Advertisement

ಬಿತ್ತನೆ ಬೀಜ, ಗೊಬ್ಬರ ವಿತರಣೆ ಶೀಘ್ರ ಆರಂಭ; ಕರಾವಳಿಯಲ್ಲಿ ಕೃಷಿ ಚಟುವಟಿಕೆಗೆ ಚಾಲನೆ

12:22 AM May 19, 2022 | Team Udayavani |

ಹವಾಮಾನ ವೈಪರೀತ್ಯದಿಂದಾಗಿ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕೃಷಿಕರಿಗೆ ವರದಾನವಾಗಿ ಪರಿಣಮಿಸಿದೆ. ಕುಂದಾಪುರ, ಕಟಪಾಡಿ ಸಹಿತ ಜಿಲ್ಲೆಯ ವಿವಿಧ ಭಾಗದಲ್ಲಿ ಅವಧಿಗಿಂತ ಮೊದಲೇ ಮುಂಗಾರು ಹಂಗಾಮಿನ ಕೃಷಿ ಚಟುಚವಟಿಕೆಗಳು ಆರಂಭಗೊಂಡಿವೆ. ಜೂನ್‌ ಮೊದಲ ವಾರ ಆರಂಭಗೊಳ್ಳಬೇಕಿದ್ದ ಮಳೆ ವಾಯುಭಾರ ಕುಸಿತದಿಂದಾಗಿ ಈಗಿನಿಂದಲೇ ಬರುತ್ತಿದ್ದು, ಇದು ಗದ್ದೆ ಹದ ಮಾಡಲು ಪೂರಕವಾಗಿದೆ. ಕುಂದಾಪುರ, ಬೈಂದೂರು, ವಂಡ್ಸೆ , ಕಾಪು ಹೋಬಳಿಯ ಕೆಲವೆಡೆಗಳಲ್ಲಿ ರೈತರು ಗದ್ದೆಗಳಿಗೆ ಗೊಬ್ಬರ, ಸುಡುಮಣ್ಣು ಹಾಕಿ, ಗದ್ದೆ ಹದ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.

Advertisement

ಉಡುಪಿ/ಮಂಗಳೂರು: ಕರಾವಳಿ ಯಲ್ಲಿ ಈಗಾಗಲೇ ಮಳೆ ಆರಂಭವಾಗಿರು ವುದಿಂದ ದ.ಕ., ಉಡುಪಿ ಜಿಲ್ಲೆಯ ಕೆಲವೆಡೆ ಕೃಷಿ ಚಟುವಟಿಕೆಗೆ ಚಾಲನೆ ಸಿಕ್ಕಿದೆ. ಈಗಾಗಲೇ ಕೆಲವೆಡೆ ನೇಜಿ ತಯಾರಿ ನಡೆದಿದೆ. ಒಂದೆರಡು ದಿನಗಳಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ.

ಉಡುಪಿ ಜಿಲ್ಲೆಗೆ ಮುಂಗಾರಿನಲ್ಲಿ ಬಿತ್ತನೆಗೆ 2,500 ಕ್ವಿಂಟಾಲ್‌ ಬಿತ್ತನೆ ಬೀಜದ ಆವಶ್ಯಕತೆಯಿದೆ. ಸದ್ಯ ಎಂಒ4, ಉಮಾ ಹಾಗೂ ಜ್ಯೋತಿ ತಳಿಯ ಒಟ್ಟು 1,335 ಕ್ವಿಂಟಾಲ್‌ ಬಿತ್ತನೆ ಬೀಜ ಬಂದಿದ್ದು, ಈವರೆಗೆ 233 ರೈತರಿಗೆ 117 ಕ್ವಿಂಟಾಲ್‌ ಬೀಜ ವಿತರಣೆ ಮಾಡ ಲಾಗಿದ್ದು, 1,167 ಕ್ವಿಂಟಾಲ್‌ ದಾಸ್ತಾನು ಇದೆ.

ನಮ್ಮಲ್ಲಿ ರಸಗೊಬ್ಬರದ ಆವಶ್ಯಕತೆ ಈಗ ಕಡಿಮೆ. ಜುಲೈ, ಆಗಸ್ಟ್‌ನಲ್ಲಿ ಹೆಚ್ಚಿರುತ್ತದೆ. ಅದಾಗ್ಯೂ ಸದ್ಯ 1,060 ಟನ್‌ ಪಿಎಪಿ, ಎಂಒಪಿ, ಎನ್‌ಪಿಕೆ ಮತ್ತು ಯೂರಿಯಾ ಮೊದಲಾದ ರಸಗೊಬ್ಬರದ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಯೊಬ್ಬರು ಮಾಹಿತಿ ನೀಡಿದ್ದಾರೆ.

