Advertisement

ಶ್ರೀಲಂಕಾಕ್ಕೆ ಭಾರತೀಯ ಸೇನೆ ಕಳುಹಿಸುವುದು ಬೇಡ 

05:59 PM May 18, 2022 | Team Udayavani |

ಇತ್ತೀಚೆಗೆ ಭಾಜಪಾದ ರಾಜ್ಯಸಭಾ ಮಾಜಿ ಸಂಸದ ಸುಬ್ರಹ್ಮಣ್ಯ ಸ್ವಾಮಿಯವರ ಟ್ವೀಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದೊಂದು ವಿವಾದವನ್ನು ಸೃಷ್ಟಿಸಿತ್ತು. ಅವರ ಟ್ವೀಟನ ವಿಷಯವೇನೆಂದರೆ ಶ್ರೀಲಂಕಾದ ವಿಷಮ ಸ್ಥಿತಿಯನ್ನು ಭಾರತ ವಿರೋಧಿ ಶಕ್ತಿಗಳು ದುರುಪಯೋಗ ಪಡಿಸಿಕೊಂಡು ಭಾರತದ ಭದ್ರತೆಗೆ ಧಕ್ಕೆಯುಂಟಾಗುತ್ತಿದೆ ಆದ್ದರಿಂದ ಭಾರತೀಯ ಸೇನೆಯನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಡಬೇಕು… ಎಂದು. ಈ ಟ್ವೀಟಿಗೆ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಶ್ರೀಲಂಕಾದ ಭಾರತೀಯ ರಾಯಭಾರಿ ಕಚೇರಿ ಕೂಡಲೇ ಪ್ರತಿಕ್ರಿಯಿಸಿ ಈ ಊಹಾಪೋಹಗಳು ಕೆಲವರ ವೈಯಕ್ತಿಕ ಅಭಿಪ್ರಾಯ ಇದು ಭಾರತ ಸರಕಾರದ ನಿಲುವು ಅಲ್ಲ ಎಂದು ಸ್ಪಷ್ಟಪಡಿಸಿತು.

Advertisement

ಸ್ವತಂತ್ರ ಭಾರತದ ಸೇನೆಯ ಅಮೋಘ ಚರಿತ್ರೆಯಲ್ಲಿ ಭಾರತೀಯ ಸೇನೆ ಶ್ರೀಲಂಕಾದಲ್ಲಿ ನಡೆಸಿದ 967 ದಿನಗಳ ಕಾರ್ಯಾಚರಣೆ ಈಗಲೂ ಒಂದು ಕಹಿನೆನಪು. ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದ ಅಂದಿನ ಆಂತರಿಕ ಕಲಹವನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತ ಮಧ್ಯಸ್ಥಿಕೆ ವಹಿಸುವ ನಿರ್ಧಾರಕ್ಕೆ ನಮ್ಮ ಸೈನ್ಯದ 1,155 ವೀರ ಸೈನಿಕರು ಬಲಿದಾನ ನೀಡಬೇಕಾಯಿತು, ಸುಮಾರು 3,000 ಗಾಯಗೊಂಡಿದ್ದರು, ಸುಮಾರು 300 ಕೋಟಿ ರೂಪಾಯಿ ಗಳ ವೆಚ್ಚವನ್ನು ಭಾರತ ಹೊರಬೇಕಾಯಿತು. ಅಂತಿಮವಾಗಿ ಭಾರತದ ಪ್ರಧಾನಿ ರಾಜೀವ್‌ ಗಾಂಧಿಯ ಹತ್ಯೆಯೂ ನಡೆದು ಹೋಯಿತು. ಅದು ಹೇಗೆ ಇಷ್ಟೆಲ್ಲ ಅವಘಡಗಳು ನಡೆದು ಹೋದವು? ಅದು ಯಾರ ಯುದ್ಧವಾಗಿತ್ತು… ಹೇಗೆ ನಮ್ಮ ವೀರ ಸೈನಿಕರು ಯಾವುದೋ ದೇಶಕ್ಕೆ ಹೋಗಿ ಪ್ರಾಣತ್ಯಾಗ ಮಾಡುವ ಪ್ರಮೇಯ ಒದಗಿಬಂದದ್ದು?

