Advertisement

ನಾಳೆ ದುನಿಯಾ ವಿಜಯ್‌ ಜಾಮೀನು ನಿರ್ಧಾರ

06:00 AM Sep 25, 2018 | Team Udayavani |

ಬೆಂಗಳೂರು:ಜಿಮ್‌ ತರಬೇತುದಾರ ಮಾರುತಿಗೌಡ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್‌ ಸೇರಿ ನಾಲ್ವರು ಆರೋಪಿಗಳ ಜಾಮೀನು ಅರ್ಜಿಗಳ ಆದೇಶವನ್ನು ನ್ಯಾಯಾಲಯ ಸೆ.26ಕ್ಕೆ ಕಾಯ್ದಿರಿಸಿದೆ.

Advertisement

ವಿಜಯ್‌ ಸೇರಿ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು 8ನೇ ಎಸಿಎಂಎಂ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಿತು.ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ವಾದಿಸಿ, ನಟ ವಿಜಯ್‌ ಸೇರಿ ಇತರರ ಮೇಲಿನ ಆರೋಪಗಳು ಜಾಮೀನಿಗೆ ಅರ್ಹವಾಗಿದ್ದವು.ಆದರೆ, ಹಲ್ಲೆಗೊಳಗಾದ ವ್ಯಕ್ತಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿಲ್ಲ. ಹೀಗಿದ್ದರೂ ಜಾಮೀನು ಸಿಗಬಾರದು ಎಂಬ ಉದ್ದೇಶದಿಂದ ಐಪಿಸಿ 326 ನಂತರ ಸೇರಿಸಲಾಗಿದೆ. ತನಿಖೆಗೆ ಸಹಕರಿಸಲಿದ್ದು, ಜಾಮೀನು  ಮುಂಜೂರು ಮಾಡುವಂತೆ ನ್ಯಾಯಾಲಯಕ್ಕೆ ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಆರೋಪಿಗಳು ಮಾರಕಾಸ್ತ್ರ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂಬ ಗಾಯಾಳುವಿನ ಹೇಳಿಕೆ ಆಧರಿಸಿ 326 ಸೇರಿಸಲಾಗಿದೆ. ಗಾಯಾಳು ತುಟಿಭಾಗ ಒಡೆದಿದೆ, ಮಾತನಾಡಲು ಆಗುತ್ತಿಲ್ಲ . ಜತೆಗೆ ಅಲ್ಲದೆ ಆರೋಪಿ ಚಿತ್ರ ನಟನಾಗಿರುವುದರಿಂದ ಜಾಮೀನು ನೀಡಿದರೆ, ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯಿದೆ.ಹೀಗಾಗಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳ ಜಾಮೀನು ಅರ್ಜಿಗಳ ಆದೇಶವನ್ನು ಸೆ.26ಕ್ಕೆ ಕಾಯ್ದಿರಿಸಿ ವಿಚಾರಣೆ ಮುಂದೂಡಿದರು.

ಎಸ್‌ಪಿಪಿ ನೇಮಕಕ್ಕೆ ಮನವಿ!
ಮತ್ತೂಂದೆಡೆ ಪ್ರಕರಣ ಸಂಬಂಧ ಪ್ರಾಸಿಕ್ಯೂಶನ್‌ ಪರವಾಗಿ ವಾದಿಸಲು ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ನೇಮಕ ಮಾಡುವಂತೆ ಮಾರುತಿಗೌಡ  ಪೋಷಕರು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರನ್ನು ಮನವಿ ಮಾಡಿದ್ದಾರೆ.
ಸೋಮವಾರ ಮಾರುತಿಗೌಡನ ಪೋಷಕರು,ಆತನ ಚಿಕ್ಕಪ್ಪ  ಪಾನಿಪೂರಿ ಕಿಟ್ಟಿ, ಸದಾಶಿವನಗರದ ನಿವಾಸದಲ್ಲಿ ಗೃಹ  ಸಚಿವ ಪರಮೇಶ್ವರ ಅವರನ್ನು ಭೇಟಿಯಾಗಿ, ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪಾನಿಪೂರಿ ಕಿಟ್ಟಿ, ಪ್ರಕರಣದಲ್ಲಿ ಎಸ್‌ಪಿಪಿ ನೇಮಕ ಕೋರಿ ಗೃಹ ಸಚಿವರಿಗೆ ಮನವಿ ಮಾಡಿದ್ದೇವೆ. ವಕೀಲ ಶ್ಯಾಮ್‌ಸುಂದರ್‌ ಅವರನ್ನು ಎಸ್‌ಪಿಪಿಯಾಗಿ ನೇಮಿಸಿದರೆ ನ್ಯಾಯಸಿಗುವ ಭರವಸೆಯಿದೆ ಎಂದು ಹೇಳಿದರು.

