Advertisement

ಇ-ಹೊಸೂರಲ್ಲಿ ಮೂಲ ಸೌಲಭ್ಯ ಮರೀಚಿಕೆ; ಸೌಲಭ್ಯಗಳಿಲ್ಲದೆ ಗ್ರಾಮಸ್ಥರು ಪರದಾಟ

01:10 PM Jun 14, 2022 | Team Udayavani |

ದೇವನಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮಗಳ ಅಭಿವೃದ್ಧಿ ಮತ್ತು ಮೂಲಭೂತ ಸೌಲಭ್ಯಗಳಿಗೆ ಕೋಟ್ಯಂತರ ರೂ. ವ್ಯಯ ಮಾಡುತ್ತಿದ್ದರೂ, ತಾಲೂಕಿನ ಇ-ಹೊಸೂರು ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಮರೀಚಿಕೆಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಮಾತಿಗೆ ಮುಂಚೆ ಜನಪ್ರತಿನಿಧಿಗಳು, ಅಧಿಕಾರಿಗಳು ಆ ಗ್ರಾಮಕ್ಕೆ ಇಷ್ಟು ಲಕ್ಷ, ಇಷ್ಟು ಕೋಟಿ ಎಂದು ಹೇಳುತ್ತಾರೆ. ಆದರೆ, ಗ್ರಾಮಗಳು ಎಲ್ಲಿ ಅಭಿವೃದ್ಧಿಯಾಗುತ್ತಿವೆ.

