Advertisement

ಉಚಿತ ಕೊಡುಗೆ ಜಮಾನ ಸರಿಯೇ?

12:11 AM Aug 08, 2022 | Team Udayavani |

ಚುನಾವಣೆಗೂ ಮುನ್ನ ಉಚಿತ ಕೊಡುಗೆಗಳನ್ನು ನೀಡುವುದಾಗಿ ಭರವಸೆ ನೀಡುವುದರ ಕುರಿತ ಸರಿ-ತಪ್ಪುಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಸುಪ್ರೀಂಕೋರ್ಟ್‌ ಹೇಳಿರುವ ಪ್ರಕಾರ, ರಾಜಕೀಯ ಪಕ್ಷಗಳಿಗೆ ಈ ಬಗ್ಗೆ ಚರ್ಚೆ ನಡೆಸುವ ಮನಸೇ ಇಲ್ಲ. ಆದರೂ ಇದನ್ನು ಸ್ಥಗಿತಗೊಳಿಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾದರೆ ಈ ಬಗ್ಗೆ ಯಾರು ನಿರ್ಧಾರ ಮಾಡಬೇಕು? ಇದು ಸರಿಯೇ ಅಥವಾ ತಪ್ಪೇ? ಈ ಕುರಿತ ಒಂದು ನೋಟ ಇಲ್ಲಿದೆ.

Advertisement

ಏನಿದು ಉಚಿತ ಕೊಡುಗೆ?
ಯಥಾರ್ಥವಾಗಿ ತೆಗೆದುಕೊಳ್ಳುವುದಾದರೆ, ಉಚಿತವಾಗಿ ಹಂಚಿಕೆ ಮಾಡುವುದು ಎಂದರ್ಥ. ಯಾವುದೇ ಚುನಾವಣೆ ಬರಲಿ, ತಾವು ಗೆದ್ದು ಬಂದರೆ ಉಚಿತವಾಗಿ ಅಕ್ಕಿ, ವಿದ್ಯುತ್‌, ನೀರು, ಲ್ಯಾಪ್‌ಟಾಪ್‌, ಸೈಕಲ್‌ಗ‌ಳು, ಎಲೆಕ್ಟ್ರಾನಿಕ್‌ ವಸ್ತುಗಳು ಸೇರಿದಂತೆ ಇತರ ವಸ್ತುಗಳನ್ನು ನೀಡುತ್ತೇವೆ ಎಂದು ರಾಜಕೀಯ ಪಕ್ಷಗಳು ಭರವಸೆ ನೀಡುತ್ತವೆ.

