Advertisement

ಹರಯದುನ್ಮಾದ ಬದುಕು ಭಾರವಾಗಿಸದಿರಲಿ

12:43 AM Dec 01, 2022 | Team Udayavani |

ಹಣ ಸಂಪಾದನೆಗೆ ನಾವು ಕೊಟ್ಟಿರುವ ಅತಿಯಾದ ಪ್ರಾಮುಖ್ಯ ನಮ್ಮ ನೈತಿಕತೆಯ ಜಂಘಾಬಲವನ್ನೇ ಉಡುಗಿಸಿದೆ. ಬದುಕಿಗಾಗಿ ಹಣದ ಆವಶ್ಯಕತೆ ಇದೆ ಎನ್ನುವುದು ನಿಜವಾದರೂ ಹಣವೇ ಸರ್ವಸ್ವವಲ್ಲ ಎನ್ನುವ ಅಂಶವನ್ನು ಮರೆಯಬಾರದು. ಹಣ, ಆಸ್ತಿ ಗಳಿಕೆಗೆ ನಾವು ನೀಡುತ್ತಿರುವ ಅತಿಯಾದ ಮಹತ್ವದಿಂದ ನೈತಿಕ ಮೌಲ್ಯಗಳ ಅಧಃಪತನವಾಗುತ್ತಿದೆ.

Advertisement

ದಿಲ್ಲಿಯಲ್ಲಿ ನಡೆದ ಬಹುಚರ್ಚಿತ ಶ್ರದ್ಧಾ ಕಗ್ಗೊಲೆಯ ಮಾದರಿಯ ಘಟನೆ ಮಧ್ಯಪ್ರದೇಶದಲ್ಲೂ ನಡೆದಿದೆ. ದೇಶಾದ್ಯಂತ ಹೆಚ್ಚುತ್ತಿರುವ ಇಂತಹ ಘಟನೆಗಳು ಹೆಣ್ಣು ಹೆತ್ತವರನ್ನು ಚಿಂತೆಗೀಡುವಂತೆ ಮಾಡಿದೆ. ದಿಲ್ಲಿಯ ಬೀಭತ್ಸ ಘಟನೆಯ ಕಾರಣಗಳು ಎಳೆಎಳೆಯಾಗಿ ಸಾರ್ವಜನಿಕವಾಗುತ್ತಿದ್ದಂತೆ ಲವ್‌ ಜೆಹಾದ್‌ ಚರ್ಚೆ ಕಾವು ಪಡೆದುಕೊಂಡಿದೆ. ಈ ಚರ್ಚೆಯನ್ನು ಬಹು ಆಯಾಮಿ ಮತ್ತು ಹೆಚ್ಚು ವಿಸ್ತೃತವಾಗಿಸುವ ಅಗತ್ಯ ಇದೆ. ನಾಗರಿಕ ಸಮಾಜ ಈ ಕುರಿತು ಚಿಂತನ-ಮಂಥನ ನಡೆಸಲಿ. ಇಂದಿನ ಯುವ ಜನಾಂಗದ ಸ್ವೇಚ್ಛಾಚಾರ ಮತ್ತು ನಮ್ಮ ಸಮಾಜದಲ್ಲಿ ಇದೀಗ ಸರ್ವೇಸಾಮಾನ್ಯವಾಗುತ್ತಿರುವ ಲಿವ್‌ ಇನ್‌ ರಿಲೇಶನ್‌ಶಿಪ್‌ ನ್ಯೂನತೆಗಳ ಕುರಿತು ಅರಿವು ಮೂಡಿಸುವ ಅಗತ್ಯ ಖಂಡಿತವಾಗಿಯೂ ಇದೆ.

