Advertisement
ಹೊಸ ದಶಕದ ಹೊಸ್ತಿಲಿನಲ್ಲಿ ಮಂಡಿಸಿದ ಮುಂಗಡ ಪತ್ರವನ್ನು ಆಶೋತ್ತರಗಳ, ಆರ್ಥಿಕ ಬೆಳವಣಿಗೆಯ, ಸಾಮಾಜಿಕ ಆರೈಕೆಯ ಆಯವ್ಯಯವೆಂದು ಕರೆದುಕೊಳ್ಳಲಾಗಿದೆ. “ಹಲವಾರು ಸವಾಲುಗಳ ದುರ್ಗಮ ಭೂಮಿಕೆಯ ನಡುವೆ ಆರ್ಥಿಕತೆಗೆ ವೇಗೋತ್ಕರ್ಷ ಕೊಡಲಾದ ಬಜೆಟ್’ ಎಂದು ಬಣ್ಣಿಸಲಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮನಃಪೂರ್ವಕ ಪ್ರಯತ್ನ ನಡೆದಿದೆ. ಆದರೆ ದೇಶದ ಅಭಿವೃದ್ಧಿಯನ್ನು ಮೊದಲಿನ ವೇಗಕ್ಕೆ ತರುವ ಮತ್ತು ಆರ್ಥಿಕ ಹಿಂಜರಿತದಿಂದ ಹೊರಬರುವ ನಿಟ್ಟಿನಲ್ಲಿ ಬಜೆಟ್ ಪ್ರಯತ್ನ ಸಫಲವಾಗುವುದು ಕಷ್ಟಸಾಧ್ಯ.
ಪುನಶ್ಚೇತನಗೊಳಿಸುವಂಥ ಮಾಂತ್ರಿಕತೆ ಕಂಡು ಬಂದಿಲ್ಲ. ಉದ್ಯಮ ಮತ್ತು ಗ್ರಾಹಕರಿಗೆ ಗಮನಾರ್ಹ ಕೊಡುಗೆಗಳೇನೂ ಇರಲಿಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ಜನರ ಕೈಯಲ್ಲಿ ಹೆಚ್ಚು ಹಣ ಉಳಿಯುವಂತಹ ಮತ್ತು ಅವರ ಖರೀದಿ ಸಾಮಾರ್ಥ್ಯ ಹೆಚ್ಚಿಸುವ ಕ್ರಮಗಳು ಬಜೆಟ್ನಲ್ಲಿ ಪ್ರಕಟವಾಗಬಹುದೆಂಬ ನಿರೀಕ್ಷೆ ಪ್ರತ್ಯಕ್ಷವಾಗಿ ಗೋಚರವಾಗಲಿಲ್ಲ. ಕಳೆದ ಬಾರಿ ಆರ್ಥಿಕ ಪ್ರಗತಿಗೆ ಪೂರಕ ನಿರ್ಣಯ ಕೈಗೊಳ್ಳದ ಕಾರಣ ಆರ್ಥಿಕತೆ ಕುಂಟುತ್ತಾ ಸಾಗಿತ್ತು.
Related Articles
Advertisement
ಸತತ ಮೂರನೇ ವರ್ಷವೂ ವಿತ್ತೀಯ ಕೊರತೆ ಗುರಿ ತಪ್ಪಿದೆ. ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ. 3.3ರಷ್ಟಕ್ಕೆ ನಿಯಂತ್ರಿಸುವ ಗುರಿಯಿತ್ತು.
ಇದನ್ನು ಬಜೆಟ್ನಲ್ಲಿ ಶೇ. 3.8ಕ್ಕೆ ಹೆಚ್ಚಿಸಲಾಗಿದೆ. 2020-21ನೇ ಹಣಕಾಸು ವರ್ಷಕ್ಕೆ ಶೇ. 3.5ರಷ್ಟು ಇರಲಿದೆ. ಇದರ ಅರ್ಥ ಅಗಾಧ ಸಾಲದ ಮೊರೆ ಹೋಗುವುದು ಸೂಕ್ತವಲ್ಲ ಎಂದು ಸರಕಾರ ನಿಶ್ಚಯಿಸಿದೆ. ಆದರೆ ದೇಶ ಎದುರಿಸುತ್ತಿರುವ ಸಂಪನ್ಮೂಲ ಕೊರತೆಯ ಬಗ್ಗೆಯಾಗಲಿ, ಕೃಷಿ ಹಾಗೂ ಕೈಗಾರಿಕಾ ಬಿಕ್ಕಟ್ಟುಗಳ ನಿವಾರಣೆಗಳ ಬಗ್ಗೆಯಾಗಲಿ, ಶೇ. 7.2 ರಷ್ಟು ಪ್ರಮಾಣದ ನಿರುದ್ಯೋಗ ಸಮಸ್ಯೆಯ ಬಗ್ಗೆಯಾಗಲಿ, ದೇಶದ ಆಂತರಿಕ ಹಾಗೂ ಬಾಹ್ಯ ಸಾಲಗಳ ಹೊರೆಯನ್ನು ನಿವಾರಿಸಿಕೊಳ್ಳುತ್ತಿರುವ ಗಂಭೀರ ಪ್ರಯತ್ನ ಎದ್ದು ಕಾಣುತ್ತಿಲ್ಲ. ಸಾರ್ವಜನಿಕ ಬ್ಯಾಂಕಿಂಗ್ ಅಸ್ತವ್ಯಸ್ತವಾಗಿದೆ.
