Advertisement

ಮತಕ್ಕಾಗಿ ಜಾಲ ಬಲೆ : ಕೋಟ್ಯಂತರ ರೂ. ಸುರಿಯುತ್ತಿವೆ ಪಕ್ಷಗಳು

12:08 AM Jan 23, 2023 | Team Udayavani |

ಈಗ ಮತದಾರರನ್ನು ಗೆಲ್ಲಲು ಕೇವಲ ಉಚಿತ ಘೋಷಣೆಗಳು, ಚೆಂದದ ಮಾತುಗಳು, ರಾಜಕೀಯ ನಾಯಕರ ವರ್ಚಸ್ಸು ಮಾತ್ರವೇ ಸಾಕಾಗುವುದಿಲ್ಲ. ಹೀಗಾಗಿಯೇ ರಾಜಕೀಯ ನಾಯಕರು, ಕಾರ್ಯಕರ್ತರ ದಂಡಿನ ಜತೆಗೆ ಖಾಸಗಿ ಸಂಸ್ಥೆಗಳ ಮೊರೆ ಹೋಗಿವೆ ರಾಜಕೀಯ ಪಕ್ಷಗಳು! ಈ ಸಂಸ್ಥೆಗಳ ಮೂಲಕ ಅತ್ಯಂತ ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣಗಳ ನಿರ್ವಹಣೆ, ಚುನಾವಣ ತಂತ್ರಗಾರಿಕೆ, ಸಮೀಕ್ಷೆ, ಅಭಿಯಾನಗಳನ್ನು ನಡೆಸಿ ತಮ್ಮದೇ ಆದ ನರೇಟಿವ್‌ ಸೃಷ್ಟಿಸಿ, ಮತದಾರರನ್ನು ಸೆಳೆಯಲು ಮುಂದಾಗಿವೆ. ಇದಕ್ಕಾಗಿ ಕೋಟಿಗಟ್ಟಲೆ ರೂಪಾಯಿ ಸುರಿಯುತ್ತಿವೆ.

Advertisement

ಕಾಂಗ್ರೆಸ್‌

ಎರಡು ವರ್ಷಗಳಿಂದ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಹೋರಾಟ ನಡೆಸುತ್ತಿದೆ. ಹೀಗಾಗಿ ಖಾಸಗಿ ಸಂಸ್ಥೆಗಳ ಮೊರೆ ಹೋಗಿದ್ದು, ಇದಕ್ಕಾಗಿ ಸರಿಸುಮಾರು 100 ಕೋಟಿ ರೂ.ಗಳಷ್ಟು ವೆಚ್ಚ ಮಾಡುತ್ತಿದೆ. ಪಕ್ಷದ ಚುನಾವಣ ತಂತ್ರ, ಪ್ರತೀ ಕ್ಷೇತ್ರದ ಸಮೀಕ್ಷೆ, ಮತದಾನ ಅನಂತರದ ಮತಗಟ್ಟೆ ಸಮೀಕ್ಷೆ, ದಿನನಿತ್ಯದ ಸಾಮಾಜಿಕ ಜಾಲತಾಣ ನಿರ್ವಹಣೆ ಎಲ್ಲವನ್ನೂ ಹೊರಗುತ್ತಿಗೆ ನೀಡಿದೆ. ಇಲ್ಲಿ ಪಕ್ಷ ಮತ್ತು ಕೆಪಿಸಿಸಿ ಅಧ್ಯಕ್ಷರಿಗಾಗಿ ಪ್ರತ್ಯೇಕ ತಂಡಗಳು ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿವೆ. ಇಂಥ ವೃತ್ತಿಪರ ತಂಡಗಳು ಇದಕ್ಕಾಗಿಯೇ ದಿನದ 24 ತಾಸು ತರಬೇತಿ ಪಡೆದು ಕೆಲಸ ಮಾಡುತ್ತಿದ್ದು, ವಾರ್‌ ರೂಂ ಕೂಡ ಆರಂಭಿಸಲಾಗಿದೆ. ಒಟ್ಟಾರೆಯಾಗಿ ಮೂರು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.

ಪಕ್ಷದ ಚುನಾವಣ ತಂತ್ರ ಮತ್ತು ಸಮೀಕ್ಷೆ ಹೊಣೆಯನ್ನು ಮೈಂಡ್‌ಶೇರ್‌ ವಹಿಸಿಕೊಂಡಿದ್ದು, ಎರಡು ವರ್ಷಗಳಿಂದ ಕೆಲಸ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಸಾಮಾಜಿಕ ಜಾಲತಾಣ ನೋಡಿಕೊಳ್ಳಲು ಡಿಸೈನ್‌ ಬಾಕ್ಸ್‌ ಸಂಸ್ಥೆ, ಪಕ್ಷದ ಸಾಮಾಜಿಕ ಜಾಲತಾಣ ನೋಡಿಕೊಳ್ಳಲು ಅಡೋಸ್ಪೀಯರ್‌ ಎಂಬ ಸಂಸ್ಥೆಯನ್ನು ನಿಯೋಜನೆ ಮಾಡಲಾಗಿದೆ.

