Advertisement

ಋತುಮಾನ ಆಧಾರಿತ ಕೃಷಿಗೆ ಒತ್ತು ಕೊಡಿ: ಥಾವರಚಂದ್‌

12:09 PM May 26, 2022 | Team Udayavani |

ಬಾಗಲಕೋಟೆ: ವಿಶ್ವದ ಎಲ್ಲ ರಾಷ್ಟ್ರ ಹೋಲಿಸಿದರೆ ಭಾರತೀಯ ಹವಾಮಾನ ವಿಭಿನ್ನವಾಗಿದೆ. ಜತೆಗೆ ಎಲ್ಲ ಋತುಮಾನದಲ್ಲೂ ವಿವಿಧ ಕೃಷಿ ಬೆಳೆಯಲು ಅವಕಾಶವಿದೆ. ಹೀಗಾಗಿ ಪದವಿ ಪಡೆದ ವಿದ್ಯಾರ್ಥಿಗಳು, ಕೃಷಿ ವಿಜ್ಞಾನಿಗಳು, ರೈತರಿಗೆ ಋತುಮಾನ ಆಧಾರಿತ ಕೃಷಿ ಬೆಳೆಯಲು ಹೆಚ್ಚಿನ ಉತ್ತೇಜನ ಹಾಗೂ ತಿಳವಳಿಕೆ ನೀಡಬೇಕು ಎಂದು ತೋಟಗಾರಿಕೆ ವಿವಿಯ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಕರೆ ನೀಡಿದರು.

Advertisement

ನಗರದ ತೋಟಗಾರಿಕೆ ವಿಶ್ವವಿದ್ಯಾಲಯ ಆವರಣದಲ್ಲಿ ಬುಧವಾರ ನಡೆದ ತೋವಿವಿಯ 11ನೇ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆಚ್ಚಿನ ವಿದ್ಯಾವಂತರು ನೌಕರಿ ಪಡೆಯಲು ಅಥವಾ ಉದ್ಯಮಿಯಾಗಲು ಪ್ರಯತ್ನಿಸುತ್ತಿದ್ದು, ಕನಿಷ್ಟ ಪಕ್ಷ ತೋಟಗಾರಿಕೆ ಅಧ್ಯಯನ ಮಾಡಿದಂತವರಾದರೂ ಒಕ್ಕಲುತನದಲ್ಲಿ ಅಭಿರುಚಿ ಬೆಳಸಿಕೊಳ್ಳುವುದಲ್ಲದೇ ಅದನ್ನು ನಿರಂತವಾಗಿ ಉಳಿಸಿಕೊಂಡು ದೇಶದ ಕೃಷಿ ಪ್ರಗತಿಯತ್ತ ಸಾಗಿಸಬೇಕು ಎಂದು ತಿಳಿಸಿದರು.

ಇತರೆ ದೇಶಗಳಿಗೆ ಹೋಲಿಸಿದಾಗ ನಮ್ಮ ಹವಾಮಾನ ಅತ್ಯುತ್ತಮವಾಗಿದ್ದು, ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲದ ಋತುಮಾನಸಾರವಾಗಿ ವಿಭಿನ್ನ ಬೆಳೆ ಬೆಳೆಯಲು ಅನುಕೂಲವಾಗಿದೆ. ಇಂದಿಗೂ ನಮ್ಮ ದೇಶವು ಕೃಷಿ ಪ್ರಧಾನವಾಗಿದ್ದು, ಕೃಷಿ ಪದವೀಧರರು ವಿವಿಧ ಪ್ರಯೋಗ ಮತ್ತು ತಂತ್ರಜ್ಞಾನ ಬಳಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕು. ಈಗ ಕೃಷಿ ಭೂಮಿ ಇಲ್ಲದವರು ಕೂಡ ಗೋಡೆ ಮತ್ತು ಟೆರಸ್‌ ಗಾರ್ಡನ್‌, ತೋಟಗಾರಿಕೆ ಮಾಡತ್ತಿದ್ದು, ಈ ರೀತಿಯಾದ ಆಧುನಿಕ ಕೃಷಿ ಪದ್ಧತಿ ಹೊರಹೊಮ್ಮಬೇಕಾಗಿದೆ ಎಂದರು.

