Advertisement

ಮೀಸಲು ರಾಜಕೀಯ ಹಗ್ಗಜಗ್ಗಾಟ: ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ನೇರ ವಾಗ್ಯುದ್ಧ

12:44 AM Mar 27, 2023 | Team Udayavani |

ರಾಜ್ಯ ಸರಕಾರ ಪ್ರಕಟಿಸಿರುವ ಮೀಸಲಾತಿ ನೀತಿ ವಿಚಾರವಾಗಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ನೇರ ವಾಗ್ಯುದ್ಧ ಆರಂಭವಾಗಿದೆ. ಅಲ್ಪಸಂಖ್ಯಾಕರ ಮೀಸಲಾತಿಯನ್ನು  ರದ್ದು ಮಾಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್‌  ಹೇಳಿದೆ. ಮೀಸಲಾತಿ ಹೆಚ್ಚಳ ಸಮಾಜ ಒಡೆಯುವ ಹುನ್ನಾರದ ಭಾಗ ಎಂದು ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಯಾರೂ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ,  ವಿಪಕ್ಷಗಳದ್ದು ಮೊಸರಲ್ಲಿ ಕಲ್ಲು ಹುಡುಕುವ ಕ್ರಮ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ಅಧಿಕಾರಕ್ಕೆ ಬಂದರೆ ರದ್ದು: ಕಾಂಗ್ರೆಸ್‌

ಬೆಂಗಳೂರು: ಅಲ್ಪಸಂಖ್ಯಾಕರಿಗಿದ್ದ ಮೀಸಲು ವ್ಯವಸ್ಥೆಯನ್ನು 2 ಪ್ರಬಲ ಸಮುದಾಯಗಳಿಗೆ ಹಂಚಿರುವುದು ನಾಡಿಗೆ ಎಸಗಿರುವ ದ್ರೋಹ. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಈ ಜನದ್ರೋಹಿ ತೀರ್ಮಾನವನ್ನು ರದ್ದು ಮಾಡಲಾಗುವುದು ಎಂದು ಕಾಂಗ್ರೆಸ್‌  ಹೇಳಿದೆ.

ಮೀಸಲಾತಿ ನೀತಿ ಸಂಬಂಧ ರವಿವಾರ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ರಣದೀಪ್‌ ಸುಜೇìವಾಲ ಅವರು ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ರಾಜ್ಯದ ಪ್ರಬಲ ಸಮುದಾಯಗಳ ಸ್ವಾಮೀಜಿಗಳಿಗೆ ಬೆದರಿಕೆ ಹಾಕಿ ಪರಿಷ್ಕೃತ ಮೀಸಲಾತಿಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಗಂಭೀರ ಆರೋಪ ಮಾಡಿದರು.

