Advertisement

ನೀವು ಸಿದ್ಧರಾಮಯ್ಯನ್ನ ಗೆಲ್ಲಿಸಿದ್ರಿ…ಆ ತಪ್ಪಿನಿಂದ ಇಂದು ರಾಜ್ಯಕ್ಕೆ ಕಂಟಕವಾಗಿದೆ: ಸಚಿವ ಸಿ.ಸಿ.ಪಾಟೀಲ್

08:59 PM Jan 02, 2023 | Team Udayavani |

ಕುಳಗೇರಿ ಕ್ರಾಸ್:(ಬಾಗಲಕೋಟೆ) ಜನವರಿ 2ರಿಂದ 12ರ ವರೆಗೆ ಪ್ರತಿ ಮನೆಯ ಮೇಲೂ ಭಾರತೀಯ ಜನತಾ ಪಕ್ಷದ ಧ್ವಜಗಳು ಹಾರಾಡಬೇಕು. ಮುಂಬರುವ ಚುನಾವಣೆಗೆ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಆಯ್ಕೆ ಮಾಡುವ ಮೂಲಕ ನಮ್ಮ ಪಕ್ಷ ಜಯ ಸಾಧಿಸಲು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಾಕಷ್ಟು ಪ್ರಯತ್ನಿಸಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಕಾರ್ಯಕರ್ತರಿಗೆ ಕರೆ ನೀಡಿದರು.

Advertisement

ಗ್ರಾಮದ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಬಾದಾಮಿ ಕ್ಷೇತ್ರದ 197ನೇ ಬೂತ್‌ನಲ್ಲಿ ಚಾಲನೆ ನೀಡಿ ಮಾತನಾಡಿದ ಆವರು ದುಡ್ಡು ಯಾವ ಪಕ್ಷದವರು ಕೊಟ್ಟರೂ ಜನ ತೆಗೆದುಕೊಳ್ಳುತ್ತಾರೆ. ಮತ ಮಾತ್ರ ಯಾರಿಗೆ ಹಾಕಬೇಕೋ ಅವರಿಗೇ ಹಾಕ್ತಾರೆ. ದುಡ್ಡು ಸರಾಯಿ ಹಂಚುವುದರಿಂದ ಪಕ್ಷ ಗೆಲ್ಲಿಸಲು ಸಾಧ್ಯವಿಲ್ಲ. ಮನೆ ಮನೆಗಳಿಗೆ ಹೋಗಿ ನಮ್ಮ ಪಕ್ಷದಿಂದ ಜನರಿಗೆ ಮುಟ್ಟಿದ ಕೆಲಸಗಳ ಬಗ್ಗೆ ಮನದಟ್ಟನೆ ಮಾಡಿ ಅಂದಾಗ ಮಾತ್ರ ಈ ಸಂಕಲ್ಪಯಾತ್ರೆ ಯಶಸ್ವೀಯಾಗಲು ಸಾಧ್ಯ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಬಿ ಎಂ ಹೊರಕೇರಿಯವರಿಂದ ಪ್ರಾರಂಭವಾದ ಕಳಸಾ ಬಂಡೂರಿ ಸುಮಾರು ವರ್ಷಗಳ ಹೋರಾಟಕ್ಕೆ ಇಂದು ನಮ್ಮ ಪಕ್ಷ ಉತ್ತಮ ನಿರ್ಣಯ ತೆಗೆದುಕೊಂಡಿದೆ. ಆದರೆ ಇದರ ಲಾಭ ಪಡೆಯಲು ತನ್ನ ಐದು ವರ್ಷ ಅಧಿಕಾರ ಅವಧಿಯಲ್ಲಿ ಸುಮ್ಮನಿದ್ದು ಕಾಂಗ್ರೆಸ್ ಮಹಾದಾಯಿಗಾಗಿ ಹುಬ್ಬಳ್ಳಿಯಲ್ಲಿ ಇಂದು ಹೋರಾಟ ಪ್ರಾರಂಭ ಮಾಡಿದೆ. ಹರಿಯುತ್ತಿದ್ದ 2 ಟಿಎಂಸಿ ನೀರಿಗೆ ಅಡ್ಡ ಗೋಡೆ ಕಟ್ಟಿದ್ದೇ ಕಾಂಗ್ರೆಸ್ ಸಾಧನೆ ಎಂದರು.

