತ್ತಿನ ಎಷ್ಟೋ ಗಡಿಗಳಲ್ಲಿ, ದೇಶಗಳಲ್ಲಿ ಯುದ್ಧ ನಡೆಯುತ್ತಲೇ ಇದೆ. ಎಂದೋ ಹಚ್ಚಿದ ಬೆಂಕಿ ಆರುವ ಲಕ್ಷಣಗಳೇ ತೋರುತ್ತಿಲ್ಲ. ಹಾಗೆಂದು ಭರವಸೆ ಕಳೆದು ಕೊಳ್ಳಬೇಕಿಲ್ಲ. ಬೆಂಕಿ ಆರಿಸಿ ದೀಪ ಹಚ್ಚುವ ಪ್ರಯತ್ನ ಪ್ರತಿಯೊ ಬ್ಬರಿಂದಲೂ ನಡೆಯುತ್ತಿದೆ.

ನಮ್ಮ ಪ್ರಯತ್ನವೂ ಅಷ್ಟೇ ತಾನೇ. ಪ್ರತೀದಿನವೂ ಸಂಜೆಯಾದ ಕೂಡಲೇ ಮನೆಯೊಳಗೆ, ಅಂಗಳದ ಎದುರು ಸಣ್ಣದೊಂದು ಹಣತೆ ಹಚ್ಚುವುದು ಕತ್ತಲೆಯನ್ನು ಕೊಂದೇವು ಎಂದೇ. ಅದೇ ಪ್ರಯತ್ನ ಮುಂದೊಂದು ದಿನ ನಿಬ್ಬೆರಗಾಗಿಸುವ ಮಟ್ಟಕ್ಕೆ ಬೆಳೆಯುತ್ತದೆ. ಅಂದು ಈ ಯುದ್ಧ, ಅರಾಜಕತೆ ಎಲ್ಲವೂ ತಮ್ಮ ವಿಳಾಸಗಳನ್ನು ಕಳೆದುಕೊಳ್ಳಬಹುದು.ಕತ್ತಲೆಯಿಂದಲೇ ಬೆಳಕಿನ ಕಡೆಗೆ ಪಯಣವಲ್ಲವೇ? ಅದೇ ಇದು. ಕೊನೆಯಿರದ ಗಡಿಗಳಿರಬಹುದು, ಗುರಿಯಿರದ ಬದುಕು ಎಂದಿಗೂ ಇರಲಾರದು.

ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next