Advertisement

ಆರ್ಥಿಕ ಹಿಂಜರಿಕೆಯೆಂಬ ಭೂತ

09:57 AM Nov 20, 2019 | mahesh |

ರಿಯಲ್‌ ಎಸ್ಟೇಟ್‌ ಕ್ಷೇತ್ರವು ನಮ್ಮ ದೇಶದ ಪ್ರಗತಿಯ ಗತಿಯನ್ನು ನಿರ್ಧರಿಸುವ ಪ್ರಮುಖ ಅಂಶ. ಈ ಕ್ಷೇತ್ರ ಪ್ರಗತಿಯಲ್ಲಿದ್ದರೆ ದೇಶದ ಪ್ರಗತಿಯು ವೇಗವನ್ನು ಪಡೆದುಕೊಳ್ಳಬಹುದು.

Advertisement

ಬೇಡಿಕೆ ಎಂಬುದು ಆರ್ಥಿಕ ಚಟುವಟಿಕೆಗೆ ಟಾನಿಕ್‌ ಇದ್ದ ಹಾಗೆ. ರಿಯಲ್‌ ಎಸ್ಟೇಟ್‌ ಕ್ಷೇತ್ರವು ನಮ್ಮ ದೇಶದ ಪ್ರಗತಿಯ ಗತಿಯನ್ನು ನಿರ್ಧರಿಸುವ ಪ್ರಮುಖ ಅಂಶ. ಈ ಕ್ಷೇತ್ರ ಪ್ರಗತಿಯಲ್ಲಿದ್ದರೆ ದೇಶದ ಪ್ರಗತಿಯು ವೇಗವನ್ನು ಪಡೆದುಕೊಳ್ಳಬಹುದು. ಸಿಮೆಂಟ್‌, ಸ್ಟೀಲ್‌, ಫ‌ರ್ನಿಚರ್‌, ಇಲೆಕ್ಟ್ರಿಕಲ್‌ ಉಪಕರಣಗಳು, ಪೈಂಟ್‌, ಇಟ್ಟಿಗೆ ಹೀಗೆ ಅನೇಕ ಕ್ಷೇತ್ರಗಳ ಪ್ರಗತಿಯು ರಿಯಲ್‌ ಎಸ್ಟೇಟ್‌ ಬೆಳವಣಿಗೆಯ ಮೇಲಿದೆ. ರಿಯಲ್‌ ಎಸ್ಟೇಟ್‌ ಕ್ಷೇತ್ರವು ಬೂಮ್‌ನಲ್ಲಿದ್ದರೆ ಈ ಪೂರಕ ಕ್ಷೇತ್ರಗಳು ಬೂಮ್‌ನತ್ತ ತಲುಪುತ್ತವೆ. ಇಲ್ಲದಿದ್ದರೆ ಡೂಮ್‌.

