Advertisement

ಮುಗಿಲೆತ್ತರಕ್ಕೆ ಹಾರಲಿ ಕೀರ್ತಿಪತಾಕೆ

11:54 PM Aug 13, 2022 | Team Udayavani |

ಬಲಿಷ್ಠ ಭಾರತದ ಅಡಿಪಾಯ ಇರುವುದೇ ಈ ದೇಶದ ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಯಲ್ಲಿ. ಕೇವಲ ಆರ್ಥಿಕ ಅಭಿವೃದ್ಧಿಯೊಂದೇ ಸದೃಢ ದೇಶದ ಸಂಕೇತವಲ್ಲ. ಹಿಂದಿನಿಂದಲೂ ಭಾರತ ಸಾಂಸ್ಕೃತಿಕವಾಗಿ ಉತ್ತಮ ಸ್ಥಿತಿಯಲ್ಲೇ ಇದೆ. ಆದರೆ ಶಿಕ್ಷಣ ಮತ್ತು ಕ್ರೀಡೆಯ ವಿಚಾರಕ್ಕೆ ಬಂದರೆ ನಾವು ಇನ್ನಷ್ಟು ಬೆಳೆಯಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ನಾವು ಶೈಕ್ಷಣಿಕ ರಂಗದಲ್ಲೂ ಗಣನೀಯ ಸಾಧನೆ ಮಾಡಿದ್ದೇವೆ. ಇಂದು ಭಾರತದ ಬಹಳಷ್ಟು ಮಂದಿ ಜಾಗತಿಕ ಸಂಸ್ಥೆಗಳಲ್ಲಿ ಸಿಇಒಗಳಂಥ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ ಕ್ರೀಡೆಯಲ್ಲಿ ಈಗ ಸಾಧಿಸುತ್ತಿರುವುದು ಏನೇನೂ ಅಲ್ಲ. ದೇಶ ಶತಮಾನೋತ್ಸವ ಆಚರಿಸಿಕೊಳ್ಳುವ ಹೊತ್ತಿಗೆ ಕ್ರೀಡೆಯಲ್ಲಿ ನಾವು ಇನ್ನಷ್ಟು ಬೆಳಗಬೇಕಿದೆ.

Advertisement

ಶಿಕ್ಷಣ ಅಭಿವೃದ್ಧಿಯಲ್ಲ; ಅಭಿವೃದ್ಧಿ ಶಿಕ್ಷಣವಾಗಲಿ
ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಈ ಸಂದರ್ಭದಲ್ಲಿ ಇಲ್ಲಿಯವರೆಗೂ ಹೇಗೆ ನಡೆದುಕೊಂಡು ಬಂದೆವು ಎಂಬುದನ್ನು ಮನನ ಮಾಡಿಕೊಳ್ಳುವ ಜತೆಗೆ ಭವಿಷ್ಯದ ದಿನಗಳು ಹೇಗಿರಬೇಕು ಎಂಬ ಪರಿಕಲ್ಪನೆಯ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ಮಾಡಬೇಕಿದೆ.

ಮುಂದಿನ ದಿನಗಳು ಎಂದಾಕ್ಷಣ ಪ್ರತಿಯೊಬ್ಬರಲ್ಲಿಯೂ ಅಭಿವೃದ್ಧಿ, ಶಿಕ್ಷಣ, ಆರೋಗ್ಯ…. ಹೀಗೆ ಹಲವಾರು ಕ್ಷೇತ್ರ ಗಳು ಮೊದಲ ಆದ್ಯತೆಯಾಗಿ ನಿಲ್ಲುತ್ತವೆ. ಅದರಲ್ಲಿ ಪ್ರಮುಖವಾಗಿ ಅತ್ಯಗತ್ಯವಾಗಿ ಬೇಕಾಗಿರುವ ಶಿಕ್ಷಣ ಮುಂದಿನ 20-25 ವರ್ಷಗಳಲ್ಲಿ ಹೇಗಿರಬೇಕು ಎಂದರೆ, ಅದು “ಭಾರತೀಯ ವಿಚಾರಧಾರೆಗಳ ಮೇಲೆ ನಿಂತರಬೇಕು’. ಮೌಲ್ಯಯುತ ಹಾಗೂ ಪ್ರಸ್ತುತವಾಗಿರಬೇಕು.

