Advertisement

World theatre day: ನಶಿಸುತ್ತಿರುವ ರಂಗಕಲೆಗೆ ಪ್ರೋತ್ಸಾಹ ಅನಿವಾರ್ಯ

03:21 PM Mar 27, 2024 | Team Udayavani |

ದೇವನಹಳ್ಳಿ: ದೃಶ್ಯ ಮಾಧ್ಯಮಗಳ ಹಾವಳಿಯಿಂದ ನಶಿಸಿಹೋಗುತ್ತಿರುವ ರಂಗಕಲೆಯನ್ನು ಪ್ರೋತ್ಸಾಹಿಸಿ ಉಳಿಸಿ ಬೆಳೆಸಬೇಕಿದೆ. ರಂಗಕ‌ಲೆಯನ್ನು ಜೀವಂತವಾಗಿಡುವಲ್ಲಿ ಅಂತಾರಾಷ್ಟ್ರೀಯ ರಂಗ ಸಂಸ್ಥೆ (ಐಟಿಐ) 1962ರಿಂದ ಪ್ರತಿ ವರ್ಷ ಜಗತ್ತಿನಲ್ಲಿ ವಿಶ್ವ ರಂಗ ದಿನ ಆಚರಿಸುತ್ತಿರುವುದು ಸ್ವಾಗತಾರ್ಹ ಹಾಗೂ ಹೆಮ್ಮೆಯ ಸಂಗತಿಯಾಗಿದೆ.

Advertisement

ಗ್ರಾಮೀಣ, ನಗರ ಪ್ರದೇಶಗಳಲ್ಲಿ ನಾಟಕ ಕಲೆಯು ಇಂದಿಗೂ ಜೀವಂತವಾಗಿದೆ. ರಾತ್ರಿ 9 ಗಂಟೆಗೆ ಶುರುಮಾಡುವ ನಾಟಕಗಳು ಬೆಳಿಗನ ಜಾವ 5 ಗಂಟೆವರೆಗೂ ನಾಟಕ ಪ್ರದರ್ಶನಗಳು ನಡೆಯುತ್ತದೆ. ಪ್ರೇಕ್ಷಕರಿಗೆ ಒಂದೊಂದು ರೀತಿಯ ಧಾರ್ಮಿಕ ಸಂದೇಶ ನೀಡುತ್ತದೆ. ಕಂಠಪಾಠ ಮಾಡಿ ಒಂದೊಂದು ಪಾತ್ರಕ್ಕೂ ಕಲಾವಿದರು ಜೀವತುಂಬುತ್ತಾರೆ. ರಂಗಭೂಮಿ ಕಲಾ ಕ್ಷೇತ್ರ ಕಲಾವಿದರನ್ನು ತಯಾರು ಮಾಡಿ ಅವರ ಪ್ರತಿಭೆ ಅನಾವರಣಗೊಳಿಸುವ ಮಹತ್ತರ ವೇದಿಕೆಯಾಗಿದೆ. ಹಲವು ಕಲಾವಿದರು ಗ್ರಾಮೀಣ ಭಾಗದಲ್ಲಿ ನಾಟಕ ಪ್ರದರ್ಶನ ಮಾಡುತ್ತಾ ಕುರುಕ್ಷೇತ್ರ, ಸಂಪೂರ್ಣ ರಾಮಾಯಣ, ಶನಿ ಪ್ರಭಾವ ಮತ್ತಿತರೆ ನಾಟಕಗಳಲ್ಲಿ ಬರುವ ಪಾತ್ರಗಳಿಗೆ ಕಲಾವಿದರು ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಬಣ್ಣ ಹಚ್ಚಿ ಸಮಾಜಕ್ಕೆ ಬೇಕಾದ ಸಂದೇಶ ನೀಡುತ್ತಿದ್ದಾರೆ. ಆದರೆ, ಒಂದೆಡೆ ಕಲಾವಿದರಿಂಗೆ ಸೂಕ್ತ ಅವಕಾಶಗಳಿಲ್ಲದೆ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆಗಳಿಂದ ಕುಗ್ಗಿ ಹೋಗಿದ್ದಾರೆ ಎಂಬುದು ಬೇಸರದ ಸಂಗತಿಯಾಗಿದೆ.

