ತಿರುವನಂತಪುರ: ಯುಜಿಸಿ ನಿಯಮ ಉಲ್ಲಂ ಸಿ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ನೇಮಿಸಲಾಗಿದೆ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಕೆಯುಎಫ್ಒಎಸ್ ಮತ್ತು ಕೆಟಿಯು ವಿಶ್ವವಿದ್ಯಾಲಯದ ಕುಲಪತಿಗಳ ನೇಮಕವನ್ನು ಅನೂರ್ಜಿತಗೊಳಿಸಿದೆ. ಇದೇ ರೀತಿ ಕೇರಳದ ಇನ್ನೂ ಎಂಟು ವಿವಿಗಳ ಕುಲಪತಿಗಳ ನೇಮಕವನ್ನು ಹೈಕೋರ್ಟ್ ರದ್ದುಗೊಳಿಸುವ ಸಾಧ್ಯತೆ ದಟ್ಟವಾಗಿದೆ.
ಈ ಮೂಲಕ ಕೇರಳದ ಆಡಳಿತಾರೂಢ ಎಲ್ಡಿಎಫ್ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದಲ್ಲಿ ಕಾನೂನಾತ್ಮಕವಾಗಿ ರಾಜ್ಯಪಾಲರ ಕೈ ಮೇಲಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಸೋಮವಾರವಷ್ಟೇ ಕೇರಳ ಹೈಕೋರ್ಟ್, ಕೆಯುಎಫ್ಒಎಸ್ ಕುಲಪತಿ ಡಾ. ರಿಜು ಜಾನ್ ಅವರ ನೇಮಕವನ್ನು ರದ್ದುಗೊಳಿಸಿತ್ತು.
ಪ್ರತಿಭಟನಾ ಮೆರವಣಿಗೆ:
ಕುಲಪತಿಗಳ ರಾಜೀನಾಮೆಗೆ ಸೂಚನೆ ಹಾಗೂ ವಿಧೇಯಕಗಳನ್ನು ಅನುಮೋದಿಸದೇ ಬಾಕಿ ಇರಿಸಿಕೊಂಡಿರುವುದನ್ನು ಖಂಡಿಸಿ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಎಲ್ಡಿಎಫ್ ಮಂಗಳವಾರ “ರಾಜಭವನ ಚಲೋ’ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಈ ವೇಳೆ ಮಾತನಾಡಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, “ಹಿಂದುತ್ವ ರಾಷ್ಟ್ರ ಮಾಡುವ ಬಿಜೆಪಿ-ಆರ್ಎಸ್ಎಸ್ ಅಜೆಂಡಾ ಜಾರಿಗೆ ತರುವ ಭಾಗವಾಗಿ ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯಪಾಲರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಲಾಗುತ್ತಿದೆ,’ ಎಂದು ಆರೋಪಿಸಿದರು.
ರಾಜ್ಯಪಾಲರ ವಿರುದ್ಧ ಎಲ್ಡಿಎಫ್ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕಾಂಗ್ರೆಸ್ ಖಂಡಿಸಿದೆ. “ಕೇರಳದಲ್ಲಿ ಅರಾಜಕತೆ ಸೃಷ್ಟಿಸಲು ಎಲ್ಡಿಎಫ್ ಪ್ರಯತ್ನಿಸುತ್ತಿದೆ,’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ದೂರಿದ್ದಾರೆ.
Related Articles
ಹೈಕೋರ್ಟ್ ನಕಾರ:
ರಾಜಭವನ ಚಲೋಗೆ ತಡೆ ತರಲು ಕೇರಳ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ಆದರೆ ಸರ್ಕಾರಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದನ್ನು ವಿರೋಧಿಸಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಸಲ್ಲಿಸಿರುವ ಅರ್ಜಿ ಪರಿಗಣಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.