Advertisement
‘ಜನ ಸೇವೆಯೇ ಜನಾರ್ದನ ಸೇವೆ’ ಎನ್ನುವ ಮಾತಿನಂತೆ ದಶಕದಿಂದ ಧರ್ಮಸಿಂಗ್ ಫೌಂಡೇಷನ್ ಮೂಲಕ ಈಗಾಗಲೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ| ಅಜಯಸಿಂಗ್ ಕೋವಿಡ್ ಭೀತಿಯಿಂದ ತತ್ತರಿಸಿರುವ ಜೇವರ್ಗಿ ಕ್ಷೇತ್ರದ ಸಾವಿರಾರು ಬಡ ಜನತೆಯ ಕಣ್ಣೀರು ಒರೆಸಿದ್ದಾರೆ. ಅಲ್ಲದೇ ಕ್ಷೇತ್ರಾದ್ಯಂತ ಸಂಚರಿಸಿ ಜನರ ಮನೆ ಬಾಗಿಲಿಗೆ ಹೋಗಿ ಪಡಿತರ ಕಿಟ್ ವಿತರಿಸಿ ಮಾತನಾಡಿಸಿ, ಕೋವಿಡ್ 19 ವೈರಸ್ ಕುರಿತು ಜಾಗೃತಿ ಮೂಡಿಸಿ ಮಾದರಿ ಕಾರ್ಯ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಿಲುಕಿರುವ ಕಾರ್ಮಿಕರಿಗೆ ಶಾಸಕರು ಆಹಾರ ಧಾನ್ಯ ವಿತರಿಸಿದರು.
Related Articles
ಡಾ| ಅಜಯಸಿಂಗ್ ಅವರ ಹಾಗೆ ಪರಿಣಾಮಕಾರಿಯಾಗಿ ಅತ್ಯಂತ ಗುಣಮಟ್ಟದ ವಸ್ತುಗಳನ್ನು ನೀಡಿ ಯಾರೂ ಸ್ಪಂದಿಸಿಲ್ಲ ಎಂಬುದು ಹಲವರ ಅಭಿಪ್ರಾಯ. ಕೆಲವು ಅಧಿಕಾರಿಗಳಂತೂ ಜೇವರ್ಗಿ ಶಾಸಕರಂತೆ ಸ್ಪಂದಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಮನಃಪೂರ್ವಕ ಕೆಲಸಗಾರ: ಡಾ| ಅಜಯಸಿಂಗ್ ಯಾವುದಾದರೂ ಕೆಲಸ ಆರಂಭಿಸಿದರೆ ಅದು ಪೂರ್ಣವಾಗುವ ವರೆಗೂ ಬಿಡುವವರಲ್ಲ. ಇದಕ್ಕೆ ಕ್ಷೇತ್ರದಲ್ಲಾದ ಕಾರ್ಯಗಳೇ ಸಾಕ್ಷಿಯಾಗಿವೆ. ಈ ಹಿಂದೆ ಆರೋಗ್ಯ ಶಿಬಿರಗಳನ್ನು ನಡೆಸಿ ಸಾವಿರಾರು ರೋಗಿಗಳಿಗೆ ಲಕ್ಷಾಂತರ ರೂ. ವೆಚ್ಚದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಿ ಕೊಟ್ಟಿರುವುದೇ ದೊಡ್ಡ ಸಾಕ್ಷಿ.
ಪ್ರಸ್ತುತ ಕೋವಿಡ್ 19 ವೈರಸ್ ಸಂದರ್ಭದಲ್ಲಿ ಸಿಲುಕಿರುವ ಬಡವರಿಗೆ, ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಎಲ್ಲ ನಿಟ್ಟಿನಿಂದ ಸ್ಪಂದಿಸುತ್ತಿದ್ದು, ಪಡಿತರ ಒಮ್ಮೆ ಕೊಟ್ಟರೆ ಖಾಲಿಯಾಗಬಹುದು. ಆದರೆ ಪ್ರತಿದಿನ ಆಹಾರ ಪೊಟ್ಟಣ ನೀಡಿದರೆ ಸದುಪಯೋಗವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಅಡುಗೆಯನ್ನೇ ಮಾಡಿ ಪೂರೈಸಲಾಗುತ್ತಿದೆ. ಇದಕ್ಕೆ ಬೇಕಾಗುವ ತರಕಾರಿ, ದವಸ ಧಾನ್ಯ ರೈತರಿಂದಲೇ ಖರೀದಿ ಮಾಡುವ ಮೂಲಕ ರೈತರಿಗೂ ನೆರವಾಗಿದ್ದಾರೆ.
