Advertisement

ಮರಳು ಸಮಸ್ಯೆಗೆ ಕೇಂದ್ರ ಸರಕಾರದ ಜನ ವಿರೋಧಿ ನೀತಿ ಕಾರಣ: ಕಾಂಗ್ರೆಸ್‌

12:57 AM Apr 11, 2019 | Sriram |

ಉಡುಪಿ: ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆ ಹಾಗೂ ಜನವಿರೋಧಿ ನೀತಿಯಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಮರಳು ಸಮಸ್ಯೆ ಪರಿಹಾರ ಕಾಣಲು ಅಸಾಧ್ಯವಾಗಿದೆ. ಕೇಂದ್ರದಲ್ಲಿ ತಮ್ಮದೇ ಸರಕಾರ ಇದ್ದಾಗಲೂ ರಘುಪತಿ ಭಟ್‌ ಅವರು ಕೇಂದ್ರಕ್ಕೆ ಮನವರಿಕೆ ಮಾಡಿ ಕರಾವಳಿ ಜಿಲ್ಲೆಗಳ ಮರಳು ನೀತಿಯನ್ನು ರೂಪಿಸುವಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ಭಾಸ್ಕರ್‌ ರಾವ್‌ ಕಿದಿಯೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ತನ್ನ ಬೆಂಬಲಿಗರಿಗೆ ನಿಯಮಬಾಹಿರವಾಗಿ ಮರಳಿನ ಪರವಾನಿಗೆ ನೀಡಬೇಕೆಂದು ಆಗ್ರಹಿಸುವ ಶಾಸಕರಿಗೆ ಕಾನೂನಿನ ಪರಿಜ್ಞಾನ ಇಲ್ಲ ಎನ್ನಬೇಕು. ರಾಷ್ಟ್ರೀಯ ಹಸಿರು ಪೀಠ, ಚೆನ್ನೈ ನ್ಯಾಯಾಲಯದಲ್ಲಿ ಹಾರಾಡಿ ಗ್ರಾಮಸ್ಥರು ಮರಳು ದಿಬ್ಬ ತೆರವುಗೊಳಿಸದಂತೆ ತಡೆಯಾಜ್ಞೆ ತಂದಾಗ ಅದನ್ನು ತೆರವುಗೊಳಿಸುವಲ್ಲಿ ಅಂದಿನ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಲ್ಲಿ ಚರ್ಚಿಸಿ ಸರಕಾರದಿಂದ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಪ್ರಮೋದ್‌ ಮಧ್ವರಾಜ್‌ ಪ್ರಾಮಾಣಿಕ ಯತ್ನ ಮಾಡಿದ್ದಾರೆ. ಇದೇ ಕಾರಣದಿಂದ 2017-18ನೇ ಸಾಲಿನಲ್ಲಿ 165 ಜನರಿಗೆ ಪರವಾನಿಗೆ ದೊರಕುವಂತಾಯಿತು ಎಂದು ಕಿದಿಯೂರು ತಿಳಿಸಿದ್ದಾರೆ.

ಸುಳ್ಳು ಆರೋಪ
ವಿಧಾನಸಭಾ ಚುನಾವಣೆಯ ಸಮಯ ಕೇವಲ ಒಂದು ತಿಂಗಳಲ್ಲಿ ಮರಳು ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವ ವಾಗ್ಧಾನ ಇತ್ತಿದ್ದ ರಘುಪತಿ ಭಟ್‌ ಅವರು ತನ್ನ ವೈಫ‌ಲ್ಯವನ್ನು ಮರೆಮಾಚಲು ಈಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನದಲ್ಲಿರುವುದು ಖಂಡನೀಯ. ಈ ನಡುವೆ ಪ್ರಸ್ತುತ ಸಾಲಿನಲ್ಲಿ 2018ರ ಪರವಾನಿಗೆಗೆ ಹಾರಾಡಿ ಗ್ರಾಮಸ್ಥರು ದಾವೆ ಹೂಡಿದ್ದರೂ ಅವರಿಗೆ ತಡೆಯಾಜ್ಞೆ ದೊರಕದಂತೆ ಸರಕಾರದ ಮೂಲಕ ಸೂಕ್ತ ಕ್ರಮ ಕೈಗೊಂಡಿದ್ದರಿಂದ 2019ರಲ್ಲಿ 44 ಜನರಿಗೆ ಪರವಾನಿಗೆ ಲಭಿಸಿರುತ್ತದೆ.

