Advertisement

ಶಿಕ್ಷಣ,ಆರೋಗ್ಯ,ಉನ್ನತ ಶಿಕ್ಷಣ ಇಲಾಖೆ ಭ್ರಷ್ಟಾಚಾರದ ತಾಣವಾಗಿದೆ : ಎಚ್.ವಿಶ್ವನಾಥ್

10:15 PM Jan 13, 2023 | Team Udayavani |

ಹುಣಸೂರು: ಮತೀಯ ಹಿಂದೂ ಸಂಘಟನೆಗಳು ಈ ಸರಕಾರವನ್ನು ತಮ್ಮ ಮನ ಬಂದಂತೆ ಮುನ್ನಡೆಸುತ್ತಿದ್ದಾರೆ. ಧರ್ಮ ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿ ಮಾಡುತ್ತಿದ್ದಾರೆ. ಸರಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಶುಕ್ರವಾರ ಹುಣಸೂರಿನ ಕನಕ ಭವನದಲ್ಲಿ ಆಯೋಜಿಸಿದ್ದ ವಿಶ್ವಾಸಿಗಳ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಒಂದು ಉತ್ತಮ ಸರಕಾರ ಬರಲಿ ಎನ್ನುವ ಉದ್ದೇಶದಿಂದ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದೆ. ಆದರೆ ಬಿಜೆಪಿ ನನಗೆ ಅನ್ಯಾಯ ಮತ್ತು ಅಪಮಾನ ಮಾಡಿತು. ಬಿಜೆಪಿ ಒಂದು ಭ್ರಷ್ಟ ಸರಕಾರವಾಗಿದ್ದು, ರಾಜ್ಯದಲ್ಲಿ ಕೋಮುವಾದಿಗಳ ಕೈಗೆ ಸರಕಾರವನ್ನು ಕೊಟ್ಟು ಪರೋಕ್ಷವಾಗಿ ಅವರಿಂದ ಸರಕಾರವನ್ನು ನಡೆಸುತ್ತಿದ್ದಾರೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದರು.

ಶಿಕ್ಷಣ, ಉನ್ನತ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆದಿದೆ. ಈ ಬಗ್ಗೆ ಪಕ್ಷದಲ್ಲಿ ಮಾತನಾಡುವವರಿಲ್ಲದೆ ಪಕ್ಷ ತಳಮಟ್ಟಕ್ಕೆ ಕುಸಿಯುತ್ತಿದೆ ಉದ್ಯೋಗದ ನೇಮಕಾತಿಯಲ್ಲಿ, ಪೋಸ್ಟಿಂಗ್‌ಗಳಲ್ಲಿ ಭ್ರಷ್ಟಾಚಾರ ರಾಜಾರೋಷವಾಗಿ ನಡೆಯುತ್ತಿದೆ. ಈ ಎಲ್ಲಾ ಘಟನೆಗಳಿಂದಲೂ ನನ್ನ ಮನಸ್ಸಿಗೆ ತುಂಬಾ ನೋವಾಗಿದ್ದು, ಎಲ್ಲ ವಿಷಯವನ್ನು ತೆರೆದಿಡುತ್ತಿದ್ದೇನೆ ಎಂದರು.

ಮತಪಟ್ಟಿಯಲ್ಲಿ ಹೆಸರೇ ನಾಪತ್ತೆ:
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸಾವಿರಾರು ಹೆಸರು ನಾಪತ್ತೆ ಪ್ರಕರಣದ ಬಗ್ಗೆ ಆಳುವ ಸರ್ಕಾರ ದಿಟ್ಟ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರ ಹಕ್ಕನ್ನು ಕಸಿದುಕೊಳ್ಳುವ ಸಣ್ಣತನವನ್ನು ಬಿಜೆಪಿ ಜನಪ್ರತಿನಿಧಿಗಳು ಮಾಡಿರುವುದು ಅಕ್ಷಮ್ಯ ಅಪರಾಧ ಎಂದರು.

