ಕಾಪು : ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಸಹಿತ ಮುಂದಿನ ಚುನಾವಣೆಗೆ ಬಿಜೆಪಿಗೆ ಸಜ್ಜಾಗುತ್ತಿದ್ದು ಕಾಪು ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸಂಘಟನೆಯ ತಾಲೀಮು ಪ್ರಾರಂಭಿಸಿದೆ. ಅದಕ್ಕೆ ಪೂರಕವಾಗಿ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೇರೂರು ಗ್ರಾಮದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ ಮಂಜುಳಾ ಆಚಾರ್ಯ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ, ಚುನಾವಣಾ ಸಿದ್ಧತೆಗೆ ಮುಂದಾಗಿದೆ.
ಕಾಪು ಕ್ಷೇತ್ರ ಬಿಜೆಪಿ ಕಛೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜುಳಾ ಆಚಾರ್ಯ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ವಿಶ್ವವೇ ಮನ್ನಣೆ ಕೊಡುತ್ತಿರುವ ಸಂದರ್ಭದಲ್ಲಿ ಕಾಪು ಕ್ಷೇತ್ರದಲ್ಲಿಯೂ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಬೆಂಬಲದೊಂದಿಗೆ ಶಾಸಕ ಲಾಲಾಜಿ ಆರ್. ಮೆಂಡನ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಕಾಪು ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಟವಾಗಿ ಬೆಳೆದು ನಿಂತಿದೆ. ಮುಂದೆಯೂ ಪಕ್ಷಕ್ಕೆ ಬರುವವರಿಗೆ ಮುಕ್ತ ಸ್ವಾಗತವಿದೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸುರೇಶ್ ಪಿ. ಶೆಟ್ಟಿ ಗುರ್ಮೆ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು ಮುಂದೆ ಬರುವ ಜಿ.ಪಂ. ಮತ್ತು ತಾ. ಪಂ. ಚುನಾವಣೆಯಲ್ಲೂ ಬಿಜೆಪಿಗೆ ಬಹುಮತದ ನಿರೀಕ್ಷೆಯಿದೆ. ಅದಕ್ಕೆ ಪೂರಕವಾಗಿ ರಾಜ್ಯಾದ್ಯಂತ ಪಕ್ಷ ಸಂಘಟನೆ ನಡೆಯುತ್ತಿದ್ದು ಕಾಪು ಕ್ಷೇತ್ರದಲ್ಲೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಎಲ್ಲಾ ಸ್ತರಗಳಲ್ಲೂ ಕಾಪು ಕ್ಷೇತ್ರದಲ್ಲಿ ಬಿಜೆಪಿಯ ಬಾವುಟ ಹಾರಾಡಲಿದೆ ಎಂದರು.
ಇದನ್ನೂ ಓದಿ : ಬಾಗಲಕೋಟೆ: ಪಿಯುಸಿ ಪರೀಕ್ಷೆಯಲ್ಲಿ ಫೇಲ್; ಬಾವಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
ಮಾಜಿ ತಾ.ಪಂ. ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಮಜೂರು ಗ್ರಾ.ಪಂ. ಅಧ್ಯಕ್ಷೆ ಶರ್ಮಿಳಾ ಆಚಾರ್ಯ, ಉಪಾಧ್ಯಕ್ಷ ಮಧುಸೂಧನ್ ಸಾಲ್ಯಾನ್, ಮಾಜಿ ಅಧ್ಯಕ್ಷ ಸಂದೀಪ್ ರಾವ್, ಗಣೇಶ್ ಶೆಟ್ಟಿ ಹೇರೂರು, ಪಕ್ಷದ ಮುಖಂಡರಾದ ಗಂಗಾಧರ ಸುವರ್ಣ, ನವೀನ್ ಎಸ್. ಕೆ., ಗೋಪಾಲಕೃಷ್ಣ ರಾವ್, ಕೇಸರಿ ಯುವರಾಜ್, ಸಂತೋಷ್ ಕುಮಾರ್, ವಿಜಯ್ ಕುಮಾರ್ ಉದ್ಯಾವರ, ಕೃಷ್ಣ ರಾವ್, ಪ್ರವೀಣ್ ಕುಮಾರ್, ಸುಶಾಂತ್ ಕುತ್ಯಾರು, ನಳಿನಾಕ್ಷಿ ಆಚಾರ್ಯ, ಶೈಲಜಾ ನಾರಾಯಣ ಪೂಜಾರಿ, ನಿತ್ಯಾನಂದ ಆಚಾರ್ಯ, ಮೇಘನಾಥ ಆಚಾರ್ಯ, ದಿನೇಶ್ ದೇವಾಡಿಗ, ಶ್ರೀನಿವಾಸ ದೇವಾಡಿಗ, ಶಂಕರ್ ಹೇರೂರು, ಮಜೂರು ಗ್ರಾ. ಪಂ. ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.