Advertisement

ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳಿಗೆ ಸರಕಾರದಿಂದ 20-25 ಬಾರಿ ಕರೆಗಳು ಬಂದಿವೆ. ಮೀಸಲಾತಿ ಒಪ್ಪಿಕೊಳ್ಳುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಸಚಿವ ಆರ್‌. ಅಶೋಕ್‌ ಅವರಿಗೆ ಮೀಸಲಾತಿ ಹೆಚ್ಚಳ ವಿಚಾರವಾಗಿ ಒಕ್ಕಲಿಗರು ಕೊಟ್ಟ ಮನವಿಯಲ್ಲಿ ಎಷ್ಟು ಮೀಸಲಾತಿಗೆ ಬೇಡಿಕೆ ಇಡಲಾಗಿತ್ತು? ನಮ್ಮ ಮನವಿ ಪಡೆಯುವಾಗ ಇದನ್ನು ಜಾರಿಗೊಳಿಸುತ್ತೇವೆ ಎಂದು ಅಶೋಕ್‌ ಹೇಳಿದ್ದರು. ಈಗ ಅಲ್ಪಸಂಖ್ಯಾಕರಿಂದ ಕಸಿದು ನಮಗೆ ಭಿಕ್ಷೆ ಹಾಕಿದರೆ, ಅದನ್ನು ಸ್ವೀಕರಿಸಲು ಲಿಂಗಾಯತರು, ಒಕ್ಕಲಿಗರು ಭಿಕ್ಷುಕರೇ? ಲಿಂಗಾಯತರು ಶೇ. 15ರಷ್ಟು, ಒಕ್ಕಲಿಗರು ಶೇ. 12ರಷ್ಟು ಮೀಸಲಾತಿ ಕೇಳಿದ್ದು, ಕೇವಲ ಶೇ. 2 ಮೀಸಲಾತಿಯನ್ನು ಭಿಕ್ಷೆ ನೀಡುತ್ತಿದ್ದೀರಾ? ಅದರಲ್ಲೂ ಅಲ್ಪಸಂಖ್ಯಾಕರ ಮೀಸಲಾತಿಯನ್ನು ಕಸಿದಿರುವುದು ಯಾಕೆ? ಅಲ್ಪಸಂಖ್ಯಾಕ ಸಮುದಾಯದವರು ನಮ್ಮವರಲ್ಲವೇ? ಇವರು ಅಧಿಕಾರ ಸ್ವೀಕಾರ ಮಾಡುವಾಗ ಏನೆಂದು ಪ್ರಮಾಣವಚನ ಸ್ವೀಕರಿಸಿದ್ದರು ಎಂದು ಶಿವಕುಮಾರ್‌ ಪ್ರಶ್ನಿಸಿದರು.

ವಿಪಕ್ಷ ಸಿದ್ದರಾಮಯ್ಯ ಮಾತನಾಡಿ, ಅಲ್ಪಸಂಖ್ಯಾಕರನ್ನು ಮೀಸಲು ವ್ಯವಸ್ಥೆಯಿಂದ  ತೆಗೆದುಹಾಕಿ ಎಂದು ಯಾವ ವರದಿ ಹೇಳಿದೆ? 1995 ರಿಂದ ಈವರೆಗೆ ನೀಡುತ್ತಿದ್ದ ಮೀಸಲಾತಿಯನ್ನು ಈಗ ತೆಗೆದುಹಾಕಲು ಕಾರಣವೇನು ಎಂದು ನಾಯಕರು ಪ್ರಶ್ನಿಸಿದರು. ಮಾ.24ರಂದು ಪರಿಷ್ಕರಣೆ ನೀತಿ ತಂದಿರುವುದರ ಹಿಂದಿನ ಉದ್ದೇಶ ಏನು? ಇದು ರಾಜಕೀಯ ಗಿಮಿಕ್‌ ಅಲ್ಲವೇ? ಯಾರಿಗೂ ನ್ಯಾಯ ಕೊಡಬೇಕು ಎಂಬುದು ಸರಕಾರಕ್ಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರ ಜತೆಗೆ ರಾಜ್ಯ ಸರ್ಕಾರ ನಡೆಸಿದ್ದು ಮೂರನೇ ಪರಿಷ್ಕರಣೆ ಎಂದು ದೂರಿದ ಕಾಂಗ್ರೆಸ್‌ ನಾಯಕರು ಇದರಿಂದ ಯಾವ ಸಮುದಾಯಗಳಿಗೂ ತೃಪ್ತಿ ಇಲ್ಲ. ಈ ಅಸಾಂವಿಧಾನಿಕ ಪರಿಷ್ಕರಣೆ ಮಾರಕವಾಗಿದ್ದು, ಸರಕಾರವನ್ನು ವಜಾಗೊಳಿಸಬೇಕು ಎಂದು  ಆಗ್ರಹಿಸಿದರು.