ಭದ್ರ ತಳಪಾಯ ಹೊಂದಿದ, ಜಗತ್ತಿಗೇ ಆದರ್ಶವಾಗಿರುವ ಭಾರತೀಯ ಕೌಟುಂಬಿಕ ವ್ಯವಸ್ಥೆ ಶಿಥಿಲಗೊಳ್ಳುತ್ತಿರುವ ಅನೇಕ ಲಕ್ಷಣಗಳು ಆಗಾಗ್ಗೆ ಮುನ್ನೆಲೆಗೆ ಬರುತ್ತಿವೆ. ಜಾಗತೀಕರಣ ಬದುಕಿನ ಎಲ್ಲ ಕ್ಷೇತ್ರಗಳ ಮೇಲೂ ಪ್ರಭಾವ ಬೀರುತ್ತಿದೆ. ನೈತಿಕತೆಗೆ ಒತ್ತು ನೀಡದ ಆಧುನಿಕ ಶಿಕ್ಷಣ ನಮ್ಮ ಬದುಕಿಗೆ ಸಾಕಷ್ಟು ಸುಖ-ಸೌಕರ್ಯಗಳನ್ನು ನೀಡಿದೆಯಾದರೂ ಒಂದಿಲ್ಲೊಂದು ರೀತಿಯಲ್ಲಿ ಅದು ಭಾರತೀಯ ಕುಟುಂಬ ವ್ಯವಸ್ಥೆಯ ಸಂರಚನೆಯ ಮೇಲೂ ಪ್ರಭಾವ ಬೀರಿದೆ ಎಂದರೆ ತಪ್ಪಾಗದು. ಕೃಷಿ ಪ್ರಧಾನ ವ್ಯವಸ್ಥೆಯ ಸಂಯುಕ್ತ ಕುಟುಂಬದ ವಿಘಟನೆಯೊಂದಿಗೆ ನೈತಿಕ ಮೌಲ್ಯಗಳ ಕುಸಿತ ಕಂಡ ಭಾರತೀಯ ಸಮಾಜ ಇದೀಗ ಜಾಗತೀಕರಣದ ಪ್ರಭಾವಕ್ಕೊಳಗಾಗಿ ತಳಮಳಕ್ಕೊಳಗಾಗಿದೆ. ಯವ ಸಮುದಾಯದ ಸ್ವತ್ಛಂದ ಪ್ರವೃತ್ತಿಯಿಂದಾಗಿ ಅದು ಮತ್ತಷ್ಟು ಅಸ್ಥಿರಗೊಳ್ಳುತ್ತಿದೆ.

ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎನ್ನುವ ನಾಲ್ಕು ವಿಧದ ಫ‌ಲ-ಪುಣ್ಯಗಳು ನ್ಯಾಯೋಚಿತ ರೀತಿಯಲ್ಲಿ ಪಡೆಯಬೇಕೆನ್ನುವ ಸನಾತನ ಸಂಪ್ರದಾಯದ ಆಶಯ ಇಂದು ಕೇವಲ ಪುರೋಹಿತರ ಆಶೀರ್ವಾದಕ್ಕೆ ಮಾತ್ರ ಸೀಮಿತವಾಗಿದೆ. “ಕಾಂಚಾಣಂ ಕಾರ್ಯಸಿದ್ಧಿ’ ಎನ್ನುವುದು ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ. ಅರ್ಥ ಸಂಪಾದನೆಗೆ ನಾವು ಕೊಟ್ಟಿರುವ ಅತಿಯಾದ ಪ್ರಾಮುಖ್ಯ ನಮ್ಮ ನೈತಿಕತೆಯ ಜಂಘಾಬಲವನ್ನೇ ಉಡುಗಿಸಿದೆ. ಬದುಕಿಗಾಗಿ ಹಣದ ಆವಶ್ಯಕತೆ ಇದೆ ಎನ್ನುವುದು ನಿಜವಾದರೂ ಹಣವೇ ಸರ್ವಸ್ವವಲ್ಲ ಎನ್ನುವ ಅಂಶವನ್ನು ಮರೆಯಬಾರದು. ಹಣ, ಆಸ್ತಿ ಗಳಿಕೆಗೆ ನಾವು ನೀಡುತ್ತಿರುವ ಅತಿಯಾದ ಮಹತ್ವದಿಂದ ನೈತಿಕ ಮೌಲ್ಯಗಳ ಅಧಃಪತನವಾಗುತ್ತಿದೆ.

“ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ’ ಎನ್ನುವಂತೆ ಹಿರಿಯರ ಅನುಕರಣೆಯನ್ನು ಮಕ್ಕಳು ಮಾಡುತ್ತಾರೆ ಎನ್ನುವುದರ ಕುರಿತು ನಾವು ಯೋಚಿಸುವುದಿಲ್ಲ. ಮಕ್ಕಳ ಮುಂದೆ ಆದರ್ಶವನ್ನು ಪ್ರಸ್ತುತ ಪಡಿಸದೇ ಅವರು ಆದರ್ಶರಾಗಬೇಕೆಂದು ಬಯಸುವುದು ಎಷ್ಟರ ಮಟ್ಟಿಗೆ ಸರಿ? ರೆಕ್ಕೆ ಬಲಿತ ಪಕ್ಷಿ ಸ್ವತಂತ್ರವಾಗಿ ಹಾರಲು ಬಯಸುವಂತೆ ನಮ್ಮ ಯುವ ಪೀಳಿಗೆ ಸ್ವತ್ಛಂದವಾಗಿ ಹಾರತೊಡಗಿದೆ. ವಿವಾಹೇತರ ಸಂಬಂಧಗಳು ಅವರಿಗೆ ಆದರ್ಶವಾಗಿ ಕಾಣುತ್ತಿವೆ. ಅಜ್ಜನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಕೈ ತೊಳೆದುಕೊಂಡ ತಂದೆಯ ದಾರಿಯನ್ನು ತುಳಿಯುವ ಮಗ ಸಂಸ್ಕಾರವಂತನಾಗಲು ಹೇಗೆ ಸಾಧ್ಯ?

Advertisement

ಸಂಸ್ಕಾರವಿಲ್ಲದ, ಆರ್ಥಿಕವಾಗಿ ಸ್ವತಂತ್ರ ಸುಶಿಕ್ಷಿತ ಯುವಕ-ಯುವತಿಯರು ತಾರುಣ್ಯದ ಹುಮ್ಮಸ್ಸಿನಲ್ಲಿ ವಿವೇಚನಾರಹಿತ ನಿರ್ಧಾರ ಕೈಗೊಳ್ಳುತ್ತಾರೆ. ಕೆಲವೊಮ್ಮೆ ಮನೆಯಿಂದಲೂ ದೂರವಾಗುತ್ತಾರೆ. ಪೋಷಕರ, ಬಂಧುಗಳ ಆಸರೆ, ಅಕ್ಕರೆ, ಪ್ರೀತಿಯಿಂದ ವಂಚಿತರಾಗುತ್ತಾರೆ. ಮನೆಯಿಂದ ದೂರವಾದ ಯುವತಿಯೋರ್ವಳಿಗೆ ಒಂದೆಡೆ ಕಾಡುವ ಖಾಲಿತನ, ಇನ್ನೊಂದೆಡೆ ನಂಬಿ ಬಂದ ಪ್ರೀತಿಪಾತ್ರನ ತಿರಸ್ಕಾರ ಬದುಕು ಭಾರವಾಗಿಸಿದರೆ ಆಶ್ಚರ್ಯವಿಲ್ಲ. ಅಸಹಾಯಕ ಹೆಣ್ಣಿನ ಶೋಷಣೆ ಸುಲಭವೆಂದು ತಿಳಿಯುವ ಮತಿಗೇಡಿ ಪುರುಷರೂ ಕಡಿಮೆ ಏನಿಲ್ಲ. ಧಾರ್ಮಿಕ ಲೇಪ ಸಿಕ್ಕಾಗ ಇದು ದಳ್ಳುರಿಯಾಗಿ ಸಮಾಜವನ್ನೇ ಕಾಡುತ್ತದೆ.