ಸಿದ್ದರಾಮಯ್ಯ ಸೇರಿ ಹಲವು ನಾಯಕರು ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣ ನಿರ್ವಹಣೆ ಕೆಲಸ ಹೊರಗುತ್ತಿಗೆಗೆ ನೀಡಿದ್ದಾರೆ. ಕೆಲವರು ಪಕ್ಷದ ಕಾರ್ಯಕರ್ತರನ್ನೇ ಬಳಸಿಕೊಳ್ಳುತ್ತಿದ್ದಾರೆ.
ವಾರ್‌ ರೂಂ ನಿರ್ವಹಣೆಗೆ 500ಕ್ಕೂ ಹೆಚ್ಚು ಸಿಬಂದಿ ಕೆಲಸ ಮಾಡುತ್ತಿದ್ದಾರೆ. ಐಟಿ ವಲಯದಲ್ಲಿ ಅನುಭವ ಇರುವವರ ಸಹಿತ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿವಳಿಕೆ ಉಳ್ಳವರು ಆಯಾ ದಿನದ ಬೇರೆ ಬೇರೆ ಪಕ್ಷಗಳ ಸಭೆ, ಸಮಾರಂಭ, ನಾಯಕರ ಹೇಳಿಕೆ ಗಮನಿಸಿ ಅದಕ್ಕೆ ತಕ್ಕಂತೆ ಕಾಂಗ್ರೆಸ್‌ ನಾಯಕರ ಅಭಿಪ್ರಾಯ ಪಡೆದು ಟ್ವಿಟರ್‌, ಫೇಸ್‌ಬುಕ್‌, ಯೂಟ್ಯೂಬ್‌, ವಾಟ್ಸ್‌ ಆಪ್‌ ಮೂಲಕ ಕಳುಹಿಸುವ ಕೆಲಸ ಮಾಡುತ್ತಿರುತ್ತಾರೆ.

Advertisement

– ಎಸ್‌. ಲಕ್ಷ್ಮೀನಾರಾಯಣ
**
ಬಿಜೆಪಿ

ಕಳೆದ ಚುನಾವಣೆಯಲ್ಲಿ ಜಾಲತಾಣವೂ ಸೇರಿದಂತೆ ಬಿಜೆಪಿಯ ತಂತ್ರಗಾರಿಕೆಯ ನಿರ್ವಹಣೆ ಮಾಡಿದ್ದು “ಎಬಿಎಂ’ (ಅಸೋಸಿಯೇಶನ್‌ ಆಫ್ ಬಿಲಿಯನ್‌ ಮೈಂಡ್‌), ಈ ಬಾರಿ ರಾಜ್ಯದಲ್ಲಿ ಬಿಜೆಪಿಯ ಚುನಾವಣ ಅಭಿಯಾನ ನಡೆಸುವ ಹೊಣೆಗಾರಿಕೆಯನ್ನು “ವಾರಾಹಿ’ ಎಂಬ ಸಂಸ್ಥೆಗೆ ನೀಡಲಾಗಿದೆ.

ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆ, ಸರ್ವೇ, ಅಭಿಯಾನದ ನಿರ್ವಹಣೆ ಹೊತ್ತಿದ್ದ ಈ ಸಂಸ್ಥೆ ಈಗ ಕರ್ನಾಟಕದಲ್ಲೂ ಕೆಲಸ ನಿರ್ವಹಿಸುತ್ತಿದೆ. ಬಿಜೆಪಿ ಮೂಲಗಳ ಪ್ರಕಾರ ಸುಮಾರು 200ಕ್ಕೂ ಹೆಚ್ಚು ಸಿಬಂದಿ ಈ ಸಂಸ್ಥೆಯ ಅಡಿಯಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಬಿಜೆಪಿಯ ಸಾಮಾಜಿಕ ಜಾಲ ಘಟಕ ಕೇವಲ ಪಕ್ಷದ ಚಟುವಟಿಕೆಗೆ ಮಾತ್ರ ಸೀಮಿತವಾಗಿದೆ. ವಾರಾಹಿ ಜತೆಗೆ “ಚಾರ್ವಿಸ್‌’ ಎಂಬ ದಿಲ್ಲಿ ಮೂಲದ ಸಂಸ್ಥೆಯೂ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಡೇಟಾ ಆಧರಿತ ಕಾಲ್‌ ಸೆಂಟರ್‌ ನಿರ್ವಹಣೆ ಮಾಡುತ್ತಿದೆ. ಹಲವು ವರ್ಷಗಳಿಂದ ಬಿಜೆಪಿಯ ಚುನಾವಣ ಸಂಬಂಧಿ ಡೇಟಾ ವಿಶ್ಲೇಷಣೆಯನ್ನು ರಾಷ್ಟ್ರಮಟ್ಟದಲ್ಲಿ ಇದೇ ಸಂಸ್ಥೆ ನಿರ್ವಹಿಸುತ್ತಿದೆ.

