Advertisement

ದುಶ್ಮನಿ ಬಗಲ್‌ ಮೇ ಹೈ

06:00 PM Apr 11, 2018 | |

ಅಲ್ಲಿಗೆ ಹೋಗಿ ಬಂದಾಗಿನಿಂದ ಗೀತಾಳ ಮನಸ್ಸು ಪ್ರಕ್ಷುಬ್ಧವಾಗಿದೆ. ಅದರಿಂದ ಹೊರಬರಲು ಇನ್ನೆರಡು ದಿನಗಳು ಬೇಕು. ಗೀತಾ ಬ್ಯಾಂಕ್‌ನಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾಳೆ. ನಾದಿನಿಯ ಮನೆಯೂ ಅದೇ ಊರಿನಲ್ಲಿದೆ. ಪ್ರತಿ ಬಾರಿ,ಅವರ ಮನೆಗೆ ಹೋದಾಗಲೆಲ್ಲಾ ಅಲ್ಲಿಯವರ ಚುಚ್ಚು ಮಾತುಗಳನ್ನು ಕೇಳಿ ಸಾಕಾಗಿದೆ. ನಾದಿನಿ ಇವಳ ಗಂಡನಿಗೆ ಚಾಡಿ ಬೇರೆ ಹೇಳುತ್ತಾಳೆ.

Advertisement

ಹತ್ತಿರದ ಸಂಬಂಧಗಳನ್ನು ಉಳಿಸಿಕೊಳ್ಳಬೇಕು ಎಂಬ ಕಾರಣದಿಂದ ಗೀತಾ ಆಗಾಗ ಅಲ್ಲಿಗೆ ಹೋಗಿ ಬರುತ್ತಾಳೆ. ಆಗ ಮತ್ತೆ ಮೊದಲಿನ ವರ್ತನೆಯ ಪುನರಾವರ್ತನೆ ಆಗುತ್ತದೆ. ಹೌದು. ಕೆಲವರು ಹೀಗೆಯೇ. ನಮ್ಮ ಕುಟುಂಬದ ಸದಸ್ಯರಾಗಿರುತ್ತಾರೆ, ಸ್ನೇಹಿತರಾಗಿರುತ್ತಾರೆ, ಆಪ್ತರಾಗಿರುತ್ತಾರೆ. ಆಪ್ತರಾಗಿದ್ದೂ ಮನಸ್ಸು ನೋಯಿಸುತ್ತಾರೆ. ಚುಚ್ಚು ಮಾತನ್ನಾಡುತ್ತಾರೆ.

ಆಗ, ಇವರು ನಿಜವಾಗಿಯೂ ನಮಗೆ ಆತ್ಮೀಯರೇ? ಎಂಬ ಪ್ರಶ್ನೆ ಕಾಡುತ್ತದೆ. ಈ ಸಂಬಂಧವನ್ನು ಹೇಗೆ ಸಂಭಾಳಿಸಬೇಕು ಎಂದೇ ತಿಳಿಯುವುದಿಲ್ಲ. ಈ ನೋವಿನಿಂದ ನಾವೇ ಮಾನಸಿಕ ಖನ್ನತೆಗೆ ಒಳಗಾಗುತ್ತೇವೋ ಎಂಬ ಭಯ ಉಂಟಾಗುತ್ತದೆ. ಇದ್ದು ಅನುಭವಿಸುವುದಕ್ಕೂ ಆಗದ, ಹೊರ ಬರುವುದಕ್ಕೂ ಧೈರ್ಯ ಸಾಲದ, ಅಸಹಾಯಕ ಪರಿಸ್ಥಿತಿ. ಈ ನೋವು-ಬೇಸರ, ಮಹಿಳೆಯರಲ್ಲೇ ಹೆಚ್ಚು.

ಪುರುಷರ ಮತ್ತು ಮಹಿಳೆಯರ ಸ್ವಭಾವ ವಿಶ್ಲೇಷಿಸಿ ನೋಡಿದರೆ, ಮಹಿಳೆಯರೇ ಹೆಚ್ಚು ಭಾವನಾತ್ಮಕವಾಗಿರುವುದು ತಿಳಿದುಬರುತ್ತದೆ. “ನನಗೇನು ಅನ್ನಿಸುತ್ತದೆ’ ಎನ್ನುವುದಕ್ಕಿಂತ “ಬೇರೆಯವರು ಏನೆಂದುಕೊಳ್ಳುತ್ತಾರೆ’ ಎಂಬ ಬಗ್ಗೆಯೇ ಅವರಿಗೆ ಚಿಂತೆ. ಜೈವಿಕವಾಗಿ ನೋಡಿದಾಗ, ಮಹಿಳೆಯ ಸಂತಾನೋತ್ಪತ್ತಿ ಚಕ್ರವೂ ಸಮಸ್ಯೆ ಮಾಡಬಹುದು.