ಮೀಸಲು ರದ್ದು  ಸ್ವಾಗತಾರ್ಹ: ಶಾ

ಬೀದರ್‌/ಬೆಂಗಳೂರು: ಅಲ್ಪಸಂಖ್ಯಾಕರಿಗೆ ಮೀಸಲಾತಿ ಕಲ್ಪಿಸಿ ಕಾಂಗ್ರೆಸ್‌ ತುಷ್ಟೀಕರಣ ರಾಜಕಾರಣ ಮಾಡುತ್ತಾ  ಬಂದಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಲ್ಪಸಂಖ್ಯಾಕರ ಮೀಸಲು ರದ್ದುಗೊಳಿಸಿರುವುದು ಸ್ವಾಗ ತಾರ್ಹ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಬೀದರ್‌ ಜಿಲ್ಲೆಯ ಗೋರ್ಟಾ(ಬಿ) ಮತ್ತು ಬೆಂಗಳೂರಿನಲ್ಲಿ ಮಾತನಾಡಿದ ಅವರು. ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇರಲಿಲ್ಲ. ಆದರೂ  ಕಾಂಗ್ರೆಸ್‌ ಅಲ್ಪಸಂಖ್ಯಾಕರಿಗೆ ಶೇ. 4ರಷ್ಟು ಮೀಸಲಾತಿ ನೀಡಿತ್ತು. ಬೊಮ್ಮಾಯಿ ಸರಕಾರ ಅದನ್ನು ತೆಗೆದು ಹಾಕಿ ಒಕ್ಕಲಿಗರು ಮತ್ತು ಲಿಂಗಾಯತರ ಮೀಸಲನ್ನು ತಲಾ ಶೇ.2ರಷ್ಟು ಹೆಚ್ಚಿಸಿ ರುವುದು  ಸರಿಯಾದ ಕ್ರಮ ಎಂದರು.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಒಳಮೀಸಲಾತಿ ಸಹ ಒದಗಿಸಲಾಗಿದೆ. ದಲಿತ ಎಡಗೈ ಸಮುದಾಯಕ್ಕೆ ಶೇ.6, ಬಲಗೈಗೆ ಶೇ.5.5, ಸ್ಪೃಶ್ಯ (ಲಂಬಾಣಿ, ಇತರ) ಶೇ.4.5 ಹಾಗೂ ಇತರ ದಲಿತರು ಶೇ.1ರಷ್ಟು ಒಳ ಮೀಸಲಾತಿ ನೀಡುವ ಮೂಲಕ ಎಲ್ಲ ವರ್ಗಗಳಿಗೂ ಸಮಾನವಾಗಿ ಮೀಸಲಾತಿ ಹಂಚಿಕೆ ಮಾಡಿ ನ್ಯಾಯ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನುಡಿದಂತೆ ನಡೆದಿದ್ದೇನೆ: ಸಿಎಂ

ಕಾಂಗ್ರೆಸ್‌ ಮುಖಂಡರ ವಾಗ್ಧಾಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. “ವಿಪಕ್ಷಗಳು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ’ ಎಂದು ಹೇಳಿದ್ದಾರೆ. ಒಳ ಮೀಸಲಾತಿ ನೀಡುವ ವಿಚಾರ ಮೂವತ್ತು ವರ್ಷಗಳಿಂದ ಬಾಕಿ ಉಳಿದಿತ್ತು. ಆದರೆ ಕಾಂಗ್ರೆಸ್‌ನವರು ಮೂಗಿಗೆ ತುಪ್ಪ ಹಚ್ಚಿ ಕೊನೆ ಗಳಿಗೆಯಲ್ಲಿ ಕೈಕೊಟ್ಟರು. ಒಳ ಮೀಸಲಾತಿ ಎಂಬುದು ಜೇನು ಗೂಡು ಇದ್ದಂತೆ ಎಂದು ಹೇಳಿದ್ದರು. ಜೇನು ನೊಣಗಳಿಂದ ಕಚ್ಚಿಸಿಕೊಂಡರೂ ನಾನು ಜೇನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ. ಆದರೆ ನಮಗೆ ಬದ್ಧತೆ ಇರುವ ಕಾರಣದಿಂದ ಇದರ ಬಗ್ಗೆ ಅಧ್ಯಯನ ಮಾಡಿ, ಸಚಿವ ಸಂಪುಟ ಉಪ ಸಮಿತಿ ರಚಿಸಿ ಕಾನೂನು ಪ್ರಕಾರ ಮಾಡಿದ್ದೇವೆ. ಅವರು ಮಾಡದಿರುವುದನ್ನು ನಾವು ಮಾಡಿರುವುದಕ್ಕೆ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಅದ್ಯಾವುದಕ್ಕೂ ಬೆಲೆ ಇಲ್ಲ ಎಂದರು.

