ಮಂಗಳೂರು: ಕಾಂಗ್ರೆಸ್ಗೆ ಯಾವುದೇ ಸಮಸ್ಯೆಯಿಲ್ಲದೆ ಅಭ್ಯರ್ಥಿ ಅಖೇರುಗೊಳಿಸಬಹುದಾದ ರಾಜ್ಯದ ಕೆಲವೇ ಕ್ಷೇತ್ರಗಳಲ್ಲಿ ಒಂದು ಮಂಗಳೂರು.
ಹೌದು. ಇಲ್ಲಿ ಯು.ಟಿ. ಫರೀದ್ ಅವರು ಶಾಸಕರಾಗಿ ಚುನಾಯಿತರಾದ ಬಳಿಕ ಕಾಂಗ್ರೆಸ್ಗೆ ಅಭ್ಯರ್ಥಿಗಳ ಆಯ್ಕೆ ಎನ್ನುವುದು ಕೇವಲ ಔಪಚಾರಿಕ ಪ್ರಕ್ರಿಯೆ ಮಾತ್ರ. ಫರೀದ್ ನಿಧನ ಹೊಂದಿದ ಬಳಿಕ ಅವರ ಪುತ್ರ ಯು.ಟಿ. ಖಾದರ್ ಕಾಂಗ್ರೆಸ್ನ ಖಾಯಂ ಅಭ್ಯರ್ಥಿ. ಅವರೂ ಸತತ ನಾಲ್ಕು ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಈ ಬಾರಿಯೂ ಅವರಿಗೆ ಬಹುತೇಕ ಟಿಕೆಟ್ ಸಿಕ್ಕಿ ಆಗಿದೆ.
ಅಲ್ಪಸಂಖ್ಯಾಕ ಮತದಾರರ ಸಂಖ್ಯೆ ಹೆಚ್ಚಿರುವುದು, ಬಹುತೇಕ ಯಾವುದೇ ವಿರೋಧ ಇಲ್ಲದ ವ್ಯಕ್ತಿತ್ವ, ಇತರ ಕೋಮಿನಿಂದಲೂ ಮತ ಸೆಳೆಯಬಲ್ಲ ವ್ಯಕ್ತಿತ್ವ ದಿಂದಾಗಿ ಯು.ಟಿ. ಖಾದರ್ ಇಲ್ಲಿ ಸೇಫ್. 2018ರ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಪೂರ್ಣ ನೆಲಕಚ್ಚಿದಾಗಲೂ ಇದೊಂದು ಕ್ಷೇತ್ರ ಯು.ಟಿ. ಖಾದರ್ ಅವರನ್ನು ಬಿಟ್ಟುಕೊಡಲಿಲ್ಲ.
ಈ ಕ್ಷೇತ್ರದಲ್ಲಿ ನಿರಂತರವಾಗಿ ಕಾಂಗ್ರೆಸ್ ಗೆಲ್ಲುತ್ತಾ ಬಂದಿದೆ ಹಾಗೂ ಸದ್ಯಕ್ಕೆ ಕಾಂಗ್ರೆಸ್ ಸೋಲುವ ಪರಿಸ್ಥಿತಿ ಬರುವುದು ತೀರಾ ಕಷ್ಟ ಎಂಬ ಸನ್ನಿವೇಶ ಇರುವ ಹೊರ ತಾಗಿಯೂ ಬಿಜೆಪಿಯಿಂದ ಅಚ್ಚರಿಯ ರೀತಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದೇ ಇದೆ. ಸೋತರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ಥಾನಮಾನ ಸಹಿತ ಪ್ರಯೋಜನಗಳನ್ನು ಗಮನದಲ್ಲಿರಿಸಿ ಅಭ್ಯರ್ಥಿಗಳಾಗ ಬಯ ಸುವವರು ಪಕ್ಷದ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದಾರೆ.
ಕಳೆದ ಬಾರಿ ಖಾದರ್ ವಿರುದ್ಧ ಸ್ಪರ್ಧಿಸಿ ಸೋಲನುಭವಿ ಸಿದ್ದ ಹಾಗೂ ಆ ಬಳಿಕ ಮೈಸೂರು ಎಲೆಕ್ಟ್ರಿಕಲ್ಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಂತೋಷ್ ರೈ ಬೊಳಿಯಾರ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ, ಬಿಜೆಪಿಯಲ್ಲಿ ಸಂಘಟನಾತ್ಮಕವಾಗಿ ಗುರುತಿಸಿಕೊಂಡ ಸತೀಶ್ ಕುಂಪಲ ಇವರಿಬ್ಬರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಬೊಳಿಯಾರ್ ಸದಾ ಕ್ರಿಯಾಶೀಲವಾಗಿ ಓಡಾಡಿಕೊಂಡಿದ್ದರೆ, ಕುಂಪಲ ಕೂಡ ಕಡಿಮೆಯಿಲ್ಲ ಎಂಬಂತೆ ಕಳೆದ ಆರೇಳು ತಿಂಗಳುಗಳಿಂದ ಚಲನಶೀಲರಾಗಿದ್ದಾರೆ. ಇದರಲ್ಲಿ ಸಂತೋಷ್ ಬಂಟ ಸಮುದಾಯದವರಾದರೆ ಸತೀಶ್ ಬಿಲ್ಲವರು.
