Advertisement

ತಾಯಾಣೆ ನಾನ್‌ ಕಾರಣವಲ್ಲ!

04:27 PM Jul 02, 2017 | Team Udayavani |

“ದುನಿಯಾ’ ವಿಜಯ್‌ ಅಭಿನಯದ “ಜಾನಿ ಜಾನಿ ಯೆಸ್‌ ಪಪ್ಪಾ’ ಚಿತ್ರಕ್ಕೆ ರಚಿತಾ ರಾಮ್‌ ನಾಯಕಿ ಅಂತ ಈ ಹಿಂದೆ ಸುದ್ದಿಯಾಗಿತ್ತು. ಅಷ್ಟೇ ಅಲ್ಲ, “ಕನಕ’ ಚಿತ್ರಕ್ಕೂ ರಚಿತಾ ರಾಮ್‌ ನಾಯಕಿ ಅಂತ ಹೇಳಲಾಗಿತ್ತು. ತಮ್ಮ ಚಿತ್ರಗಳಿಗೆ ರಚಿತಾ ಅವರೇ ನಾಯಕಿ ಅಂತ ಸ್ವತಃ ನಿರ್ದೇಶಕರಾದ ಪ್ರೀತಂ ಗುಬ್ಬಿ ಹಾಗೂ ಆರ್‌. ಚಂದ್ರು ಘೋಷಿಸಿದ್ದರು. ಆದರೆ, “ಕನಕ’ ಹಾಗೂ “ಜಾನಿ ಜಾನಿ ಯೆಸ್‌ ಪಪ್ಪಾ’ ಚಿತ್ರದಿಂದ ರಚಿತಾ ರಾಮ್‌ ಹೊರ ನಡೆದಿದ್ದಾರೆ. ಇದು ಹೊಸ ಸುದ್ದಿಯೇನಲ್ಲ. ರಚಿತಾ ರಾಮ್‌ ಆ ಎರಡೂ ಚಿತ್ರಗಳಿಂದ ಹೊರ ನಡೆಯಲು ಆ ಚಿತ್ರಗಳ ನಾಯಕ “ದುನಿಯಾ’ ವಿಜಯ್‌ ಕಾರಣ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ.