ಜೇವರ್ಗಿ ಪಟ್ಟಣದ ಗುಡಿಸಲಲ್ಲಿ ವಾಸಿಸುತ್ತಿರುವ ಬಡವರಿಗೆ ಆಹಾರದ ಪೊಟ್ಟಣಗಳನ್ನು ಧರ್ಮಸಿಂಗ್ ಫೌಂಡೇಷನ್ ವತಿಯಿಂದ ವಿತರಿಸುತ್ತಿರುವುದು. ಮುಖ್ಯ ಸಚೇತಕರಾಗಿ ಡಾ| ಸಿಂಗ್
ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕರಾಗಿ ಡಾ| ಅಜಯಸಿಂಗ್ ಆಯ್ಕೆಯಾಗುತ್ತಿದ್ದಂತೆ ಕೋವಿಡ್ 19 ವೈರಸ್ ಗೆ ದೇಶದಲ್ಲೇ ಮೊದಲ ಸಾವು ಕಲಬುರಗಿಯಲ್ಲಿ ಸಂಭವಿಸಿದ್ದರಿಂದ ಪ್ರಯೋಗಾಲಯ ಪ್ರಾರಂಭವಾಗಬೇಕೆಂದು ವಿಧಾನಸಭೆಯಲ್ಲಿ ಬಲವಾಗಿ ಒತ್ತಾಯಿಸಿದರು. ಹಿಂದುಳಿದ ಭಾಗಕ್ಕೆ ಕೋವಿಡ್ ಪರೀಕ್ಷಾ ಕೇಂದ್ರ ಆಗಲೇಬೇಕೆಂದು ಪಟ್ಟು ಹಿಡಿದಿದ್ದರು. ವೈದ್ಯರಾಗಿ ಇವರು ನೀಡಿದ ಸಲಹೆಗಳನ್ನು ಸರ್ಕಾರ ಸ್ವಾಗತಿಸಿ ಕಾರ್ಯರೂಪಕ್ಕೆ ತಂದಿತು. ಅದೇ ರೀತಿ ಕಲಬುರಗಿಗೆ ಆಗಮಿಸಿದ ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ವಾಸ್ತವ ಸ್ಥಿತಿಗತಿಗಳನ್ನು ಅವಲೋಕಿಸಿದರು. ಅದೇ ರೀತಿ ಜಿಲ್ಲಾಡಳಿತಕ್ಕೆ ಮಾಸ್ಕ್ ಗಳನ್ನು ಸಲ್ಲಿಸಿದರು. ಮುಖ್ಯವಾಗಿ ಬೆಂಗಳೂರಿನಲ್ಲಿ ಸಿಲುಕಿದ್ದ 1,000ಕ್ಕೂ ಹೆಚ್ಚು ಕಾರ್ಮಿಕರಿಗೆ ಅವರಿದ್ದಲ್ಲಿಗೆ ಹೋಗಿ ಪಡಿತರ ಹಾಗೂ ದಿನಸಿ ಸಾಮಗ್ರಿಗಳನ್ನು ತಲುಪಿಸಿದರು.
ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ 19 ವೈರಸ್ ಕುರಿತಾಗಿ ಶಾಸಕ ಡಾ| ಅಜಯಸಿಂಗ್ ಮಾಹಿತಿ ಪಡೆದರು. ತಂದೆಯ ಹಾದಿಯಲ್ಲಿ ಮಗನ ನಡೆ
ದಿ| ಧರ್ಮಸಿಂಗ್ ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಸಹಾಯಹಸ್ತ ಕೋರಿ ಬಂದವರಿಗೆ ನಿರಾಸೆ ಮಾಡಿ ವಾಪಸ್ ಕಳುಹಿಸಿದವರಲ್ಲ. ಹೀಗಾಗಿಯೇ ಅವರು ಬಡವರ ಭಾಗ್ಯವಿಧಾತರಾಗಿ ಎಲ್ಲರ ಮನದಲ್ಲಿ ಬೇರೂರಿರುವುದು ಎಲ್ಲರಿಗೂ ತಿಳಿದ ಸಂಗತಿ. ಅದೇ ರೀತಿ ಅವರ ಪುತ್ರ ಡಾ| ಅಜಯಸಿಂಗ್ ಸಹ ಎಲ್ಲರೊಂದಿಗೆ ಅನ್ಯೋನ್ಯವಾಗಿ ಬೆರೆತು ಕಷ್ಟ-ನೋವುಗಳಿಗೆ ಸ್ಪಂದಿಸುತ್ತ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಎರಡನೇ ಬಾರಿ ಪ್ರಚಂಡ ಗೆಲುವು ಸಾಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದು ಇದಕ್ಕೆ ಸಾಕ್ಷಿ. ಯಾರೇ ಕರೆದಲ್ಲಿ ಹೋಗುವ ಡಾ| ಅಜಯಸಿಂಗ್ ಅವರು ಎಲ್ಲರೊಂದಿಗೆ ಸ್ವಯಂ ಹಾಗೂ ತಾಳ್ಮೆಯಿಂದ ಇರುವುದನ್ನು ಕಲಿತಿರುವುದೇ ತಂದೆಯಿಂದ. ಹೀಗಾಗಿಯೇ ಕ್ಷೇತ್ರದ ಸರ್ವ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಲಾಕ್ಡೌನ್ದಿಂದ ಹೊಲದಲ್ಲೇ ಹಾಳಾಗಿರುವ ಕಲ್ಲಂಗಡಿ ಹಾಗೂ ಇತರ ತೋಟಗಾರಿಕಾ ಬೆಳೆಗಳನ್ನು ಶಾಸಕ ಡಾ| ಅಜಯಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋವಿಡ್ 19 ವೈರಸ್ ವಿರುದ್ಧ ಯುದ್ಧ
– ಬಡವರಿಗೆ, ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ದಿನಾಲು ಊಟ ಒದಗಿಸಲು ಜೇವರ್ಗಿ ಪಟ್ಟಣ ಸೇರಿ 42 ಪಂಚಾಯತಿಗಳಿಗೆ ದಿನಾಲೂ 14,000 ಮೇಲ್ಪಟ್ಟು ಅನ್ನದ ಪಾಕೆಟ್ಗಳ ವಿತರಣೆ. ಜತೆಗೆ ರೈತರಿಂದ ಖರೀದಿಸಲಾಗುವ ತರಕಾರಿ ಪೂರೈಕೆ. – ಜೇವರ್ಗಿ ತಾಲೂಕಾಡಳಿತಕ್ಕೆ ತಹಶೀಲ್ದಾರ್ ಮೂಲಕ ಈ ವರೆಗೆ 200 ಕ್ವಿಂಟಲ್ಗೂ ಅಧಿಕ ಅಕ್ಕಿ ಧಾನ್ಯ ವಿತರಣೆ. – ಜಿಲ್ಲೆಯ ಸಂಸದರ ಜೊತೆ ಕೋವಿಡ್ 19 ವೈರಸ್ ಕುರಿತಾದ ಸಭೆ. ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ. – ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಿನ ತಹಶೀಲ್ದಾರ್ ಜೊತೆ ನಾಲ್ಕು ಸಭೆ. ಅಧಿಕಾರಿಗಳಿಗೆ ಸೂಚನೆ. – ಜೇವರ್ಗಿ ತಾಲೂಕಿನಾದ್ಯಂತ 30 ಸಾವಿರ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ. – ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ದೊರಕಲು ತಾಲೂಕಿನ ಆಸ್ಪತ್ರೆಗಳ ಪರಿಶೀಲನೆ. – ಜೇವರ್ಗಿ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳಿಗೆ ಸೀಲ್ಡ್ ಮಾಸ್ಕ್ ವಿತರಣೆ. – ಕಲಬುರಗಿ ಜಿಲ್ಲಾಧಿಕಾರಿಗೆ 11,000 ಮಾಸ್ಕ್ ವಿತರಣೆ ಜತೆಗೆ ಜಿಲ್ಲಾಧಿಕಾರಿ ಜೊತೆ ಕೋವಿಡ್ 19 ವೈರಸ್ ಕುರಿತಾದ ಸಭೆ. – ಲಾಕ್ಡೌನ್ದಿಂದ ಬೆಂಗಳೂರಿನಲ್ಲಿ ಸಿಲುಕಿರುವ ಕಲಬುರಗಿ ಜಿಲ್ಲೆಯ ಹಾಗೂ ಜೇವರ್ಗಿ ಕ್ಷೇತ್ರದ ಕಾರ್ಮಿಕರಿಗೆ ಪಡಿತರ ಕಿಟ್ ಹಾಗೂ ಊಟ ವಿತರಣೆ. – ಕಲಬುರಗಿ ಇಎಸ್ಐ ಹಾಗೂ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ.
ಬೇರೆ ಊರಿಗೆ ಹೋಗದೇ ಜೇವರ್ಗಿಯಲ್ಲಿ ಸಿಲುಕಿ ಕ್ವಾರಂಟೈನ್ ಮುಗಿಸಿ ವಾಪಸ್ ತೆರಳುತ್ತಿರುವವರ ಜತೆ ಶಾಸಕ ಡಾ| ಅಜಯಸಿಂಗ್ ಸಮಾಲೋಚನೆ. ಜೇವರ್ಗಿ ಕ್ಷೇತ್ರದ ಅಭಿವೃದ್ಧಿಗೆ ಲಕ್ಷ್ಯ ವಹಿಸುವುದು ಹಾಗೂ ಕ್ಷೇತ್ರದ ಜನರ ನೋವುಗಳಿಗೆ ಸ್ಪಂದಿಸುವುದು ತಮ್ಮ ಪ್ರಥಮ ಆದ್ಯತೆ. ಕೋವಿಡ್ 19 ವೈರಸ್ ನಂತಹ ಸಂಕಷ್ಟದ ಸಂದರ್ಭದಲ್ಲಿ ಪರಿಣಾಮಕಾರಿ ನಿಟ್ಟಿನಲ್ಲಿ ಸ್ಪಂದಿಸಲಾಗುತ್ತಿದೆ. ಯಾವುದೇ ಟೀಕೆಗಳಿಗೆ ಕಿವಿಗೊಡದೇ ಮುಂದೆ ನೋಡಿ ಜನಪರ ಕೆಲಸ ಮಾಡುವುದೇ ತಮ್ಮ ಧ್ಯೇಯವಾಗಿದೆ. ಕೋವಿಡ್ 19 ವೈರಸ್ ನಿಂದ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದು, ತೋಟಗಾರಿಕೆ ಬೆಳಗಳು ಸಂಪೂರ್ಣ ನಾಶವಾಗಿವೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು.
– ಡಾ| ಅಜಯಸಿಂಗ್, ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಿನ 42 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 148 ಹಳ್ಳಿಗಳಿಗೆ ಧರ್ಮಸಿಂಗ್ ಫೌಂಡೇಷನ್ ವತಿಯಿಂದ ಬಡವರಿಗೆ, ನಿರ್ಗತಿಕರಿಗೆ ಹಾಗೂ ಅಲೆಮಾರಿ ಜನಾಂಗದವರಿಗೆ ಶಾಸಕ ಡಾ| ಅಜಯ್ಸಿಂಗ್ ನೇತೃತ್ವದಲ್ಲಿ ಈಗಾಗಲೇ ಎರಡು ಹೊತ್ತು 1.35 ಲಕ್ಷ ಆಹಾರದ ಪೊಟ್ಟಣಗಳನ್ನು ವಿತರಿಸಿರುವುದು ಮಾದರಿ ಕಾರ್ಯವಾಗಿದೆ.
