Advertisement

ವೃತ್ತಿಪರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಬಿಡಬೇಡಿ

12:14 AM Aug 08, 2022 | Team Udayavani |

ಈಗಾಗಲೇ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಸಂಬಂಧ ಸಿಇಟಿ ಫ‌ಲಿತಾಂಶ ಪ್ರಕಟವಾಗಿದ್ದು, ಕೌನ್ಸೆಲಿಂಗ್‌ನ ಪ್ರಕ್ರಿಯೆಯ ವೇಳಾಪಟ್ಟಿ ಬಿಡುಗಡೆ­ಯಾಗಬೇಕಾಗಿದೆ. ಎಲ್ಲವೂ ಅಂದುಕೊಂಡಂತಾಗಿದ್ದರೆ ಆ.5ರಂದೇ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಆರಂಭವಾಗಬೇಕಾಗಿತ್ತು. ಇದನ್ನು ಸೆಪ್ಟಂಬರ್‌ಗೆ ಮುಂದೂಡಲಾಗಿದ್ದು, ಇನ್ನೂ ವೇಳಾಪಟ್ಟಿ ಪ್ರಕಟಿಸದಿರುವುದು ವಿದ್ಯಾರ್ಥಿಗಳಲ್ಲಿ ಆತಂಕಕ್ಕೂ ಕಾರಣವಾಗಿದೆ.

Advertisement

ಇದರ ಮಧ್ಯೆಯೇ ವಿದ್ಯಾರ್ಥಿಗಳು ಮತ್ತು ಪೋಷಕರು ದೊಡ್ಡ­ದೊಂದು ಗೊಂದಲಕ್ಕೆ ಸಿಲುಕಿದ್ದಾರೆ. ಖಾಸಗಿ ಕಾಲೇಜುಗಳಿಗೆ ಪ್ರವೇಶಾತಿ ಸಂಬಂಧ ಕಾಮೆಡ್‌-ಕೆ ನಡೆಸಿದ್ದ ಪರೀಕ್ಷೆಯ ಫ‌ಲಿತಾಂಶ ಪ್ರಕಟವಾಗಿ ಆ.18ರಿಂದಲೇ ದಾಖಲಾತಿ ಪರಿಶೀಲನೆ ಆರಂಭವಾಗಲಿದೆ. ಆ.26­ರಿಂದಲೇ ಪ್ರವೇಶ ಪ್ರಕ್ರಿಯೆಯನ್ನೂ ಆರಂಭಿಸಲು ಅದು ನಿರ್ಧರಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಾವು ಮೊದಲಿಗೆ ಕಾಮೆಡ್‌-ಕೆ ಕೌನ್ಸೆ­ಲಿಂಗ್‌ಗೆ ಹಾಜರಾಗಿ ಸೀಟು ಆಯ್ದುಕೊಳ್ಳಬೇಕೋ ಅಥವಾ ಸಿಇಟಿಯಡಿ ಸೀಟು ಆಯ್ಕೆ ಮಾಡಿಕೊಳ್ಳಬೇಕೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಬಡ ವಿದ್ಯಾರ್ಥಿಗಳು ಕಾಮೆಡ್‌-ಕೆಯಡಿಯಲ್ಲಿ ಎಂಜಿನಿಯರಿಂಗ್‌ ಪ್ರವೇಶ ಪಡೆಯುವುದು ಕಷ್ಟಕರ. ಅಲ್ಲಿನ ಶುಲ್ಕವೂ ದುಬಾರಿ. ಅಲ್ಲದೆ, ಮಧ್ಯಮ ವರ್ಗದ ವಿದ್ಯಾರ್ಥಿಗಳೂ ಕಾಮೆಡ್‌-ಕೆಯಡಿ ಬರುವ ಕಾಲೇಜಿಗೆ ಸೇರಲು ಹಿಂದೆ ಮುಂದೆ ನೋಡುತ್ತಾರೆ. ಇದಕ್ಕೆ ಬದಲಾಗಿ ಮೊದಲೇ ಸಿಇಟಿಯಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಸೀಟು ಹಂಚಿಕೆ ಮಾಡಿದ್ದರೆ ಚೆನ್ನಾಗಿತ್ತು. ಒಂದು ವೇಳೆ ಇಲ್ಲಿ ಸೀಟು ಸಿಗದಿದ್ದರೆ, ಅನಂತರದಲ್ಲಿ ಕಾಮೆಡ್‌-ಕೆ ಕಾಲೇಜುಗಳಲ್ಲಿ ಸೀಟು ಪಡೆಯಲು ನೋಡ­ಬಹುದಿತ್ತು. ಈಗ ಮೊದಲೇ ನಾವು ಕಾಮೆಡ್‌ ಕೆ ಕಾಲೇಜುಗಳಲ್ಲಿ ಸೀಟು ಆರಿಸಿಕೊಳ್ಳುವ ಸ್ಥಿತಿ ಎದುರಾಗಿದೆ ಎಂಬುದು ವಿದ್ಯಾರ್ಥಿಗಳ ಅಳಲು.