ಆರ್ಥಿಕ ಹಿಂಜರಿತದ ಭೀತಿ ದೇಶವನ್ನು ಮತ್ತೆ ಕಾಡಿಸಲಾರಂಭಿಸಿದೆ. ಆರ್ಥಿಕ ಪ್ರಗತಿಯಲ್ಲಿನ ಏರುಪೇರುಗಳು ಬಂಡವಾಳಶಾಹಿ ಆರ್ಥಿಕ ನೀತಿಯನ್ನು ಅನುಸರಿಸುತ್ತಿರುವ ರಾಷ್ಟ್ರಗಳಲ್ಲಿ ಮರುಕಳಿಸುತ್ತಿರುವುದು ಸರ್ವೇ ಸಾಮಾನ್ಯ ಸಂಗತಿ. ಪ್ರಗತಿಯು ಏರುಗತಿಯಲ್ಲಿದ್ದಾಗ ಯಾರೂ ಚಿಂತಿಸುವವರಿಲ್ಲ. ಪ್ರಗತಿಯ ದರದಲ್ಲಿ ಇಳಿಕೆಯಾದರೆ, ಏನಾದರೂ ಅವಘಡವಾದರೆ ಭಯ. ಆರ್ಥಿಕ ಪ್ರಗತಿಯ ಬಗೆಗಿನ ಕಾಳಜಿ ಎಲ್ಲ ದೇಶಕ್ಕೂ ಇದೆ. ಆರ್ಥಿಕವಾಗಿ ಬಲಾಡ್ಯವಾದ ದೇಶಗಳಿಗೆ ತಮ್ಮ ಆರ್ಥಿಕ ಪ್ರಗತಿಯನ್ನು ಸುಸ್ಥಿಯಲ್ಲಿಟ್ಟುಕೊಳ್ಳುವ ಚಿಂತೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲಿಲ್ಲವೆಂಬ ಚಿಂತೆ. ಇನ್ನು ಅಭಿವೃದ್ಧಿ ಸಾಧಿಸಲು ಅವಕಾಶ ಕಡಿಮೆಯಿರುವ ರಾಷ್ಟ್ರಗಳಿಗೆ ಯಾವತ್ತೂ ಅಭಿವೃದ್ಧಿಯದ್ದೇ ಚಿಂತೆ. ಜಾಗತೀಕರಣದ ಈ ಯುಗದಲ್ಲಿ ರಾಷ್ಟ್ರಗಳು ಎಷ್ಟೊಂದು ಏಕೀಕರಿಸಲ್ಪಟ್ಟಿವೆಯಂದರೆ ಜಗತ್ತಿನ ಯಾವುದೋ ಮೂಲೆಯಲ್ಲಿ ಸಮಸ್ಯೆ ತಲೆದೋರಿದರೆ ಅದರ ಪರಿಣಾಮ ಎಲ್ಲೆಡೆ ಹಬ್ಬುತ್ತದೆ. ಹಿಂಜರಿಕೆ ಎಂಬುದು ಒಂದು ರೀತಿಯ ಸಾಂಕ್ರಾಮಿಕ ರೋಗವಿದ್ದಂತೆ. ಸಮಸ್ಯೆ ಹತ್ತಿರದ ಬೀದಿಯಲ್ಲಿದ್ದರೆ ನಾಳೆ ನಮ್ಮ ಮನೆಯಂಗಳಕ್ಕೂ ಬರಬಹುದು.

ಪುನರಾವರ್ತನೆ
ದೇಶದ ಆಂತರಿಕ ಉತ್ಪನ್ನವು ಕಳೆದ 6 ವರ್ಷಗಳಲ್ಲಿ ಕನಿಷ್ಟ ಅಂದರೆ ಸುಮಾರು ಶೇ.5ಕ್ಕೆ ಇಳಿದಿದೆ. 2008-09ರ ಅಮೆರಿಕದಲ್ಲಾದ ಹಿಂಜರಿಕೆಯು ಜಗತ್ತಿನ 123 ರಾಷ್ಟ್ರಗಳಿಗೂ ಹಬ್ಬಿತ್ತು. ಈ ಹಿಂಜರಿದ ಅನುಭವವನ್ನು ಒಂದು ದಶಕದಲ್ಲಿ ಮೂರನೇ ಬಾರಿ ದೇಶ ಅನುಭವಿಸುತ್ತಿದೆ. ಜೂನ್‌ 2008ರ ನಂತರ ಮಾರ್ಚ್‌ 2011ರಲ್ಲಿ ಕಾಣಿಸಿಕೊಂಡಿತು. ಮತ್ತೆ 2019ರಲ್ಲಿ. 2008-19ರ ಅವಧಿಯಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ದರ ಶೇ.6 ಆಸುಪಾಸಿನಲ್ಲಿತ್ತು. ಈ ಅನಾಹುತದಿಂದ ದೇಶವು ಬಹುಬೇಗನೆ ಹೊರಬಂದಿತ್ತು. ದೇಶದ ಜನಸಂಖ್ಯೆಯೇ (ಬಳಕೆದಾರರು) ಈ ಸಂಕಷ್ಟದಿಂದ ಪಾರು ಮಾಡಿತ್ತು. ದೇಶದಲ್ಲಿ ಉತ್ಪಾದನೆಯಾದ ವಸ್ತುಗಳಿಗೆ ಆಂತರಿಕ ಬೇಡಿಕೆ ಎಷ್ಟಿತ್ತೆಂದರೆ ಆರ್ಥಿಕ ಹಿಂಜರಿತದ ಬಿಸಿ ಅಷ್ಟಾಗಿ ತಟ್ಟಲಿಲ್ಲ. ಅಮೆರಿಕದಲ್ಲಿನ ಬ್ಯಾಂಕುಗಳು ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ನಮ್ಮ ದೇಶದ ಬ್ಯಾಂಕುಗಳು ಸದೃಢವಾಗಿ ನಿಂತಿದ್ದವು.

