Advertisement

ಆರ್ಥಿಕತೆಗೆ ಪೆಟ್ಟು ದೂರಗಾಮಿ ನೀತಿಗಳು ಅಗತ್ಯ

12:19 PM Apr 27, 2020 | sudhir |

ಲಾಕ್‌ಡೌನ್‌ನಿಂದಾಗಿ ಭಾರತೀಯ ಅರ್ಥವ್ಯವಸ್ಥೆಗೆ ಇನ್ನೂ ಅಂದಾಜಿಗೆ ಸಿಗದಷ್ಟು ಲುಕ್ಸಾನಾಗಿದೆ ಎಂಬ ಸಂಗತಿಯು ನಿಶ್ಚಿತವಾಗಿಯೂ ಚಿಂತೆ ಹುಟ್ಟಿಸುವಂಥದ್ದೇ. ಐಐಟಿ ಮುಂಬಯಿಯ ಮಾನವಿಕ ಹಾಗೂ ಸಮಾಜವಿಜ್ಞಾನ ವಿಭಾಗವು ದೇಶಾದ್ಯಂತ ಅಧ್ಯಯನ ನಡೆಸಿ, ಭಾರತದ ಅರ್ಥವ್ಯವಸ್ಥೆಗೆ ಎಷ್ಟು ದೊಡ್ಡ ಪೆಟ್ಟು ಬಿದ್ದಿದೆ ಹಾಗೂ ಭವಿಷ್ಯದಲ್ಲಿ ಅರ್ಥವ್ಯವಸ್ಥೆಯ ಚಿತ್ರಣ ಹೇಗಿರಬಹುದು ಎನ್ನುವುದನ್ನು ತಿಳಿಸಿದೆ. ಆದರೆ ಇಂದು ದೇಶವು ಎದುರಿಸುತ್ತಿರುವ ಅಪಾಯವನ್ನು ಪರಿಗಣಿಸಿದಾಗ, ಜನರ ಜೀವವನ್ನು ಉಳಿಸುವುದು, ಅವರನ್ನು ಸುರಕ್ಷಿತವಾಗಿಡುವುದೇ ಆದ್ಯತೆಯಾಗಿಸಿಕೊಂಡಿರುವುದು ಸರಿಯಾದ ನಡೆ ಎಂದು ಅರ್ಥವಾಗುತ್ತದೆ. ಈ ಕಾರಣಕ್ಕಾಗಿಯೇ, ಅಪಾರ ನಷ್ಟ ಎದುರಾದರೂ, ದೇಶದ ಜನರ ಜೀವವನ್ನು ರಕ್ಷಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗಿರುವ ಲಾಕ್‌ಡೌನ್‌ ಅತ್ಯುತ್ತಮ ಕ್ರಮವೇ ಸರಿ.

Advertisement

ಕೋವಿಡ್ ವೈರಾಣುವಿನ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಪಂಚಾದಾದ್ಯಂತ ಲಾಕ್‌ಡೌನ್‌ ಮುಂದುವರಿಸುವುದೇ ಅತ್ಯುತ್ತಮ ಪರಿಹಾರೋಪಾಯ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬುÉ éಎಚ್ಒ) ತಿಳಿಸಿದೆ. ಭಾರತದಲ್ಲಿ ಲಾಕ್‌ಡೌನ್‌ ಅಥವಾ ಪೂರ್ಣ ಬಂದಿತರದೇ ಹೋಗಿದ್ದರೆ, ಇಂದು ಪರಿಸ್ಥಿತಿ ಭಯಾನಕವಾಗಿರುತ್ತಿತ್ತು ಎಂದು ತಜ್ಞರು ಹೇಳುತ್ತಿದ್ದಾರೆ. ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೂ ಸಹ ಲಾಕ್‌ಡೌನ್‌ ಜಾರಿಗೆ ತರುವಲ್ಲಿ ಭಾರತದ ಸಮಯಪ್ರಜ್ಞೆಯನ್ನು ಶ್ಲಾಸಿದೆ. ಅಮೆರಿಕ, ಇಟಲಿ, ಸ್ಪೇನ್‌, ಫ್ರಾನ್ಸ್‌, ಬ್ರಿಟನ್‌ನಲ್ಲಿ ಆರಂಭದ ದಿನದಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್‌ ತರದೇ ಹೋಗಿದ್ದರಿಂದಲೇ ಇಂದು ಅಲ್ಲಿ ಸಾವಿನ ಸಂಖ್ಯೆ ಬೆಚ್ಚಿ ಬೀಳಿಸುವಷ್ಟಿದೆ. ಅದರಲ್ಲೂ ಅಮೆರಿಕದಲ್ಲಂತೂ ಕೆಲವೇ ದಿನಗಳ ಹಿಂದಷ್ಟೇ ಎಲ್ಲ ರಾಜ್ಯಗಳೂ ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಜಾರಿ ಮಾಡಲು ಮುಂದಾದವು.