ಉಡುಪಿ ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯ ನದಿ ಪ್ರದೇಶಗಳಿಗೆ ಇಕೋ ಸೆನ್ಸಿಟಿವ್‌ ಝೋನ್‌ ಎಂಬ ನಿಯಮವನ್ನು ಕೇಂದ್ರದ ಬಿಜೆಪಿ ಸರಕಾರ ಜಾರಿಗೊಳಿಸಿ ಮರಳನ್ನು ತೆಗೆಯುವ ಅವಕಾಶವನ್ನೇ ತಡೆಹಿಡಿಯಲಾಗಿದೆ. ಆದರೆ ಬಿಜೆಪಿಯ ಜನ ಪ್ರತಿನಿಧಿ ಗಳಾದ ಶೋಭಾ ಕರಂದ್ಲಾಜೆ ಹಾಗೂ ರಘುಪತಿ ಭಟ್‌ ಅವರು ತಮ್ಮ ತಪ್ಪನ್ನು ಮರೆಮಾಚಲು ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತದ ಮೇಲೆ ವಿನಾಕಾರಣ ಸುಳ್ಳು ಆರೋಪ ಮಾಡುತ್ತಿರುವುದು ಎಷ್ಟು ಸಮಂಜಸ ಎಂದು ಭಾಸ್ಕರ್‌ ರಾವ್‌ ಪ್ರಶ್ನಿಸಿದ್ದಾರೆ.

ಸಿಆರ್‌ಝಡ್‌ ವ್ಯಾಪ್ತಿಯ ನಿಯಮವನ್ನು ಸರಳಗೊಳಿ ಸಲು ಪ್ರಯತ್ನ ಮಾಡದ ಶೋಭಾ ಹಾಗೂ ರಘುಪತಿ ಭಟ್ಟರಿಗೆ ಪ್ರಮೋದ್‌ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲು ಯಾವುದೇ ನೈತಿಕತೆ ಇಲ್ಲ ಎಂದು ತಿಳಿಸಿದ್ದಾರೆ.

Advertisement

ಕಾಂಗ್ರೆಸ್‌ ಸರಕಾರ ಬಂದಲ್ಲಿ ಮರಳಿನ ಸಮಸ್ಯೆಗೆ ಪರಿಹಾರ ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಕೇಂದ್ರ ಸರಕಾರವೇ ನೇರ ಹೊಣೆ. ಸಿಆರ್‌ಝಡ್‌ ಪ್ರದೇಶದಲ್ಲಿ ಮರಳು ತೆಗೆಯದಂತೆ ಕೇಂದ್ರ ಮಾಡಿರುವ ಕಾನೂನನ್ನು ಬದಲಾಯಿಸದ ಹೊರತು ಶಾಶ್ವತ ಪರಿಹಾರ ಅಸಾಧ್ಯ.

ಮರಳಿನ ಸಮಸ್ಯೆ ನೀಗಿಸುವಲ್ಲಿ ಕೇಂದ್ರ ಕಾನೂನಲ್ಲಿ ತಿದ್ದುಪಡಿ ಮಾಡಬೇಕಾದ ಹೊಣೆಗಾರಿಕೆ ಇಲ್ಲಿನ ಸಂಸದೆ ಶೋಭಾ ಕರಂದ್ಲಾಜೆಯವರದಾಗಿತ್ತು. ಆದರೆ ಅವರು ಆ ಕೆಲಸವನ್ನು ಮಾಡದೆ ಅಪಪ್ರಚಾರದ ಮೂಲಕ ಪ್ರಮೋದ್‌ ಮಧ್ವರಾಜ್‌ ಅವರ ತಲೆಯ ಮೇಲೆ ಗೂಬೆ ಕೂರಿಸಿ ಸಮಸ್ಯೆಯ ಸೃಷ್ಟಿಗೆ ಕಾರಣೀಭೂತರಾಗಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರ ಬಂದಲ್ಲಿ ಕರಾವಳಿ ಜಿಲ್ಲೆಗಳಲ್ಲಿಯ ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸಿಆರ್‌ಝಡ್‌ ಪ್ರದೇಶದಲ್ಲಿ ಈಗಿರುವ ಮರಳು ದಿಬ್ಬ ತೆರವು ಕಾನೂನಿಗೆ ಬದಲಾಗಿ ಮರಳು ಸಂಗ್ರಹ ತೆರವು ಕಾನೂನನ್ನು ಮತ್ತು ನಾನ್‌ ಸಿಆರ್‌ಝಡ್‌ ನದಿಗಳಲ್ಲಿ ನಿರಿನ ಒಳಗೆ ಮರಳು ತೆಗೆಯುವ ಅವಕಾಶದ (in stream mining) ಕಾನೂನನ್ನು ಜಾರಿಗೊಳಿಸಲು ಗರಿಷ್ಠ ಪ್ರಯತ್ನ ಮಾಡಲಾಗುವುದು ಎಂದು ಭಾಸ್ಕರ್‌ ರಾವ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next