– ರವಿ ಕುರಳಗೇರಾ, ಕುರಳಗೇರಾ ಗ್ರಾ.ಪಂ ಉಪಾಧ್ಯಕ್ಷ ಕಾಲಿಗೆ ಚುಚ್ಚಿದ ಮುಳ್ಳು ಇನ್ನೊಬ್ಬರು ತೆಗೆದರೆ ಎಷ್ಟೋ ಸಂತೋಷವಾಗುತ್ತದೆ. ಆದರೆ ದೇಹಕ್ಕೆ ಅಂಟಿದ ಕ್ಯಾನ್ಸರ್ ಅನ್ನು ಶಸ್ತ್ರ ಚಿಕಿತ್ಸೆ ಮೂಲಕ ಕಿತ್ತೂಗೆದು ಮರುಜನ್ಮ ನೀಡಿದ್ದ ಅಜಯಸಿಂಗ್ ಸಾಹೇಬರು ದಿಕ್ಕು ತೋಚದ ಇಂದಿನ ಸಂದರ್ಭದಲ್ಲಿ ಅನ್ನ, ಆಹಾರವನ್ನು ನೀಡಿ ಮರುಜನ್ಮ ನೀಡಿದ್ದಾರೆ.
– ದಾಮಮ್ಮ, ಜೇವರ್ಗಿ ಪಟ್ಟಣದ ನಿವಾಸಿ ಜೇವರ್ಗಿ ಶಾಸಕರು ಜನಸೇವಕ ರಾಜಕಾರಣಿ. ಬಡವರು, ದೀನ ದಲಿತರ ಬಗೆಗಿನ ಅವರ ಕಾಳಜಿ, ಕನಿಕರ, ಮಮಕಾರ ಶ್ಲಾಘನೀಯ. ಕಷ್ಟದಲ್ಲಿರುವ ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿರುವ ಅವರು ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಆಹಾರದ ಪೊಟ್ಟಣ ವಿತರಿಸಿದ್ದಾರೆ. ತಾಲೂಕಾಡಳಿತಕ್ಕೆ 250 ಕ್ವಿಂಟಲ್ ಅಕ್ಕಿ, ತರಕಾರಿ, ಮಸಾಲೆ ಪದಾರ್ಥ ಸೇರಿದಂತೆ ವಿವಿಧ ಆಹಾರ ಸಾಮಗ್ರಿ ನೀಡುವ ಮೂಲಕ ನಿತ್ಯ 15 ಸಾವಿರ ನಿರ್ಗತಿಕರಿಗೆ, ಗುಡಿಸಲು ವಾಸಿಗಳಿಗೆ, ಬಡವರಿಗೆ ಆಹಾರ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
– ವಿಜಯಕುಮಾರ ಪಾಟೀಲ, ಮಾಜಿ ಅಧ್ಯಕ್ಷರು, ಯೂತ್ ಕಾಂಗ್ರೆಸ್ ಜೇವರ್ಗಿ ಕ್ಷೇತ್ರದ ಸರ್ವ ಜನರ ಆರೋಗ್ಯದ ಒಳಿತಿಗಾಗಿ ಶ್ರಮಿಸುತ್ತಾ ಬರುತ್ತಿರುವ ಜೇವರ್ಗಿ ಶಾಸಕ ಡಾ| ಅಜಯಸಿಂಗ್ ಅವರು, ಕೋವಿಡ್ 19 ವೈರಸ್ ಸಂಕಟದ ಈ ಸಮಯದಲ್ಲಿ ಮನೆಯ ಮಗನಂತೆ ಸ್ಪಂದಿಸುತ್ತಿರುವುದು ರಾಜ್ಯಕ್ಕೇ ಮಾದರಿಯಾಗಿದೆ.
– ನೀಲಕಂಠ ಆವಂಟಿ, ಕಾಂಗ್ರೆಸ್ ಯುವ ಮುಖಂಡ