ಲಾಕ್‌ಡೌನ್‌ನಿಂದಾಗಿ ನಮ್ಮ ದೇಶದ ಆರ್ಥಿಕತೆಗೆ ಭಾರೀ ಪೆಟ್ಟು ಬಿದ್ದಿದೆ, ಮತ್ತಷ್ಟು ಬೀಳಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಈ ಪೆಟ್ಟಿನಿಂದ ಚೇತರಿಸಿಕೊಳ್ಳಲು ನಮಗೆ ವರ್ಷಗಳೇ ಹಿಡಿಯಬಹುದು. ಇಂದು ದೇಶದ ಕೋಟ್ಯಂತರ ಕುಟುಂಬಗಳಿಗೆ ಚಿಕ್ಕ-ಪುಟ್ಟ ವ್ಯಾಪಾರವೇ ಜೀವನೋಪಾಯವಾಗಿದೆ. ದೇಶದಲ್ಲಿ ಸಣ್ಣ ವ್ಯಾಪಾರೋದ್ಯಮದ ಸಂಖ್ಯೆಯೇ ಅತ್ಯಧಿಕವಿದೆ.  ಇಂಥ ಒಂದೊಂದು ಸಣ್ಣ ವ್ಯಾಪಾರ ಘಟಕಗಳಲ್ಲೂ 5-25 ಜನರವ‌ರೆಗೆ ಕೆಲಸಗಾರರಿರುತ್ತಾರೆ. ಆದರೀಗ ಈ ಚಿಕ್ಕ ಉದ್ಯಮಗಳು-ಉದ್ಯೋಗಗಳು ಸಂಪೂರ್ಣವಾಗಿ ನಿಂತಿವೆ. ಲಾಕ್‌ಡೌನ್‌ ಅಂತೂ ಬೇಡಿಕೆ ಹಾಗೂ ಪೂರೈಕೆಯ ಜಾಲವನ್ನೇ ಸದ್ಯಕ್ಕೆ ತುಂಡರಿಸಿಬಿಟ್ಟಿದೆ. ಇದಷ್ಟೇ ಅಲ್ಲದೇ, ದೇಶದಲ್ಲಿ ವಲಸಿಗ ಕಾರ್ಮಿಕರ ಸಂಖ್ಯೆಯೂ ಅಪಾರವಿದ್ದು, ಇವರೆಲ್ಲರು ಭವಿಷ್ಯದ ಬಗ್ಗೆ ತೀವ್ರ ಆತಂಕಿತರಾಗಿದ್ದಾರೆ. ಇನ್ನು ಕೈಗಾರಿಕೆ, ಪ್ರವಾಸೋದ್ಯಮ, ಮನರಂಜನೆ, ಹೋಟೆಲ್‌-ರೆಸ್ಟಾರೆಂಟ್‌ ವಲಯವೂ ತತ್ತರಿಸಿ ಹೋಗಿದೆ. ಈ ವಲಯಗಳೂ ಕೂಡ ಅಪಾರ ಸಂಖ್ಯೆಯಲ್ಲಿ ಭಾರತೀಯರ ಜೀವನೋಪಾಯದ ಮಾರ್ಗಗಳಾಗಿವೆ. ಸದ್ಯಕ್ಕೆ, ಕೊರೊನಾ ವೈರಸ್‌ ಹಾವಳಿ ದೂರವಾಗುವವರೆಗೂ ಭಾರತದ ಆರ್ಥಿಕತೆ ಮತ್ತೆ ಪೂರ್ಣ ಹಳಿ ಏರಲು ಸಾಧ್ಯವಿಲ್ಲವಾದರೂ, ಸಾಧ್ಯವಾದಷ್ಟೂ ಬಡವರ ಕಷ್ಟಕ್ಕೆ ಸ್ಪಂದಿಸುವಂಥ ಕೆಲಸಗಳಂತೂ ಆಗಲೇಬೇಕಿದೆ. ಪರಿಹಾರ ಪ್ಯಾಕೇಜ್ ಗಳು ಮತ್ತು ದೂರಗಾಮಿ ಆರ್ಥಿಕ ನೀತಿಗಳನ್ನು ಮತ್ತಷ್ಟು ರೂಪಿಸಬೇಕಿದೆ. ಒಟ್ಟಲ್ಲಿ, ದೇಶವು ಆದಷ್ಟು ಬೇಗ ಈ ಮಹಾಮಾರಿಯಿಂದ ಮುಕ್ತವಾಗಿ, ಚೇತರಿಸಿಕೊಳ್ಳುವಂತಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next