Advertisement

ಮೈಸೂರು ಅಭಿವೃದ್ಧಿಗೆ ಒತ್ತು: ಬೊಮ್ಮಾಯಿ

06:00 PM Aug 12, 2022 | Team Udayavani |

ಮೈಸೂರು:ಮೈಸೂರಿನ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರನ್ನು ಗುರುತಿಸುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

Advertisement

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಬೆಳಗ್ಗೆ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಯುವಜನ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಮೈಸೂರಿನಲ್ಲಿ ಸೆಮಿಕಂಡೆಕ್ಟರ್‌ ಉತ್ಪಾದನಾ ಕೇಂದ್ರ, ಟೂರಿಸ್ಟ್‌ ಸರ್ಕಿಟ್‌ ಹಾಗೂ ಸಿಲ್ಕ್ ಟೆಕ್ಸ್‌ಟೈಲ್ಸ್‌ ಪಾರ್ಕ್‌ ಸೇರಿ ಮಹತ್ವದ ಕೈಗಾರಿಕೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರಿಂದ ಮೈಸೂರು ಆರ್ಥಿಕವಾಗಿ ಮತ್ತಷ್ಟು ವೇಗವಾಗಿ ಬೆಳೆಯಲಿದೆ. ಜತೆಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ ಎಂದರು.

ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ: ಇಂದು ಮೈಸೂರಿನತ್ತ ಇಡೀ ದೇಶವೇ ತಿರುಗಿ ನೋಡುತ್ತಿದೆ. ನಾವು ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ಕೊಟ್ಟಿದ್ದೇವೆ. ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಕೆ.ಆರ್‌. ಆಸ್ಪತ್ರೆಯ ನವೀಕರಣಕ್ಕೆ ಅನುದಾನ ನೀಡಿದ್ದೇವೆ. ಇದರ ಜೊತೆಗೆ ಮೈಸೂರಿನ ಪ್ರತಿಷ್ಠಿತ ಮಹಾ ರಾಣಿ ಮತ್ತು ಮಹಾರಾಜ ಕಾಲೇಜುಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಇದೇ ವರ್ಷ 1 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಹಾಸ್ಟೆಲ್‌ಗ‌ಳನ್ನು ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಒತ್ತು: ಮಹಾರಾಜ ಆಳ್ವಿಕೆಯಲ್ಲಿ ಹಳೇ ಮೈಸೂರು ಅಭಿವೃದ್ಧಿಯನ್ನು ಕಂಡಿದೆ. ಆದರೆ, ಉತ್ತರ ಕರ್ನಾಟಕ ಭಾಗ ಅಭಿವೃದ್ಧಿ ಯಾಗಬೇಕಿದೆ. ಈ ನಿಟ್ಟಿನಲ್ಲಿ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಅನಾಮಧೇಯರಿಗೆ ಅರ್ಪಣೆ: ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ಹೋರಾಟ ನಡೆಸಿದ್ದಾರೆ. ಆದರೆ ಕೆಲವರ ಹೆಸರುಗಳನ್ನು ಮಾತ್ರ ನಾವು ಹೇಳುತ್ತೇವೆ. ಉಳಿದ ಅನಾಮಧೇಯರುಗಳ ಹೆಸರು ಇಲ್ಲ. ಈ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಅನಾಮಧೇಯರಿಗೆ ಅರ್ಪಿಸಲಾಗುವುದು. ಅನ್ನ ನೀಡುವ ರೈತ, ದೇಶಕ್ಕಾಗಿ ಹಗಲಿರುಳು ಶ್ರಮಿಸುವ ಸೈನಿಕ, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ದುಡಿಯುತ್ತಿರುವ ಶಿಕ್ಷಕರು, ಪ್ರಾಧ್ಯಾಪಕರು ಹಾಗೂ ಭವಿಷ್ಯದ ವಿದ್ಯಾರ್ಥಿ ಸಮೂಹಕ್ಕೆ ನನ್ನ ಸಲಾಂ ಎಂದರು.

