Advertisement

ಡಾ|ಸೋಮಶೇಖರ ಇಮ್ರಾಪೂರ ಅವರಿಗೆ 2022ನೇ ಸಾಲಿನ ಅಂಬಿಕಾತನಯದತ್ತ ಪ್ರಶಸ್ತಿ

08:08 PM Jan 19, 2022 | Team Udayavani |

ಧಾರವಾಡ : ಡಾ| ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೊಡ ಮಾಡುವ 2022ನೇ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಕವಿ, ಸಂಶೋಧಕ, ಜಾನಪದ ತಜ್ಞ ಡಾ|ಸೋಮಶೇಖರ ಇಮ್ರಾಪುರ ಭಾಜನರಾಗಿದ್ದಾರೆ.

Advertisement

1 ಲಕ್ಷ ನಗದು, ಸ್ಮರಣಿಕೆ ಒಳಗೊಂಡ ಈ ಪ್ರಶಸ್ತಿ ಆಯ್ಕೆಗೆ ಡಾ| ಗುರುದೇವಿ ಹುಲೆಪ್ಪನವರಮಠ ಅಧ್ಯಕ್ಷತೆಯಲ್ಲಿ ಡಾ|ವೆಂಕಟಗಿರಿ ದಳವಾಯಿ ಹಾಗೂ ಡಾ|ಎಮ್.ಬಿ. ಹೂಗಾರ ಅವರನ್ನೊಳಗೊಂಡ ಸಮಿತಿಯು ಜ.7 ರಂದು ಸಭೆ ಸೇರಿ ನಿರ್ಣಯ ಕೈಗೊಂಡು ಮುಚ್ಚಿದ ಲಕೋಟೆಯಲ್ಲಿ ಪ್ರಶಸ್ತಿಗೆ ಅರ್ಹರನ್ನು ಶಿಫಾರಸ್ಸು ಮಾಡಿತ್ತು. ಈಗ ಬುಧವಾರ ಟ್ರಸ್ಟ್ ಸದಸ್ಯರು ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಂಡು, ಡಾ|ಇಮ್ರಾಪೂರ ಹೆಸರನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿ ಆಯ್ಕೆ ಸಮಿತಿಯು ಕನ್ನಡದ 10-12 ಪ್ರಮುಖ ಕವಿಗಳ ಹೆಸರುಗಳನ್ನು ಪಟ್ಟಿ ಮಾಡಿಕೊಂಡಿತ್ತು. ಅಂತಿಮವಾಗಿ ಡಾ|ಸೋಮಶೇಖರ ಇಮ್ರಾಪುರ, ಡಾ|ಮಲ್ಲಿಕಾ ಘಂಟಿ ಹಾಗೂ ಜಿನದತ್ತ ದೇಸಾಯಿ ಅವರ ಹೆಸರುಗಳನ್ನು ಶಿಫಾರಸ್ಸು ಮಾಡಿತ್ತು. ಕೊನೆಗೆ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಟ್ರಸ್ಟಿನ ಸಭೆ ಕೈಗೊಂಡು, ಡಾ|ಸೋಮಶೇಖರ ಇಮ್ರಾಪುರ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಇದಲ್ಲದೇ ಮುಂಬರುವ ದಿನಗಳಲ್ಲಿ ಯುವ ಪುರಸ್ಕಾರ ಪ್ರಾರಂಭಿಸುವ ಕುರಿತು ಕೂಡಾ ಚರ್ಚಿಸಲಾಯಿತು.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಟ್ರಸ್ಟ ಅಧ್ಯಕ್ಷ ಡಾ|ಡಿ.ಎಂ.ಹಿರೇಮಠ, ಭಾಷೆ ಹಾಗೂ ಜನಪದ ಸೊಗಡಿನ ತತ್ವದ ದೃಷ್ಟಿಯಿಂದ ದ.ರಾ. ಬೇಂದ್ರೆ ಅವರ ನಂತರ ಆ ಮಾರ್ಗದಲ್ಲಿ ಅತ್ಯಂತ ಸಮರ್ಥವಾಗಿ ಕೆಲಸ ಮಾಡಿದವರಲ್ಲಿ ಡಾ|ಚಂದ್ರಶೇಖರ ಕಂಬಾರ ಹಾಗೂ ಡಾ| ಸೋಮಶೇಖರ ಇಮ್ರಾಪುರ ಮಹತ್ವದ ಕವಿಗಳಾಗಿದ್ದಾರೆ. ಇಮ್ರಾಪೂರ ಅವರಿಗೆ ಪ್ರಸಕ್ತ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜ.೩೧ ರಂದು ಕೋವಿಡ್ ನಿಯಮಾವಳಿ ಪ್ರಕಾರ ಪ್ರಶಸ್ತಿ ಪುರಸ್ಕೃತರ ಸಾಹಿತ್ಯ ಸಾಧನೆಗಳ ಕುರಿತ ಗೋಷ್ಠಿ. ಸಂಜೆ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ ಸದಸ್ಯರಾದ ಡಾ|ನಿಜಲಿಂಗಪ್ಪ ಮಟ್ಟಿಹಾಳ, ಸದಸ್ಯ ಕಾರ್ಯದರ್ಶಿ ಮಂಜುಳಾ ಯಲಿಗಾರ ಇದ್ದರು.

