Advertisement

“ಅಹಂಕಾರಿಗಳು ಇತಿಹಾಸ ಸೇರಿದ್ದಾರೆ’

09:18 AM Oct 17, 2017 | |

ಬೆಂಗಳೂರು: “ಮುಖ್ಯಮಂತ್ರಿಯಾಗಿರುವವರಿಗೆ ಪ್ರತಿಪಕ್ಷಗಳ ಅಭಿಪ್ರಾಯ ಮತ್ತು ಟೀಕೆಯನ್ನು ಸ್ವೀಕರಿಸುವ ಸಹನೆ ಇರಬೇಕೇ ಹೊರತು ತಪ್ಪು ಹುಡುಕಿದವರ ಬಗ್ಗೆ ದುರಹಂಕಾರ ಮತ್ತು ತುತ್ಛವಾಗಿ ಪ್ರತಿಕ್ರಿಯಿಸುವುದು ಸರಿಯಲ್ಲ’ ಎಂದು ರಾಜ್ಯ ಬಿಜೆಪಿ ವಕ್ತಾರ ಹಾಗೂ ಶಾಸಕ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ.

Advertisement

ಮೈಸೂರು ಮಿನರಲ್ಸ್‌ ಲಿ. ಹಣವನ್ನು ನಿಯಮ ಬಾಹಿರವಾಗಿ ಅಪೆಕ್ಸ್‌ ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ಒತ್ತಡ ಹೇರಿದ್ದನ್ನು ಪ್ರಶ್ನಿಸಿದ್ದ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕನಿಷ್ಠ ಆರ್ಥಿಕ ಪ್ರಜ್ಞೆಯೂ ಇಲ್ಲ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಅವರು ಪತ್ರಿಕಾ ಹೇಳಿಕೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಯಾರಾದರೂ ತಮ್ಮ ತಪ್ಪನ್ನು ಹುಡುಕಿದರೆ ಅವರ ವಿರುದ್ಧ ಅಗೌರವ ಮತ್ತು
ದುರಹಂಕಾರದಿಂದ ತುಚ್ಛಿಕರಿಸಿ ಮಾತನಾಡುವುದು ಸಿದ್ದರಾಮಯ್ಯ ಅವರ ಜಾಯಮಾನವಾಗಿದೆ’ ಎಂದು ಕಿಡಿಕಾರಿದ್ದಾರೆ. ಅದೇ ರೀತಿ ತಮ್ಮಂತೆ ರಾಜಕೀಯ ಅನುಭವ ಇರುವ ಯಡಿಯೂರಪ್ಪ ಅವರ ಬಗ್ಗೆ ಬುರುಡೆ ಶಂಕರ ಎಂಬ ಟೀಕೆ ಕಾಗೋಡು ತಿಮ್ಮಪ್ಪ ಅವರಂತಹ ನಾಯಕರಿಗೆ ಶೋಭೆಯಲ್ಲ ಎಂದಿದ್ದಾರೆ.

ಆರೋಪ ಸುಳ್ಳಾದರೆ ನೇಣಿಗೆ ಸಿದ್ಧ
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ವಿರುದ್ಧ ತಾವು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರ ಸಮ್ಮುಖದಲ್ಲಿ ಸಾರ್ವಜನಿಕವಾಗಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಆರೋಪ ಸಾಬೀತಾದರೆ ಅವರು ರಾಜೀನಾಮೆ ನೀಡಲಿ. ಇಲ್ಲವಾದಲ್ಲಿ ಅಲ್ಲೇ ನನ್ನನ್ನು ನೇಣಿಗೆ ಹಾಕಲಿ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಪ್ರತಿ ಸವಾಲೆಸೆದಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ಆರೋಪ ಸುಳ್ಳಾದರೆ ನೇಣಿನ ಕುಣಿಕೆಗೆ ಕೊರಳೊಡ್ಡಲು ಸಿದ್ಧ. ಅದಕ್ಕೂ ಮುನ್ನ ಕಾನೂನು ತಜ್ಞರ ಸಮ್ಮುಖದಲ್ಲಿ ದಾಖಲೆಗಳ ಪರಿಶೀಲನೆಯಾಗಬೇಕು’ ಎಂದು ಹೇಳಿದರು.

ಬಿಜೆಪಿ ಮುಖಂಡ ಬಿ.ಜೆ. ಪುಟ್ಟಸ್ವಾಮಿ ನನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳಾಗಿದ್ದು, ಅದರ ಸತ್ಯವನ್ನು ಅವರೇ ಸಾಬೀತುಪಡಿಸಬೇಕಿದೆ. ಆರೋಪ ಸುಳ್ಳಾದರೆ ವಿಧಾನಸೌಧದ ಮುಂದೆ ನೇಣು ಹಾಕಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಆದರೆ, ಆರೋಪ ಸುಳ್ಳಾಗಿದ್ದರೂ ನೇಣು ಹಾಕಿಕೊಳ್ಳಿ ಎಂದು ಅವರಿಗೆ ಹೇಳುವುದಿಲ್ಲ. ಆರೋಪಿಸುವ ಮುನ್ನ ಯೋಚನೆ ಮಾಡಲಿ ಎಂದು ಸಲಹೆ ನೀಡುವೆ.
 ●ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next