Advertisement

ಚುನಾವಣೆ ಹಿನ್ನೆಲೆ: ಬಿಗಿಗೊಂಡ ಭದ್ರತೆ

03:33 PM Mar 16, 2023 | Team Udayavani |

ಮಂಗಳೂರು: ವಿಧಾನ ಸಭಾ ಚುನಾವಣೆ ಘೋಷಣೆಗೆ ಇನ್ನೂ ದಿನಗಳು ಬಾಕಿ ಇದ್ದರೂ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಚುನಾವಣೆಯಲ್ಲಿ ಗೆಲ್ಲುವುದು ರಾಜಕೀಯ ಪಕ್ಷಗಳ ಮುಖ್ಯ ಗುರಿಯಾದರೆ, ಚುನಾವಣೆ ಸಾಂಗವಾಗಿ ನಡೆಸುವುದು ಜಿಲ್ಲಾಡಳಿತದ ಅಧಿಕಾರಿ ವರ್ಗಕ್ಕಿರುವ ಸವಾಲು. ಜಿಲ್ಲಾಮಟ್ಟ ದಲ್ಲಿ ಜಿಲ್ಲಾಧಿಕಾರಿ ಮುಖ್ಯ ಚುನಾವಣಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಲಿದ್ದು, ಅಪರ ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ನಗರ ಪೊಲೀಸ್‌ ಆಯುಕ್ತ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಪಾಲಿಕೆ ಅಯುಕ್ತರು ಚುನಾವಣೆ ಯಶಸ್ವಿಯಾಗಿ ನಿರ್ವಹಿಸುವಲ್ಲಿ ಮುಖ್ಯ ಪಾತ್ರ ವಹಿಸುವರು. ಈಗಾಗಲೇ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಕೆಲಸಗಳು ಪ್ರಾರಂಭವಾಗಿವೆ.

Advertisement

ಪೊಲೀಸ್‌ ಇಲಾಖೆಯೂ ಸಹ ಭದ್ರತೆಗೆ ಸಂಬಂಧಿಸಿದಂತೆ ನಿಗಾ ವಹಿಸಲಾರಂಭಿಸಿದೆ. ಜಿಲ್ಲೆಯಲ್ಲಿರುವ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡುತ್ತಿರುವ ಉನ್ನತ ಪೊಲೀಸ್‌ ಅಧಿಕಾರಿಗಳು, ಸ್ಥಳೀಯರೊಂದಿಗೆ, ಮೊಹಲ್ಲಾ, ಯುವ ಸಮಿತಿಗಳೊಂದಿಗೆ ಸಭೆ ನಡೆಸಿ, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ

ಜಿಲ್ಲಾ ವ್ಯಾಪ್ತಿಯಲ್ಲಿ 10 ಅಂತಾರಾಜ್ಯ ಮತ್ತು 5 ಅಂತರ್‌ ಜಿಲ್ಲಾ ಚೆಕ್‌ಪೋಸ್ಟ್‌ಗಳಿದ್ದು ಇತ್ತೀಚೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ವಿಕ್ರಮ್‌ ಅಮಟೆ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿನ ಅಧಿಕಾರಿ, ಸಿಬಂದಿಗೆ ಚುನಾವಣ ಕರ್ತವ್ಯಗಳ ಕುರಿತು ಸೂಕ್ತ ಸಲಹೆ, ಮಾರ್ಗದರ್ಶನನೀಡಿ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.

ಜತೆಗೆ ಅಲ್ಲಿನ ಕೆಲವು ವ್ಯವಸ್ಥೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿಯೂ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿರುವ ಸೂಕ್ಷ್ಮ, ಅತೀ ಸೂಕ್ಷ್ಮ, ನಕ್ಸಲ್‌ ಪೀಡಿತ ಪ್ರದೇಶಗಳ ಮತಗಟ್ಟೆಗಳ ಮೇಲೆ ಪೊಲೀಸರು ನಿಗಾವಹಿಸಲು ಆರಂಭಿಸಿದ್ದಾರೆ. ಮತಗಟ್ಟೆಗಳ ಒಂದು ಹಂತದ ಪರಿಶೀಲನೆ ಈಗಾಗಲೇ ಮುಗಿದಿದ್ದು, ಈ ಪ್ರದೇಶಗಳಿಗೆ ಭೇಟಿ ನೀಡುವ ಅಪರಿಚಿತರ ಮೇಲೆ ಗಮನ ಇರಿಸಲು ಸ್ಥಳೀಯರಿಗೆ ತಿಳಿಸಲಾಗಿದೆ.ಜತೆಗೆ ಪೊಲೀಸರೂ ನಿಗಾವಹಿಸಲಿದ್ದಾರೆ. ಜತೆಗೆ ಕ್ಲಸ್ಟರ್‌ ಬೂತ್‌ಗಳಲ್ಲೂ ಪರಿಶೀಲನೆ ನಡೆಸಲಾಗಿದೆ.