ಹದಿವಯಸ್ಸಿನ ಹುಡುಗಿಗೆ ಋತುಚಕ್ರ ಪ್ರಾರಂಭವಾಗುವುದು, ನಂತರದ ಪ್ರತಿ ತಿಂಗಳ ಋತುಸ್ರಾವ, ಮದುವೆಯ ನಂತರ ಬಸಿರು, ಬಾಣಂತನ, ನಲವತ್ತರ ನಂತರದ ಋತುಬಂಧ, ಹೀಗೆ ಎಲ್ಲ ಸಮಯದಲ್ಲೂ, ಮಹಿಳೆಗೆ ಹಾರ್ಮೋನುಗಳ ಏರುಪೇರಿನಿಂದ ಕೂಡ ಮಾನಸಿಕ ಒತ್ತಡ ಆಗುತ್ತದೆ. ಹಾಗಾಗಿ ಮಹಿಳೆಯರೇ ಹೆಚ್ಚಾಗಿ ಇಂಥ ಟೀಕೆ, ಚುಚ್ಚುಮಾತುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ.

Advertisement

ಯಾರು ಇಂಥ ವಿಷದ ಜನ?
* ಆರೋಗ್ಯಕರ ಟೀಕೆಗಳು ಪರ್ವಾಗಿಲ್ಲ. ಬೇಕೆಂದೇ ನೋವುಂಟು ಮಾಡುವಂತೆ ಟೀಕೆ ಮಾಡುತ್ತಾರೆ. ನಿಮ್ಮನ್ನು ವಿಮಶಾìತ್ಮಕವಾಗಿಯೇ ನೋಡುತ್ತಾರೆ. ಪ್ರತಿ ಬಾರಿಯೂ ಭೇಟಿಯಾದಾಗ, ಏನಾದರೂ ನಕಾರಾತ್ಮಕ ಟೀಕೆ ಇದ್ದದ್ದೇ.

* ನಿಮಗೆ ಏನೋ ತೀವ್ರಥರದ ಮಾನಸಿಕ ನೋವಾದಾಗ, ಆ ವ್ಯಕ್ತಿಯೊಂದಿಗೆ ಹಂಚಿಕೊಂಡಿದ್ದೇರೆಂದುಕೊಳ್ಳಿ. ಕೆಲದಿನಗಳ ನಂತರ ನೋಡಿದರೆ, ಆ ವಿಷಯ ಕುಟುಂಬದ ಎಲ್ಲ ಸದಸ್ಯರಿಗೂ ತಿಳಿದಿದೆ. ನೀವು ಅವರಲ್ಲಿಟ್ಟಿದ್ದ ನಂಬಿಕೆಗೆ ದ್ರೋಹ ಬಗೆದಿದ್ದಾರೆ.

* ತಮಗೆ ಕೆಲಸವಿದ್ದಾಗ ಮಾತ್ರ ನಿಮ್ಮೊಂದಿಗೆ ಮಾತನಾಡುತ್ತಾರೆ. ಬೇರೆಯ ಸಮಯದಲ್ಲಿ ನಿಮ್ಮನ್ನು ಮರೆತೇ ಹೋಗುತ್ತಾರೆ.

* ನಿಮಗೆ ಬೇಸರವಾದಾಗ, ಯಾರದೋ ಬಗ್ಗೆ, ನಿಮ್ಮ ಅಭಿಪ್ರಾಯ ತೋಡಿಕೊಂಡಿದ್ದೀರೆಂದುಕೊಳ್ಳಿ. ಕೆಲವೇ ದಿನಗಳಲ್ಲಿ ನೀವು ಯಾರ ಬಗ್ಗೆ ಮಾತಾಡಿರುತ್ತೀರೋ ಅವರಿಗೆ ವಿಷಯ ತಿಳಿದುಬಿಡುತ್ತದೆ. ಅಂದರೆ ಹಚ್ಚಿಕೊಡುವ ಈ ಮಂದಿ ಕೂಡ ವಿಷಕಾರಿ. 

ಈ ರೀತಿಯ ಜನರು ಸುತ್ತಮುತ್ತ ಇದ್ದರೆ ಆಗುವುದಾದರೂ ಏನು? ನಿಮ್ಮ ಮನಸ್ಸು ಬೇಸರಗೊಳ್ಳುತ್ತದೆ. ಈ ಬೇಸರ ಕೆಲವು ಕ್ಷಣಗಳಿಂದ, ಕೆಲವು ದಿನಗಳವರೆಗೂ ಇರಬಹುದು. ವ್ಯಕ್ತಿಯ ವ್ಯಕ್ತಿತ್ವಕ್ಕೆ ಅನುಗುಣವಾಗಿ ಪ್ರತಿಕ್ರಿಯೆ ಉಂಟಾಗುತ್ತದೆ.

