Advertisement

ವರ್ಷದಲ್ಲೇ ರೈಲು ಮಾರ್ಗಕ್ಕೆ ಚಾಲನೆ

02:51 PM Jul 21, 2018 | |

ಹಾಸನ: ಚಿಕ್ಕಮಗಳೂರು – ಬೆಂಗಳೂರು ನಡುವೆ ನೇರ ರೈಲು ಮಾರ್ಗ ನಿರ್ಮಾಣದ ಕೊಂಡಿಯಾಗಿರುವ ಹಾಸನ – ಬೇಲೂರು ರೈಲು ಮಾರ್ಗದ ಸಮೀಕ್ಷೆಯನ್ನು ಅಕೋಬರ್‌ನೊಳಗೆ ಪೂರ್ಣಗೊಳಿಸಿ ಈ ವರ್ಷವೇ ನಿರ್ಮಾಣಕ್ಕೆ ಚಾಲನೆ ನೀಡಲು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಸಮ್ಮತಿಸಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದರು. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ದೆಹಲಿ ಯಲ್ಲಿ ರೈಲ್ವೆ ಸಚಿವರನ್ನು ಮಖ್ಯಮಂತ್ರಿ  ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ತಾವು ಭೇಟಿಯಾಗಿದ್ದು, ಬೇಲೂರು – ಹಾಸನ ನಡುವಿನ 38 ಕಿ.ಮೀ. ರೈಲು ಮಾರ್ಗವನ್ನು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಶೇ 50:50 ಅನುಪಾತದಲ್ಲಿ ನಿರ್ಮಾಣ ಮಾಡಲು ರೈಲ್ವೆ ಸಚಿವರು ಒಪ್ಪಿಕೊಂಡಿದ್ದಾರೆ. ಈ ಮಾರ್ಗದ ನಿರ್ಮಾಣವನ್ನು ರೈಲ್ವೆಯ ಲಿಂಕ್‌ ಡಾಕ್ಯೂಮೆಂಟ್‌ನಲ್ಲಿ ಸೇರಿಸಿ ಅಕ್ಟೋಬರ್‌ ನಂತರ ರೈಲು ಮಾರ್ಗ ನಿರ್ಮಾಣದ ಟೆಂಡರ್‌ ಕರೆಯುವುದಾಗಿಯೂ ರೈಲ್ವೆ ಸಚಿವರು ಸ್ಪಷ್ಟಪಡಿಸಿದರು ಎಂದು ಹೇಳಿದರು.

ಚಿಕ್ಕಮಗಳೂರು – ಬೇಲೂರು – ಸಕಲೇಶಪುರ ರೈಲು ಮಾರ್ಗ ನಿರ್ಮಾಣಕ್ಕೆ ಈ ಹಿಂದೆಯೇ ಮಂಜೂರಾಗಿದೆ. ಆದರೆ, ಬೇಲೂರು – ಸಕಲೇಶಪುರ ಮಾರ್ಗ ನಿರ್ಮಾಣಕ್ಕಿಂತ ಬೇಲೂರು – ಹಾಸನ ನಡುವೆ ರೈಲು ಮಾರ್ಗ ನಿರ್ಮಾಣವಾದರೆ, ಚಿಕ್ಕಮಗಳೂರು- ಬೆಂಗಳೂರು ನಡುವೆ ನೇರ ರೈಲು ಸಂಪರ್ಕಕ್ಕೆ ಅನುಕೂಲವಾಗುತ್ತದೆ ಎಂದು ರೇವಣ್ಣ ಹೇಳಿದರು.

ಚಿಕ್ಕಮಗಳೂರು – ಬೇಲೂರು ಮತ್ತು ಬೇಲೂರು – ಚಿಕ್ಕಮಗಳೂರು ರೈಲು ಮಾರ್ಗದ ಭೂ ಸ್ವಾಧೀನವನ್ನು ತ್ವರಿತವಾಗಿ ಪೂರ್ಣಗೊಳಿಸಲು ಬೇಲೂರಿನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ತೆರೆಯಲೂ ನಿರ್ಧರಿಸಲಾಗಿದೆ ಎಂದು ರೇವಣ್ಣ ಹೇಳಿದರು.

ಚಿಕ್ಕಮಗಳೂರು – ಶೃಂಗೇರಿ ರೈಲು ಮಾರ್ಗ ನಿರ್ಮಾಣಕ್ಕೂ ರೈಲ್ವೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ. ಮಾರ್ಚ್‌
ಅಂತ್ಯದ ವೇಳೆಗೆ ಈ ಮಾರ್ಗದ ಸಮೀಕ್ಷೆ ಪೂರ್ಣಗೊಳಿಸಲಾಗುವುದು. ಹುಬ್ಬಳ್ಳಿ – ಅಂಕೋಲಾ ರೈಲು ಮಾರ್ಗ ನಿರ್ಮಾಣ ಚುರುಕುಗೊಳಿಸಲೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರೈಲ್ವೆ ಸಚಿವರನ್ನು ಒತ್ತಾಯಿಸಿದರು ಎಂದರು.

Advertisement

ಮಂಗಳೂರು – ಹಾಸನ – ಬೆಂಗಳೂರು – ಚನ್ನೈ ನಡುವೆ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಸಂಚಾರ, ಮಂಗಳೂರು – ಬೆಂಗಳೂರು ನಡುವೆ ಹೆಚ್ಚು ರೈಲುಗಳ ಸಂಚಾರ ಆರಂಭಿಸುವಂತೆಯೂ ಮನವಿ ಮಾಡಲಾಗಿದೆ ಎಂದು ವಿವರ ನೀಡಿದರು. ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್‌.ಲಿಂಗೇಶ್‌ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next