ಹೊಸಬರಿಗೆ ಆದ್ಯತೆ
ಬಿತ್ತನೆ ಬೀಜ ಎಲ್ಲರಿಗೂ ನೀಡಲಾಗುತ್ತದೆ. ಆದರೆ ಮೊದಲು ಹೊಸಬರಿಗೆ ಆದ್ಯತೆ ಇರುತ್ತದೆ. ಒಮ್ಮೆ ಬೀಜ ತೆಗೆದುಕೊಂಡರೆ ಮೂರು ವರ್ಷ ಬಳಕೆ ಮಾಡಬಹುದು. ಮೂರು ವರ್ಷಕ್ಕೊಮ್ಮೆ ಬದಲಾವಣೆ ಮಾಡಬಹುದಾಗಿದೆ. ಜತೆಗೆ ಪ್ರತಿ ವರ್ಷ ಶೇ. 38ರಷ್ಟು ಬದಲಾವಣೆಗೆ ಅವಕಾಶ ಇರುತ್ತದೆ. ಈಗಾಗಲೇ ಬೀಜ ಪಡೆದವರಿಗೆ ಕಡ್ಡಾಯವಾಗಿ ನೀಡುವುದಿಲ್ಲ ಎಂಬ ಯಾವ ನಿಯಮವೂ ಇಲ್ಲ. ಲಭ್ಯವಿರುವ ಬೀಜದಲ್ಲಿ ಹೊಂದಿಸಿ ನೀಡಲಿದ್ದೇವೆ ಎಂದರು.

Advertisement

ಗುರಿ ಹೆಚ್ಚಳ
ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಸರಾಸರಿ 36 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿತ್ತು. ಕಳೆದ ವರ್ಷ 37,290 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಈ ವರ್ಷ 38 ಸಾವಿರ ಗುರಿ ಇಟ್ಟುಕೊಂಡಿದ್ದೇವೆ. ಒಟ್ಟಾರೆಯಾಗಿ ಕಳೆದ ಎರಡು ವರ್ಷದಲ್ಲಿ ಎರಡು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಬಿತ್ತನೆಯಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ದ.ಕ.: 9,435 ಹೆಕ್ಟೇರ್‌ ಭತ್ತದ ಕೃಷಿ ಗುರಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಧಾನಕ್ಕೆ ಕೃಷಿ ಕಾರ್ಯ ಆರಂಭವಾಗುತ್ತಿದೆ. ನೇರ ಬಿತ್ತನೆ ಕಾರ್ಯ ಮಳೆಗಾಲ ಆರಂಭಗೊಂಡ ಅನಂತರವೇ ಇಲ್ಲಿ ಶುರುವಾಗುವ ಸಾಧ್ಯತೆ ಇದೆ.

ಕೃಷಿ ಇಲಾಖೆಯವರು ಈ ವರ್ಷ 9,435 ಹೆಕ್ಟೇರ್‌ ಗದ್ದೆಯಲ್ಲಿ ಭತ್ತದ ಕೃಷಿ ಕೈಗೊಳ್ಳುವ ಗುರಿ ಇರಿಸಿಕೊಂಡಿದ್ದಾರೆ. ಪ್ರಸ್ತುತ 833 ಕ್ವಿಂಟಾಲ್‌ ಭತ್ತದ ಬೀಜಕ್ಕೆ ಇಂಡೆಂಟ್‌ ಬಂದಿದೆ. ಜಿಲ್ಲೆಯಲ್ಲಿ 3297.95 ಮೆಟ್ರಿಕ್‌ ಟನ್‌ ರಸಗೊಬ್ಬರದ ದಾಸ್ತಾನು ಲಭ್ಯವಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಯಂತ್ರಶ್ರೀ ಕೃಷಿ ಕ್ರಾಂತಿ
ಭತ್ತದ ಕೃಷಿಯಲ್ಲಿ ಕ್ರಾಂತಿ ಮಾಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಯಂತ್ರಶ್ರೀ ಕಾರ್ಯಕ್ರಮವನ್ನು ಕಳೆದ 3 ವರ್ಷಗಳಿಂದ ಮಾಡುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ಕುಂದಾಪುರದಾದ್ಯಂತ 1,000 ಎಕರೆ ಗುರಿಯನ್ನು ನಿಗದಿಗೊಳಿಸಿದೆ. ಯಂತ್ರಶ್ರೀ ಕಾರ್ಯಕ್ರಮದ ಭಾಗವಾಗಿ ಈಗ ಕಾಳಾವರದಲ್ಲಿ ಕೃಷಿಕರಾದ ಸುಜಿತ್‌ ಕುಮಾರ್‌ ಶೆಟ್ಟಿ ಅವರ ನೇತೃತ್ವದಲ್ಲಿ 309 ಎಕರೆ ಭತ್ತದ ನರ್ಸರಿ ಹಾಗೂ ಬೆಳ್ವೆಯಲ್ಲಿ ಕೃಷ್ಣ ನಾಯ್ಕ ಅವರ ನೇತೃತ್ವದಲ್ಲಿ 100 ಎಕರೆಗೆ ಬೇಕಾಗುವ ಸಸಿಮಡಿಗೆ ಮಣ್ಣು ತಯಾರಿ/ಬೀಜ ಸಂಗ್ರಹಿಸಲಾಗಿದೆ. ಈ ಬಗ್ಗೆ ಈಗಾಗಲೇ ಯೋಜನೆಯಿಂದ ಬೇರೆ – ಬೇರೆ ಭಾಗದ ರೈತರಿಗೆ ಮಾಹಿತಿ ನೀಡಲಾಗಿದೆ. ಬಿತ್ತನೆ ಬೀಜ ಖರೀದಿ, ಹಸಿರೆಲೆ ಗೊಬ್ಬರ ಬಳಕೆ, ಗದ್ದೆ ಉಳುಮೆ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರಸ್ತುತ ಎರಡು ನರ್ಸರಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದ ಮಾರ್ಗದರ್ಶನದಲ್ಲಿ ಮಾಡುತ್ತಿದ್ದು, ಆಸಕ್ತ ರೈತರು ಈ ಬಗ್ಗೆ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next