ಉಚಿತ ಕೊಡುಗೆಗಳಿಗೆ ಕಾರಣಗಳೇನು?
1 ರಾಜಕೀಯದಲ್ಲಿನ ಅಪರಾಧೀಕರಣ
: ಸ್ವತ್ಛ ಮತ್ತು ನಿರಾಪೇಕ್ಷ ಚುನಾ­ವಣೆಗಳು ನಡೆದರೆ ಇಂಥ ಯಾವುದೇ ಆಶ್ವಾಸನೆಗಳನ್ನು ನೀಡುವ ಅಗತ್ಯವಿಲ್ಲ. ಆದರೆ ಭಾರತದ ರಾಜಕೀಯದಲ್ಲಿ ಹೆಚ್ಚಾಗಿ ಇರುವುದು ಅಪರಾಧದ ಹಿನ್ನೆಲೆ ಉಳ್ಳವರೇ. ಹಾಲಿ ಲೋಕಸಭೆಯಲ್ಲಿ 233 ಮಂದಿ ಸಂಸದರು ಅಪರಾಧದ ಹಿನ್ನೆಲೆ ಉಳ್ಳವರಾಗಿದ್ದಾರೆ. ಹೀಗಾಗಿ ತಾವು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಮದ್ಯ, ಹಣ, ಇತರ ವಸ್ತುಗಳನ್ನು ಆಮಿಷವಾಗಿ ನೀಡುತ್ತಾರೆ.
2 ಶಾರ್ಟ್‌ ಟರ್ಮ್ ಖುಷಿ : ಇಂದಿಗೂ ಭಾರತದಲ್ಲಿ ದೀರ್ಘಾವಧಿ ಅನುಕೂಲಗಳಿಗಾಗಿ ಮತ ಹಾಕುವುದಕ್ಕಿಂತ, ಅಲ್ಪಾವಧಿ ಖುಷಿಯ ಸಂಗತಿಗಳಿಗಾಗಿ ಮತ ಹಾಕುತ್ತಾರೆ ಎಂಬ ಮಾತಿದೆ. ಹೀಗಾಗಿಯೇ ರಾಜಕಾರಣಿಗಳು, ಇದನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆ ವೇಳೆ ಉಚಿತ ಕೊಡುಗೆಗಳ ಬಗ್ಗೆ ಹೇಳಿ ಮತ ಬಾಚುತ್ತಾರೆ.
3 ಯಾರಿಗೂ ಧೈರ್ಯವಿಲ್ಲ: ವಿಶೇಷವೆಂದರೆ ಈ ಉಚಿತ ಕೊಡುಗೆಗಳ ಸಂಗತಿ ಆರ್ಥಿಕತೆಗೆ ಹೊರೆಯಾಗುತ್ತದೆ ಎಂಬುದು ಗೊತ್ತಿದ್ದರೂ ಯಾರೂ ಇದನ್ನು ನಿಲ್ಲಿಸುವ ಗೋಜಿಗೆ ಹೋಗಿಲ್ಲ. ಇದು ಈಗಲ್ಲ, ಇತಿಹಾಸದಿಂದಲೂ ನಡೆದುಕೊಂಡೇ ಬರುತ್ತಿದೆ. ಉದಾ­ಹರಣೆಗೆ, ಒಂದು ಪಕ್ಷದವರು ಕೆಲವೊಂದು ಉಚಿತ ಕೊಡುಗೆಗಳ ಆಶ್ವಾಸನೆ ನೀಡಿ ಗೆದ್ದರೆ, ಮುಂದಿನ ಚುನಾವಣೆಯಲ್ಲಿ ಇನ್ನೊಂದು ಪಕ್ಷದವರೂ ಇಂಥದ್ದೇ ಭರವಸೆ ಕೊಟ್ಟು ಚುನಾವಣೆಯಲ್ಲಿ ಗೆಲ್ಲಲು ನೋಡುತ್ತಾರೆ.
4 ಸರಕಾರದ ಕಳಪೆ ಸಾಧನೆ ಮರೆಮಾಚುವ ಯತ್ನ: ಸಾಮಾನ್ಯವಾಗಿ ಸರಕಾರವೊಂದು ತನಗೆ ಸಿಕ್ಕಿದ್ದ ಐದು ವರ್ಷಗಳ ಕಾಲ ಉತ್ತಮವಾಗಿ ಕೆಲಸ ಮಾಡಿದ್ದರೆ, ಈ ಉಚಿತ ಕೊಡುಗೆಗಳ ಗೋಚಿಗೆ ಹೋಗುವ ಅಗತ್ಯವಿರುವುದಿಲ್ಲ. ಆದರೆ, ಕಳಪೆ ಸಾಧನೆ ಮಾಡಿದವರು, ಇದನ್ನು ಮುಚ್ಚಿಹಾಕಲು ಉಚಿತ ಕೊಡುಗೆಗಳ ಮೊರೆ ಹೋಗುತ್ತಾರೆ.
5 ಸಮ್ಮಿಶ್ರ ಪರಿಣಾಮ : 1990ರ ಬಳಿಕ ದೇಶದಲ್ಲಿ ಸಮ್ಮಿಶ್ರ ಸರಕಾರದ ರಾಜಕೀಯ ಹೆಚ್ಚಾಗಿ ಬಂದಿದೆ. ದೊಡ್ಡ ಪಕ್ಷಗಳಿಗಿಂತ ಸಣ್ಣ ಪಕ್ಷಗಳೇ ಹೆಚ್ಚು ಉಚಿತ ಕೊಡುಗೆಗಳ ಭರವಸೆ ನೀಡಿವೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಅಂದರೆ, ದೊಡ್ಡ ಪಕ್ಷಗಳ ಜತೆ ಹೋರಾಡುವ ಕಾರಣದಿಂದಾಗಿ ಅನಿವಾರ್ಯವಾಗಿ ಇಂಥ ಕೊಡುಗೆಗಳನ್ನು ಆಶ್ರಯಿಸುತ್ತವೆ.