ಕೌಟುಂಬಿಕ ಪ್ರೀತಿಗೆ ಪ್ರಾಮುಖ್ಯ ಸಿಗಲಿ. ಮಕ್ಕಳಿಗೆ ಪ್ರೀತಿ-ವಾತ್ಸಲ್ಯದೊಂದಿಗಿನ ಸಂಸ್ಕಾರದ ಅಮೃತ ಸಿಂಚನ ದೊರೆಯಲಿ. ಬಂಧುತ್ವ-ಸಹೋದರತ್ವ, ಹಿರಿ-ಕಿರಿಯರ ಆದರದ ಉತ್ತಮ ಸಂಸ್ಕಾರ ಸಿಗಲಿ. ಪೋಷಕರೇ, ಮಕ್ಕಳಿಗೂ ಒಂದಷ್ಟು ಸಮಯ ಕೊಡಿ. ನೈತಿಕತೆಯಿಲ್ಲದ ನಮ್ಮ ಸಾಮಾಜಿಕ ಬದುಕು ಬರಡಾದೀತು. ನೌಕರಿ ಸಿಕ್ಕೊಡನೆ, ಗಳಿಕೆ ಆರಂಭಿಸಿದೊಡನೆ ತನ್ನನ್ನು ತಾನು ಸರ್ವತಂತ್ರ-ಸ್ವತಂತ್ರ ಎಂದು ತಿಳಿಯುವ ಸಂಕುಚಿತ ಮನೋಭಾವದ ಬೀಜವನ್ನು ಪೋಷಕರೇ ಬಿತ್ತುವುದು ಸರಿಯಲ್ಲ. ಚೆನ್ನಾಗಿ ಹಣ ಸಂಪಾದಿಸು ಎಂದು ಪದೇಪದೆ ಮಕ್ಕಳನ್ನು ಪ್ರಚೋದಿಸದಿರಿ. ಪಾಶ್ಚಾತ್ಯ ಜಗತ್ತು ನಮ್ಮ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು ಮತ್ತು ಆದರ್ಶ ಕೌಟುಂಬಿಕ ಬದುಕಿನ ಸೆಳೆತಕ್ಕೊಳಗಾಗುತ್ತಿರುವ ಹೊತ್ತಿನಲ್ಲಿ ನಮ್ಮ ಯುವ ಸಮುದಾಯ ಹಾದಿ ತಪ್ಪುತ್ತಿರುವುದು ವಿಷಾದನೀಯ.

ನಮ್ಮ ಕೌಟುಂಬಿಕ ವ್ಯವಸ್ಥೆ ಜಾಗತೀಕರಣದ ವೇಗದಲ್ಲಿ ಕೊಚ್ಚಿಕೊಂಡು ಹೋಗದಂತೆ ರಕ್ಷಿಸಿಕೊಳ್ಳಬೇಕಾದ ಆವಶ್ಯಕತೆ ಇದೆ. ಇದನ್ನು ಯಾವ ಕಾನೂನೂ, ಸರಕಾರವೂ ಮಾಡಲಾಗದು. ಉತ್ತಮ ಸಂಸ್ಕಾರ-ಸಂಸ್ಕೃತಿಯ ವಾತಾವರಣ ಪ್ರತೀ ಮನೆಯಲ್ಲಿ ದೊರೆಯುವಂತಾಗಬೇಕು. ಮಕ್ಕಳ ಮನಸ್ಸು ತುಂಬಾ ಕೋಮಲ. ಹಿರಿಯರ ನಡೆ ಕಿರಿಯರಿಗೆ ಆದರ್ಶವಾಗಿರುವಂತೆ ಎಚ್ಚರ ವಹಿಸಬೇಕಾಗಿದೆ. ಬಾಲ್ಯ ಕಳೆದು ಮಕ್ಕಳು ಜವ್ವನಿಗರಾಗುತ್ತಿರುವುದನ್ನು ಗಮನಿಸಲಾಗದಷ್ಟರ ಮಟ್ಟಿಗೆ ಪೋಷಕರು ತಮ್ಮ ಚಟುವಟಿಕೆಗಳಲ್ಲಿ ವ್ಯಸ್ತರಾಗಿರುವುದು ಸರಿಯಲ್ಲ.

-ಬಿ. ಚಂದ್ರಶೇಖರ ನಾವಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next