ಇಂಥ ಸಂಸ್ಥೆಗಳ ನಿರ್ವಹಣೆ ರಾಜಕೀಯ ಪಕ್ಷಗಳಿಗೆ ಸುಲಭವಲ್ಲ, ತಂತ್ರಜ್ಞರು, ವೃತ್ತಿಪರರು, ಸೃಜನಶೀಲರ ತಂಡ ಇಲ್ಲಿ ಕೆಲಸ ಮಾಡುವುದರಿಂದ ವೇತನ, ಮಾನವ ಸಂಪನ್ಮೂಲ ನಿರ್ವಹಣೆ ಇತ್ಯಾದಿ ತುಟ್ಟಿಯಾಗಿಯೇ ಇರುತ್ತದೆ. ಮೂಲಗಳ ಪ್ರಕಾರ ಬಿಜೆಪಿ ಈ ಉದ್ದೇಶಕ್ಕಾಗಿ ನೂರಾರು ಕೋಟಿ ರೂ. ವೆಚ್ಚ ಮಾಡುತ್ತಿದೆ.

– ರಾಘವೇಂದ್ರ ಭಟ್‌
**
ಜೆಡಿಎಸ್‌

ಪಂಚರತ್ನ ಯಾತ್ರೆ, ಜನತಾ ಜಲಧಾರೆ ಕಾರ್ಯಕ್ರಮದ ಜತೆಗೆ ಕನ್ನಡಿಗರು, ಕನ್ನಡತನ ಮತ್ತು ಪ್ರಾದೇಶಿಕ ಅಸ್ಮಿತೆಯನ್ನು ಮೂಲವಾಗಿರಿಸಿ ಜೆಡಿಎಸ್‌ ಸಾಮಾಜಿಕ ಮಾಧ್ಯಮ ನಿರ್ವಹಿಸಲ್ಪ ಡುತ್ತಿದೆ. ಇದಕ್ಕೆ ಪಕ್ಷ ಸ್ವಂತ ಶಕ್ತಿಯನ್ನೇ ನೆಚ್ಚಿಕೊಂಡಿದೆ.

ಸಾಮಾಜಿಕ ಮಾಧ್ಯಮ ನಿರ್ವಹಣೆಗೆ ವ್ಯವಸ್ಥಿತ ತಂಡ ಕಟ್ಟಿರುವ ಜೆಡಿಎಸ್‌ ರಾಜ್ಯ ಮಟ್ಟದ ಕೇಂದ್ರೀಕೃತ ತಂಡದಲ್ಲಿ 15ರಿಂದ 20 ಜನ ಇದ್ದಾರೆ. ಉಳಿದಂತೆ 300ರಿಂದ 400 ಜನರು ತಳಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಟಿಕೆಟ್‌ ಘೋಷಣೆ ಮಾಡಿರುವ ಒಂದೊಂದು ಕ್ಷೇತ್ರಕ್ಕೆ 5ರಿಂದ 10 ಮಂದಿಯನ್ನು ನಿಯೋಜಿಸಲಾಗಿದ್ದು, ದಿನವಹಿ ಆಧಾರದಲ್ಲಿ ಆಯಾ ಕ್ಷೇತ್ರದ ಆಗುಹೋಗುಗಳ ಮೇಲ್ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುತ್ತಾರೆ. ಜತೆಗೆ ಟಿಕೆಟ್‌ ಘೋಷಣೆಯಾದ ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಉಳಿದ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳೂ ಆವರದೇ ಆದ ಸಾಮಾಜಿಕ ಮಾಧ್ಯಮ ಬಳಸಿಕೊಳ್ಳುತ್ತಿದ್ದಾರೆ. ಇದರ ನಿರ್ವಹಣೆಗೆ ರಾಜ್ಯ ಮಟ್ಟದಲ್ಲಿ ಸುಸಜ್ಜಿತ “ವಾರ್‌ ರೂಂ’ ರಚಿಸಲಾಗಿದೆ.

ಇದರ ಮೇಲ್ವಿಚಾರಣೆಯನ್ನು ನಿಖೀಲ್‌ ಕುಮಾರಸ್ವಾಮಿ ವಹಿಸಿದ್ದು, 15 ದಿನಕ್ಕೊಮ್ಮೆ ತಂಡದಲ್ಲಿರುವವರನ್ನು ಭೇಟಿ ಮಾಡಿ ಮಾಹಿತಿ ಪಡೆದು ಎಂದು ಮಾರ್ಗದರ್ಶನ ನೀಡುತ್ತಾರೆ. ಜತೆಗೆ ಎಚ್‌.ಡಿ. ಕುಮಾರಸ್ವಾಮಿ ಅವರಿಗೂ ನಿಯಮಿತವಾಗಿ ವರದಿ ಸಲ್ಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಇನ್ನಷ್ಟು ವಿಸ್ತರಿಸುವ, ಇನ್ನೂ ಹೆಚ್ಚಿನ ಜನರನ್ನು ನೇಮಕ ಮಾಡಿಕೊಳ್ಳುವ ಉದ್ದೇಶವಿದೆ ಎಂದು ಜೆಡಿಎಸ್‌ ಸಾಮಾಜಿಕ ಮಾಧ್ಯಮ ವಿಭಾಗದ ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರತಾಪ್‌ ಕಣಗಲ್‌ ಹೇಳುತ್ತಾರೆ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next