ಸರಿತಪ್ಪುಗಳ ಚರ್ಚೆ
ಉಚಿತ ಕೊಡುಗೆಗಳನ್ನು ನೀಡುವುದು ಸರಿಯೇ ಅಥವಾ ತಪ್ಪೇ ಎಂಬ ಬಗ್ಗೆ ಹಿಂದಿನಿಂದಲೂ ಚರ್ಚೆ ನಡೆಯುತ್ತಲೇ ಇದೆ. ಆದರೆ ಇದುವರೆಗೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಆದರೂ ಕೆಲವರು ಹೇಳುವ ಪ್ರಕಾರ, ಈ ಉಚಿತ ಕೊಡುಗೆಗಳಿಂದ ಬಡವರು ಮತ್ತು ಶೋಷಿತ ವರ್ಗದವರಿಗೆ ನ್ಯಾಯ ಸಿಗುತ್ತದೆ. ಅಂದರೆ, ಪಡಿತರ ಅಕ್ಕಿಯನ್ನು ಉಚಿತವಾಗಿ ಕೊಡುವುದರಿಂದ ಹೆಚ್ಚು ಉಪಯೋಗವೇ ಆಗುತ್ತದೆ.

ಹಾಗೆಯೇ, ಸದ್ಯ ಭಾರತದಲ್ಲಿರುವ ಸಾಮಾಜಿಕ ಅಸಮಾನತೆಯೂ ಕಡಿಮೆಯಾಗುತ್ತದೆ. ಅಂದರೆ, ದೇಶದಲ್ಲಿ ದಿನದಿಂದ ದಿನಕ್ಕೆ ಶ್ರೀಮಂತರು ಮತ್ತು ಬಡವರ ನಡುವಿನ ಅಂತರವೂ ಹೆಚ್ಚುತ್ತಿದೆ. ಈ ಉಚಿತ ಕೊಡುಗೆಗಳು ಖರೀದಿ ಶಕ್ತಿ ಇಲ್ಲದವರಿಗೆ ಸಹಾಯವಾಗುತ್ತವೆ. ಇತ್ತೀಚಿನ ಕೊರೊನಾ ಕಾಲದಲ್ಲಿ ಕಷ್ಟಕ್ಕೆ ಸಿಲುಕಿದವರೇ ಹೆಚ್ಚು. ಇಂಥವರಿಗೂ ಕೇಂದ್ರ ಸರಕಾರವೇ ನೀಡಿದ ಉಚಿತ ಅಕ್ಕಿ ಬಹಳಷ್ಟು ನೆರವಾಗಿದೆ. ಹಾಗೆಯೇ ಸಾಮಾಜಿಕ ಸ್ಥಿರತೆಯೂ ಹೆಚ್ಚಳವಾಗುತ್ತದೆ.

Advertisement

ಸವಾಲುಗಳೇನು?
1.ಪ್ರಜಾಪ್ರಭುತ್ವದ ಮೂಲ ಧ್ಯೇಯಕ್ಕೇ ಇದರಿಂದ ಭಂಗವಾಗುತ್ತದೆ.
2.ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ.
3.ಸಾಲ ಮನ್ನಾದಂಥ ಯೋಜನೆಗಳು ಸಾಲ ಕಟ್ಟುವರರ ಪ್ರಮಾಣ ಕಡಿಮೆ ಮಾಡುತ್ತವೆ.
4.ಸರಕಾರಗಳ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿ ವಿತ್ತೀಯ ಶಿಸ್ತು ಕಡಿಮೆಯಾಗುತ್ತದೆ.
5.ಸಂಪನ್ಮೂಲಗಳ ಬಳಕೆಯಲ್ಲಿ ಹಿಂದೆ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ.

ಮುಂದೇನು ಮಾಡಬೇಕು?
1. ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಬೇಕು.
2. ಕೇಂದ್ರ ಚುನಾವಣಾ ಆಯೋಗಕ್ಕೆ ಹೆಚ್ಚಿನ ಬಲ ನೀಡಬೇಕು.
3. ಸರಕಾರಗಳು ಉದ್ಯೋಗ ಸೃಷ್ಟಿ, ಮೂಲ ಸೌಕರ್ಯ ಹೆಚ್ಚಳಕ್ಕೆ ಹೆಚ್ಚಿನ ಹಣ ವಿನಿಯೋಗಿಸಬೇಕು.
4. ಕಪ್ಪು ಹಣ ಬಳಕೆಯ ಮೇಲೆ ಸಾಧ್ಯವಾದಷ್ಟು ನಿರ್ಬಂಧ ಹೇರಬೇಕು.
5.ಉಚಿತ ಕೊಡುಗೆಗಳಿಂದ ಆಗುವ ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next