ಇದು ಸುಮಾರು ಮೂವತ್ತೆ„ದು ವರ್ಷಗಳ ಹಿಂದೆ ನಡೆದ ಸರಣಿ ಘಟನೆಗಳು. ಉತ್ತರ ಶ್ರೀಲಂಕಾದಲ್ಲಿ ತಮಿಳು ಏಲಮ್‌ (ಔಖಖಉ) ಮತ್ತು ದಕ್ಷಿಣದಲ್ಲಿ ಶ್ರೀಲಂಕಾದ ಸೈನ್ಯದ ನಡುವಿನ ಯುದ್ದ ತಾರಕಕ್ಕೇರಿದ ಸಮಯ. ಭಾರತದ ಅಂದಿನ ಪ್ರಧಾನಿ ರಾಜೀವ್‌ ಗಾಂಧಿಯವರು ಹೋರಾಡುತ್ತಿರುವ ಈ ಎರಡು ಗುಂಪುಗಳ ನಡುವೆ ಮಧ್ಯಸ್ಥಿಕೆ ವಹಿಸುವ ನಿರ್ಧಾರಕ್ಕೆ ಬಂದರು. 1987ರ ಮೇ ತಿಂಗಳಲ್ಲಿ ಭಾರತ ಮತ್ತು ಶ್ರೀಲಂಕಾದ ನಡುವೆ ಒಂದು ಒಪ್ಪಂದವಾಯಿತು. ಇದರಂತೆ ಜುಲೈ 1987ನಲ್ಲಿ ಭಾರತೀಯ ಸೇನೆಯನ್ನು ಶ್ರೀಲಂಕಾಕ್ಕೆ ಶಾಂತಿ ಪಡೆಯಾಗಿ (ಐಕಓಊ) ರವಾನಿಸಲಾಯಿತು. ಔಖಖಉ ಮತ್ತು ಶ್ರೀಲಂಕಾದ ಸೈನ್ಯದ ನಡುವಿನ ಸಂಧಾನಕ್ಕೆ ಎಲ್ಲ ರೀತಿಯ ಪ್ರಯತ್ನ ನಡೆಸುವುದು ಇದರ ಉದ್ದೇಶವಾಗಿತ್ತು. ಆದರೆ ಅಲ್ಲಿನ ವಾಸ್ತವಿಕ ಪರಿಸ್ಥಿತಿಯೇ ಬೇರೆಯಾಗಿತ್ತು. ತಮಿಳು ಎಲಮ್‌ನವರಿಗೆ ಸಹಾಯ ಮಾಡಲು ಹೋದ ಭಾರತೀಯ ಸೈನ್ಯದ ಮೇಲೆ ತಮಿಳರೇ ಮಾರಣಾಂತಿಕ ಹಲ್ಲೆಯನ್ನು ಪ್ರಾರಂಭಿಸಿದರು. ಇನ್ನು ಶ್ರೀಲಂಕಾದ ಸೈನ್ಯ ಭಾರತೀಯ ಸೇನೆ ಶ್ರೀಲಂಕಾದಲ್ಲಿ ಶಾಶ್ವತವಾಗಿ ನೆಲೆಸುವ ಹುನ್ನಾರ ನಡೆಸಿದ್ದಾರೆ ಎಂದು ಪ್ರಾರಂಭದಿಂದಲೂ ಅನುಮಾನ ಪಡುತ್ತಲೇ ಬಂತು. ಹಾಗಾಗಿ ಭಾರತೀಯ ಸೇನೆಗೆ ಯಾವ ಸಹಕಾರವನ್ನು ನೀಡಲು ನಿರಾಕರಿಸಿತು. ಭಾರತದ ಸೇನೆಯ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾ ಯಿತು. ಅಪರಿಚಿತ ದೇಶಕ್ಕೆ ಬಂದು ಅಪರಿಚಿತ ಶತ್ರುಗಳ ನಡುವೆ ಅಗೋಚರ ದಾಳಿಗೆ ಬಲಿಯಾದರು ನಮ್ಮ ಸೈನ್ಯದ ವೀರರು. ಅಂದಿನ ರಾಜಕೀಯ ನಾಯಕತ್ವದ ಅಪಕ್ವತೆ, ಅಕ್ಷಮ್ಯ ಪ್ರಮಾದ ಮತ್ತು ಸೇನೆಯ ನಾಯಕತ್ವದ ಅತಿಯಾದ ಆತ್ಮವಿಶ್ವಾಸ ಮತ್ತು ಶ್ರೀಲಂಕಾದ ಆಂತರಿಕ ಕಲಹದ ಮತ್ತು ಅಲ್ಲಿನ ಪರಿಸ್ಥಿತಿಯ ಬಗೆಗಿನ ಮಾಹಿತಿಯ ಕೊರತೆಯಿಂದಾಗಿ ಇಂತಹದೊಂದು ಐತಿಹಾಸಿಕ ಅವಘಡಕ್ಕೆ ಕಾರಣ ವಾಯಿತು. ಅಂತೂ ಮಾರ್ಚ್‌ 1990ಕ್ಕೆ ಭಾರತೀಯ ಸೇನೆ ಶ್ರೀಲಂಕಾದಿಂದ ನಿರ್ಗಮಿಸಿತು. ಇದರಿಂದ ಕಲಿತ ಪಾಠವನ್ನು ಶಾಶ್ವತವಾಗಿ ನೆನಪಿಟ್ಟುಕೊಂಡಿರಬೇಕು ಮತ್ತು ಅನಾವಶ್ಯಕವಾಗಿ ಇತರ ದೇಶಗಳ ಆಂತರಿಕ ವಿಷಯಗಳಲ್ಲಿ ಸುಖಾಸುಮ್ಮನೆ ಮೂಗು ತೂರಿಸುವ ಅಗತ್ಯವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಸೇನೆಯನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಡಬೇಕು ಎನ್ನುವ ಮಾತುಗಳು ಹಳೆಯ ಗಾಯಗಳನ್ನು ಕೆದಕಿದಂತಿದೆ. ಈಗಿನ ಶ್ರೀಲಂಕಾದ ಶೋಚನೀಯ ಪರಿಸ್ಥಿತಿಯಲ್ಲಿ ಅಲ್ಲಿನ ನಾಗರೀಕರಿಗೆ ಬೇಕಾಗಿರುವುದು ಆಹಾರ ಸಾಮಗ್ರಿಗಳು, ಇಂಧನ ಮತ್ತು ಧನ ಸಹಾಯವೇ ಹೊರತು ನೆರೆರಾಷ್ಟ್ರದ ಸೈನ್ಯವಲ್ಲ. ಅಲ್ಲಿನ ರಾಜಕೀಯ ವೈಫಲ್ಯ, ಭ್ರಷ್ಟಾಚಾರದಿಂದ ಕೆರಳಿ ದಂಗೆ ಎದ್ದಿರುವ ಪ್ರಜೆಗಳಿಗೆ ನಿಮಗೆ ಸಹಾಯ ಮಾಡಲು ನಾವಿದ್ದೇವೆ ಎನ್ನುವ ಆಶ್ವಾಸನೆಯೇ ಹೊರತು ಅವರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಮಯವಲ್ಲ ಇದು. ಚೀನಾದಂತಹ ದುಷ್ಟ ದೇಶದ ಸಾಲದ ಸುಳಿಗೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವ ದೇಶಕ್ಕೆ ಸಾಧ್ಯವಾದಷ್ಟು ಪರಿಹಾರ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಭಾರತದಿಂದ ಅವಶ್ಯಕ ಆಹಾರ ಸಾಮಗ್ರಿಗಳು, ಇಂಧನ ಮತ್ತು ಔಷಧಗಳನ್ನು ಸರಬರಾಜು ಮಾಡಲಾಗುತ್ತಿದೆ.

