ಮೈಸೂರು: ಎಚ್ಐವಿ ಪೀಡಿತರನ್ನು ಕೀಳಾಗಿ ನೋಡುವ ಮನೋಭಾವ ಹೋಗಬೇಕು. ನೈತಿಕ ವಾಗಿ ಅವರನ್ನು ಬೆಂಬಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಲಹೆ ನೀಡಿದರು.
ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನಗರದ ಜೆಎಸ್ ಎಸ್ ಫಾರ್ಮಸಿ ಕಾಲೇಜಿನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್ಐವಿ ಸೋಂಕಿತರಾಗಿದ್ದರೆ ಆತಂಕಪಡುವ ಅಗತ್ಯವಿಲ್ಲ. ಅದಕ್ಕೆ ಅಗತ್ಯ ಔಷಧೋಪಚಾರ, ಚಿಕಿತ್ಸೆ ಪಡೆಯಲು ಅವಕಾಶವಿದೆ. ಜತೆಗೆ ಸೋಂಕಿತರನ್ನು ಕೀಳಾಗಿ ನೋಡದೆ, ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಆಗ ಬೇಕು ಎಂದರು.
ಎಚ್ಐವಿ/ಏಡ್ಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಡ್ಸ್ ಹರಡುವುದನ್ನು ತಡೆಯಲು ವಿಶ್ವದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಏಡ್ಸ್ಗೆ ಪ್ರಮುಖವಾದ ನಾಲ್ಕು ಕಾರಣಗಳೆಂದರೆ, ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆ ಮಾಡದ, ಸೋಂಕಿತ ರಕ್ತ, ರಕ್ತ ಉತ್ಪನ್ನಗಳ ವರ್ಗಾವಣೆ ಮಾಡುವುದರಿಂದ, ಸಂಸ್ಕೃರಿಸದ ಹರಿತವಾದ ಸಾಧನಗಳು, ಸೂಜಿ, ಸಿರಿಂಜು, ಶಸ್ತ್ರಕ್ರಿಯಾ ಸಾಧನೆಗಳ ಉಪಯೋಗ ದಿಂದ ಹಾಗೂ ಎಚ್ಐವಿ ಸೋಂಕು ಇರುವ ತಾಯಿಯಿಂದ ಆಕೆಯ ಮಗುವಿಗೆ ಹರಡುತ್ತದೆ.
ಜೊತೆಗೆ ಡ್ರಗ್ರ್ಸ್ , ಹಚ್ಚೆ ಹಾಕಿಸಿಕೊಳ್ಳುವಾಗ ಸೂಜಿಗಳ ಬಳಕೆಯಿಂದಲೂ ಸೋಂಕು ಬರಬಹುದು. ಹೀಗಾಗಿ ಇವೆಲ್ಲದರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಇದಕ್ಕೂ ಮೈಸೂರು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶ ನ್ ಸೊಸೈಟಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರ, ಆಶೋದಯ ಸಮಿತಿ, ಎಸ್ವಿವೈಎಂ, ಮಹಾನ್ ಹಾಗೂ ಇನ್ನಿತರೆ ಸೇವಾ ಸಂಸ್ಥೆಗಳು ಹಾಗೂ ಕಾಲೇಜುಗಳಿಂದ ನಡೆದ ಜಾಥಾಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಚಾಲನೆ ನೀಡಿದರು.
Related Articles
ಬನ್ನಿಮಂಟಪ ಬಡಾವಣೆಯ ವಿವಿಧ ರಸ್ತೆಗಳ ಮೂಲಕ ಸಾಗಿದ ಜಾಥಾದಲ್ಲಿ ಪಾಲ್ಗೊಂಡ ವಿದ್ಯಾ ರ್ಥಿ ಗಳು ಎಚ್ ಐವಿ ಬಗ್ಗೆ ಜನರು ಎಚ್ಚರಿಕೆ ವಹಿಸುವಂತೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಡಿಎಚ್ಒ ಡಾ.ಕೆ.ಎಚ್. ಪ್ರಸಾದ್, ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಪರೀಕ್ಷಾ ನಿಯಂತ್ರಕ ಡಾ.ಸುಧೀಂದ್ರ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಡಾ.ರಾಜೇಶ್ವರಿ, ಜೆಎಸ್ಎಸ್ ಎಎಚ್ ಇಆರ್ ಡೀನ್ ಡಾ.ಕೆ.ಎ.ರವೀಶ ಇತರರು ಇದ್ದರು.