ಉದಾಹರಣೆಗೆ: ಒಂದು ಮಹಿಳೆ ಅತ್ಯಂತ ಸೂಕ್ಷ್ಮ ಸ್ವಭಾವದವಳಾದರೆ, ಅವಳು ಮನಸ್ಸಿಗೆ ತುಂಬಾ ಹಚ್ಚಿಕೊಂಡು, ಎರಡು ಮೂರು ದಿನ ದುಃಖಕ್ಕೆ ಒಳಗಾಗಬಹುದು. ಕೆಲಸದಲ್ಲೂ ಅವಳ ಕಾರ್ಯಕ್ಷಮತೆ ಕಡಿಮೆಯಾಗಬಹುದು. ಇತರರೊಂದಿಗೆ ಸಿಟ್ಟು ಮಾಡಬಹುದು. ಅದೇ ದಿಟ್ಟ ಸ್ವಭಾವದವಳಾದರೆ “ಅವಳು ಹೀಗೆ ಮಾಡಿದರೆ ನನಗೇನು? ಕತ್ತೆ ಬಾಲ ಕುದುರೆ ಜುಟ್ಟು’ ಎಂದು ಸುಮ್ಮನಾಗಬಹುದು. 

ನಿಮ್ಮ ಪಕ್ಕದಲ್ಲೂ ಇಂಥವರು ಇದ್ದರೆ…: ಮೊದಲು ಆ ವ್ಯಕ್ತಿ ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎನ್ನುವುದನ್ನು ನಿರ್ಧರಿಸಿ. ಉದಾಹರಣೆಗೆ: ಆ ವ್ಯಕ್ತಿ, ಒಂದು ತಿಂಗಳಿಗೊಮ್ಮೆ ಫೋನ್‌ನಲ್ಲಿ ಮಾತಾಡುವ ಸ್ನೇಹಿತೆಯಾಗಿರಬಹುದು ಅಥವಾ ನಿಮ್ಮ ಜೊತೆಯಲ್ಲಿಯೇ ಒಟ್ಟು ಕುಟುಂಬದಲ್ಲಿರುವ ಅತ್ತಿಗೆ ಆಗಿರಬಹುದು.

ಈ ವ್ಯಕ್ತಿ ನಿಮ್ಮ ಜೀವನದಲ್ಲಿ ಅಂಥ ಮುಖ್ಯವಾಗಿಲ್ಲದಿದ್ದರೆ, ನೀವು ಆ ಸಂಬಂಧ ಕಡಿದುಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಅದೇ ನಿಮ್ಮ ಹತ್ತಿರದ ಸಂಬಂಧಿಕರು ಅಥವಾ ಮನೆಯಲ್ಲೇ ಇರುವ ಒಟ್ಟು ಕುಟುಂಬದ ಸದಸ್ಯರಾಗಿದ್ದರೆ, ಮೊದಲ ಪ್ರಯತ್ನ, ಈ ಟೀಕೆಗಳನ್ನು ಅಲಕ್ಷಿಸುವುದು. ನಂತರ ನೇರವಾಗಿ ಆ ವ್ಯಕ್ತಿಗೆ “ನೀವು ಈ ರೀತಿ ಟೀಕಿಸುವುದು/ನನ್ನ ಬಗ್ಗೆ ಇತರರಲ್ಲಿ ಹಚ್ಚಿಕೊಡುವುದು ಸರಿಯಲ್ಲ’ ಎಂದು ಹೇಳಿಬಿಡಿ.

ಇನ್ನು ಈ ಎಲ್ಲ ಸಮಸ್ಯೆಗಳಿಗೂ ಪರಮ ಔಷಧ, ಸದಾ ಚಟುವಟಿಕೆಯಿಂದ ಇರುವುದು. An idle mind is devil’s workshop ಎಂಬಂತೆ ನಮ್ಮ ಮನಸ್ಸು ಖಾಲಿಯಿದ್ದರೆ, ಈ ನಕಾರಾತ್ಮಕ ಅನುಭವಗಳು ಗಿರಕಿ ಹೊಡೆಯುತ್ತಿರುತ್ತವೆ. ಬದಲಾಗಿ, ಪ್ರತಿ ಕ್ಷಣವೂ ಯಾವುದಾದರೊಂದು ಕೆಲಸದಲ್ಲಿ ನಿರತರಾಗಿದ್ದರೆ, ಈ ವಿಷಕಾರಿ ಜನರ ಟೀಕೆಗಳು/ ಚುಚ್ಚು ಮಾತುಗಳು ನಮ್ಮನ್ನು ಕಾಡುವುದಿಲ್ಲ.

* ಡಾ. ಕೆ.ಎಸ್‌. ಶುಭ್ರತಾ, ಮನೋವೈದ್ಯೆ

Advertisement

Udayavani is now on Telegram. Click here to join our channel and stay updated with the latest news.

Next