ಈ ನಡುವೆ ಶ್ರೀಲಂಕಾವನ್ನು ಸಾಲದ ಸುಳಿಗೆ ಸಿಲುಕಿಸಿ ಚೀನ ಕುಯುಕ್ತಿಯಿಂದ ಹಂಬನ್‌ ತೋಟಾ ಎನ್ನುವ ದಕ್ಷಿಣ ತುದಿಯ ಬಂದರನ್ನು 99 ವರ್ಷಗಳ ಅವಧಿಗೆ ಗುತ್ತಿಗೆ ಪಡೆದು ತನ್ನ ವಸಾಹತುಶಾಹಿ ನೀತಿಯನ್ನು ಶ್ರೀಲಂಕಾದ ವರೆಗೆ ವಿಸ್ತರಣೆ ಮಾಡಿತು. ಇದು ಭಾರತಕ್ಕೆ ಚಿಂತಿಸಬೇಕಾದ ವಿಷಯವೇ ಆದರೆ ಇದಕ್ಕೂ ಪರಿಹಾರವಿದೆ. 1987ರಲ್ಲಿ ಶ್ರೀಲಂಕಾ ಮತ್ತು ಭಾರತದ ನಡುವಿನ ಒಪ್ಪಂದದಲ್ಲಿ ನೆನೆಗುದಿಗೆ ಬಿದ್ದಿರುವ ಒಂದು ಬಹಳ ಪ್ರಮುಖವಾದ ಅಂಶಕ್ಕೆ ಇತ್ತೀಚೆಗೆ ಪ್ರಾಮುಖ್ಯ ದೊರಕುತ್ತಿದೆ. ಅದೇನೆಂದರೆ ಶ್ರೀಲಂಕಾದ ಪೂರ್ವ ಸಮುದ್ರದಲ್ಲಿರುವ ಟ್ರಿಂಕೋಮಲಿ ಎನ್ನುವ ನೈಸರ್ಗಿಕ ಬಂದರಿನಲ್ಲಿ ಇರುವ ಸುಮಾರು 99 ತೈಲ ಶೇಖರಣ ತೊಟ್ಟಿಗಳ ಪುನರುತ್ಥಾನ. ಎರಡನೇ ವಿಶ್ವ ಯುದ್ದದ ಸಮಯದಲ್ಲಿ ಈ ಆಯಕಟ್ಟಿನ ಬಂದರಿನಲ್ಲಿ ಬ್ರಿಟಿಷರು ಸುಮಾರು 850 ಎಕ್ರೆಗಳಷ್ಟು ವಿಸ್ತರಣೆಯ ಬಂದರಿನಲ್ಲಿ ಈ ತೈಲ ಶೇಖರಣ ತೊಟ್ಟಿಗಳನ್ನು ನಿರ್ಮಿಸಿದ್ದರು. ಒಂದೊಂದು ತೊಟ್ಟಿಯಲ್ಲೂ 12000 ಕಿಲೋ ಲೀಟರ್‌ಗಳಷ್ಟು ತೈಲವನ್ನು ಶೇಖರಿಸಿಡಬಹುದು. ಇವುಗಳನ್ನು ಶ್ರೀಲಂಕಾದ ಸಿಲೋನ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಮತ್ತು ಭಾರತದ ಲಂಕಾ ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಜಂಟಿಯಾಗಿ ಪುನರುತ್ಥಾನಗೊಳಿಸುವ ಪ್ರಯತ್ನಕ್ಕೆ ಈಗ ಚಾಲನೆ ನೀಡಲಾ ಗಿದೆ. ಭಾರತ ಸದ್ಯಕ್ಕೆ 14 ತೈಲ ತೊಟ್ಟಿಗಳನ್ನು ಪುನರುತ್ಥಾನಗೊ ಳಿಸುವ ಮೂಲಕ ಶ್ರೀಲಂಕಾದ ಬಂದರನ್ನು ಪ್ರವೇಶಿಸಿದೆ.

