Advertisement

ಜಿಲ್ಲಾದ್ಯಂತ ಡಾ.ರಾಜ್ ಜನ್ಮದಿನಾಚರಣೆ

03:15 PM Apr 25, 2019 | Suhan S |

ರಾಮನಗರ: ಕನ್ನಡದ ಮೇರುನಟ ಡಾ.ರಾಜ್‌ಕುಮಾರ್‌ ಅವರ ಜೀವನ ಹಾಗೂ ಚಲನಚಿತ್ರಗಳಲ್ಲಿ ತಾವು ನಿರ್ವಹಿಸಿದ ಪಾತ್ರಗಳಿಂದ ಸ್ಪೂರ್ತಿ ಪಡೆದು ಜೀವನ ಕಟ್ಟಿಕೊಂಡಿದ್ದಾರೆ ಎಂದು ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್‌.ಶಂಕರಪ್ಪ ಅಭಿಪ್ರಾಯಪಟ್ಟರು.

Advertisement

ನಗರದ ಸರ್ಕಾರಿ ಕಚೇರಿಗಳ ಸಂಕಿರ್ಣದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿದ್ದ ಡಾ. ರಾಜ್‌ಕುಮಾರ್‌ ಅವರ 91ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ.ರಾಜ್‌ಕುಮಾರ್‌ ಅವರ ವಹಿಸಿದ ಪಾತ್ರಗಳು ಜೀವನಕ್ಕೆ ಅತ್ಯಂತ ಸಮೀಪವಾಗಿದ್ದವು. ಅವರ ನೈಜ ಅಭಿನಯ ಜನಮೆಚ್ಚುಗೆಗಳಿಸಿತ್ತು. ನಟನೆಯ ಮೂಲಕ ಇಡೀ ದೇಶದ ಗಮನವನ್ನು ಸೆಳೆದಿದ್ದರು. ಅತ್ಯಂತ ಸರಳ ಜೀವನ ಸಾಗಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದರು. ಇದೇ ಸರಳತನ ಅನೇಕ ಸಾಮಾನ್ಯರು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ ಎಂದರು.

ಗೋಕಾಕ್‌ ಚಳವಳಿ: ಕನ್ನಡ ಪ್ರಥಮ ಭಾಷೆಯಾಗಬೇಕು ಎಂದು ನಡೆದ ಗೋಕಾಕ್‌ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಂತರು. ಕನ್ನಡ ಭಾಷೆಯ ಬಗ್ಗೆ ಅವರಿಗಿದ್ದ ಬದ್ಧತೆಯಿಂದಾಗಿ ಅವರು ಕನ್ನಡಿಗರ ಹೃನ್ಮಗಳಲ್ಲಿ ಮತ್ತಷ್ಟು ಗಟ್ಟಿಯಾಗಿ ನಿಂತರು ಎಂದು ವಿವರಿಸಿದರು.

ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಾ.ಶಿ.ಬಸವರಾಜ್‌ ಅವರು ಡಾ.ರಾಜ್‌ ಅವರ ಚಿತ್ರಗಳು, ಅಭಿನಯದ ಬಗ್ಗೆ ಮಾತನಾಡಿ, ರಾಮನಗರದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ನಿರ್ಮಾಣದ ಸಂದರ್ಭದಲ್ಲಿ ನಗರಸಭೆಗೆ ಆರ್ಥಿಕ ಕೊರತೆ ಉಂಟಾಗಿತ್ತು. ಡಾ.ರಾಜ್‌ ಕುಮಾರ್‌ ಅವರು ರಸಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಅದರಿಂದ ಬಂದ ಲಾಭದ ಹಣ ಭವನ ನಿರ್ಮಾಣಕ್ಕೆ ಸಹಕಾರಿಯಾಯಿತು ಎಂದರು.

ಡಾ.ರಾಜ್‌ ಕುಮಾರ್‌ ಅವರಿಗೆ ಬಿಡದಿ ತಟ್ಟೆ ಇಡ್ಲಿ ಕೂಡ ಪ್ರಿಯವಾಗಿತ್ತು. ರಾಮನಗರದಲ್ಲಿ ಚಿತ್ರೀಕರಣಗೊಂಡ ಚಿತ್ರಗಳ ಬಗ್ಗೆ ಅವರು ಮಾಹಿತಿ ನೀಡಿದರು.

Advertisement

ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಅವರು ಡಾ.ರಾಜ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌ ಮತ್ತು ಅಧಿಕಾರಿಗಳು ಸಹ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.

