Advertisement

ಕಡವಿನ ಬಾಗಿಲು: ಹಲವು ಮನೆಗಳು ಮುಳುಗುವ ಭೀತಿ

11:43 PM Jun 19, 2019 | Team Udayavani |

ಮೂಲ್ಕಿ: ಬಪ್ಪನಾಡು ಗ್ರಾಮದ ಕಡವಿನ ಬಾಗಿಲು ಹಳೆ ಬಸ್‌ ನಿಲ್ದಾಣದ ಬಳಿ ನಡೆಯುತ್ತಿರುವ ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ಸುಮಾರು 15 ಮನೆಗಳು ಮುಳುಗುವ ಭೀತಿಯಲ್ಲಿವೆ.

Advertisement

ಉಡುಪಿ ಜಿಲ್ಲೆಯ ಎಂಜಿನಿಯರಿಂಗ್‌ ವಿಭಾಗದ ಉಸ್ತುವಾರಿಯಲ್ಲಿ ಕಾಪು ಕ್ಷೇತ್ರದಲ್ಲಿ ಸಂಚಾರ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಈ ಸೇತುವೆ ಮೂಲ್ಕಿಯಿಂದ ಪಲಿಮಾರಿಗೆ ಸಂಪರ್ಕ ಕಲ್ಪಿಸುವ ಹತ್ತಿರದ ದಾರಿಯಾಗಿದೆ.

ಮುಂಜಾಗ್ರತೆ ಅಗತ್ಯ
ಈ ಸೇತುವೆಯಿಂದ ಇಲ್ಲಿಯ ಕೊಕ್ರಾ ಣಿಯ ಕುದ್ರು ಪ್ರದೇಶದ ನಿವಾಸಿಗಳಿಗೆ ಮೂಲ್ಕಿಗೆ ಸಂಪರ್ಕ ಒದಗಿಸುತ್ತಿರುವುದು ಸೂಕ್ತವಾಗಿದ್ದರೂ ನಗರ ಪಂಚಾಯತ್‌ ವ್ಯಾಪ್ತಿಯ ಮನೆಗಳಿಗೆ ಮಳೆಗಾಲದಲ್ಲಿ ಸಂಭವಿಸುವ ಅನಾಹುತದ ಬಗ್ಗೆ ನಗರ ಪಂಚಾಯತ್‌ ಕೂಡಲೇ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕಾಗಿದೆ.

ಮೂಲ್ಕಿ ನಗರ ವ್ಯಾಪ್ತಿಯ ಜನರು ಸೇತುವೆ ಕಾಮಗಾರಿ ಬಗ್ಗೆ ನಗರ ಪಂಚಾ ಯತ್‌ಗೆ ದೂರು ನೀಡಿ ಪಂಚಾಯತ್‌ ಎಂಜಿನಿಯರಿಂಗ್‌ ವಿಭಾಗದ ಮೂಲಕ ತತ್‌ಕ್ಷಣ ಕ್ರಮಕ್ಕೆ ಆಗ್ರಹಿಸಲಾಗಿತ್ತು. ಸದ್ಯ ಕಾಮಗಾರಿಯಲ್ಲಿ ಕೊಂಚ ಬದಲಾವಣೆ ಕಂಡಿದ್ದರೂ ಕೂಡ ಮುಳುಗುವ ಭೀತಿ ಇನ್ನೂ ಇದೆ.

ಸೂಕ್ತ ಕ್ರಮಕೈಗೊಂಡಿಲ್ಲ
ಸೇತುವೆಯೂ ಬಹಳಷ್ಟು ಮುಂದಾಲೋಚನೆಯಲ್ಲಿ ನಡೆಯುತ್ತಿದ್ದರೂ, ಪೂರ್ವ ತಯಾರಿಯಲ್ಲಿ ಮೂಲ್ಕಿಯ ಸಂಪರ್ಕ ರಸ್ತೆಗೆ ಬೇಕಾದ ಯಾವುದೇ ಸೂಕ್ತ ಕ್ರಮಕೈಗೊಂಡಿಲ್ಲ. ಸೇತುವೆ ಕಾಮಗಾರಿ ನಡೆಯುತ್ತಿರುವಲ್ಲೇ ಕೆಲವು ಮನೆಗಳಿವೆ. ಅಲ್ಲದೇ ಇಲ್ಲಿ ಸೂಕ್ತ ಸಂಪರ್ಕ ರಸ್ತೆಯಿಲ್ಲದೇ ಇದ್ದರೂ ಸೇತುವೆ ಕಾಮಗಾರಿ ಆರಂಭಿಸಿರುವುದು ಮುಂದಿನ ಹಲವು ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗಿದೆ.

Advertisement

ನಗರ ಪಂಚಾಯತ್‌ನಿಂದ ಕ್ರಮ

ಸೇತುವೆ ಕಾಮಗಾರಿ ನಡೆಯುತ್ತಿರುವುದು ಉಡುಪಿ ಜಿಲ್ಲಾ ಎಂಜಿನಿಯರಿಂಗ್‌ ವಿಭಾಗದ ಮೂಲಕವಾದರೂ ಮೂಲ್ಕಿ ವ್ಯಾಪ್ತಿಯ ಜನರಿಗೆ ಮಳೆ ನೀರಿನಿಂದ ಆಗುವ ಸಮಸ್ಯೆಯ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ಪತ್ರ ಬರೆಯಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ವ್ಯವಸ್ಥೆ ಸರಿಪಡಿಸಲು ನಗರ ಪಂಚಾಯತ್‌ ಮೂಲಕ ಪ್ರಯತ್ನಿಸಲಾಗುವುದು.

– ಇಂದೂ ಎಂ.,ಮುಖ್ಯಾಧಿಕಾರಿ,ನಗರ ಪಂಚಾಯತ್‌, ಮೂಲ್ಕಿ

ಮುನ್ನೆಚ್ಚರಿಕೆಗೆ ಮನವಿ

ಸ್ಥಳೀಯಾಡಳಿತದ ಮೂಲಕ ಜನರ ಕ್ಷೇಮಕ್ಕಾಗಿ ಮುನ್ನೆಚ್ಚರಿಕೆ ವಹಿಸುವಂತೆ ನಗರ ಪಂಚಾಯತ್‌ ಮುಖ್ಯಾಧಿಕಾರಿಗೆ ಮನವಿ ಮಾಡಲಾಗಿದೆ. ಕಾಮಗಾರಿಯಿಂದ ಸೂಕ್ತ ಪರಿಹಾರ ಸಿಗುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ.
– ಬಿ. ಬಾಲಚಂದ್ರ ಕಾಮತ್‌, ನಗರ ಪಂಚಾಯತ್‌ ಸದಸ್ಯ
Advertisement

Udayavani is now on Telegram. Click here to join our channel and stay updated with the latest news.

Next