Advertisement

ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಬರ

10:48 PM Jul 20, 2019 | Lakshmi GovindaRaj |

ಬೆಂಗಳೂರು: ಒಂದೆಡೆ ಮಳೆಗಾಲದಲ್ಲೂ ಬರದ ಛಾಯೆ ಆವರಿಸಿದ್ದರೆ, ಮತ್ತೂಂದೆಡೆ ಈ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ಶಾಸಕರಿಲ್ಲದೆ ರಾಜ್ಯದ ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳು ಭಣಗುಡುತ್ತಿವೆ!.

Advertisement

ಸಾಮಾನ್ಯವಾಗಿ ರಾಜ್ಯದಲ್ಲಿ ಒಟ್ಟಾರೆ ಮುಂಗಾರಿನ ಪೈಕಿ ಶೇ.30ರಷ್ಟು ಮಳೆ ಜುಲೈನಲ್ಲೇ ಬೀಳುತ್ತದೆ. ಜುಲೈ 15 ಮುಗಿದರೂ ಮಲೆನಾಡಿನಲ್ಲೇ ವಾಡಿಕೆಗಿಂತ ಶೇ.30ರಷ್ಟು ಕಡಿಮೆ ಮಳೆಯಾಗಿದೆ. ಒಟ್ಟಾರೆ ಸರಾಸರಿ ಶೇ.19ರಷ್ಟು ಮಳೆ ಖೋತಾ ಆಗಿದೆ. 1,323 ಗ್ರಾಮಗಳಿಗೆ ಈಗಲೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಆಗುತ್ತಿದ್ದು, 250 ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿದೆ. ಬಿತ್ತನೆಯಲ್ಲಿ ಇನ್ನೂ ಚೇತರಿಕೆ ಕಂಡು ಬಂದಿಲ್ಲ. ಜಲಾಶಯಗಳಿಗೆ ಇನ್ನೂ ಸಮರ್ಪಕ ನೀರು ಹರಿಯುತ್ತಿಲ್ಲ. ಆದರೆ, ಈ ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕರ ಸುಳಿವು ಕೂಡ ಅಲ್ಲಿಲ್ಲ.

ಮಳೆ ಚುರುಕುಗೊಂಡ ಕಡೆಗಳಲ್ಲಿ ಬಿತ್ತನೆ ಬೀಜ, ಗೊಬ್ಬರಕ್ಕಾಗಿ ರೈತರು ಬೆಳಗಾದರೆ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಇಲ್ಲಿ ಸರ್ಕಾರದ ಅಳಿವು-ಉಳಿವಿಗಾಗಿ ರಾಜಕೀಯ ನಾಯಕರು ಮುನಿಸಿಕೊಂಡು ಹೋದ ಶಾಸಕರ ಮನವೊಲಿಕೆಗಾಗಿ ಅವರ ಮನೆಗಳ ಬಾಗಿಲು ತಟ್ಟುತ್ತಿದ್ದಾರೆ. ಇನ್ನು ಕೆಲವೆಡೆ ಮಳೆ ಇಲ್ಲದೆ, ರೈತರು ಆಗಸದತ್ತ ನೋಡುತ್ತಿದ್ದರೆ, ಅವರನ್ನು ಪ್ರತಿನಿಧಿಸುವ ಶಾಸಕರು ವಿವಿಧ ಪಂಚತಾರಾ ಹೋಟೆಲ್‌ಗ‌ಳಲ್ಲಿ ಬೀಡು ಬಿಟ್ಟಿದ್ದಾರೆ.

ಐದಾರು ದಿನಗಳಿಂದ ಎಲ್ಲ ಶಾಸಕರೂ ರೆಸಾರ್ಟ್‌ ಸೇರಿದ್ದಾರೆ. ಈ ಪೈಕಿ ಹತ್ತು ಶಾಸಕರು ಸರ್ಕಾರ ಬೀಳಿಸಲು ಹತ್ತು ದಿನಗಳಿಂದ ಮುಂಬೈ ರೆಸಾರ್ಟ್‌ನಲ್ಲಿ ನೆಲೆಸಿದ್ದರೆ, ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ಪಕ್ಷಗಳು ತಮ್ಮ ಎಲ್ಲ ಶಾಸಕರನ್ನು ನಗರದ ಎರಡು ಪ್ರತ್ಯೇಕ ರೆಸಾರ್ಟ್‌ಗಳಲ್ಲಿ ಬಚ್ಚಿಟ್ಟಿದ್ದಾರೆ. ಮತ್ತೂಂದೆಡೆ ಹೊಸ ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿ ಪ್ರತಿಪಕ್ಷ ತನ್ನ ಎಲ್ಲ ಶಾಸಕರನ್ನು ಮೊಗದೊಂದು ರೆಸಾರ್ಟ್‌ಗೆ ಸಾಗಿಸಿದೆ. ಅವರ ಮೇಲೆ ಕಣ್ಗಾವಲು ಕೂಡ ಇಡಲಾಗಿದೆ. ಮುಖ್ಯಮಂತ್ರಿಗಳು ಮತ್ತು ಪ್ರತಿಪಕ್ಷದ ನಾಯಕರಾದಿಯಾಗಿ ಎಲ್ಲರೂ ಇದೇ ಕಸರತ್ತಿನಲ್ಲಿ ನಿರತರಾಗಿದ್ದಾರೆ.