Advertisement

ಕೇವಲ ಕಾಗದ ಪತ್ರಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಇಷ್ಟು ಅನುದಾನ ನೀಡಿದ್ದೇವೆ ಎಂದು ಹೇಳಿದರೆ ಸಾಲ  ದು, ಗ್ರಾಮಗಳಲ್ಲಿ ಮೊದಲು ಮೂಲಭೂತ ಸೌಕರ್ಯ ಕಲ್ಪಿಸಿ, ಜನಪ್ರತಿನಿಧಿಗಳು, ಅಧಿಕಾರಿಗಳು ಮಾತನಾಡ  ಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಗ್ರಾಮದ ಅಭಿವೃದ್ಧಿ ಕನಸಾಗಿಯೇ ಉಳಿದಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಹೆಸರೇ ಇಲ್ಲ. ಬಸ್‌ ಸೌಕರ್ಯವಿಲ್ಲದೆ ಗ್ರಾಮಸ್ಥರ ಪರದಾಟ ತಪ್ಪಿಲ್ಲ. ಮಹಾತ್ಮಾ ಗಾಂಧೀಜಿ ಅವರ ಗ್ರಾಮಗಳು ಅಭಿವೃದ್ದಿ ಹೊಂದಬೇಕು. ಗ್ರಾಮಗಳ ಅಭಿವೃದ್ಧಿಯೇ ಮೂಲಮಂತ್ರ ವಾಗಬೇಕು ಎನ್ನುವ ಸಂದೇಶವನ್ನು ಅನುಸರಿಸಿ ದ್ದರೆ, ಎಲ್ಲಾ ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗುತ್ತಿರಲಿಲ್ಲ. ನಮ್ಮ ಸಮಸ್ಯೆ ಕೇಳು ವ ವರಿಲ್ಲ. ಅಷ್ಟು ಈ ಗ್ರಾಮ ವಂಚಿತವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಸಮಸ್ಯೆಗೆ ಪರಿಹಾರ ಯಾವಾಗ: ಇ-ಹೊಸೂರು ಗ್ರಾಮದಲ್ಲಿ ಎಲ್ಲಾ ಸೌಕರ್ಯಗಳು ಇದ್ದರೂ, ಜನ ವಸತಿಗೆ ಮುಖ್ಯವಾಗಿ ಬೇಕಾಗಿರುವ ಕುಡಿಯುವ ನೀರು, ಸ್ಮಶಾನ, ಬಸ್‌ ಸೌಲಭ್ಯ ಸೇರಿದಂತೆ ಹಲವು ಸಮಸ್ಯೆಗಳು ಬಗೆಹರಿಯುವುದಾದರೂ ಯಾವಾಗ ಎಂದು ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಸ್ಥರ ಆಕ್ರೋಶ: ಹೇಳಿ ಕೇಳಿ ಜಿಲ್ಲಾಡಳಿತ ಭವನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಾರ್ಗದಲ್ಲಿ ಬರುವ ಈ ಗ್ರಾಮಕ್ಕೆ ಮೂಲ ಸೌಲಭ್ಯ, ಶುದ್ಧ ಕುಡಿಯುವ ನೀರಿನ ಘಟಕ, ಸ್ಮಶಾನ ಜಾಗ ಸರ್ವೆ ಮತ್ತು ಬೀದಿದೀಪವಾಗಲೀ ಯಾವುದೂ ಕಲ್ಪಿಸಿಲ್ಲ. ರಾತ್ರಿ ವೇಳೆಯಂತೂ ಇಡೀ ಗ್ರಾಮ ಕತ್ತಲಿನಿಂದ ಆವೃತ್ತಗೊಂಡಿರುತ್ತದೆ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಸ್ಮಶಾನಕ್ಕೆ ಬೌಂಡ್ರಿ ಫಿಕ್ಸ್‌ ಮಾಡ್ತಿಲ್ಲ: ಸರ್ಕಾರದಿಂದ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಸರ್ವೆ ನಂ.42ರಲ್ಲಿಯ 39 ಗುಂಟೆ ಜಾಗವನ್ನು ಕಾಯ್ದಿರಿಸಲಾಗಿದೆ. ಆದರೆ, ಪ್ರಭಾವಿಗಳ ಒತ್ತಡದಿಂದ ಬೌಂಡ್ರಿ ಫಿಕ್ಸ್‌ ಮಾಡದೆ ತಾಲೂಕು ತಹಶೀಲ್ದಾರ್‌ ಆಗಲಿ, ಜಾಲಿಗೆ ಗ್ರಾಪಂ ಪಿಡಿಒ ಅಥವಾ ಸ್ಥಳೀಯ ಜನಪ್ರತಿನಿಧಿಗಳಾಗಲೀ ಸಂಪೂ ರ್ಣ ವಾಗಿ ವಿಫ‌ಲರಾಗಿದ್ದಾರೆ. ಸುಮಾರು 100 ವರ್ಷಕ್ಕೂ ಮೇಲ್ಪಟ್ಟು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಾಂಗದವರು ವಾಸವಾಗಿದ್ದು, ಇದುವರೆಗೂ
ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ, ಅಕ್ಕಪಕ್ಕದ ಗ್ರಾಮಗಳ ಮೇಲೆ ಅವಲಂಬಿತರಾಗಿ ಬದುಕು ನಡೆಸುವಂತ ದುಸ್ಥಿತಿ ಎದುರಾಗಿದೆ.

ಹೌದು, ಇಂಥ ಪರಿಸ್ಥಿತಿ ಇರುವುದು ಬೇರೆಲ್ಲೂ ಅಲ್ಲ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ತಾಲೂಕಿನ ಐವಿಸಿ ರಸ್ತೆ ಸಂಪರ್ಕದ ಇ-ಹೊಸೂರು ಗ್ರಾಮಸ್ಥರ ಸಮಸ್ಯೆಯಾಗಿದೆ. ಸ್ವಾತಂತ್ರ್ಯ ಬಂದು 74 ವರ್ಷ ಕಳೆದರೂ ಗ್ರಾಮಕ್ಕೆ ಶುದ್ಧ ಕುಡಿ ಯುವ ನೀರಿನ ಭಾಗ್ಯವಿಲ್ಲದಿರುವುದು ದೌರ್ಭಾಗ್ಯವಾಗಿದೆ.