ಕಾಂಗ್ರೆಸ್‌ ಸದಾ ಎಸ್ಸಿ-ಎಸ್ಟಿ ಸಮುದಾಯದವರನ್ನು ಯಾಮಾರಿಸಿಕೊಂಡು ಬಂದಿದೆ. ಹೇಳಿಕೆಗಳ ಮೂಲಕ ಸಹಾನುಭೂತಿ ತೋರಿಸಿ ಈ ಚುನಾವಣೆಯಲ್ಲಿಯೂ ಯಾಮಾರಿಸಬಹುದು ಎಂದುಕೊಂಡಿದ್ದರು. ಸಾಮಾಜಿಕ, ಅಭಿವೃದ್ಧಿ ವಿಚಾರದಲ್ಲಿ ಸಂಘ-ಸಂಸ್ಥೆಗಳ ಜತೆ ಚರ್ಚಿಸಿ ಹಲವಾರು ತೀರ್ಮಾನಿಸಿದ್ದೇವೆ. ನಿರ್ಣಾಯಕ ತೀರ್ಮಾನ ಕೈಗೊಳ್ಳಲು ನಮ್ಮ ಬದ್ಧತೆ ಕಾರಣ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಪಾದಿಸಿದರು.

ಅನುಕೂಲ: ಮುಸ್ಲಿಂ ಸಮುದಾಯದವರನ್ನು ಇಡಬ್ಲ್ಯುಎಸ್‌ ವರ್ಗಕ್ಕೆ ಸೇರಿಸಿರುವುದ ರಿಂದ ಅವರಿಗೆ ಮತ್ತಷ್ಟು ಅನುಕೂಲವಾಗಿದೆ. ಮೊದಲು ಶೇ.4 ಮೀಸಲು ಇತ್ತು.  ಈಗ ಶೇ.10 ಇರುವ ಕಡೆ ಹಾಕಿದ್ದೇವೆ. ಅದು ಹೇಗೆ ಅನ್ಯಾಯ ಆಗುತ್ತದೆ? ಅಲ್ಪಸಂಖ್ಯಾಕರ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಂಡಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ಚುನಾವಣ ಗಿಮಿಕ್‌: ಎಚ್‌ಡಿಕೆ

ಮೈಸೂರು: ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಚುನಾ ವಣ ಗಿಮಿಕ್‌ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪಂಚರತ್ನ ರಥಯಾತ್ರೆ ಸಮಾರೋಪದ ಹಿನ್ನೆಲೆಯಲ್ಲಿ ರವಿವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಾತ ನಾಡಿದ ಅವರು, ಮೀಸಲಾತಿ ಹೆಚ್ಚಳ ರಾಜ್ಯ ಬಿಜೆಪಿ ಸರಕಾರದ ಸಮಾಜ ಒಡೆಯುವ ಹುನ್ನಾರದ ಭಾಗವಾಗಿದೆ. ಅಲ್ಪಸಂಖ್ಯಾಕರ ಮೀಸಲಾತಿ ಕಡಿತ ಮಾಡಿ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಿಸುತ್ತೇವೆ ಎಂದು ಸಿಎಂ ಹೇಳಿ ದ್ದಾರೆ. ಆದರೆ ಮೀಸಲಾತಿ ಕಡಿತ, ಹೆಚ್ಚಳ ಮಾಡುವ ಸಂಬಂಧ ಯಾವುದೇ ಸಮಿತಿ ರಚನೆಯಾಗಿಲ್ಲ. ಯಾವುದೇ ಸಮಿತಿ   ವರದಿಯನ್ನೂ ನೀಡಿಲ್ಲ ಎಂದು ಹೇಳಿದರು.