ವಿದ್ಯಾರ್ಥಿಗಳ ಈ ಬೇಸರಕ್ಕೆ ಅರ್ಥವೂ ಇದೆ. ಕಾಮೆಡ್‌-ಕೆನಲ್ಲಿ ಸೀಟು ಆಯ್ಕೆ ಮಾಡಿಕೊಂಡು ಪ್ರವೇಶ ಪಡೆದು, ಮತ್ತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೌನ್ಸೆಲಿಂಗ್‌ಗೆ ಹಾಜರಾಗಿ ಅಲ್ಲಿ ಸೀಟು ಸಿಕ್ಕರೆ ಮೊದಲು ಆಯ್ಕೆ ಮಾಡಿಕೊಂಡಿದ್ದ ಕಾಲೇಜನ್ನು ಬಿಡಬೇಕಾಗು­ತ್ತದೆ. ಅಲ್ಲದೆ, ಪ್ರವೇಶಕ್ಕಾಗಿ ಶುಲ್ಕವನ್ನೂ ಕಟ್ಟಿರಬೇಕಾಗುತ್ತದೆ. ಕರ್ನಾ­ಟಕ ಪರೀಕ್ಷಾ ಪ್ರಾಧಿಕಾರದಡಿ ಸೀಟು ಪಡೆದ ಬಳಿಕ ಕಾಮೆಡ್‌-ಕೆಯ­ಡಿಯ ಕಾಲೇಜಿನಲ್ಲಿ ಶುಲ್ಕ ವಾಪಸ್‌ ಕೊಡಿ ಎಂದು ಕೇಳುವುದು ಕಷ್ಟ. ಹೀಗಾಗಿ ಮುಂದೇನು ಮಾಡಬೇಕು ಎಂಬುದು ಗೊತ್ತಾಗದಂತಾಗಿದೆ.
ಈ ಹಿಂದೆ ಪ್ರತಿ ವರ್ಷವೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ, ಕಾಮೆಡ್‌-ಕೆಗಿಂತ ಮೊದಲು ಕೌನ್ಸೆಲಿಂಗ್‌ ಮುಗಿಸುತ್ತಿತ್ತು.

ಇದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗವಾಗುತ್ತಿತ್ತು. ಮೊದಲೇ ಹೇಳಿದ ಹಾಗೆ, ಒಂದು ವೇಳೆ ಇಲ್ಲಿ ಸೀಟು ಸಿಗದೇ ಹೋದರೆ ಅಥವಾ ತಾವು ಆಯ್ಕೆ ಮಾಡಿಕೊಳ್ಳಲು ಇಚ್ಚಿಸುವ ಕಾಲೇಜಿನಲ್ಲಿ ಸೀಟು ಸಿಗದಿದ್ದರೆ ಕಾಮೆಡ್‌-ಕೆ ಮೂಲಕ ಪ್ರವೇಶ ಪಡೆಯುತ್ತಿದ್ದರು. ಈಗ ಮೊದಲ ಆಯ್ಕೆಯೇ ಕಾಮೆಡ್‌-ಕೆ ಆದರೆ ಕಷ್ಟಕರ ಎಂಬುದು ವಿದ್ಯಾರ್ಥಿಗಳ ನೋವು.

Advertisement

ಈಗ ರಾಜ್ಯ ಸರಕಾರ ಮಾಡಬೇಕಾಗಿರುವುದು ಇಷ್ಟೇ. ಕಾಮೆಡ್‌-ಕೆ ಪ್ರಕ್ರಿಯೆಗಿಂತ ಮೊದಲೇ ಇಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು. ಈ ಮೂಲಕ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಕಾಯಬೇಕು. ಇಲ್ಲದೆ ಹೋದರೆ, ದುಬಾರಿ ಶುಲ್ಕ ತೆತ್ತು ಕಾಲೇಜಿಗೆ ಸೇರುವ ಅನಿವಾರ್ಯತೆ ಉಂಟಾಗುವ ಸಾಧ್ಯತೆಯೇ ಹೆಚ್ಚು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next