ಕೃಷಿ ಸಚಿವ ಮುನಿರತ್ನ ಮಾತನಾಡಿ, ವಿದ್ಯಾರ್ಥಿಗಳು ತೋಟಗಾರಿಕೆಯಲ್ಲಿ ಕಲಿತ ಜ್ಞಾನ ರೈತರ ಆದಾಯ ಹೆಚ್ಚಿಸುವಲ್ಲಿ ತೊಡಗಿಸಿ ತಂತ್ರಜ್ಞಾನ ರೈತರ ಜಮೀನುಗಳಿಗೆ ತಲುಪಿಸುವಲ್ಲಿ ಶ್ರಮಿಸಬೇಕಲ್ಲದೇ ಇಂದು ಪಡೆದಿರುವ ಪದವಿ ಪದಕಗಳನ್ನು ದೇಶದ ಬೆನ್ನೆಲುಬಾದ ರೈತನಿಗೆ ಸರ್ಮಪಿಸಬೇಕು. ಇಸ್ರೇಲ್‌ ಅತಿ ಸಣ್ಣ ಮತ್ತು ಕಡಿಮೆ ನೀರಾವರಿ ಹೊಂದ್ದಿದರೂ ಕೃಷಿಯಲ್ಲಿ ತನ್ನದೇಯಾದ ಛಾಪು ಮೂಡಿಸಿರುವುದರಿಂದ ನಮ್ಮಲ್ಲಿಯೂ ಇಸ್ರೇಲ್‌ ಮಾದರಿ ಕೃಷಿ ಆಗಬೇಕಾಗಿದ್ದು, ರೈತರಿಗೆ ಅನುಕೂಲವಾಗುವ ಪದ್ಧತಿಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳೋಣ ಎಂದರು.

Advertisement

ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜೇಂದ್ರಸಿಂಗ್‌ ಮಾತನಾಡಿ, ನಗರೀಕರಣ, ವಾಣಿಜ್ಯೀಕರಣ ಹಾಗೂ ಕೃಷಿ ಬೆಳವಣಿಗೆಯಿಂದ ನದಿ ಮತ್ತು ಇತರೆ ಜಲಮೂಲಗಳ ಅವ್ಯಾಹತವಾದ ಮಾಲಿನ್ಯ ಉಂಟಾಗುತ್ತದೆ. ಇದರಿಂದಾಗಿ ಕುಡಿವ ನೀರು, ಇತರೆ ಉತ್ಪಾದಕರ ಚಟುವಟಿಕೆಗಳು ಹಾಗೂ ಕೃಷಿಗೆ ಶುದ್ಧ ನೀರಿನ ಕೊರತೆಯಾಗುತ್ತದೆ. ಮಲೀನ ನೀರಿನ ಬಳಕೆಯಿಂದಾಗಿ ರೋಗ-ರುಜಿನು, ಹಣಕಾಸಿನ ಬವಣೆ ಉಂಟಾಗುತ್ತದೆ. ಜಲ ಸಂಪನ್ಮೂಲ ಸಂರಕ್ಷಣೆ, ನಿರ್ವಹಣೆ ಹಾಗೂ ಸದ್ಬಳಕೆ ಬಗ್ಗೆ ವೈಜ್ಞಾನಿಕ ತಿಳಿವಳಿಕೆ ಅವಶ್ಯಕತೆ ಇದ್ದು ನೈಸರ್ಗಿಕ ಸ್ವರೂಪ, ಲಭ್ಯತೆ, ಗುಣಮಟ್ಟ ಅವಕಾಶಗಳು ಹಾಗೂ ಇತಿಮಿತಿಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕಾಗಿದೆ ಎಂದರು.