Advertisement

ರಚಿತಾ ರಾಮ್‌ ಹೊರ ಹೋಗುವುದಕ್ಕೆ ವಿಜಯ್‌ ಹೇಗೆ ಕಾರಣರಾದಾರು? ಈ ಪ್ರಶ್ನೆ ಸಹಜವೇ. ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾತುಗಳ ಪ್ರಕಾರ, “ಜಾನಿ ಜಾನಿ ಎಸ್‌ ಪಾಪ್ಪ’ ಚಿತ್ರದಲ್ಲಿ ವಿಜಯ್‌ ಮತ್ತು ರಚಿತಾ ಮೊದಲ ಬಾರಿಗೆ ಒಟ್ಟಿಗೆ ನಾಯಕ-ನಾಯಕಿಯಾಗಿ ನಟಿಸಬೇಕಿತ್ತು. ಆ ಚಿತ್ರಕ್ಕೆ ಆಯ್ಕೆಯಾದ ಮೇಲೆ, “ಕನಕ’ ಚಿತ್ರಕ್ಕೂ ರಚಿತಾರನ್ನು ಆಯ್ಕೆ ಮಾಡಿದರು ಚಂದ್ರು. “ಕನಕ’ ಮೊದಲು ಶುರುವಾಗಿರುವುದರಿಂದ ಮೊದಲು ಬಿಡುಗಡೆಯಾಗುತ್ತದೆ. ಆಗ “ಜಾನಿ ಜಾನಿ ಎಸ್‌ ಪಾಪ್ಪ’ ಚಿತ್ರಕ್ಕೆ ಮತ್ತೆ ಅದೇ ಜೋಡಿ ಎನಿಸಬಹುದು ಎಂಬ ಕಾರಣಕ್ಕೆ ರಚಿತಾ ಅವರನ್ನು “ಕನಕ’ದಿಂದ ಬದಲಾಯಿಸುವುದಕ್ಕೆ ವಿಜಯ್‌ ಹೇಳಿದರಂತೆ. ಇದರಿಂದ ಬೇಸರಗೊಂಡ ರಚಿತಾ, ಬರೀ “ಕನಕ’ ಅಷ್ಟೇ ಅಲ್ಲ, “ಜಾನಿ ಜಾನಿ ಎಸ್‌ ಪಾಪ್ಪ’ ಚಿತ್ರದಿಂದಲೂ ಹೊರಬಂದರು ಎಂಬುದು ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಸುದ್ದಿ. ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಂಬ ಕುತೂಹಲ ಸಹಜ. ಈ ಕುರಿತು ವಿಜಯ್‌ಅವರನ್ನು “ಉದಯವಾಣಿ’ ಸಂಪರ್ಕಿಸಿದಾಗ, ನಾಯಕಿ ಬದಲಾಗುವುದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 “ನಮ್ಮ ತಾಯಾಣೆಗೂ ರಚಿತಾರಾಮ್‌ ಆ ಎರಡೂ ಚಿತ್ರಗಳಿಂದ ಹೊರ ಹೋಗೋಕೆ ನಾನು ಕಾರಣವಲ್ಲ. “ಜಾನಿ ಜಾನಿ ಯೆಸ್‌ ಪಪ್ಪಾ’ ಚಿತ್ರಕ್ಕೆ ರಮ್ಯಾ ಅವರ ಬದಲು ಯಾರನ್ನು ನಾಯಕಿಯನ್ನಾಗಿಸಬೇಕೆಂಬ ಚರ್ಚೆ ನಡೆಯಿತು. ಈ ನಡುವೆ “ಕನಕ’ ಚಿತ್ರಕ್ಕೂ ರಚಿತಾ ರಾಮ್‌ ಅಂತ ಹೇಳಲಾಗಿತ್ತಾದರೂ, ಆ ಬಳಿಕ ಅವರು ಆ ಸಿನಿಮಾದಲ್ಲಿ ನಟಿಸುತ್ತಿಲ್ಲ ಅನ್ನೋದಷ್ಟೇ ಗೊತ್ತು. ಆದರೆ, ಅವರು ಹೊರ ನಡೆಯೋದ್ದಕ್ಕೂ ನನಗೂ ಯಾವ ಸಂಬಂಧವಿದೆ ಹೇಳಿ? ಇನ್ನೊಂದು ವಿಷಯವೆಂದರೆ, “ಜಾನಿ ಜಾನಿ ಯೆಸ್‌ ಪಪ್ಪಾ’ ಚಿತ್ರಕ್ಕೆ ರಚಿತಾ ರಾಮ್‌ ಇದ್ದರೆ ಚೆನ್ನಾಗಿರುತ್ತೆ ಎಂಬ ಚರ್ಚೆ ಆಗಿತ್ತು. “ಕನಕ’ ಚಿತ್ರಕ್ಕೂ ಅವರೇ ಆಗಿದ್ದಾರೆಂಬುದು ಗೊತ್ತಿರಲಿಲ್ಲ.