ರಾಜ್ಯದ ಜನತೆ ಜೀವ ಕಳೆದುಕೊಳ್ಳುತ್ತಿದ್ದಾಗ ಬಾರದ ಪ್ರಧಾನಿ ಮೋದಿ ಈಗ ನನಗೆ ಜೀವ ಕೊಡಿ ಎಂದು ಕೇಳುತ್ತಿದ್ದಾರೆ. ರಾಜ್ಯದ ಜನರ ಮೇಲೆ ರಾಜ್ಯ ಬಿಜೆಪಿ ಸರಕಾರ ಸಮಾಧಿ ಕಟ್ಟುತ್ತಿದೆ. ಸ್ವೇಚ್ಛಾಚಾರವಾಗಿ ಅಧಿಕಾರ ನಡೆಸುವ ನಾಯಕರಿಗೆ ಮೋದಿ ಏನನ್ನೂ ಹೇಳಲು ಆಗಿಲ್ಲ. ಅವರ ಪಕ್ಷದವರೇ ರಾಜ್ಯವನ್ನು ಲೂಟಿ ಮಾಡುತ್ತಿದ್ದರೂ ಏನು ಹೇಳುತ್ತಿಲ್ಲ ಎಂದು ದೂರಿದರು.

ಈ ಮಧ್ಯೆ, ಪಂಚರತ್ನ ಯಾತ್ರೆ ಸಮಾರೋಪದಲ್ಲಿ ಮಾತನಾಡಿದ ಎಚ್‌ಡಿಕೆ, ರಾಜ್ಯ ಬಿಜೆಪಿ ಸರಕಾರ ಕಳೆದ ಮೂರು ವರ್ಷಗಳ ಕಾಲ ಅಭಿವೃದ್ಧಿ ಬಗ್ಗೆ ಚಿಂತಿಸಲಿಲ್ಲ. ಆದರೆ ಈಗ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದೆ. ನಾವು ಅಧಿಕಾರದಲ್ಲಿದ್ದಾಗ ಜನರ ತೆರಿಗೆ ಹಣವನ್ನು ಲೂಟಿ ಮಾಡಿಲ್ಲ. ಜನರ ವಿಶ್ವಾಸವೇ ನಮ್ಮ ಆಸ್ತಿ. ಸರಕಾರಿ ಉದ್ಯೋಗ ಪಡೆಯಲು ಹಣ ನೀಡುವ ಪರಿಸ್ಥಿತಿ ಬಂದಿದೆ. ಹಣ ವಸೂಲಿ ಮಾಡಿ ಸರಕಾರಿ ಕೆಲಸ ಕೊಟ್ಟರೆ ಮೀಸಲಾತಿಗೆ ಏನು ಅರ್ಥವಿದೆ ಎಂದು ಪ್ರಶ್ನಿಸಿದರು.

ಇನ್ನು ಪಂಚರತ್ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಜ್ಯ ಜೆಡಿಎಸ್‌ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್‌ ಹಾಗೂ ಬಿಜೆಪಿ ಇವತ್ತು ಜನರ ಆಶೋತ್ತರಗಳನ್ನು ಈಡೇರಿಸಲು ವಿಫ‌ಲವಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಸ ಮೀಸಲಾತಿ ನೀತಿ ಪ್ರಕಟಿಸಿ ಜಾತಿ-ಜಾತಿಗಳ ಮಧ್ಯೆ ಜಗಳವನ್ನು ಮಾಡಿಸುತ್ತಿದ್ದಾರೆ. ರಾಜ್ಯ ಸರಕಾರದ ಈ ಮೀಸಲಾತಿ ನೀತಿಯನ್ನು ವಿರೋಧಿಸಿ  ಸೋಮವಾರ ಬೆಂಗಳೂರಿನಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ನಡೆಸುತ್ತೇವೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next