ಭಾರತೀಯ ವಿಚಾರಗಳೆಂದಾಕ್ಷಣ ರಾಮಾಯಣ, ಮಹಾಭಾರತವನ್ನು ತರುವುದಲ್ಲ. ಅದರಲ್ಲಿರುವ ಯಾವ ವಿಚಾರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸೂಕ್ಷ್ಮತೆ ಯನ್ನು ಅರಿತು, ಚರ್ಚಿಸಬೇಕು. ಇದಾದ ಅನಂತರ ಭಾರತೀಯ ವಿಚಾರಗಳನ್ನು ಮುಕ್ತ ಮನಸ್ಸಿನಿಂದ ನೋಡುವಂತಾಗಬೇಕು. ಸತ್ಯ- ಅಸತ್ಯಗಳನ್ನು ತಿಳಿದು, ಚರ್ಚಿಸಿ, ಇವತ್ತಿನ ಜಮಾನಕ್ಕೆ ಯಾವುದು ಅವಶ್ಯ ಎನಿಸುತ್ತದೆಯೇ ಅದನ್ನು ಭಾವನಾತ್ಮಕವಾಗಿ ತಿಳಿಯದೆ, ವಸ್ತು ನಿಷ್ಠವಾಗಿ ಆಯ್ಕೆ ಮಾಡಿಕೊಳ್ಳುವುದು ಸವಾಲಿನ ವಿಷಯವಾಗಿದೆ.

ಅದಕ್ಕೂ ಮೊದಲು ಭಾರತೀಯ ವಿಚಾರಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡ ಬಳಿಕ ಆಯ್ಕೆ, ಅನುಷ್ಠಾನ ಮಾಡಬೇಕು. ಅನಂತರವಷ್ಟೇ ಅದನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲು ಸಾಧ್ಯವಾಗಲಿದೆ.
ಈ ವಿಚಾರವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮುಂದಿನ 20ರಿಂದ 25 ವರ್ಷಗಳಲ್ಲಿ ಯಾವ ರೀತಿಯ ಶಿಕ್ಷಣವಿರಬೇಕು, ಹೇಗೆ ಪರಿವರ್ತನೆ ಮತ್ತು ಯಾವ್ಯಾವ ವರ್ಷಗಳಲ್ಲಿ ಏನೇನು ಆಗಬೇಕು ಎಂಬ ದೃಷ್ಟಿಕೋನವನ್ನು ವಿವರವಾಗಿ ಹಾಗೂ ಸ್ಪಷ್ಟವಾಗಿ ತಿಳಿಸಿದೆ. ನೀತಿ ಪ್ರಕ್ರಿಯೆ ಸಿದ್ಧಪಡಿಸುವ ವೇಳೆಯಲ್ಲಿಯೇ ಮುಂದಿನ 25 ವರ್ಷ ಗಳಲ್ಲಿ ಏನೇನು ಆಗಬೇಕು ಎಂದು ವೃದ್ಧರು, ವಯಸ್ಕರು, ಮಕ್ಕಳು, ಪೋಷಕರು, ಶಿಕ್ಷಕರು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರ ಆಶೋತ್ತರಗಳನ್ನು ಪರಿಗಣಿಸಲಾಗಿದೆ.

Advertisement

ಶಿಕ್ಷಣ ಅಭಿವೃದ್ಧಿಯಲ್ಲ, ಅಭಿವೃದ್ಧಿ ಶಿಕ್ಷಣವಾಗಲಿ:
ಶಿಕ್ಷಣವು ಸಮಾಜದಲ್ಲಿ ಹೇಗೆ ಅಭಿವೃದ್ಧಿಯ ಸಂಕೇತ ಮತ್ತು ಪೂರಕವಾಗಿರಲಿದೆ. “ಶಿಕ್ಷಣದ ಮೂಲಕವೇ ಅಭಿವೃದ್ಧಿ ಸಾಧ್ಯ’ ಎಂಬ ಪರಿಕಲ್ಪನೆಯನ್ನು ಸ್ವಾತಂತ್ರ್ಯದ ಶತಮಾನದ ಹೊತ್ತಿಗೆ ಶಿಕ್ಷಣ ಕ್ಷೇತ್ರದ ತಜ್ಞರು, ಸರಕಾರ ಮತ್ತು ನಾಗರಿಕರಿಗೆ ತಿಳಿಸಬೇಕಿದೆ.