ನನಗೆ ರಾಜಕೀಯ ಅಧಿಕಾರ ಕಲ್ಪಿಸಿದ ದೇವರಾಜ ಅರಸರು, ಎಚ್.ಡಿ.ದೇವೇಗೌಡರಿಗೆ ಕೃತಜ್ಞನಾಗಿರುವೆ. ಆದರೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದ್ದ ನನಗೆ ಅವರು ಮತ್ತವರ ಮಗನಿಂದ ಮೋಸವಾಯಿತು. ಎಂಎಲ್ ಸಿ ಹುದ್ದೆಯನ್ನು ಆರ್ ಎಸ್ಎಸ್.ನವರ ನೆರವಿನಿಂದ ಪಡೆಯಬೇಕಾಯಿತೆಂದು ಮಾರ್ಮಿಕವಾಗಿ ನುಡಿದು, ನಾನು ನನ್ನ ರಾಜಕೀಯ ಜೀವನದ ಉದ್ದಕ್ಕೂ ತತ್ವ, ಸಿದ್ಧಾಂತ, ಬದ್ಧತೆ, ಪ್ರಾಮಾಣಿಕವಾಗಿ ಹಾಗೂ ಸೈದಾಂತಿಕ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಆದರೆ ಬಿಜೆಪಿ ಸೇರಿ ಭ್ರಮನಿರಸನಗೊಂಡಿದ್ದೇನೆ. ನನ್ನ ಹುಣಸೂರಿನ ರಾಜಕೀಯಕ್ಕೆ ಸಹಕಾರ ನೀಡಿದವರನ್ನು ಎಂದೆಂದಿಗೂ ಮರೆಯುವುದಿಲ್ಲ.ಇದು ಯಾವುದೇ ಪಕ್ಷದ ಸಭೆಯಲ್ಲ.ಇದು ನನ್ನ ಹಿತೈಷಿಗಳ ಸಭೆಯಾಗಿದೆ. ನನ್ನ ಒಂದು ಮನವಿಗೆ ಓಗೊಟ್ಟು ಸಭೆಗೆ ಎಲ್ಲಾ ಪಕ್ಷದಲ್ಲಿರುವವರೂ ಬಂದಿದ್ದೀರಾ ಎಂದು ತಮ್ಮ ಹಿತೈಶಿಗಳಿಗೆ ಕೃತಜ್ಞತೆ ಸಲ್ಲಿಸಿದರು.

Advertisement

ನೀವು ಸ್ವತಂತ್ರರು
ನನ್ನ ಹಿತೈಷಿಗಳು ಮುಂದೆ ಯಾವುದೇ ತೀರ್ಮಾನ ಕೈಗೊಳ್ಳಲು ನೀವು ಸ್ವತಂತ್ರರಾಗಿದ್ದೀರಿ. ನಿಮ್ಮ ಮನಸ್ಸಿಗೆ ಏನು ಸರಿಯೇನಿಸುತ್ತದೆ ಅದನ್ನು ಮಾಡಿರಿ. ನೀವು ಎಲ್ಲೇ ಇದ್ದರೂ ನಿಮ್ಮ ವಿಶ್ವಾಸಿಗನಾಗಿರುತ್ತೇನೆ. ನಾನು ಮತ್ತೊಮ್ಮೆ ಸಭೆ ಮಾಡಿ ನನ್ನ ರಾಜಕೀಯ ನಿರ್ಣಯವನ್ನು ತಿಳಿಸುತ್ತೇನೆಂದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಗೀತಾನಿಂಗರಾಜ್, ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್, ದೊಡ್ಡಹೆಜ್ಜೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮುದುಗನೂರುಸುಭಾಷ್, ನಗರಸಭಾ ಸದಸ್ಯರಾದ ಸತೀಶ್‌ಕುಮಾರ್, ಹರೀಶ್‌ಕುಮಾರ್, ದೊಡ್ಡಹೆಜ್ಜೂರುರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್, ಹಳ್ಳಿಮನೆ ಸಂದೇಶ್‌ ಸ್ಯಾಂಡಿ, ಹಿತೈಶಿಗಳಾದ ಬಾಲಕೃಷ್ಣೇಗೌಡ, ಪ್ರಾಣೇಶ್‌ಶೆಟ್ಟಿ, ಹೊಸೂರುಅಣ್ಣಯ್ಯ, ಸುನಿತಾಜಯರಾಮೇಗೌಡ, ಮೊದೂರು ಬಸವಣ್ಣ, ವಾಸೇಗೌಡ, ಮಹದೇವ, ಅಶೋಕ್, ಉದಯ್, ಸತ್ಯಪ್ಪ, ದಲಿತ ಮುಖಂಡರಾದ ಬಸವಲಿಂಗಯ್ಯ, ನಿಂಗರಾಜಮಲ್ಲಾಡಿ, ಶಿವಶಂಕರ್, ಆಯಾಜ್, ರಫೀಕ್, ಅಬ್ಬಾಸ್, ಕಣಗಾಲುರಾಮೇಗೌಡ, ರಾಜೇಗೌಡ,ವಾರಂಚಿ ಜಗದೀಶ್, ರವೀಶ್, ಸೇರಿದಂತೆ ಅಭಿಮಾನಿಗಳು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next