ಉಡುಪಿ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. “ಗೋಲ್ಡನ್ ಹವರ್’ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸೈಬರ್ ಕ್ರೈಂ ಆದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವುದರಿಂದ ಅದನ್ನು ತಡೆಯಲು ಸಾಧ್ಯವಿದೆ. ಈ
ನಿಟ್ಟಿನಲ್ಲಿ ಸಾರ್ವಜನಿಕರು ಸ್ಪಂದಿಸಬೇಕು. ನಾವೂ ಸೈಬರ್ ಸೆಕ್ಯೂರಿಟಿಗೆ ಹೆಚ್ಚು ಒತ್ತು ನೀಡುವ ಕಾರ್ಯ ಮಾಡಲಿದ್ದೇವೆ ಎಂದು ರಾಜ್ಯ ಗೃಹಸಚಿವ ಡಾ| ಜಿ. ಪರಮೇಶ್ವರ್ ಅವರು ಹೇಳಿದರು.
ಗೃಹ ಸಚಿವರಾದ ಅನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಅನಂತರ ಮಾತನಾಡಿದರು.
ಕೋರ್ಟ್ ತೀರ್ಪಿಗೆ ಸ್ವಾಗತ
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಏನು ತೀರ್ಪು ಬರಲಿದೆಯೋ ಅದನ್ನು ಸ್ವಾಗತಿಸುತ್ತೇವೆ. ಮುಂದೆ ಸರಕಾರವಾಗಿ ನಾವು ಏನು ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೇವೆ. ಬಿಜೆಪಿಯ ಟೀಕೆಯ ಆಧಾರದಲ್ಲಿ ಸರಕಾರ ನಡೆಸಲು ಸಾಧ್ಯವಿಲ್ಲ. ಜನರಿಗೆ ಏನು ಬೇಕು. ಅದರಂತೆ ಸರಕಾರ ನಡೆಸಲಿದ್ದೇವೆ. ನಕ್ಸಲ್ ನಿಗ್ರಹ ಪಡೆಯನ್ನು ಬರ್ಖಾಸ್ತು ಮಾಡುವ ಯಾವ ಪ್ರಸ್ತಾವನೆಯೂ ಸದ್ಯ ಸರಕಾರದ ಮುಂದಿಲ್ಲ ಎಂದರು.
Related Articles
ಸಾಧಕ-ಬಾಧಕ ಚರ್ಚೆ
ಹಿಂದಿನ ಬಿಜೆಪಿ ಸರಕಾರದ ಶೇ. 40ರಷ್ಟು ಕಮಿಷನ್ ಆರೋಪದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಅದರ ಸಾಧಕ-ಬಾಧಕಗಳನ್ನು ನೋಡಿಕೊಂಡು ತನಿಖೆ ಮಾಡಬೇಕೇ ಎಂಬುದನ್ನು ನಿರ್ಧರಿಸಲಿದ್ದೇವೆ ಎಂದರು.
ಪೊಲೀಸ್ ನೇಮಕಕ್ಕೆ ಕ್ರಮ
15 ಸಾವಿರ ಕಾನ್ಸ್ಟೆಬಲ್ ಸಹಿತ ಸಬ್ ಇನ್ಸ್ಪೆಕ್ಟರ್ ಹಾಗೂ ವಿವಿಧ ಹುದ್ದೆಗಳು ಖಾಲಿಯಿವೆ. ಅವುಗಳ ನೇಮಕಕ್ಕೂ ಕ್ರಮ ತೆಗೆದುಕೊಳ್ಳಲಿದ್ದೇವೆ. ಹಾಗೆಯೇ ಪೊಲೀಸ್ ವರ್ಗಾವಣೆಗೂ ಚಾಲನೆ ನೀಡಲಿದ್ದೇವೆ. ಅಂತರ್ ಜಿಲ್ಲೆ ವರ್ಗಾವಣೆಗೂ ಅವಕಾಶ ನೀಡಲಿದ್ದೇವೆ. ಹಿರಿಯ ಪೊಲೀಸ್ ಅಧಿಕಾರಿಗಳ ವೇತನ ಹೆಚ್ಚಳ ಹಾಗೂ ಭಡ್ತಿಗೂ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಹಿರಿಯ ಅಧಿಕಾರಿಗಳ ಜತೆ ಚರ್ಚೆ
ಪರಮೇಶ್ವರ್ ಅವರು ಎಸ್ಪಿ ಕಚೇರಿ ಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಿದರು. ಎಸ್ಪಿ ಹಾಕೇ ಅಕ್ಷಯ್ ಮಚ್ಚೀಂದ್ರ ಅವರು ಜಿಲ್ಲೆಯ ಪೊಲೀಸ್ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಹೆಚ್ಚು ವರಿ ಪೊಲೀಸ್ ಮಹಾನಿರ್ದೇಶಕ ಆಲೋಕ್ ಕುಮಾರ್, ಪಶ್ಚಿಮ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಡಾ| ಚಂದ್ರಗುಪ್ತ, ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ನಿಕಮ್ ಪ್ರಕಾಶ್ ಅಮ್ರಿತ್ ಉಪಸ್ಥಿತರಿದ್ದರು.