ಶಾಸಕರಿರುವ ಈ ರೆಸಾರ್ಟ್‌ಗಳ ಒಂದೊಂದು ಕೊಠಡಿಗಳಿಗೆ ಹತ್ತಾರು ಸಾವಿರ ರೂ.ಆಗುತ್ತದೆ. ಮೂಲಗಳ ಪ್ರಕಾರ ಮುಂಬೈಗೆ ಹಾರಿರುವ ಅತೃಪ್ತರ ಹೋಟೆಲ್‌ನ ಕೊಠಡಿ ಬಾಡಿಗೆ ದಿನಕ್ಕೆ 23 ಸಾವಿರ ರೂ.ಆಗಿದ್ದು, ಒಂದು ಊಟಕ್ಕೆ ಮೂರೂವರೆ ಸಾವಿರ ರೂ. ಇವರು ಬಂದು ಹೋಗುವ ವಿಶೇಷ ವಿಮಾನಗಳ ಬಾಡಿಗೆ ಒಂದು ತಾಸಿಗೆ 2.25 ಲಕ್ಷ ರೂ.(ಐದು ಆಸನಗಳದ್ದಾಗಿದ್ದರೆ). ಬೆಂಗಳೂರಿನಿಂದ ಮುಂಬೈಗೆ ಸುಮಾರು ಒಂದೂವರೆ ತಾಸಿನ ಪ್ರಯಾಣ.

Advertisement

ಈ ಶಾಸಕರು ರೆಸಾರ್ಟ್‌ ಸೇರಿ ನಾಲ್ಕೈದು ದಿನಗಳಾಗಿದ್ದರೂ ಕ್ಷೇತ್ರದತ್ತ ಮುಖ ಮಾಡಿ ಬಹುತೇಕ ದಿನಗಳೇ ಕಳೆದಿವೆ. ಸರಿಸುಮಾರು ಲೋಕಸಭಾ ಚುನಾವಣೆ ನಂತರದಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಗಿನಿಂದಲೇ ಕೆಲವರು ದೂರ ಉಳಿದಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಇನ್ನು ನಗರದ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಆಗೊಮ್ಮೆ-ಈಗೊಮ್ಮೆ ಕ್ಷೇತ್ರದ ಕಡೆಗೆ ಇಣುಕು ಹಾಕಿ ಬರುತ್ತಿದ್ದಾರೆ.

ಈ ಮಧ್ಯೆ ಮಲೆನಾಡಿನ ಕೊಡಗು (ಶೇ. 46), ಚಿಕ್ಕಮಗಳೂರು (ಶೇ. 31), ಕರಾವಳಿಯ ದಕ್ಷಿಣ ಕನ್ನಡ (ಶೇ. 46), ಉಡುಪಿ (ಶೇ. 32), ಹೈದರಾಬಾದ್‌ ಕರ್ನಾಟಕದ ಬೀದರ್‌ (ಶೇ. 42), ಕಲಬುರಗಿ (ಶೇ. 27), ರಾಯಚೂರು (ಶೇ. 28), ಯಾದಗಿರಿ (ಶೇ. 34)ಯಲ್ಲಿ ಜುಲೈ 1ರಿಂದ ಜುಲೈ 15ರವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಕೊರತೆ ಇರುವುದು ಕಂಡು ಬಂದಿದೆ. ಮಲೆನಾಡಿನಲ್ಲಿ ಮಳೆ ಕೊರತೆ ಇರುವುದರಿಂದ ಈ ಬಾರಿ ಸಮಸ್ಯೆ ಎಂದಿಗಿಂತ ಗಂಭೀರವಾಗಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಸಮಿತಿಗಳ ಕತೆ ಏನು?: ವಿಧಾನಸಭೆಯಲ್ಲಿ ಒಟ್ಟಾರೆ 16 ಸಮಿತಿಗಳಿವೆ. ಇವುಗಳಲ್ಲದೆ, ಸ್ಥಳೀಯ ಮಟ್ಟದಲ್ಲೂ ಶಾಸಕರನ್ನು ಒಳಗೊಂಡ ಹತ್ತು ಹಲವು ಸಮಿತಿಗಳು ಇರುತ್ತವೆ. ಹೀಗೆ ಶಾಸಕರು ಬಿಟ್ಟು ಹೋದರೆ, ಆ ಸಮಿತಿಗಳ ಕತೆ ಏನು ಎಂಬ ಪ್ರಶ್ನೆಯೂ ಈಗ ಉದ್ಭವಿಸಿದೆ.

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next