ಈ ವೇಳೆ ವ್ಯವಸ್ಥಾಪಕ ಮಂಡಳಿ ಸದಸ್ಯರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ, ತೋವಿವಿ ಕುಲಪತಿ ಡಾ| ಕೆ.ಎಂ. ಇಂದಿರೇಶ, ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ, ಎಸ್ಪಿ ಲೋಕೇಶ ಜಗಲಾಸರ ಸೇರಿದಂತೆ ತೋವಿವಿಯ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

ಇಸ್ರೇಲ್‌ ವಿಶ್ವದಲ್ಲೇಅತ್ಯಂತ ಕಡಿಮೆ ಭೂಮಿ ಮತ್ತು ನೀರು ಹೊಂದಿರುವ ದೇಶ. ಆದರೂ, ಅದು ತನ್ನ ಅತ್ಯುತ್ತಮ ಕೃಷಿ ಪದ್ಧತಿ ಮೂಲಕ ವಿಶ್ವದ ಗಮನ ಸೆಳೆದಿದೆ. ಬಾಗಲಕೋಟೆ ತೋಟಗಾರಿಕೆ ವಿವಿ ಕೈಗೊಳ್ಳುವ ಸಂಶೋಧನೆಗಳು, ರೈತರ ಭೂಮಿಗೆ ವಿಸ್ತರಣೆಯಾಗಬೇಕು. ಹೊಸ ಹೊಸ ಸಂಶೋಧನೆ, ತೋಟಗಾರಿಕೆ ಪದ್ಧತಿ ಕುರಿತು ಅಧ್ಯಯನ ನಡೆಸಲು ತೋಟಗಾರಿಕೆ ವಿವಿಯ ವಿಜ್ಞಾನಿಗಳು, ಕುಲಪತಿ ಹಾಗೂ ಆಸಕ್ತ ತಜ್ಞರು ಒಳಗೊಂಡ ತಂಡವನ್ನು ಇಸ್ರೇಲ್‌ ದೇಶಕ್ಕೆ ಭೇಟಿ ನೀಡಲು ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಕುಲಪತಿಗಳು ಪ್ರವಾಸ ತಂಡದ ಪಟ್ಟಿ ನೀಡಿದರೆ ಶೀಘ್ರ ಸರ್ಕಾರದಿಂದ ಅಧ್ಯಯನ ಪ್ರವಾಸದ ವ್ಯವಸ್ಥೆ ಮಾಡಲಾಗುವುದು. -ವಿ. ಮುನಿರತ್ನ, ತೋಟಗಾರಿಕೆ ಸಚಿವ

ಶಿಕ್ಷಣ ಅಂದರೆ ಕೇವಲ ಜ್ಞಾನ ಪಡೆಯುವುದಲ್ಲ. ಇಂದಿನ ವೈಜ್ಞಾನಿಕ ಯುಗದಲ್ಲಿ ಶಿಕ್ಷಣ, ವಿಜ್ಞಾನ ಮತ್ತು ಪ್ರಜ್ಞೆ ಒಳಗೊಂಡಿರಬೇಕು. ಇಂದು ಇಡೀ ವಿಶ್ವದಲ್ಲಿ ಪರಿಸರ ನಾಶವಾಗುತ್ತಿದೆ. ಪರಿಸರ ಅತ್ಯುತ್ತಮಗೊಳಿಸಲು ತೋಟಗಾರಿಕೆ ಕೃಷಿ ಪದ್ಧತಿಯೂ ಸಹಕಾರಿ. ಪದವಿ ಪಡೆದ ವಿದ್ಯಾರ್ಥಿಗಳು, ಕೇವಲ ನೌಕರಿಗೆ ಸೀಮಿತಗೊಳ್ಳದೇ ಸಂಶೋಧನೆ ಕೈಗೊಂಡು, ರೈತರ ಆರ್ಥಿಕಾಭಿವೃದ್ಧಿಗೆ ಕಾರಣರಾಗಬೇಕು. –ಡಾ| ರಾಜೇಂದ್ರಸಿಂಗ್‌, ಪರಿಸರವಾದಿ, ರಾಜಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next