ಅದಕ್ಕಾಗಿ ಶಿಕ್ಷಣದ ಸಂರಚನೆಯನ್ನು ಅಭಿವೃದ್ಧಿಯ ಸಂಕೇತವಾಗಿ ಪರಿಗಣಿಸಬೇಕು. ಇದು ಕೇವಲ ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣಕ್ಕೆ ಸೀಮಿತವಾಗದೆ, ಇವೆರ ಡನ್ನೂ ಸಮಾಗಮಗೊಳಿಸುವ ಸಮಗ್ರ ದೃಷ್ಟಿಕೋನ ಹೊಂದಿರಬೇಕು. ವಿದ್ಯಾರ್ಥಿ ಜೀವನಕ್ಕೆ ಮಾತ್ರ ಕಲಿಕೆ ನಿಲ್ಲಿಸದೆ, ಜೀವನಪರ್ಯಂತ ಕಲಿಯುವಂತಿರಬೇಕು. ಪಠ್ಯಕ್ಕೆ ಸೀಮಿತವಾಗದೆ, ಜೀವನದ “ಕಲಿಕೆಯಿಂದ ಕಲಿಕೆ’ ಎಂಬ ಸಮಗ್ರ ಶಿಕ್ಷಣ ನೀಡಿದಾಗ ಅಮೂಲಾಗ್ರ ಅಭಿವೃದ್ಧಿ ಸಾಧ್ಯವಾಗಲಿದೆ.

ಪ್ರಸ್ತುತ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವು ಸಂಬಂಧವಿಲ್ಲದಂತಾಗಿದೆ. ಶಾಲಾ ಶಿಕ್ಷಣ ಮುಗಿಸಿದ ಅನಂತರ ವಿದ್ಯಾರ್ಥಿಗಳು ಮುಂದೆ ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ನಿರ್ಮಾಣವಾಗುವ ಸ್ಥಿತಿ ಇದೆ. ಶಾಲಾ ಶಿಕ್ಷಣದಲ್ಲಿ ಸೃಜನಾತ್ಮಕ ಶಿಕ್ಷಣಕ್ಕೆ ಬೇಕಾದ ಸಿದ್ಧತೆಗಳು ದೊರೆತಾಗ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯಲು ಸಾಧ್ಯವಾಗ ಲಿದೆ. ಆದ್ದರಿಂದ ಒಂದಕ್ಕೊಂದು ಕೊಂಡಿಯಾಗಿ ಕಾರ್ಯನಿರ್ವಹಿಸುವಂತೆ ಮಾಡ ಬೇಕು. ಶಾಲಾ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ, ಕೌಶಲ, ವೈದ್ಯಕೀಯ, ತಾಂತ್ರಿಕ ಸೇರಿ ಎಲ್ಲ ಶಿಕ್ಷಣವು ಅಂತರ ಕಾಯ್ದುಕೊಳ್ಳದೆ, ಸಮಗ್ರ ಮತ್ತು ಸೃಜನಾತ್ಮಕವಾಗಿರಬೇಕು.

