Advertisement

ಗಾಳಿಮಳೆ ಬಂದ್ರೆ ವಿದ್ಯುತ್‌ ಸ್ಥಗಿತ, ನೀರಿಗೆ ಹಾಹಾಕಾರ

01:45 PM Jun 11, 2022 | Team Udayavani |

ಯಳಂದೂರು: ಗಾಳಿ ಮಳೆ ಬಂದರೆ ವಿದ್ಯುತ್‌ ಸಮಸ್ಯೆ ಗೊಂಡು ಬಿಳಿಗಿರಿರಂಗನಬೆಟ್ಟದ ಪೋಡಿನ ನಿವಾಸಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದು. ಇದನ್ನು ಪರಿಹರಿಸಲು ಎರಡು ಮೂರು ದಿನಗಳು ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.!

Advertisement

ತಾಲೂಕಿನ ಪ್ರಸಿದ್ಧ ಯಾತ್ರೆ ಹಾಗೂ ಪ್ರವಾಸಿ ಕ್ಷೇತ್ರದ ಪೋಡು ಗಳಾದ ಬಂಗ್ಲೆಪೋಡು, ಯರಕನಗದ್ದೆ, ಸೀಗೆಬೆಟ್ಟ, ಹೊಸಪೋಡು, ಕಲ್ಯಾಣಿಪೋಡು ಸೇರಿದಂತೆ ಒಟ್ಟು 710ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಸ್ಥಳವಾಗಿದೆ. ಇಲ್ಲಿನ ಜನರಿಗೆ ಸಮಪರ್ಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಪರದಾಡುವುದು ನಿತ್ಯ ಕಾಯಕ ವಾಗಿದೆ. ಅರಣ್ಯ ಪ್ರದೇಶವಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ವಿದ್ಯುತ್‌ ಸಂಪರ್ಕ ಹಾದು ಹೋಗಿರುವ ಸ್ಥಳಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೆ, ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. ಆ ಸಮಯದಲ್ಲಿ ಕೈ ಪಂಪಿನ ನೀರಿಗೆ ಕಾಯುವ ಸ್ಥಿತಿ ಇಲ್ಲಿನ ನಾಗರಿಕರದ್ದು.

ದುರಸ್ತಿಗೆ ಮೂರು ದಿನ ಕಾಯಬೇಕು: ವಿದ್ಯುತ್‌ ಕಂಬ ಬಿದ್ದರೆ, ತಂತಿ ಕೆಳಕ್ಕೆ ಬಿದ್ದರೆ ಇದನ್ನು ದುರಸ್ತಿ ಪಡಿಸಲು ಎರಡು ಮೂರು ದಿನಗಳ ಕಾಲ ಬೇಕಾಗುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ನಿತ್ಯ ಭಕ್ತರು ಆಗಮಿಸುತ್ತಾರೆ. ವಿದ್ಯುತ್‌ ಇಲ್ಲದಿದ್ದರೆ ಕುಡಿಯುವ ನೀರೂ ಇಲ್ಲದ ಕಾರಣ ಭಕ್ತರು ಪರದಾಡುವ ಸ್ಥಿತಿ ಇದೆ.