ಒಂದು ಸತ್ಯ ಹೇಳ್ತೀನಿ. ದೇವ ರಾಣೆಗೂ ನಾನುಯಾವುದೇ ಸಿನಿಮಾ ಗಳಿರಲಿ, ನಾಯಕಿ ಆಯ್ಕೆ ವಿಚಾರದಲ್ಲಿ ಎಂಟ್ರಿ ಯಾಗುವುದಿಲ್ಲ.ಅಷ್ಟಕ್ಕೂ ನಾನೇಕೆ “ಕನಕ’ ಚಿತ್ರದಿಂದ ಅವರನ್ನು ಕೈ ಬಿಡುವಂತೆ ಹೇಳಲಿ? ಇದೆಲ್ಲಾ ಸುಳ್ಳು. ನನ್ನ ಸಿನಿಮಾಗೆ ಇಂಥವರೇ ಇರಬೇಕು ಅಂತ ನಿರ್ಧರಿಸೋದು ನಿರ್ದೇಶಕರೇ ವಿನಃ, ನಾನಲ್ಲ. ಒಳ್ಳೆಯ ಅಭಿನಯ ಇರುವಂತಹವರು ಇದ್ದರೆ ಸಿನಿಮಾಗೇ ಒಳ್ಳೇದಲ್ಲವೇ. ರಚಿತಾ ರಾಮ್‌ ಒಳ್ಳೇ ನಟಿ ಅನ್ನೋದು ನನಗೂ ಗೊತ್ತಿದೆ. ಇದುವರೆಗೂ ರಚಿತಾ ರಾಮ್‌ ಜೊತೆ ನಾನು ಮಾತಾಡಿಲ್ಲ. ಫೋನ್‌ ಕೂಡ ಮಾಡಿಲ್ಲ. ನಮಗೂ ಒಂದು ಆಸೆ ಇದ್ದೇ ಇರುತ್ತೆ. ಅಭಿನಯ ಗೊತ್ತಿರುವವರ ಜತೆ ಕೆಲಸ ಮಾಡಬೇಕು ಅಂತ. ರಚಿತಾ ರಾಮ್‌ ಈಗಾಗಲೇ ಒಳ್ಳೆಯ ನಟಿ ಅನ್ನೋದನ್ನು ಸಾಬೀತುಪಡಿಸಿದ್ದಾರೆ. ಇಷ್ಟಿದ್ದರೂ, ನಾನೇಕೆ ಅವರು ಆ ಸಿನಿಮಾದಿಂದ ಹೊರ ಹೋಗಲು ಕಾರಣ ಆಗ್ತಿàನಿ’ ಎನ್ನುತ್ತಾರೆ ವಿಜಯ್‌.

“ಸದ್ಯಕ್ಕೆ “ಜಾನಿ ಜಾನಿ ಯೆಸ್‌ ಪಪ್ಪಾ’ ಚಿತ್ರದ ಸ್ಕ್ರಿಪ್ಟ್ ಜೋರಾಗಿ ನಡೆಯತ್ತಿದೆ. ಚಿತ್ರದ ಸ್ಕ್ರಿಪ್ಟ್
ಚೆನ್ನಾಗಿ ಬರುತ್ತಿರುವುದರಿಂದ, ಹರಿಕೃಷ್ಣ ಮತ್ತು ಯೋಗರಾಜ್‌ ಭಟ್‌ ಇಬ್ಬರೂ ಹಾಡುಗಳು
ಚೆನ್ನಾಗಿ ಬರಬೇಕು ಅಂತ ದೊಡ್ಡ ಯೋಜನೆ ರೂಪಿಸುತ್ತಿದ್ದಾರೆ. ಅತ್ತ “ಕನಕ’ ಕೂಡ ಇನ್ನಷ್ಟು
ಚಿತ್ರೀಕರಣ ಬಾಕಿ ಇದೆ. ಇದು ಬಿಟ್ಟರೆ, ನಾನು ನಿರ್ದೇಶಕರು ಹೇಳಿದಂತೆ ಕೆಲಸ ಮಾಡಿಕೊಂಡು
ಹೋಗುತ್ತಿದ್ದೇನೆ. ನಾಯಕಿ ವಿಚಾರದಲ್ಲಿ ನಾನೇಕೆ ಎಂಟ್ರಿಯಾಗಲಿ? ಈಗಲೂ ಹೇಳ್ತೀನಿ.
ಮುಂದೊಂದು ದಿನ ರಚಿತಾ ರಾಮ್‌ ಅವರೇ ನನ್ನ ಚಿತ್ರದ ನಾಯಕಿ ಆದರೂ ಆಗಬಹುದು.
ಯಾರು ಏನೇ ಮಾತಾಡಿಕೊಂಡರೂ, ಸತ್ಯ ಏನೆಂಬುದು ನನಗೊಬ್ಬನಿಗೇ ಗೊತ್ತು. ಸಿನಿಮಾ
ರಂಗದಲ್ಲಿ ಎಲ್ಲರೂ ಒಟ್ಟುಗೂಡಲೇಬೇಕು. ಕೆಲಸ ಮಾಡಲೇಬೇಕು. ವಿನಾಕಾರಣ, ಹೀಗೆ ಸುದ್ದಿ
ಹಬ್ಬಿಸೋರಿಗೆ ನಾನು ಏನು ಹೇಳಲಿ? ಎಂದಷ್ಟೇ ಹೇಳಿ ಮಾತು ಮುಗಿಸುತ್ತಾರೆ ವಿಜಯ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next