ಅನುತ್ಪಾದಕ ಆಸ್ತಿ ಸೆಪ್ಟಂಬರ್ ಅಂತ್ಯದಲ್ಲಿ ಶೇ.11.2ರಿಂದ ಡಿಸೆಂಬರ್ ಅಂತ್ಯಕ್ಕೆ ಶೇ.9.1ಕ್ಕೆ ಇಳಿದು ಚೇತರಿಕೆ ಕಂಡರೂ ಸಾಲ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಬ್ಯಾಂಕ್ಗೆ ವಂಚಿಸು ವ ವರ ಮೇಲೆ ತೀಕ್ಷ್ಣ ಕ್ರಮ ಅಗತ್ಯ. ಬ್ಯಾಂಕ್ಗಳ ಸಾಲ ಸುಸ್ತಿಯಾಗಲು ಬಿಡಬಾರದು. ಎನ್ಬಿಎಫ್ಸಿಗೆ ಕಾಯಕಲ್ಪ ಅಗತ್ಯ. ಬ್ಯಾಂಕ್ಗಳು ರಿಟೈಲ್, ಎಂಎಸ್ಎಂಇ, ಕೃಷಿ ಸಾಲಗಳಿಗೆ ಆದ್ಯತೆ ನೀಡಬೇಕು.
ಕೇಂದ್ರ ಸರಕಾರದ ಆರ್ಥಿಕ ವ್ಯವಹಾರಗಳ ವಿಭಾಗದ ಪ್ರಕಾರ ಸೆಪ್ಟಂಬರ್ 2019ರ ವೇಳೆಗೆ ದೇಶದ ಬಾಹ್ಯ ಸಾಲದ ಪ್ರಮಾಣ 557.52 ದಶಲಕ್ಷ ಕೋಟಿ ಅಮೆರಿಕನ್ ಡಾಲರ್. ಇದು ರಾಷ್ಟ್ರೀಯ ಉತ್ಪನ್ನದ ಆಸುಪಾಸು ಶೇ. 20ರಷ್ಟಾಗಿದೆ. ಒಟ್ಟು ವೆಚ್ಚ ಮತ್ತು ವರಮಾನ ಸಂಗ್ರಹದಲ್ಲಿ ರೂ. 7.96 ಲಕ್ಷ ಕೋಟಿ ಕೊರತೆಯನ್ನು ಭರಿಸಲು ರೂ. 5.45 ಲಕ್ಷ ಕೋಟಿ ಸಾಲ ಸಂಗ್ರಹಿಸಲು ಸರಕಾರ ಉದ್ದೇಶಿಸಿದೆ. ಕೇಂದ್ರೋದ್ಯಮಗಳ ಶೇರು ವಿಕ್ರಯದ ಮೂಲಕ ರೂ. 2.1 ಲಕ್ಷ ಕೊಟಿ ಗುರಿ ನಿಗದಿಪಡಿಸಲಾಗಿದೆ.
ಕೃಷಿಗೂ ಕೈಗಾರಿಕೆಗೂ ನೇರವಾದ ಸಂಬಂಧವಿದೆ. ಇತರ ಎಲ್ಲಾ ವಲಯಗಳು ಈ ವಲಯಗಳ ಬೆಳವಣಿಗೆಯೇ ಮೇಲೆಯೇ ನಿಂತಿವೆ. ಆಹಾರ ಉದ್ಯೋಗ, ಬೇಡಿಕೆ, ಉತ್ಪಾದನಾ ಸಾಮರ್ಥಯದ ಹೆಚ್ಚಳ ಒಟ್ಟಾರೆ ಒಂದು ದೇಶದ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗುವ ಅಂಶಗಳು. ಆದರೆ ಪ್ರಸಕ್ತ ಬಜೆಟ್ ಇವುಗಳ ಮೂಲಭೂತ ಅಭಿವೃದ್ಧಿಯ ಬಗ್ಗೆ ಸ್ವಷ್ಟವಾಗಿರುವ ಒಂದು ಮುನ್ನೋಟವನ್ನು ಕೊಡುವುದಿಲ್ಲ.
2022ರ ವೇಳೆಗೆ ರೈತರ ತಲಾ ಆದಾಯ ದುಪ್ಪಟ್ಟಾಗಬೇಕಾದರೆ ದೇಶದ ಆರ್ಥಿಕತೆಯಲ್ಲಿ ಎರಡಂಕಿಯ ಬೆಳವಣಿಗೆಯಾಗಬೇಕು. ಕೃಷಿ ಕ್ಷೇತ್ರದಲ್ಲಿ ರೂ. 2.84 ಲಕ್ಷ ಕೋಟಿಯ ಕ್ರಿಯಾ ಯೋಜನೆ ಹಾಕಿಕೊಳ್ಳಲಾಗಿದ್ದು ವಿವರಗಳು ದೊರಕುವ ನಿರೀಕ್ಷೆ ಇದೆ. ಕೃಷಿ ಕ್ಷೇತ್ರಕ್ಕೆ ರೂ. 15 ಲಕ್ಷ ಕೋಟಿ ಸಾಲ, ಕೃಷಿ ಉತ್ಪನ್ನ ವಿತರಣೆ ಮಾಡುವ ದೊಡ್ಡ ಸರಕಾರದ ಗುರಿಯಿಂದ ಹಾಗೂ ಹಾಲು ಮೀನು ಉತ್ಪಾದನೆಗೆ ವಿಶೇಷ ಬೆಂಬಲದಿಂದ ಯೋಜನೆ ಸಾಕಾರಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕು.
ಇದೀಗ ದೇಶದ 2.9 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು 2024ಕ್ಕೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕೊಂಡೊ ಯ್ಯುವ ಮಹತ್ವಾಕಾಂಕ್ಷೆಯ ಬಗ್ಗೆ ಬಹು ರಂಜಿತವಾಗಿ ಹೇಳಿ ಕೊಂಡಂತೆ ಕಾಣುತ್ತದೆ. ಆದರೆ ಅದನ್ನು ಸಮರ್ಥಿಸಬಲ್ಲ ಅಂಶಗಳು ಕಾಣುತ್ತಿಲ್ಲ. ಅದೇ ಸಂದರ್ಭದಲ್ಲಿ ಜನ ಸಾಮಾನ್ಯರ ತಲಾ ಆದಾಯದ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ತನ್ನ ಹಿಂದಿನ ಹಣಕಾಸು ಕೊರತೆಯನ್ನು ಕಡಿಮೆಗೊಳಿಸುವ ವಿಚಾರದ ಬದಲು ಹೆಚ್ಚಿಸುವ ಪ್ರಸ್ತಾವವನ್ನಿಟ್ಟಿದೆ.
ಹಣಕಾಸು ವಲಯದಲ್ಲಿ ಹೊಸ ಬಂಡವಾಳ ಹೂಡುವುದರ ಬದಲಿಗೆ ಹಿಂದೆಗೆದುಕೊಳ್ಳುತ್ತಿದೆ. ಭಾರತೀಯ ಜೀವ ವಿಮಾ ನಿಗಮವು ದೇಶದ ಒಂದು ನಂಬುಗೆಯ ಸಂಸ್ಥೆ. ಕೇಂದ್ರ ಸರಕಾರ ಸದ್ಯ ಶೇ. 100 ರಷ್ಟು ಪಾಲನ್ನು ಹೊಂದಿದೆ. ಎಲ್ಐಸಿಯಲ್ಲಿನ ಸಂಪತ್ತಿನ ಮೌಲ್ಯ 30 ಲಕ್ಷ ಕೋಟಿಗೆ ತಲುಪಿದೆ. ಸರಕಾರವು ಎಲ್ಐಸಿಯನ್ನು ಖಾಸಗೀಕರಣಗೊಳಿಸಲು ಮುನ್ನುಡಿ ಬರೆಯುತ್ತಿದೆ.
ಕಳೆದ ವರ್ಷ ಆರ್ಬಿಐ ಸರಕಾರಕ್ಕೆ ರೂ. 1.76 ಲಕ್ಷ ಕೋಟಿ ಹೆಚ್ಚುವರಿ ನಿಧಿಯನ್ನು ವರ್ಗಾಯಿಸಿತ್ತು. ಎಲ್ಐಸಿ ಸಂಪನ್ಮೂಲ ಕ್ರೋಢೀಕರಣಕ್ಕೆ ಸಾರ್ವಜನಿಕ ಸಂಸ್ಥೆಗಳಲ್ಲಿರುವ ಸರಕಾರಿ ಹೂಡಿಕೆಗಳನ್ನು ಹಿಂಪಡೆಯುವುದು, ಎಲ್ಐಸಿ, ಬಿಪಿಸಿಎಲ್ನ ಶೇರು ಮಾರಾಟದಿಂದ ರೂ. 2.1 ಲಕ್ಷ ಕೇಳಿ ಹೊಂದಿಸಿಕೊಳ್ಳುವ ಪ್ರಸ್ತಾವನೆಯನ್ನು ಆಯವ್ಯಯ ಹೊಂದಿದೆ. ರೈಲ್ವೆಯನ್ನು ಖಾಸಗೀ ಕರಿಸುವ ಗುರಿಯಿದೆ. ಮಧ್ಯಮ ವರ್ಗದ ಉಳಿತಾಯದತ್ತ ಗಮನ ಹರಿಸಲು ಕಾರಣವಾಗುತ್ತಿದ್ದ ಇನ್ಕಮ್ ಟ್ಯಾಕ್ಸ್ ರಿಬೇಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಘೋಷಣೆ ಇನ್ನೊಂದು ಹೊಸ ಆತಂಕ ಸೃಷ್ಟಿ ಮಾಡಿದೆ. ತೆರಿಗೆದಾರರಿಗೆ ಎರಡು ಆಯ್ಕೆ ನೀಡಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