ಮೌಲ್ಯ ಬೆಳೆಸುವ ಶಿಕ್ಷಣ ಅಗತ್ಯ: ಜಗತ್ತಿನ ನಾಗರಿಕತೆ ಯಲ್ಲಿ ಭಾರತೀಯ ಶಿಕ್ಷಣ ಮತ್ತು ಸಂಸ್ಕೃತಿಗೆ ವಿಶೇಷ ಸ್ಥಾನ ವಿರುವ ಕಾರಣ ಇವೆಲ್ಲವೂ “ಭಾರತೀಯ ಶಿಕ್ಷಣದ ಅಡಿಪಾಯದಲ್ಲಿಯೇ ನಡೆಯಬೇಕು. ಮಗುವಿನ ಕಲಿಕೆಯ ಆರಂಭದ ಹಂತ ವಾದ 3ರಿಂದ 5 ವರ್ಷದಲ್ಲಿ ಭದ್ರ ಬುನಾದಿ ಹಾಕ ಬೇಕು. ಈ ಅವಧಿಯಲ್ಲಿ ಮಕ್ಕಳಲ್ಲಿ ಮೌಲ್ಯ ವನ್ನು ಬೆಳೆಸುವ ಹಾಗೂ ಪರಿಸರ ಸಂರಕ್ಷಣೆ ಯಂತಹ ವಿಷಯಗಳನ್ನು ಆಟ-ಪಾಠದ ಮೂಲಕ ತುಂಬಾ ಸುಲಭವಾಗಿ ಕಲಿಸ ಬೇಕು. ಈ ಶಿಕ್ಷಣವು ಮಗುವಿನ ಬೌದ್ಧಿಕ, ಶಾರೀರಿಕ, ಮಾನಸಿಕ, ಆಂತರಿಕ, ಕಲಾತ್ಮಕ ಮತ್ತು ತಾಂತ್ರಿಕ ವಾಗಿ ಜೀವನದ ಎಲ್ಲ ಆಯಾಮ ಗಳಲ್ಲಿ ಸರ್ವಾಂಗೀಣ ವಿಕಾಸವಾಗುವಂತಿರಬೇಕು.

ಪ್ರಮುಖ ಸವಾಲುಗಳು: ಹೊಸ ಯುಗಕ್ಕೆ ನಾವು ಬದಲಾಗಬೇಕಾದರೆ ಅದಕ್ಕೂ ಮೊದಲು ಹತ್ತಾರು ದಶಕಗಳಿಂದ ನಡೆದುಕೊಂಡು ಬಂದಿರುವ ಶಿಕ್ಷಣ ಕ್ಷೇತ್ರ ದಲ್ಲಿನ ನೀತಿ ಮತ್ತು ಮನಃಸ್ಥಿತಿ ಬದಲಾಗಬೇಕು.

ಪ್ರಸ್ತುತ ಶಿಕ್ಷಣದಲ್ಲಿ ವಾಣಿಜ್ಯ ವಿದ್ಯಾರ್ಥಿ ಮನಃಶಾಸ್ತ್ರ, ಕಲೆ, ವಿಜ್ಞಾನ ಏಕೆ ಓದಬೇಕು ಎಂಬ ಮನಃಸ್ಥಿತಿ ಬಿಟ್ಟು ಎಲ್ಲವನ್ನೂ ಕಲಿಯುವ ಮನಃಸ್ಥಿತಿ ಬೆಳೆಸಿಕೊಂಡಾಗ ಬಹು ವಿಷಯಗಳನ್ನು ಒಳಗೊಂಡ ಶಿಕ್ಷಣ ಸಿಗಲಿದೆ.
ಈಗಿನ ವ್ಯವಸ್ಥೆಯಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳು ಮೇಲಧಿಕಾರಿಗಳಿಂದ ನಿಯಂತ್ರಣಗೊಳ್ಳುತ್ತಿವೆ. ಹೇಳಿ ದಷ್ಟನ್ನು ಮಾಡುವುದು ಕೆಳಗಿರುವವವರ ಕೆಲಸವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತೀ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಗೆ ಸ್ವಾಯತ್ತೆ ಸಿಗಲಿದೆ. ಪಠ್ಯಕ್ರಮ, ಕಲಿಸುವ ವಿಧಾನಗಳಲ್ಲಿ ಸ್ವಾತಂತ್ರ್ಯ ಸಿಗಲಿದೆ. ಇದರಿಂದ ಸಂಬಂಧಪಟ್ಟ ವಿ.ವಿ., ಕಾಲೇಜುಗಳಲ್ಲಿ ಸ್ವತಂತ್ರವಾಗಿ ಯೋಚಿಸುವ, ಆಲೋಚಿಸುವ ಕ್ರಮ ಬರಲಿದೆ.