Advertisement

ಕೆಟ್ಟ ಘಳಿಗೆ ಜೈಲಿಗೆ ಬಂದುಬಿಟ್ಟೆ.. ವಿಜಯ್‌ ಪಶ್ಚಾತಾಪ!
“”ಜೈಲುಶಿಕ್ಷೆ ಮುಗಿದಿದ್ದರೂ ಹಣ ಕಟ್ಟಲು ಆಗದೇ ಇದ್ದವರನ್ನು  ಸಹಾಯ ಮಾಡಿ ಮೈಸೂರಿನ ಜೈಲಿನಿಂದ ಕೆಲವರನ್ನು ಬಿಡಿಸಿದ್ದೆ. ಆದರೆ  ಈಗ ನೋಡಿ ನಾನೇ ಜೈಲಿಗೆ ಬಂದು ಬಿಟ್ಟೆ” ಜೈಲು ಅಧಿಕಾರಿಗಳ ಬಳಿ ವಿಜಯ್‌ ಹಂಚಿಕೊಂಡ ಪಶ್ಚಾತಾಪದ ಮಾತುಗಳಿವು.

ನ್ಯಾಯಾಂಗ ಬಂಧನದಲ್ಲಿರುವ ವಿಜಯ್‌ ಅತ್ಯಂತ ಪಶ್ಚಾತಾಪ ಪಟ್ಟವರಂತೆ ಕಾಣುತ್ತಿದ್ದಾರೆ. “”ನಮ್ಮಂತವರು ಇರುವ ಜಾಗವಲ್ಲ ಸಾರ್‌ ಇದು, ಕೆಟ್ಟಘಳಿಗೆ ಅಚಾತುರ್ಯದಿಂದ ನಡೆದ ಘಟನೆಯಿಂದ ನಾನೇ ಜೈಲಿಗೆ ಬಂದು ಬಿಟ್ಟಿದ್ದೇನೆ. ವೃತ್ತಿ ಜೀವನದ ಮೇಲೆ ಪರಿಣಾಮ ಬೀರದಿದ್ದರೆ, ಸಾಕು ತಪ್ಪುಗಳನ್ನು ಸರಿಪಡಿಸಿಕೊಂಡು ಬಾಳುತ್ತೇನೆ” ಎಂದು ಅಳಲು ತೋಡಿಕೊಳ್ತಾರೆ ಎಂದು  ಜೈಲು ಅಧಿಕಾರಿಯೊಬ್ಬರು ತಿಳಿಸಿದರು.

ಸೋಮವಾರ 2ನೇ ಪತ್ನಿ ಕೀರ್ತಿ ಅವರು ಅನುಮತಿ ಪಡೆದುಕೊಂಡು ವಿಜಯ್‌ರನ್ನು ಭೇಟಿಯಾಗಿ 40 ನಿಮಿಷಕ್ಕೂ ಅಧಿಕ  ಕಾಲ ಚರ್ಚೆ ನಡೆಸಿದ್ದಾರೆ.  ಈ ವೇಳೆ ವಿಜಯ್‌, ಜಾಮೀನು, ಮಕ್ಕಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕೈದಿ ನಂಬರ್‌ 9035
ಮತ್ತೂಂದೆಡೆ  ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್‌ಗೆ ವಿಚಾರಣಾಧೀನ ಕೈದಿಯಾಗಿ 9035 ನಂಬರ್‌ ನೀಡಲಾಗಿದೆ. ಉಳಿದ ಆರೋಪಿಗಳಾದ ಪ್ರಸಾದ್‌, ಮಣಿ, ಪ್ರಸಾದ್‌ಗೆ ಕ್ರಮವಾಗಿ 9036,37, 38 ನಂಬರ್‌ಗಳನ್ನು ನೀಡಲಾಗಿದೆ.

ವಿಜಯ್‌ ಸೇರಿದಂತೆ ನಾಲ್ವರನ್ನು ಒಂದೇ ಕೊಠಡಿಯಲ್ಲಿ ಇರಿಸಿದ್ದೇವೆ. ಸಾಮಾನ್ಯ ವಿಚಾರಣಾಧೀನ ಕೈದಿಗಳಿಗಿರುವ ಊಟವನ್ನೇ ಸೇವಿಸಿದ್ದಾರೆ. ಒಮ್ಮೊಮ್ಮೆ ಭಾವುಕಾರಗಿ ಮಾತನಾಡುತ್ತಾರಷ್ಟೇ ಎಂದು ಅಧಿಕಾರಿ ವಿವರಿಸಿದರು.