ಕುಡಿಯುವ ನೀರಿಗೂ ಪರದಾಟ: ಬೋರ್‌ವೆಲ್‌ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣದಿಂದ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಅಕ್ಕಪಕ್ಕದ ದೂರದ ಗ್ರಾಮಗಳಿಗೆ ಹೋಗಿ, ಅಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ಕುಡಿಯುವ ನೀರು ತಂದು ಉಪಯೋಗಿಸುತ್ತಿದ್ದು, ಬೋರ್‌ವೆಲ್‌ ನೀರನ್ನು ಇತರೆ ಬಳಕೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಗ್ರಾಮದಲ್ಲಿ ಕುಡಿಯುವ ನೀರಿಗೂ ಪರದಾಟ ತಪ್ಪಿಲ್ಲ. ಬಸ್‌ ಸೌಕರ್ಯವಿಲ್ಲದೆ ಗ್ರಾಮದ ಸುಮಾರು ಕಿ.ಮೀ. ನಡೆದುಕೊಂಡೇ ಹೋಗುವ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇ-ಹೊಸೂರು ಗ್ರಾಮಕ್ಕೆ ತಾವು ಶಾಸಕರಾದ ಮೇಲೆ 50 ಲಕ್ಷ ರೂ.ಗಳ ಕಾಂಕ್ರಿಟ್‌ ರಸ್ತೆ ಕಾಮಗಾರಿ ಮಾಡಿಸಲಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ಅಷ್ಟು ಅಭಿವೃದ್ಧಿ ಕೆಲಸಗಳು ಆ ಹಳ್ಳಿಯಲ್ಲಿ ಆಗಿರಲಿಲ್ಲ. ಸ್ಮಶಾನ ಜಾಗ ಮಂಜೂರಾತಿಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಾಲೂಕಿನ 298 ಹಳ್ಳಿಗಳ ಅಭಿವೃದ್ಧಿಗೆ ಸರ್ಕಾರದಿಂದ ಬರುವ ಅನುದಾನಗಳನ್ನು ಹಂಚಿಕೆ ಮಾಡಿ ನೀಡಲಾಗುತ್ತದೆ.
● ಎಲ್‌.ಎನ್‌.ನಾರಾಯಣಸ್ವಾಮಿ, ಶಾಸಕ

ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದರೂ, ಇ-ಹೊಸೂರು ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಕೊರತೆ ಎದ್ದು ಕಾಣುತ್ತಿದೆ. ಇನ್ನಾದರೂ ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು.
● ನಾರಾಯಣಸ್ವಾಮಿ, ವಕೀಲ

ವಿಮಾನ ನಿಲ್ದಾಣ ಹೊಂದಿರುವ ತಾಲೂಕಿನಲ್ಲಿ ಇಂದಿಗೂ ಗ್ರಾಮಗಳು ಅಭಿವೃದ್ಧಿ ಕಾಣದೆ ಮೂಲೆಗುಂಪಾಗಿವೆ. ಶತಮಾನ ಕಳೆದರೂ ಈ ಗ್ರಾಮದಲ್ಲಿನ ಜನರು ಸೌಕರ್ಯದಿಂದ ವಂಚಿತರಾಗಿದ್ದಾರೆ. ಮುಖ್ಯವಾಗಿ ಗ್ರಾಮದಲ್ಲಿ ಕುಡಿಯುವ ನೀರು, ಬಸ್‌ ಸೌಲಭ್ಯ, ಸ್ಮಶಾನ, ಹೈಮಾಸ್ಕ್ ಲೈಟ್‌ ಅಳವಡಿಕೆ ಮಾಡುವ ಅವಶ್ಯವಿದೆ. ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು.
● ಮುರಳಿ, ಇ-ಹೊಸೂರು

ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ, ಕುಂದಾಣ ನಾಡ ಕಚೇರಿಯಿಂದ ಬಂದಿರುವ ಶಿಫಾರಸ್ಸಿನ ಪತ್ರವನ್ನು ಪರಿಶೀಲಿಸಿ, ಕೂಡಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು.
● ತೇಜಸ್‌ ಕುಮಾರ್‌, ಉಪವಿಭಾಗಾಧಿಕಾರಿ

●ಎಸ್‌.ಮಹೇಶ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next