ವಿದ್ಯಾರ್ಥಿಯು ಜಗತ್ತನ್ನು ವಿಸ್ತಾರವಾಗಿ ನೋಡಿದಾಗ ಹಾಗೂ ಹೆಚ್ಚಿನ ವಿಷಯಗಳನ್ನು ತಿಳಿದಾಗ ವಿಶ್ವಾಸ ಬರಲಿದೆ. ನಮ್ಮ ಪ್ರಾದೇಶಿಕತೆಯ ಜತೆಗೆ ಬೇರೆಯದನ್ನೂ ಕಲಿತಾಗ ಮುಕ್ತ ಅವಕಾಶಗಳು ದೊರೆಯಲಿವೆ. ಆದ್ದರಿಂದ ನಮ್ಮ ಶೈಕ್ಷಣಿಕ ಸಂಸ್ಥೆಯನ್ನು ನಿರ್ವಹಣೆ ಮಾಡುವ ರೀತಿ ಬದಲಾಗ ಬೇಕು. ಗುಣಮಟ್ಟ, ನಿರ್ವಹಣೆ, ಸಿಬಂದಿ ಎಲ್ಲ ವಿಷಯಗ ಳಲ್ಲಿಯೂ ಗುಣಾತ್ಮಕತೆ ಕಾಯ್ದುಕೊಳ್ಳಬೇಕು. ಕೇವಲ ಪ್ರಮಾಣಪತ್ರ ವಿತರಣೆಗಾಗಿ ಮಾತ್ರ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದಲ್ಲ, ಸವಾಲುಗಳನ್ನು ಎದುರಿ ಸುವಂತಹ ಶಿಕ್ಷಣವನ್ನು ಅಗತ್ಯಗಳಿಗೆ ತಕ್ಕಂತೆ ರೂಪಿಸುವ ಶಿಕ್ಷಣ ಸಂಸ್ಥೆಗಳು ಬೇಕಿದೆ.

ವಿದ್ಯಾರ್ಥಿಗಳ ಅಗತ್ಯ ಮತ್ತು ಅಪೇಕ್ಷೆಗೆ ತಕ್ಕಂತೆ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳ ಅಗತ್ಯ ಏನು ಎಂಬುದನ್ನು ತಿಳಿಯುವುದು ಮಾತ್ರವಲ್ಲ, ಅದಕ್ಕೆ ತಕ್ಕಂತೆ ನಿರಂತರವಾಗಿ ಬದಲಾಗಬೇಕು. ಬದಲಾವಣೆಯ ಪ್ರಕ್ರಿಯೆಯನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಶಿಕ್ಷಣ ಸಂಸ್ಥೆಗಳಿಗೆ ಇರಬೇಕಾಗುತ್ತದೆ. ಮುಂದಿನ 25 ವರ್ಷಗಳಲ್ಲಿ ಈ ಸವಾಲುಗಳನ್ನು ಮೆಟ್ಟಿ ನಿಂತರೆ ಭಾರತೀಯ ಶಿಕ್ಷಣ ಪದ್ಧತಿ ಯಲ್ಲಿ ಬದಲಾವಣೆ ತರಲು ಸಾಧ್ಯವಾಗಲಿದೆ. ಇದು ಶಿಕ್ಷಣ ಪದ್ಧತಿಯಲ್ಲಿ ಮಾತ್ರವಲ್ಲ, ಭಾರತದಲ್ಲಿ ಎಲ್ಲ ರಂಗಗಳಲ್ಲಿಯೂ ಬದಲಾವಣೆಗೆ ನಾಂದಿ ಹಾಡಿದಂತಾಗುತ್ತದೆ.

-ಎಂ.ಕೆ. ಶ್ರೀಧರ್‌, ಶಿಕ್ಷಣ ತಜ್ಞರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next