ಜಿಲ್ಲಾ ಖಜಾನಾಧಿಕಾರಿ ವಿರೂಪಾಕ್ಷಯ್ಯ, ಜಿಪಂ ಉಪಕಾರ್ಯದರ್ಶಿ ಉಮೇಶ್‌, ಡಿಎಚ್ಒ ಡಾ. ಅಮರ್‌ನಾಥ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ರಾಜು, ಕರ್ನಾಟಕ ವಿಮಾ ಇಲಾಖೆಯ ಅಧಿಕಾರಿ ನಾಗರಾಜು, ರಾಜ್‌ಕುಮಾರ್‌ ಅಭಿಮಾನಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ಜಗದೀಶ್‌, ಅರುಣ್‌ಕುಮಾರ್‌, ಪ್ರಕಾಶ್‌, ಪ್ರಶಾಂತ್‌ ಇತರರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಭಿನಯದಿಂದ ಸಾಮಾಜಿಕ ಕಳಕಳಿ:

ಚನ್ನಪಟ್ಟಣ ಅಭಿನಯದ ಮುಖಾಂತರ ಸಾಮಾಜಿಕ ಕಳಕಳಿ ಹೊಂದಿದ ಕಲಾವಿದ ಡಾ. ರಾಜ್‌ ಕುಮಾರ್‌ರವರು ಎಂದು ತಾಲೂಕು ದಂಡಾಧಿಕಾರಿ ದಿನೇಶ್‌ಶ್ಚಂದ್ರ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಆಯೋಜಿಸಲಾಗಿದ್ದ ಪದ್ಮಭೂಷಣ, ಡಾ.ರಾಜ್‌ಕುಮಾರ್‌ರವರ 91 ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಡಾ. ರಾಜ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಹಲವಾರು ಪ್ರಶಸ್ತಿ, ಬಿರುದುಗಳನ್ನು ಪಡೆದಿರುವ ಡಾ.ರಾಜ್‌ಕುಮಾರ್‌ ಕನ್ನಡ ಚಿತ್ರರಂಗದ ದಿಗ್ಗಜರೆನಿಸಿಕೊಂಡಿದ್ದಾರೆ. ತಾನು ನಟಿಸಿದ ನೂರಾರು ಸಿನಿಮಾಗಳಲ್ಲಿ ಸಾಮಾಜಿಕ ಸಂದೇಶವನ್ನು ನೀಡಿ, ಸಮಾಜ ಮುಖೀಯಾದವರು ಡಾ. ರಾಜ್‌ ಎಂದರು.

ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲಾಗಿ ತನ್ನ ಕಲಾ ನಿಪುಣತೆಯನ್ನು ಅನಾವರಣ ಮಾಡಿದ ಡಾ.ರಾಜ್‌ ಅವರ ಕೊಡುಗೆ ಕನ್ನಡ ಚಿತ್ರರಂಗಕ್ಕಲ್ಲದೆ ಕರುನಾಡಿಗೂ ವಿಸ್ತರಿಸಿದ್ದು, ಹಲವಾರು ಜನರ ಜೀವನ ಸಾರ್ಥಕತೆಗೆ ಕಾರಣವಾಗಿದೆ ಎಂದು ಹೇಳಿದರು.

ಸರ್ಕಾರ ಡಾ.ರಾಜ್‌ಕುಮಾರ್‌ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡಲು ಆದೇಶ ಮಾಡಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಮಹಾನ್‌ನಾಯಕ ನಟರ ತತ್ವ ಆದರ್ಶಗಳು ಪ್ರತಿಯೊ ಬ್ಬರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಳೂರು ಕಂದಾಯ ನಿರೀಕ್ಷಕ ಲಕ್ಷ್ಮಣಗೌಡ, ಆಹಾರ ನಿರೀಕ್ಷಕ ಮಲ್ಲಿಕಾರ್ಜುನ, ನಗರಸಭಾ ಸದಸ್ಯ, ದಲಿತ ಮುಖಂಡ ಗೋವಿಂದರಾಜು, ಕಚೇರಿಯ ಅಧಿಕಾರಿಗಳಾದ ಹರೀಶ್‌, ಜಯರಾಮು, ಬಿಂದು, ಬಿ.ಟಿ.ಪಾರ್ವತಮ್ಮ, ಇರ್ಫಾನ್‌, ಪ್ರಭಾಕರ್‌, ಪೂಜಾ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next