Advertisement

ರಷ್ಯಾದಿಂದ ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ತೈಲವನ್ನು ಇಲ್ಲಿ ಶೇಖರಿಸಲು ಅನುಕೂಲವಾದೀತು. ಹಾಗೆಯೇ ಶ್ರೀಲಂಕಾ ಸಹಾ ಇರಾನಿ ನೊಂದಿಗೆ ಚಹಾದ ಬದಲಿಗೆ ತೈಲ ಎನ್ನುವ ವಿನಿಮಯ ವ್ಯವಹಾರ ಮಾಡಿಕೊಂಡಿದೆ. ಆ ತೈಲವನ್ನು ಇಲ್ಲಿ ಶೇಖರಿಸಿಡಬಹುದು.

ಮುಂದಿನ ದಿನಗಳಲ್ಲಿ ಭಾರತ ಉತ್ತರ ಶ್ರೀಲಂಕಾದಲ್ಲಿ ಜಾಫಾ°ದ ಕಂಕೇಸಂತುರೈ ಎನ್ನುವ ಬಂದರಿನ ನವನಿರ್ಮಾಣಕ್ಕೂ ಆಸಕ್ತಿ ತೋರಿಸುತ್ತಿದೆ. ಹೀಗೆ ವಾಣಿಜ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಭಾರತ ಪ್ರಯತ್ನಿ ಸಬೇಕೇ ಹೊರತು ಸೈನ್ಯವನ್ನು ಕಳುಹಿಸಿ ಶ್ರೀಲಂಕನ್ನರನ್ನು ಕೆರಳಿಸುವ ಕಾರ್ಯದ ಬಗ್ಗೆ ಯೋಚಿಸಬಾರದು.

ವೈಯಕ್ತಿಕವಾಗಿ ನನಗೆ ಶ್ರೀಲಂಕಾದ ವಿವಿಧ ಮುಖಗಳ ಪರಿಚಯವಿದೆ. ಭಾರತೀಯ ವಾಯುಸೇನೆಯ ವೈಮಾನಿಕ ನಾಗಿ ಶ್ರೀಲಂಕಾದ ಎಲ್ಲ ವಿಮಾನನಿಲ್ದಾಣಗಳಲ್ಲಿ ಭೂಸ್ಪರ್ಶ ಮಾಡಿದ್ದೇನೆ. ಪ್ರವಾಸಿಗನಾಗಿ ಅವರ ಆದರದ ಸ್ವಾಗತ ಸ್ವೀಕರಿಸಿದ್ದೇನೆ. ನಾಗರಿಕ ವಿಮಾನದ ವೈಮಾನಿಕನಾಗಿ ಅವರ ವಿಶೇಷ ಆತಿಥ್ಯಕ್ಕೆ ಪಾತ್ರನಾಗಿದ್ದೇನೆ. ಶ್ರೀಲಂಕಾ ಪ್ರಕೃತಿ ಸೌಂದರ್ಯದ ಬೀಡು, ಸ್ನೇಹ ಜೀವಿಗಳ ನಾಡು. ಈ ದೇಶಕ್ಕೆ ಈಗಿರುವ ಸಂಕಟದ ಪರಿಸ್ಥಿತಿ ಆದಷ್ಟು ಬೇಗ ಪರಿಹಾರವಾಗಿ ಶ್ರೀಲಂಕಾದ ಸುದಿನಗಳು ಮರಳಿ ಬರಲಿ ಎನ್ನುವ ಆಶಯದೊಂದಿಗೆ.

– ವಿಂಗ್‌ ಕಮಾಂಡರ್‌ ಸುದರ್ಶನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next