ಏಕೆ ಹಿಂಜರಿಕೆ?
ಇಳಿಯುತ್ತಿರುವ ರಫ್ತು, ಬೇಡಿಕೆ, ಅಮೆರಿಕ-ಚೀನದ ನಡು ವಿನ ವ್ಯಾಪಾರ ಸಮರ, ಇಳಿದಿರುವ ಖಾಸಗಿ ಅನುಭೋಗ ವೆಚ್ಚ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ಬಿಕ್ಕಟ್ಟು ಪರಿಸ್ಥಿತಿಯನ್ನು ಹಿಂಜರಿಕೆಯತ್ತ ತಳ್ಳಿದೆ ಎಂದರೆ ತಪ್ಪಿಲ್ಲ. ಜೊತೆಗೆ ನೋಟು ಅಮಾನ್ಯತೆ, ಕುಗ್ಗುತ್ತಿರುವ ಬ್ಯಾಂಕು ಸಾಲದ ಪ್ರಮಾಣಗಳೆಲ್ಲವೂ ಹಿಂಜರಿತಕ್ಕೆ ಕಾರಣವಾಗಿವೆ. ನೋಟ್‌ ಬ್ಯಾನ್‌ ನಂತರದಲ್ಲಿ ಕ್ಯಾಶ್‌ಲೆಸ್‌ನತ್ತ ರೂಪಾಂತರಗೊಳ್ಳುವ ಸಂಕ್ರಮಣ ಕಾಲವಿದೆ. ಕ್ಯಾಶ್‌ ಆದರೆ ವ್ಯವಹಾರದಲ್ಲಿ ಸಮಸ್ಯೆಯಿಲ್ಲ. ಕಪ್ಪೋ/ಬಿಳಿಯೋ? ತೊಂದರೆಯಿಲ್ಲ. ಆದರೆ ಡಿಜಿಟಲ್‌ ವ್ಯವಹಾರದಲ್ಲಿ, ವ್ಯವಹಾರ ಕಪ್ಪಾದರೆ ಹಣ ಎಲ್ಲಿಂದ ಬಂತು? ಹೇಗೆ ಬಂತು? ಎಂಬೆಲ್ಲಾ ಲೆಕ್ಕ ಕೊಡುವುದು ಕಷ್ಟದ ಕೆಲಸ. ವ್ಯವಹಾರವನ್ನೇ ಮಾಡದಿದ್ದರೆ ಲೆಕ್ಕ ಕೊಡುವ ಕೆಲಸವಿಲ್ಲ. ಇದರ ಪರಿಣಾಮ ಬೇಡಿಕೆಯಲ್ಲಿ ಕುಸಿತ. ಬೇಡಿಕೆ ಎಂಬುದು ಆರ್ಥಿಕ ಚಟುವಟಿಕೆಗೆ ಟಾನಿಕ್‌ ಇದ್ದ ಹಾಗೆ. ರಿಯಲ್‌ ಎಸ್ಟೇಟ್‌ ಕ್ಷೇತ್ರವು ನಮ್ಮ ದೇಶದ ಪ್ರಗತಿಯ ಗತಿಯನ್ನು ನಿರ್ಧರಿಸುವ ಪ್ರಮುಖ ಅಂಶ. ಈ ಕ್ಷೇತ್ರ ಪ್ರಗತಿಯಲ್ಲಿದ್ದರೆ ದೇಶದ ಪ್ರಗತಿಯು ವೇಗವನ್ನು ಪಡೆದುಕೊಳ್ಳಬಹುದು. ಈ ಕ್ಷೇತ್ರದ ಬೆಳವಣಿಗೆಗೆ ಅನೇಕ ಪೂರಕ ಕ್ಷೇತ್ರಗಳ ಹಣೆಬರಹವನ್ನು ನಿರ್ಧರಿಸುವ ಶಕ್ತಿ ಇದೆ. ನೋಟು ಅಮಾನ್ಯತೆಯ ನಂತರ ಈ ಕ್ಷೇತ್ರದ ಬೆಳವಣಿಗೆಯು ಕುಂಟುತ್ತಾ ಸಾಗಿದೆ. ಸಿಮೆಂಟ್‌, ಸ್ಟೀಲ್‌, ಫ‌ರ್ನಿಚರ್‌, ಇಲೆಕ್ಟ್ರಿಕಲ್‌ ಉಪಕರಣಗಳು, ಪೈಂಟ್‌, ಇಟ್ಟಿಗೆ ಹೀಗೆ ಅನೇಕ ಪೂರಕ ಕ್ಷೇತ್ರಗಳ ಪ್ರಗತಿಯು ರಿಯಲ್‌ ಎಸ್ಟೇಟ್‌ ಕ್ಷೇತ್ರದ ಬೆಳವಣಿಗೆಯ ಮೇಲಿದೆ. ರಿಯಲ್‌ ಎಸ್ಟೇಟ್‌ ಕ್ಷೇತ್ರವು ಬೂಮ್‌ನಲ್ಲಿದ್ದರೆ ಈ ಪೂರಕ ಕ್ಷೇತ್ರಗಳು ಬೂಮ್‌ನತ್ತ ತಲುಪುತ್ತವೆ. ಇಲ್ಲದಿದ್ದರೆ ಡೂಮ್‌.