ನಾಟಕಗಳಲ್ಲಿ ಹೊಸತನ ಮೂಡಲಿ: ಮಾಧ್ಯಮಗಳ ಹಾವಳಿಯಿಂದ ನಾಟಕಗಳು ನಶಿಸಿಹೋಗುತ್ತಿವೆ. ಪೌರಾಣಿಕ ನಾಟಕಗಳಲ್ಲಿ ಹೊಸತನ ಮೂಡಬೇಕಿದೆ. ಇಂದು ರಂಗಭೂಮಿ ಕಲಾವಿದರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಂಗಭೂಮಿಗೆ ಎಲ್ಲಾ ರಂಗ ದಿಗ್ಗಜರೂ ನೀಡಿರುವ ಕೊಡುಗೆಗಳು ಇಂದು ನೇಪಥ್ಯಕ್ಕೆ ಸರಿದಿವೆ. ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಡಾ ರಾಜ್‌ಕುಮಾರ್‌ ತಂದೆ ಪುಟ್ಟಸ್ವಾಮಪ್ಪ ಹಾರ್ಮೋನಿಯಂ ಮಾಸ್ಟರ್‌ ಆಗಿ ಕೆಲಸ ಮಾಡುತ್ತಿದ್ದರು. ಆ ವೇಳೆ ಡಾ.ರಾಜ್‌ಕುಮಾರ್‌ ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಸಣ್ಣ ಪಾತ್ರಗಳನ್ನು ಮಾಡುತ್ತಾ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತದನಂತರ ಬೇಡರ ಕಣ್ಣಪ್ಪ ಎಂಬ ಪಾತ್ರದಲ್ಲಿ ಹೆಚ್ಚು ಹೆಸರು ಮಾಡಿ, ಚಲನಚಿತ್ರಗಳಲ್ಲಿ ಅವಕಾಶ ಸಿಕ್ಕಿರುವುದನ್ನು ಸ್ಮರಿಸಬಹುದಾಗಿದೆ.

ಮುಚ್ಚಿಹೋದ ನಾಟಕ ಕಂಪನಿಗಳು: ಅಂದಿನ ಕಾಲದಲ್ಲಿ ಗುಬ್ಬಿ ವೀರಣ್ಣ ನಾಟಕ ಮಂಡಳಿ, ನಾಟಕ ಶಿರೋಮಣಿ ವರದರಾಜ ಕಲಾಸಂಘದಂತಹ ಸಾವಿರಾರು ಕಲಾವಿದರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಹಲವು ನಾಟಕ ಕಂಪನಿಗಳು ಸರ್ಕಾರದ ಪ್ರೋತ್ಸಾಹ ಸಿಗದೇ ಮುಚ್ಚಿಹೋಗಿವೆ ಎಂಬುದು ಕನ್ನಡ ಕಲಾಕ್ಷೇತ್ರದ ಬಹುದೊಡ್ಡ ದುರಂತ ಎನ್ನದೆ ವಿಧಿಯಿಲ್ಲ.