Advertisement

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಈ 75 ವರ್ಷಗಳಲ್ಲಿ ಅನೇಕ ಸಾಧನೆ ಮಾಡಿದೆ. ಸಾಧಿಸಬೇಕಾದ್ದು ಬಹಳ ಇದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಯೋಜನೆ ಮೂಲಕ ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಅಮೃತ ಮಹೋತ್ಸವದ ಈ ಸಂದರ್ಭ ಮುಂದಿನ 25 ವರ್ಷಗಳಲ್ಲಿ ದೇಶವನ್ನು ವಿಶ್ವದ ನಂ.1 ರಾಷ್ಟ್ರವಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಯಶಸ್ಸುಗೊಳಿಸಲು ಪಣತೊಡಬೇಕಿದೆ. ನವ ಕರ್ನಾಟಕದಿಂದ ನವ ಭಾರತ
ನಿರ್ಮಿಸಬೇಕು. ದೇಶದ 5 ಟ್ರಿಲಿಯನ್‌ ಆರ್ಥಿಕತೆಗೆ ಕರ್ನಾಟಕದಿಂದ 1.5 ಟ್ರಿಲಿಯನ್‌ ಕೊಡುಗೆ ನೀಡಬೇಕು ಎಂದು ವಿವರಿದರು.

ಸ್ವಾತಂತ್ರ್ಯ ನಂತರ ಜನಿಸಿದ ನಾವೆಲ್ಲರೂ ಅನುಭವಿಸುತ್ತಿರುವ ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ. ಮಹಾನ್‌ ನಾಯಕರ ಹೋರಾಟದ ತ್ಯಾಗ, ಬಲಿದಾನದಿಂದ ಸಿಕ್ಕಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಾಹುಕಾರ್‌ ಚನ್ನಯ್ಯ, ಬಾಲಗಂಗಾಧರ್‌ ತಿಲಕ್‌, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿ ಅನೇಕರು ಹೋರಾಡಿದ್ದಾರೆ ಎಂದರು.

ಮೈಸೂರು ಮಾನಸಗಂಗೋತ್ರಿ ಯಲ್ಲಿರುವ ಶಕ್ತಿ ಇಂದು ಇಡೀ ಭಾರತ ದೇಶಕ್ಕೆ ಕೇಳಿಸಿದೆ. ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಿಮ್ಮೆಲ್ಲರನ್ನೂ ನೋಡಿ ಸಂತೋಷ ಇಮ್ಮಡಿಯಾಗಿದೆ. ನನ್ನ ಶಕ್ತಿ ಇಮ್ಮಡಿಯಾಗಿದೆ ಎಂದರು. ಇಲ್ಲಿರುವ ಯುವ ಶಕ್ತಿಯನ್ನು ಸದುಪಯೋಗ ಮಾಡಿಕೊಂಡರೆ ಮುಂದಿನ 25 ವರ್ಷದಲ್ಲಿ ಭಾರತವನ್ನು ಶ್ರೇಷ್ಠ ಭಾರತ ಮಾಡಿ ಇಡೀ ವಿಶ್ವದಲ್ಲಿ ಯೇ ಭಾರತವನ್ನು ನಂಬರ್‌ ವನ್‌ ದೇಶ ಮಾಡಲು ನಮಗೆ ಶಕ್ತಿಯಾಗಿ ನೀವಿದ್ದೀರಿ ಎಂಬ ಭರವಸೆ ಮೂಡಿದೆ ಎಂದರು.

ನಟ ಯಶ್‌ ಮಾತನಾಡಿ, ಸಾಮಾನ್ಯ ತಿರುವುಗಳು, ಘಟನೆಗಳು ವ್ಯಕ್ತಿಯಲ್ಲಿ ದೊಡ್ಡ ಬದಲಾವಣೆ ತರುತ್ತವೆ. ಸಾಮಾನ್ಯ ವಿಷಯಗಳಿಂದಲೇ ಮನುಷ್ಯ ಏನನ್ನಾದರೂ ಸಾಧಿಸ ಬಹುದು. ಇದಕ್ಕೆ ಆತ್ಮವಿಶ್ವಾಸವಿ ರಬೇಕು. ಸಕಾರಾತ್ಮಕ ಶಕ್ತಿಗಳಿಂದಲೇ ಮುನ್ನುಗ್ಗಬೇಕು. ಒಳ್ಳೆಯದರ ಬಗ್ಗೆ ಮಾತನಾಡಿದರೆ, ಯೋಚಿಸಿದರೆ ಯಶಸ್ಸು ಜೊತೆಗೆ ಇರಲಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ್‌, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಜಿ.ಟಿ. ದೇವೇಗೌಡ, ಎಸ್‌.ಎ. ರಾಮದಾಸ್‌, ಎಲ್‌. ನಾಗೇಂದ್ರ, ನಿರಂಜನ್‌, ಎಂಎಲ್‌ಸಿ ಎಚ್‌. ವಿಶ್ವನಾಥ್‌, ಮೇಯರ್‌ ಸುನಂದಾ ಫಾಲನೇತ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next