Advertisement

ಇನ್ನು ಉತ್ಪಾದನಾ ಕ್ಷೇತ್ರದ ಸಾಧನೆಯಲ್ಲೂ ಗಮನಿಸಿದರೆ ಕಳೆದ 5-6 ವರ್ಷಗಳಲ್ಲಿ ಈ ಕ್ಷೇತ್ರದ ಪಾಲು ದೇಶದ ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಶೇ.16ರ ಆಸುಪಾಸಿನಲ್ಲಿದೆ. ಈ ಕ್ಷೇತ್ರವಂತೂ ಕುಂಟುತ್ತಲೇ ಸಾಗಿದೆ. ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಬಹುದಾದ ಈ ಉತ್ಪಾದನಾ ಕ್ಷೇತ್ರದ ಸಾಧನೆ ಅಷ್ಟಕ್ಕಷ್ಟೆ. ಸರಕಾರದ ಎಲ್ಲಾ ಪ್ರಯತ್ನಗಳು ಈ ಕ್ಷೇತ್ರವನ್ನು ಮೇಲೆತ್ತುವುದರಲ್ಲಿ ವಿಫ‌ಲವಾಗಿದೆ.
ಏನಾಗಬೇಕು?

ಹಿಂಜರಿತದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರದ ಪ್ರವೇಶ ನಿರ್ಣಾಯಕ. ಇತ್ತೀಚೆಗೆ ಸರಕಾರವು ಉದ್ಯಮರಂಗಕ್ಕೆ ತೆರಿಗೆಯಲ್ಲಿ ರಿಯಾಯಿತಿ ತೋರಿದೆ. ತೆರಿಗೆ ಕಡಿತದಿಂದಾಗಿ ಉಳಿಯಬಹುದಾದ ಹಣವು ಉದ್ಯಮವನ್ನು ಸಶಕ್ತಗೊಳಿಸಬಹುದೆಂಬ ಭರವಸೆ. ಬ್ಯಾಂಕುಗಳು ನೀಡುವ ಸಾಲದ ಮೇಲಿನ ಬಡ್ಡಿದರವು ಕಡಿಮೆಯಾಗಬೇಕು. ಆರ್ಥಿಕತೆಯಲ್ಲಿ ಸಾಲದ ಹರಿಯುವಿಕೆಯ ಪ್ರಮಾಣ ಹಿಗ್ಗಿಸಬೇಕಾಗಿದೆ. ಬ್ಯಾಂಕುಗಳು ಸಾಲದ ಮೇಲೆ ವಿಧಿಸುವ ಬಡ್ಡಿದರ ಕಡಿಮೆಯಾದರೆ ಬಂಡವಾಳ ವೆಚ್ಚ ಕಡಿಮೆಯಾಗುತ್ತದೆ. ಉದ್ದಿಮೆದಾರರು, ಬಳಕೆದಾರರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಮನಸ್ಸು ಮಾಡಬಹುದು. ಕೈಗೊಂದು ಉದ್ಯೋಗ, ಜೇಬು ತುಂಬ ಹಣ ಅಥವಾ ಬಳಕೆದಾರನ ಜೇಬಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡುವುದು, ವೈಯಕ್ತಿಕ ಆದಾಯದ ಮೇಲೆ ರಿಯಾಯಿತಿಯಂತಹ ಪುನಶ್ಚೇತನ ನೀತಿಯು ಹಿಂಜರಿಕೆಯ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ.