ಇದನ್ನೂ ಓದಿ : ಜಾಗ ಮಂಜೂರಾತಿಗಾಗಿ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

Advertisement

ಡಾ| ಸೋಮಶೇಖರ್ ಇಮ್ರಾಪುರ ಪರಿಚಯ:
ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ 1940 ರಲ್ಲಿ ಜನಿಸಿದ್ದಾರೆ. ಸ್ವರ್ಣ ಪದಕದೊಂದಿಗೆ ಎಂ.ಎ. ಕನ್ನಡ ಪದವಿ ಪಡೆದು, ಜಾನಪದ ಒಗಟುಗಳು ಕುರಿತ ಮಹಾಪ್ರಬಂಧಕ್ಕೆ ಪಿಹೆಚ್ಡಿ ಪದವಿಯನ್ನು ಕವಿವಿಯಿಂದ ಪಡೆದಿದ್ದಾರೆ. ಪ್ರಾಧ್ಯಾಪಕರಾಗಿ, ವಿವಿಧ ಅಽಕಾರ ಸ್ಥಾನಗಳಲ್ಲಿ ಸುಧೀರ್ಘ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ಕವಿವಿ ಜಾನಪದ ಅಧ್ಯಯನ ವಿಭಾಗದ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಜಾನಪದ ವಸ್ತುವಿನ್ಯಾಸ, ಭಾಷಾ ಪ್ರಯೋಗ, ಶೈಲಿ, ತಂತ್ರ, ಅಚ್ಚಗನ್ನಡ, ಛಂದೋಲಯಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ. ಗಂಡ-ಹೆಂಡಿರ ಜಗಳ ಗಂಧ ತೀಡಿದ್ಹಾಂಗ ಎಂಬ ಕವನ ಸಂಕಲನ ಮೂಲಕ ಅಪಾರ ಕೀರ್ತಿ ಗಳಿಸಿದ್ದಾರೆ. ಜನಪದ ಆಲೋಕನ ಗ್ರಂಥ ವಿದ್ವತ್ ವಲಯದಲ್ಲಿ ಮನ್ನಣೆ ಪಡೆದಿದೆ. ಬಿಸಿಲು ಹೂ, ಬೆಳದಿಂಗಳು, ಬೆಳಕಿನ ಬೀಜ, ಭೂತನಿ, ಬಿರುಗಾಳಿ, ಬೆಂಕಿ ಸೇರಿದಂತೆ ಹಲವಾರು ಕವನ ಸಂಕಲನಗಳು, ಸಂಪಾದನೆ, ವಿಮರ್ಶೆ ಕೃತಿಗಳನ್ನು ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next