ದುನಿಯಾ ವಿಜಯ್‌ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ವಾಣಿಜ್ಯ ಮಂಡಳಿಗೆ ದೂರು!
ಮಾರುತಿಗೌಡನ ಅಪಹರಣ ಹಾಗೂ ದೈಹಿಕ ಹಲ್ಲೆಗೆ ಸಂಬಂಧಿಸಿದಂತೆ ನಟ “ದುನಿಯಾ’ ವಿಜಯ್‌ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೃಷ್ಣಮೂರ್ತಿ (ಪಾನಿಪೂರಿ ಕಿಟ್ಟಿ)ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೋಮವಾರ ಲಿಖೀತ ದೂರು ನೀಡಿದ್ದಾರೆ.

“ನಾನು ಅಂತಾರಾಷ್ಟ್ರೀಯ ದೇಹದಾಡ್ಯì ಪಟುವಾಗಿದ್ದು, ಚಿತ್ರರಂಗದಲ್ಲಿ ಪಾನಿಪುರಿ ಕಿಟ್ಟಿ ಎಂದೇ ಚಿರಪರಿಚಿತನಾಗಿರುತ್ತೇನೆ. ಕಳೆದ 20 ವರ್ಷಗಳಿಂದ “ಮಜಲ್‌ ಪ್ಲಾನೆಟ್‌’ ಹೆಸರಿನ ಜಿಮ್‌ ನಡೆಸುತ್ತಿದ್ದು, ನನ್ನ ಜಿಮ್‌ನಲ್ಲಿ ಚಿತ್ರರಂಗದ ಹಲವು ಕಲಾವಿದರು, ಸಾರ್ವಜನಿಕರು ಉತ್ತಮ ತರಬೇತಿ ಹೊಂದುವ ಮೂಲಕ ಜಿಮ್‌ ಪರಿಚಯಗೊಂಡಿದೆ. ನನ್ನ ಜಿಮ್‌ ಸಂಸ್ಥೆಯ ಬಗ್ಗೆ ಹಲವು ಕಲಾವಿದರು ಮತ್ತು ಚಿತ್ರರಂಗದವರ ಉತ್ತಮ ಅಭಿಪ್ರಾಯವಿದೆ. ನಾನು ನಡೆಸುತ್ತಿರುವ ಜಿಮ್‌ ಸಂಸ್ಥೆಗೆ ಇದುವರೆಗೂ ಯಾವುದೇ ರೀತಿಯ ಕಪ್ಪು ಚುಕ್ಕೆ ಕಂಡು ಬಂದಿಲ್ಲ.

ಆದರೆ, ನಟ ದುನಿಯಾ ವಿಜಯ್‌ ಅವರು ನನ್ನ ಅಣ್ಣನ ಮಗನನ್ನು ಅಪಹರಿಸಿ, ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಾರುತಿಗೌಡ  ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಪ್ರಕರಣದಿಂದ  ನನ್ನ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವುದರಿಂದ  ನನ್ನ ಬಳಿ ತರಬೇತಿಗೆ ಬರುವ ಉದಯೋನ್ಮುಖ ಕಲಾವಿದರು, ನನ್ನ ಬಗ್ಗೆ ಯೋಚಿಸುವಂತಾಗಿದೆ. ಈ ಹಿಂದೆಯೂ ದುನಿಯಾ ವಿಜಯ್‌ ಅವರು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಈ ಪ್ರಕರಣದಲ್ಲಿ ನಾನು ಅಮಾಯಕನಾಗಿದ್ದು, ನನ್ನ ಮೇಲೆ ಯಾವುದೇ ತಪ್ಪು ಕಂಡುಬಂದಲ್ಲಿ, ನನ್ನ ಮೇಲೂ ತಾವು ಕ್ರಮ ಜರುಗಿಸಬಹುದು. ಆದ್ದರಿಂದ ವಾಣಿಜ್ಯ ಮಂಡಳಿಯು ನಟ ದುನಿಯಾ ವಿಜಯ್‌ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿ,ಮುಂದಿನ ದಿನಗಳಲ್ಲಿ “ದುನಿಯಾ’ ವಿಜಯ್‌ ಅವರನ್ನು ಮಂಡಳಿಗೆ ಕರೆಸಿಕೊಂಡು ಮಾತುಕತೆ ನಡೆಸುವುದಾಗಿ ಮಂಡಳಿಯ ಕಾರ್ಯದರ್ಶಿ ಭಾ.ಮ.ಹರೀಶ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next