32ರೂ.ಗೆ ಅಕ್ಕಿ ಖರೀದಿಸಿ 2ರೂ.ಗೆ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಟ್ಟಿದ್ದು ನಮ್ಮ ಸರ್ಕಾರ ಆದರೆ ನಾವು ಯಾರೂ ಅದನ್ನ ಪ್ರಚಾರ ಮಾಡಲಿಲ್ಲ. ಕೆ.ಜಿ ಅಕ್ಕಿಗೆ 29ರೂ ನಮ್ಮ ಸರ್ಕಾರ ಖರ್ಚು ಮಾಡಿದ್ರೆ ಅದೇ ಅಕ್ಕಿಯಿಂದ ಅನ್ನಬಾಗ್ಯ ನನ್ನ ಯೋಜನೆ ಎಂದು ಸಿದ್ದರಾಮಯ್ಯ ಫೋಟೋ ಹಾಕಿಕೊಂಡು ಅನ್ನ ಭಾಗ್ಯ ಕೊಟ್ಟೆ.. ಅನ್ನಭಾಗ್ಯ ಕೊಟ್ಟೆ.. ಅಂಥ ಅಡ್ಡಾಡಿ ಪ್ರಚಾರ ಮಾಡಿ ಪೋಸ್ ಕೊಟ್ಟ.  ಕೆಲಸ ನಮ್ಮ ಪಕ್ಷದ್ದಾದರೂ ಪ್ರಚಾರ ಮಾಡಿ ಲಾಭ ಪಡೆಯುವುದು ವಿರೋಧ ಪಕ್ಷದವರದ್ದಾಗಿದೆ ಎಂದರು.

ಬರಿ ಸುಳ್ಳು ಹೇಳಿ ಲಾಭ ಪಡೆಯುವ ಸಿದ್ಧರಾಮಯ್ಯನ್ನ ನೀವು ಚುನಾವಣೆಯಲ್ಲಿ ಗೆಲ್ಲಿಸಿದ್ರಿ… ಅಂದು ಮಾಡಿದ ಒಂದು ಸಣ್ಣ ತಪ್ಪಿನಿಂದ ಇಂದು ರಾಜ್ಯಕ್ಕೆ ಎಷ್ಟು ಕಂಟಕವಾಗಿದ್ದಾನೆ ಎಂದು ವಿಚಾರ ಮಾಡಿ.ಚುನಾವಣೆಯಲ್ಲಿ ಜಾತಿ-ಮತ-ಪಂಗಡ ನೋಡಬಾರದು. ಪಕ್ಷಕ್ಕಾಗಿಯೇ ದುಡಿಬೇಕು ಎಂದು ಕಾರ್ಯಕರ್ತರಿಗೆ ಮನದಟ್ಟನೆ ಮಾಡಿದರು.

Advertisement

ಚುನಾವಣೆಯಲ್ಲಿ ಗೆಲ್ಲಲು ನಾಯಕರ ಹಾಗೂ ಅಭ್ಯರ್ಥಿಗಳ ಅವಶ್ಯಕತೆಗಳೇ ಇಲ್ಲ. ಮೋದಿಜೀ-ಬೊಮ್ಮಾಯಿ-ಯಡಿಯೂರಪ್ಪನವರು ಮಾಡಿದ ಜನಪರ ಕಾರ್ಯಗಳೇ ಸಾಕು. ನಮ್ಮ ಪಕ್ಷದ ಅಭಿವೃದ್ಧಿಯನ್ನ ನೋಡಿ ಯಾವ ಪಕ್ಷದವರೇ ಇರಲಿ 18ರಿಂದ 30ವರ್ಷದ ಯುವ ಸಮುದಾಯ ಪಕ್ಷಾತೀತವಾಗಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಮತ ಚಾಲಾಯಿಸಲಿದ್ದಾರೆ. ಕಾರಣ ಈ ಬಾರಿಯು ರಾಜ್ಯದಲ್ಲಿ 160 ರಿಂದ 170 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಸಂಸದ ಪಿ ಸಿ ಗದ್ದಿಗೌಡರ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪುರ, ಶಿವನಗೌಡ ಸುಂಕದ, ಬಸವರಾಜ ಯಂಕಂಚಿ ಮಾತನಾಡಿದರು.ಯಲ್ಲಪ್ಪ ಮೇಟಿ, ಬಸವರಾಜ ಹೊಸಮನಿ, ಬಸವರಾಜ ಬೂತಾಳಿ, ಮಹಾದೇವಪ್ಪ ಎತ್ತಿನಮನಿ, ಚನ್ನಬಸಪ್ಪ ಮೆಣಸಗಿ, ಆರ್ ಆರ್ ಪಾಟೀಲ, ಮಾರುತಿ ತಳವಾರ, ವಿರುಪಾಕ್ಷ ಮಿಟ್ಟಲಕೋಡ, ಭೀಮನಗೌಡ ಪಾಟೀಲ, ವಸಂತ ದೊಡ್ಡಪತ್ತಾರ, ಸಂಗಮೇಶ ಹುರಕಡ್ಲಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next