ಒಂದೊತ್ತಿನ ಊಟಕ್ಕೂ ಪರದಾಟ: ನಾಟಕ ಕಂಪನಿಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ಧನ ನೀಡಿದ್ದರೆ ಅವು ಮರೆಯಾಗುತ್ತಿರಲಿಲ್ಲ. ಮತ್ತಷ್ಟು ಕಲಾವಿದರು ಸೃಷ್ಟಿಯಾಗುತ್ತಿದ್ದರು. ಕಲಾವಿದರು ಜೀವನವನ್ನು ಒಂದು ಬಾರಿ ನೆನಪಿಸಿಕೊಂಡರೆ ಆರೋಗ್ಯದ ಸಮಸ್ಯೆಯಿಂದ ಸರ್ಕಾರ ನೀಡುತ್ತಿರುವ ಮಾಸಾಶನ ಅವರ ಔಷಧಿಗೆ ಸಾಲದಂತಾಗಿದೆ. ಕಲೆಯಷ್ಟೇ ಉಸಿರಾಗಿಸಿಕೊಂಡಿರುವ ಕಲಾವಿದರು ಮನೆ ಬಾಡಿಗೆ, ಒಂದು ಹೊತ್ತಿನ ಊಟಕ್ಕೂ ಕೂಡಾ ಪರದಾಡುವ ಸ್ಥಿತಿಗೆ ತಲುಪಿದ್ದಾರೆ.

Advertisement

ಪ್ರಸ್ತುತ ಮಾಸ್ಟರ್‌ ಹಿರಣ್ಣಯ್ಯ ಮಿತ್ರ ಮಂಡಳಿ, ಕೆಬಿಆರ್‌ ಡ್ರಾಮಾ ಕಂಪನಿ, ಕರ್ನಾಟಕ ಕಲಾವೈಭಾವ ಕಂಪನಿ, ಕುಮಾರೇಶ್ವರ ನಾಟಕ ಸಂಘ, ಎಲ್‌.ಬಿ.ಶೇಖ್‌ ಮಾಸ್ಟರ್‌ ಕಲಾಸಂಘ ಮತ್ತು ಉತ್ತರ ಕರ್ನಾಟಕದಲ್ಲಿ ಇಂದಿಗೂ ಸಾಕಷ್ಟು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಹವ್ಯಾಸಿ ಕಲಾ ಸಂಘಗಳು ಪ್ರತಿ ಊರಿನಲ್ಲೂ ಕಾಣಸಿಗುತ್ತವೆ.

ಪೌರಾಣಿಕ ನಾಟಕ ಪ್ರದರ್ಶನ: ಬೆಂಗ್ರಾ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಹಿರಿಯ ಕಲಾವಿದರನ್ನು ಹೊಂದಿರುವ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅನೇಕ ನಾಟಕ ಪ್ರದರ್ಶನಗೊಳ್ಳುತ್ತಿದೆ. ನಶಿಸಿಹೋಗುತ್ತಿರುವ ರಂಗಕಲೆ ಸಂರಕ್ಷಣೆಗೆ ಚೇತೋಹಾರಿಯಾಗಿದೆ ಎನ್ನಬಹುದಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕಿನ ಗ್ರಾಮೀಣದಲ್ಲಿ ಫೆಬ್ರವರಿ, ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನಗಳು ನಡೆಯುತ್ತಿವೆ. ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲದಲ್ಲೂ ಸಾಕಷ್ಟು ಕಲಾವಿದರಿದ್ದಾರೆ.

ಕಲಾಮಂದಿರ ನಿರ್ಮಾಣಕ್ಕೆ ಆಗ್ರಹ: ಜಿಲ್ಲೆಯಲ್ಲಿ ಕಲಾಮಂದಿರ ನಿರ್ಮಾಣಕ್ಕಾಗಿ ಒತ್ತಾಯಗಳು ಕೇಳಿಬರುತ್ತಿವೆ. ಸುಸಜ್ಜಿತ ಕಲಾ ಮಂದಿರವಿಲ್ಲದೇ ನಾಟಕ ಪ್ರದರ್ಶನಕ್ಕೆ ತೊಂದರೆಯಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿರುವ ತಾಲೂಕಿನಲ್ಲಿ ಭೂಮಿ ಕೊರತೆ, ಭೂಮಿ ಬೆಲೆ ಗಗನಕ್ಕೇರಿರುವುದರಿಂದ ಭೂಮಿ ಸಿಗುವುದೇ ಕಷ್ಟಕರವಾಗಿದೆ. ಸರ್ಕಾರ ಒಂದು ಸೂಕ್ತ ಜಾಗ ನೀಡಿ ಕಲಾಭವನ ನಿರ್ಮಾಣ ಮಾಡಬೇಕು ಎಂದು ಕಲಾವಿದರು ಒತ್ತಾಯಿಸಿದ್ದಾರೆ.