2024ರ ಒಳಗೆ ದೇಶವು ಡಾಲರ್‌ 5 ಟ್ರಿಲಿಯನ್‌ ಆರ್ಥಿಕತೆ ಕನಸು ನನಸಾಗಿಸಲು ಸರಕಾರ ಕಾರ್ಯ ಪ್ರವೃತ್ತವಾಗಿದೆ. ಈ ಗುರಿ ದೊಡ್ಡ ಮಟ್ಟದಲ್ಲಿ ದೇಶದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೂ ಹರಿದು ಬರಲಿದೆ. ಈ ದೊಡ್ಡ ಮಟ್ಟದ ಹೂಡಿಕೆ ಉದ್ಯೋಗ ಆದಾಯವನ್ನು ಸೃಷ್ಟಿಸಬಹುದಾಗಿದೆ. ಸೊರಗುತ್ತಿರುವ ಕ್ಷೇತ್ರಗಳಿಗೆ ವಿಶೇಷ ರಿಯಾಯಿತಿಗಳನ್ನು ನೀಡುವುದರಿಂದ ಆರ್ಥಿಕ ಸುಸ್ಥಿತಿ ಸಾಧ್ಯ. ಈ ಮಧ್ಯೆ ಸರಕಾರ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೂ ವಿಶೇಷ ರಿಯಾಯಿತಿ ನೀಡಿದೆ. ಜೊತೆಗೆ ಅಮೆರಿಕ-ಚೀನ ದೇಶಗಳು ವ್ಯಾಪಾರ ಬಿಕ್ಕಟ್ಟಿಗೆ ಅಂತ್ಯ ನೀಡಲು ನಿರ್ಧರಿಸಿವೆ.

ಜಾಗತೀಕರಣದ ಈ ಯುಗದಲ್ಲಿ ಇಂತಹ ಏರಿಳಿತಗಳು ಸಾಮಾನ್ಯ. ಜಾಗತೀಕರಣವನ್ನು ಒಪ್ಪಿಕೊಂಡಾಗಿದೆ. ಉದಾರೀ ಕರಣ ನೀತಿಯನ್ನು ಅನುಸರಿಸುವಾಗ ಎಲ್ಲಾ ಸಂಕಷ್ಟಗಳಿಗೆ ಅಗತ್ಯವಿರುವ ಪರಿಹಾರೋಪಾಯಗಳನ್ನು ಗಮನದಲ್ಲಿಟ್ಟು ಕೊಂಡೇ ಮುಂದೆ ಹೆಜ್ಜೆ ಇಡಬೇಕಾದ ಅನಿವಾರ್ಯತೆ ನಮಗಿದೆ. ಹಿಂಜರಿಕೆ ಬಂತು, ಎಲ್ಲಾ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಹಿಂಜರಿಕೆಯ ಸಮಸ್ಯೆಯನ್ನು ಈ ಹಿಂದೆಯೂ ದೇಶವು ಮೆಟ್ಟಿ ನಿಂತಿತ್ತು. ಅದು ಇಂದೂ ಸಾಧ್ಯವಾಗಬಹುದು ಎನ್ನುವುದರಲ್ಲಿ ಸಂಶಯ ಇಲ್ಲ.

– ಡಾ| ರಾಘವೇಂದ್ರ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next