“ಹತ್ಯೆಯಾದವರ ಕುಟುಂಬಕ್ಕೆ ಪರಿಹಾರ”
ಮಂಗಳೂರು, ಜೂ. 6: ಕರಾವಳಿಯಲ್ಲಿ ಕೋಮುದ್ವೇಷದಿಂದ ಹತ್ಯೆಯಾದ ಮಸೂದ್, ದೀಪಕ್ ರಾವ್, ಫಾಝಿಲ್, ಜಲೀಲ್ ಸೇರಿದಂತೆ ಸುಮಾರು 7 ಮಂದಿಯ ಕುಟುಂಬದವರಿಗೆ ಸರಕಾರದಿಂದ ಪರಿಹಾರ ಕೊಟ್ಟಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಲಾಗಿದ್ದು ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಡಾ| ಜಿ. ಪರಮೇಶ್ವರ್ ತಿಳಿಸಿದರು.
ಅವರು ಮಂಗಳವಾರ ನಗರದಲ್ಲಿ ಪಶ್ಚಿಮ ವಲಯ ಪೊಲೀಸ್ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತ ನಾ ಡಿದರು. ಕೋಮುದ್ವೇಷಕ್ಕೆ ಸಂಬಂಧಿ ಸಿದ ಕೊಲೆ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನ್ಯಾಯಾಲಯದ ಆದೇಶ ಬಂದರೆ ಪ್ರಕರಣಗಳ ಮರು ತನಿಖೆ ನಡೆಸು
ತ್ತೇವೆ. ಪೊಲೀಸರು ನಿರ್ಲಕ್ಷ್ಯ ತೋರಿದ್ದರೆ ಆಗ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾದಯಾತ್ರೆ ನಡೆಸಿದ್ದೆ
ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿದ್ದಾಗ ಸುಮಾರು 25 ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗಿದ್ದೆ. ಅವರೆಲ್ಲರೂ ಕೂಡ ಬೇರೆ ವಿಚಾರಗಳಿಗಿಂತ ಶಾಂತಿ, ಸಾಮ ರಸ್ಯ ಬೇಕು ಎಂದಿದ್ದರು. ಈ ಹಿಂದೆ ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ “ಕೋಮುಸೌಹಾರ್ದತೆ’ ಶೀರ್ಷಿಕೆ ಯಡಿ ಉಳ್ಳಾಲದಿಂದ ಉಡುಪಿ ಯವರಿಗೆ ಪಾದಯಾತ್ರೆ ನಡೆಸಿದ್ದೆ ಎಂದು ಎಂದು ಪರಮೇಶ್ವರ್ ತಿಳಿಸಿದರು.
ಅಧಿಕಾರಿಗಳೇ ಜವಾಬ್ದಾರಿ
ಯಾವುದೇ ಪ್ರಕರಣದ ಸಮ ರ್ಪಕ ತನಿಖೆ ನಡೆಸಿ ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದು ಹಿರಿಯ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಅದರ ಬಗ್ಗೆ ಕಾಲ ಕಾಲಕ್ಕೆ ಪರಿಶೀಲನೆ ನಡೆಸ ಲಾಗುವುದು ಎಂದು ಹೇಳಿದರು.
ಎಸ್ಪಿ ಕಚೇರಿ ಸ್ಥಳಾಂತರ:ಶೀಘ್ರ ನಿರ್ಧಾರ
ಮಂಗಳೂರು ನಗರದಲ್ಲಿರುವ ದ.ಕ. ಜಿಲ್ಲಾ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಬೇಕೆಂಬ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಈ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಲೋಕ್ ಕುಮಾರ್, ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್, ಪಶ್ಚಿಮ ವಲಯ ಡಿಐಜಿಪಿ ಚಂದ್ರಗುಪ್ತ, ಉ.ಕ. ಎಸ್ಪಿ ವಿಷ್ಣುವರ್ಧನ್, ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್, ದ.ಕ. ಪ್ರಭಾರ ಎಸ್ಪಿ ರಿಷ್ಯಂತ್ ಉಪಸ್ಥಿತರಿದ್ದರು.