Advertisement

ರೌಡಿ ಶೀಟರ್‌ಗಳಿಗೆ ಎಚ್ಚರಿಕೆ

ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿರುವ ರೌಡಿ ಶೀಟರ್‌, ಕ್ರಿಮಿನಲ್‌ ಹಿನ್ನೆಲೆ ಇರುವವರನ್ನು, ಸಾರ್ವಜನಿಕರಲ್ಲಿ ಭಯ ಮೂಡಿಸುವವರನ್ನು ಠಾಣೆಗಳಿಗೆ ಕರೆಸಿ, ಚುನಾವಣ ಸಂದರ್ಭದಲ್ಲಿ ಸಮಾಜದ ಶಾಂತಿ ಕದಡುವ ಕೆಲಸದಲ್ಲಿ ನಿರತರಾಗದಂತೆ ಎಚ್ಚರಿಕೆ ನೀಡಲಾಗುತ್ತಿದೆ.

ಚುನಾವಣ ಪೂರ್ವ ತಯಾರಿಯಾಗಿ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಎಲ್ಲ ಮತಗಟ್ಟೆಗಳ ಮೇಲೆ ಪೊಲೀಸ್‌ ಇಲಾಖೆ ನಿಗಾವಹಿಸುತ್ತಿದೆ. ಅಂತಾರಾಜ್ಯ, ಅಂತರ್‌ಜಿಲ್ಲಾ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಮತಗಟ್ಟೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಮಸ್ಯೆ, ಸವಾಲುಗಳನ್ನು ಆಲಿಸಿ, ಪರಿಹರಿಸುವ ಕೆಲಸವೂ ನಡೆಯುತ್ತಿದೆ.
-ಡಾ| ವಿಕ್ರಮ್‌ ಅಮಟೆ, ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪೂರ್ಣ ಪ್ರಮಾಣದಲ್ಲಿ ಸಿದ್ಧತೆ
ಸಿಬಂದಿ ಮತ್ತು ಅಧಿಕಾರಿಗಳಿಗೆ ಈಗಾಗಲೇ ಒಂದು ಹಂತದ ತರಬೇತಿ ನೀಡಲಾಗಿದೆ. ಯಾವ ಕಾನೂನಿನಡಿಯಲ್ಲಿ ಏನು ಕ್ರಮ ಕೈಗೊಳ್ಳಬೇಕು, ಪ್ರಜಾಪ್ರತಿನಿಧಿ ಕಾಯಿದೆ, ಐಪಿಸಿ, ಬೇರೆ ಬೇರೆ ಸ್ಥಳೀಯ ಕಾನೂನುಗಳ ಬಗ್ಗೆಯೂ ತರಬೇತಿ ನೀಡಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ನಡೆದಿದೆ ಎನ್ನುತ್ತಾರೆ ಉನ್ನತ ಪೊಲೀಸ್‌ ಅಧಿಕಾರಿಗಳು. ಭದ್ರತೆಗೆ ಸಂಬಂಧಿಸಿದಂತೆ ಪ್ರತಿ ಕ್ಷಣವೂ ನಿಗಾ ವಹಿಸುವುದು ಪೊಲೀಸ್‌ ಇಲಾಖೆ ಜವಾಬ್ದಾರಿ. ಮುಂಬರುವ ವಿಧಾನ ಸಭಾ ಚುನಾವಣೆ ನ್ಯಾಯ ಸಮ್ಮತವಾಗಿ ನಡೆಸಲು ಸ್ಥಳೀಯ ಮತಗಟ್ಟಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಚಟು ವಟಿಕೆಗಳು ನಿರಂತವಾಗಿ ನಡೆಯುಲಿದೆ ಎನ್ನುತ್ತಾರೆ ಮಂಗಳೂರು ನಗರ ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌.

 ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next