ಹಲವು ಪಾತ್ರಗಳಿಗೆ ಜೀವ: ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮದ ಡಾ.ಸಿ.ವಿ. ನಾರಾಯಣಸ್ವಾಮಿ ಕಳೆದ 25 ವರ್ಷದಿಂದ ನಾಟಕ ಪ್ರದರ್ಶನ ಮಾಡಿಕೊಂಡು ಬರುತ್ತಿ¨ªಾರೆ. ಕಲೆಗೆ ಪ್ರೋತ್ಸಾಹಕರಾಗಿ, ಹಲವು ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಾಟಕಕ್ಕೆ ರಂಗಸಜ್ಜಿಕೆ ಹಾಕುವವರು ಸಂಕಷ್ಟದಲ್ಲಿದ್ದಾರೆ. ಪ್ರತಿ ನಾಟಕಗಳಿಗೆ ರಂಗ ಸಜ್ಜಿಕೆಗಳನ್ನು ಹಾಕಿ ವೇದಿಕೆ ಮಾಡಿಕೊಡುವವರು ಕೊರೊನಾ ನಂತರದಲ್ಲಿ ರಂಗಸಜ್ಜಿಕೆ ಹಾಕದೆ ನಾಟಕಗಳಿ ಲ್ಲದೇ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿತ್ತು. ಪ್ರತಿವರ್ಷ 80-100 ನಾಟಕಗಳಿಗೆ ರಂಗ ಸಜ್ಜಿಕೆ ಒದಗಿಸುತ್ತಿದ್ದೆವು. ಇದರಿಂದ ಅನೇಕ ಕುಟುಂಬಗಳು ಜೀವನ ನಡೆಯುತ್ತಿತ್ತು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ನಾಟಕಗಳು ಆಡುತ್ತಿರುವುದರಿಂದ ರಂಗಸಜ್ಜಿಕೆಗೆ ಮತ್ತೆ ಜೀವ ಬಂದಂತಾಗಿದೆ. ಇದರಿಂದ ರಂಗಸಜ್ಜಿಕೆ ಕೆಲಸಗಾರರು ಮತ್ತೆ ಎಂದಿನಂತೆ ಕಾರ್ಯ ನಿರ್ವಹಿಸಲು ಸಜ್ಜಾಗಿದ್ದಾರೆ.

ನಾಟಕಗಳು ಇಲ್ಲದಿರುವುದರಿಂದ ರಂಗಸಜ್ಜಿಕೆ ಕಲಾವಿದರ ಬದುಕು ಬೀದಿಗೆ ಬೀಳುವಂತಾಗಿದೆ. ಕಲಾವಿದರು ಸಾಕಷ್ಟು ಕಷ್ಟ ಅನುಭವಿಸು ತ್ತಿದ್ದಾರೆ. ಗ್ರಾಮೀಣದಲ್ಲಿ ನಾಟಕ ನಡೆದರೆ ಮಾತ್ರವೇ ಅವರ ಜೀವನ ಸಾಗಿಸಲು ಸಾಧ್ಯ. ಚುನಾವಣಾ ನೀತಿ ಸಂಹಿತೆಗಳಲ್ಲಿ ನಾಟಕ ಪ್ರದರ್ಶನಗಳಿಗೆ ನಿರ್ಬಂಧ ಹೇರಲಾಗುತ್ತಿದೆ. ಇಂತಹ ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದೇವೆ.-ರಾಜಣ್ಣ, ಮಾರುತಿ ಡ್ರಾಮಾ ಸೀನರಿ ಮಾಲಿಕ

ಕಲಾವಿದರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹಲವು ಕಲಾವಿದರಿದ್ದಾರೆ. ಒಂದು ನಾಟಕ ಮಾಡಬೇಕಾದರೆ ಸುಮಾರು 2-3 ಲಕ್ಷ ಖರ್ಚು ಬರುತ್ತದೆ. ಕಲಾ ಪೋಷಕರ ಕೊರತೆ ಕಾಡುತ್ತಿದೆ. ಕಲಾವಿದರಿಗೆ ಸರ್ಕಾರ 3,000 ಮಾಸಾಶನ ನೀಡುತ್ತಿದೆ. ಅದೂ ಸಾಕಾಗುತ್ತಿಲ್ಲ. ಕಲೆಯನ್ನೇ ನಂಬಿ ಜೀವಿಸುತ್ತಿರುವವರಿಗೆ ಪ್ರೋತ್ಸಾಹ ನೀಡಬೇಕು.-ರಬ್ಬನಹಳ್ಳಿ ಕೆಂಪಣ್ಣ, ಜಿಲ್ಲಾಧ್ಯಕ್ಷ, ರಂಗಭೂಮಿ ಕಲಾವಿದರ ಸಂಘ

ಕಲಾವಿದರು ಅವಕಾಶ, ಸೌಲಭ್ಯದಿಂದ ವಂಚಿತವಾಗುತ್ತಿದ್ದಾರೆ. ನಗರ ಪ್ರದೇಶದ ಕಲಾವಿದರು ಮುಂದೆ ಗ್ರಾಮೀಣರು ಅವಕಾಶದಿಂದ ವಂಚಿತರಾಗಿ ಎಲೆಮರಿ ಕಾಯಿಗಳ ರೀತಿ ಕಲಾವಿದ ಬದುಕು ಮತ್ತು ಅವರ ಜೀವನ ನಶಿಸುತ್ತಿದೆ. ಗ್ರಾಮೀಣದ ಕಲಾವಿದರಿಗೆ ಸರ್ಕಾರಗಳು ಆದ್ಯತೆ ನೀಡಬೇಕು.-ಹೊಸಳ್ಳಿ ವಾಸುದೇವ್‌, ಸದಸ್ಯರು, ಕನ್ನಡ ಅಬಿವೃದ್ಧಿ ಪ್ರಾಧಿಕಾರ, ಬೆಂಗ್ರಾ ಜಿಲ್ಲೆ

ಜಿಲ್ಲೆಯಲ್ಲಿ ಸುಮಾರು 5 ನಾಟಕ ಕಲಾ ತಂಡಗಳು ಹೆಸರನ್ನು ನೋಂದಾಯಿಸಿ ಕೊಂಡಿದೆ. ದೇವನಹಳ್ಳಿಯ ಪಾರಿವಾಳ ಗುಟ್ಟದಲ್ಲಿ ಜಿಲ್ಲಾಡಳಿತದಿಂದ ರಂಗಮಂದಿರ ನಿರ್ಮಾಣಕ್ಕೆ 1 ಎಕರೆ ಜಮೀನು ಮಂಜೂರು ಮಾಡಿದೆ. ಈ ಜಾಗದಲ್ಲಿ ಎಲ್ಲಾ ಕಲೆಗಳ ಪ್ರದರ್ಶನಕ್ಕೆ ರಂಗಮಂದಿರ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳ ಲಾಗುವುದು. ದೊಡ್ಡಬಳ್ಳಾಪುರದಲ್ಲಿ ಹೆಚ್ಚು ಕಲಾವಿದರಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಉಳಿಸುವ ಕೆಲಸ ವನ್ನು ಮಾಡಲಾಗುತ್ತಿದೆ. -ರವಿಕುಮಾರ್‌, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗ್ರಾ  

ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next