ಇಬ್ಬರೂ ಟಿಕೆಟ್ಗಾಗಿ ಸಣ್ಣ ರೀತಿಯಲ್ಲಿ ಮೇಲಾಟ ಶುರುಮಾಡಿದ್ದಾರೆ. ಇದು ಮೇರೆ ಮೀರಿದರೆ ಪರಿಹಾರವೇನು ಎಂಬ ಬಗ್ಗೆ ಬಿಜೆಪಿ ಉನ್ನತ ನಾಯಕರು ತಲೆಕೆಡಿಸಿಕೊಂಡಿದ್ದಾರೆ. ಇಬ್ಬರನ್ನೂ ಬಿಟ್ಟು ಮೂರನೇ ವ್ಯಕ್ತಿಯನ್ನು ಆರಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಇವರನ್ನು ಹೊರತುಪಡಿಸಿದರೆ ಪಕ್ಷದಲ್ಲಿ ಕೇಳಿಬರುತ್ತಿರುವ ಹೆಸರುಗಳು ಚಂದ್ರಹಾಸ ಪಂಡಿತ್ಹೌಸ್, ಚಂದ್ರಶೇಖರ ಉಚ್ಚಿಲ ಹಾಗೂ ರವೀಂದ್ರ ಶೆಟ್ಟಿ ಉಳಿದೊಟ್ಟು.
Related Articles
ಇವರಲ್ಲಿ ಚಂದ್ರಹಾಸ್ ಪ್ರಸ್ತುತ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷರು ಹಾಗೂ ವೈಯಕ್ತಿಕವಾಗಿ ಸಂತೋಷ್ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುವವರು. ಇನ್ನು ಚಂದ್ರಶೇಖರ ಉಚ್ಚಿಲ ಅವರು ಹಿಂದೆ 2004 ಹಾಗೂ 2007ರಲ್ಲಿ ಸ್ಪರ್ಧಿಸಿ ಸೋತಿದ್ದರಾದರೂ ಈಗಲೂ ಸ್ಪರ್ಧಿಸುವ ಉತ್ಸಾಹ ದಲ್ಲಿದ್ದಾರೆ. ಆದರೆ ಅವರು ಸದ್ಯ ಕಾರ್ಯಕರ್ತರ ಮಧ್ಯೆ ಕ್ರಿಯಾಶೀಲರಾಗಿಲ್ಲ ಎನ್ನುವುದು ಅವರಿಗಿರುವ ಅಡ್ಡಿ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ನಾನು ಆಕಾಂಕ್ಷಿ ಅಲ್ಲ, ಆದರೆ ಪಕ್ಷ ನಾಯಕತ್ವ ನನಗೆ ಸ್ಪರ್ಧಿಸಲು ಹೇಳಿದರೆ ಸಿದ್ಧ ಎನ್ನುತ್ತಿದ್ದಾರೆ.
ಇತರ ಕ್ಷೇತ್ರಗಳ ಮೇಲೆ ಅವಲಂಬಿತ
ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಅಭ್ಯರ್ಥಿ ಘೋಷಣೆ ಮಾಡಬೇಕಾದರೆ ಇತರ ಕ್ಷೇತ್ರಗಳಲ್ಲಿ ನಿಲ್ಲುವ ಅಭ್ಯರ್ಥಿಗಳು, ಜಾತಿ ಲೆಕ್ಕಾಚಾರ ಇತ್ಯಾದಿ ಅಂಶಗಳನ್ನು ಪರಿಗಣಿಸುವ ಸಾಧ್ಯತೆ ಇದೆ. ಜಾತಿ ವಿಚಾರದಲ್ಲಿ ನೋಡಿದರೆ ಸಂತೋಷ್ ಹಾಗೂ ಸತೀಶ್ ಇವರಿಬ್ಬರೇ ಸದ್ಯಕ್ಕೆ ಪಟ್ಟಿಯಲ್ಲಿ ಮೇಲಿರುವವರು.
ಎಸ್ಡಿಪಿಐಯ ರಿಯಾಜ್ ಫರಂಗಿಪೇಟೆ ಉಳ್ಳಾಲದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.
~ ವೇಣುವಿನೋದ್ ಕೆ.ಎಸ್