ಸೆಸ್ಕ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ: ಬಿಳಿಗಿರಿ ರಂಗನಬೆಟ್ಟದಲ್ಲಿ ಮಳೆಗಾಲದಲ್ಲಿ ಮಳೆ, ಬಿರುಗಾಳಿಗೆ ವಿದ್ಯುತ್‌ ಸಮಸ್ಯೆಯು ನಿರಂತರವಾಗಿ ತೊಂದರೆಯಾ ಗುತ್ತಿದೆ. ಬೆಟ್ಟದಲ್ಲಿ ಲೈನ್‌ಮೆನ್‌ ಇದ್ದರೂ ಸಹ ಕೆಲಸ ಮಾಡುವುದಿಲ್ಲ ಎಂಬುದು ಸ್ಥಳೀಯರ ದೂರಾಗಿದೆ. ಈ ಕೆಲಸ ನಿಧಾನವಾಗುವುದರಿಂದ 1 ರಿಂದ 2 ದಿನಗಳ ವಿದ್ಯುತ್‌ಗೆ ಕಾಯಕಬೇಕು. ಜತೆಗೆ ಇಲಾಖೆ ಅಧಿಕಾರಿಗಳಿಗೆ ಮೊಬೈಲ್‌ಗೆ ಕರೆ ಮಾಡಿದ್ದಾರೆ ಸ್ವಿಚ್‌ ಆಫ್ ಆಗಿರುತ್ತದೆ. ರಾತ್ರಿ ವೇಳೆಯಲ್ಲಿ ಕಾಡು ಪ್ರಾಣಿಗಳ ಕಾಟವು ಹೆಚ್ಚಾಗಿದ್ದು ಭಯದಲ್ಲಿ ಬದುಕು ಸವೆಸುವ ಸ್ಥಿತಿ ಇದೆ ಎಂಬುದು ಸ್ಥಳೀಯ ಬೇದೆಗೌಡ ಸೇರಿದಂತೆ ಹಲವರ ದೂರಾಗಿದೆ.

ಮಳೆ ಬಂದರೆ ಬೆಟ್ಟದಲ್ಲಿ ವಿದ್ಯುತ್‌ ಸಮಸ್ಯೆ ಉಂಟಾಗಿ ಕುಡಿಯುವ ನೀರಿಗೆ ಜನರು ಪರದಾಡಬೇಕು. ಸೆಸ್ಕ್ ಇಲಾಖೆ ಸಿಬ್ಬಂದಿ ಬೆಟ್ಟದಲ್ಲಿ ವಾಸ ಮಾಡದ ಕಾರಣ ಸಾಕಷ್ಟ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜ ವಾಗಿಲ್ಲ, ಆದ್ದರಿಂದ ಸಂಬಂಧಪಟ್ಟ ಮೇಲಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. -ವೆಂಕಟೇಶ್‌, ಬೆಟ್ಟದ ನಿವಾಸಿ

Advertisement

ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ವಿದ್ಯುತ್‌ ಸಮಸ್ಯೆಯಿಂದ ಕುಡಿಯುವ ನೀರಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಈ ಕೂಡಲೇ ಪಿಡಿಒಯಿಂದ ಮಾಹಿತಿ ತಿಳಿದುಕೊಳ್ಳುತ್ತೇನೆ. ವಿದ್ಯುತ್‌ ಸಮಸ್ಯೆಯಾದರೆ ಕೂಡಲೇ ನೌಕರರು ಸರಿಪಡಿಸುವಂತೆ ಸೂಚನೆ ನೀಡುತ್ತೇನೆ. ಮುಂದೆ ಈ ಸಮಸ್ಯೆ ಆಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು. – ನಿಂಗರಾಜು, ಸೆಸ್ಕ್ ಎಇಇ

ತಾಲೂಕಿನ ಬಿಳಿಗಿರಿ ರಂಗನಬೆಟ್ಟದಲ್ಲಿ ವಿದ್ಯುತ್‌ ಸಮಸ್ಯೆಯಾದರೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದು, ಸ್ಥಳೀಯ ಮಟ್ಟದಲ್ಲಿ ವಿದ್ಯುತ್‌ ಇಲಾಖೆ ಸಿಬ್ಬಂದಿ ಇಲ್ಲವಾದ ಕಾರಣ ದೊಡ್ಡ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಬೆಟ್ಟದಲ್ಲಿ ಸೆಸ್ಕ್ ಸಿಬ್ಬಂದಿ ವಾಸ ಮಾಡುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗುವುದು. -ಸ್ವಾಮಿ, ಪಿಡಿಒ ಬಿಳಿಗಿರಿರಂಗನೆಬೆಟ್ಟ

 

-ಫೈರೋಜ್‌ಖಾನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next