Advertisement

ಸೋತಾಗ ದುಡುಕದಿರಿ; ಬದುಕು ಬದಲಾಗಬಹುದು

12:22 AM Dec 06, 2021 | Team Udayavani |

ಪದವಿ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ಯೊಬ್ಬ ಇತ್ತೀಚೆಗೆ ಮರಣ ಪತ್ರವೊಂದನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ. ಕೆಲವೇ ದಿನಗಳ ಹಿಂದೆ ಕಾಲೇಜೊಂದರಲ್ಲಿ ಕಲಿಸುತ್ತಿದ್ದ ಉತ್ತಮ ಶಿಕ್ಷಕಿಯೊಬ್ಬರು ಅನಾರೋಗ್ಯದ ನೆಪದಲ್ಲಿ ನೇಣಿಗೆ ತಲೆಯೊಡ್ಡಿದರು. ಅಪ್ಪ-ಮಗ ಜಗಳವಾಡಿ ಮಗ ಕೊರಳಿಗೆ ಕುಣಿಕೆ ಹಾಕಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ. ದಿನವಿಡೀ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದ ಮಗಳಿಗೆ ತಾಯಿ ಬೈದು ಬುದ್ದಿವಾದ ಹೇಳಿದ್ದಕ್ಕೆ ಬೇಸತ್ತು ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು. ಹತ್ತನೆಯ ತರಗತಿಯಲ್ಲಿ ಕಲಿಯುತ್ತಿದ್ದ ಒಬ್ಬ ಹುಡುಗ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದದ್ದಗಿ ಆತ್ಮಹತ್ಯೆ ಮಾಡಿಕೊಂಡ. ಸಾಲ ತೀರಿಸಲಾರದ ಕುಟುಂಬವೊಂದರ ಹಿರಿಯರು ಮಕ್ಕಳಿಗೂ ವಿಷಪ್ರಾಶನ ಮಾಡಿಸಿ ತಾವೂ ವಿಷ ಕುಡಿದು ಸಾವಿಗೀಡಾದರು. ಹೆತ್ತವರ ವಿರೋಧಕ್ಕೆ ಹತಾಶಗೊಂಡ ಪ್ರೇಮಿಗಳಿಬ್ಬರು ಹೊಟೇಲೊಂದರ ಕೊಠಡಿಯಲ್ಲಿ ಸಾವನ್ನು ತಂದುಕೊಂಡರು.. ಇಂತಹ ಅನೇಕ ಘಟನೆಗಳು ಪ್ರತಿದಿನ ಸುದ್ದಿಯಾಗುತ್ತವೆ. ಇದು ನಮ್ಮ ಸುತ್ತಮುತ್ತಲೇ ನಡೆದಾಗ ಮನಸ್ಸು ಘಾಸಿಯಾಗುತ್ತದೆ. ಸೋತು ಹೋದಾಗಲೆಲ್ಲ ಮನಸ್ಸು ಅಷ್ಟೊಂದು ಕ್ಷೀಣವಾಗುವುದು ಯಾಕೆ? ಅದೂ ವಿದ್ಯಾವಂತರಲ್ಲಿಯೇ ಈ ವರ್ತನೆ ಹೆಚ್ಚುತ್ತಿರುವುದು ಆತಂಕದ ವಿಷಯ.

Advertisement

ಅನಾರೋಗ್ಯ, ಪ್ರೇಮ ವೈಫ‌ಲ್ಯ, ಸಾಲದ ಹೊರೆ, ಅವಮಾನ, ಪರೀಕ್ಷೆಗಳಲ್ಲಿ ಸೋಲು ಇವೆಲ್ಲವೂ ಆತ್ಮಹತ್ಯೆಯ ತತ್‌ಕ್ಷಣದ ಕಾರಣಗಳು. ಆದರೆ ಆತ್ಮಹತ್ಯೆಯ ಯೋಚನೆಯ ಹಿಂದೆ ಅನೇಕ ಸಮಯದ ಮಾನಸಿಕ ತೊಳಲಾಟ ಇಲ್ಲದಿರದು. ಈ ನಿರ್ಧಾರಕ್ಕೆ ಬರುವ ಮೊದಲು ಆತ /ಆಕೆ ಒಂದಷ್ಟು ಕಾಲ ಮಾನಸಿಕ ಖಿನ್ನತೆಯನ್ನು ಅನುಭವಿಸಿ ಹತಾಶರಾಗಿರುತ್ತಾರೆ. ಸೋಲು ಎದುರಿಸಲಾರದ ದುರ್ಬಲ ಮನಸ್ಸು ಈ ಕೃತ್ಯಕ್ಕೆ ಪ್ರೇರೇಪಿಸುತ್ತದೆ.

ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚು ಹೆಚ್ಚಾಗಿ ವರದಿಯಾಗುತ್ತಿವೆ. ಯುವ ಸಮೂಹ ಸಣ್ಣಪುಟ್ಟ ವಿಚಾರಗಳಗೂ ಆತ್ಮಹತ್ಯೆಯ ಯೋಚನೆ ಮಾಡುವುದು ಸಾಮಾಜಿಕವಾಗಿ ಆರೋಗ್ಯಕರ ಬೆಳವಣಿಗೆ ಯಲ್ಲ. ಈ ರೀತಿಯ ಘಟನೆಗಳಿಗೆ ಕಾರಣಗಳೇನು? ಸೋಲನ್ನು ಸ್ವೀಕರಿಸುವ ಮನೋಭಾವ ನಮ್ಮ ಸಮಾಜದಲ್ಲಿ ಕಡಿಮೆ ಯಾಗುತ್ತಿದೆಯಾ? ಛಲದಿಂದ ಬದುಕುವ ಗಟ್ಟಿಗತನವನ್ನು ನಮ್ಮ ಯುವ ಜನತೆ ಹೊಂದಿಲ್ಲವೇಕೆ?

ಇದನ್ನೂ ಓದಿ:ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

ನಾವೆಲ್ಲರೂ ಜೀವನದಲ್ಲಿ ಯಶಸ್ಸು ಗಳಿಸ ಬೇಕೆಂದು ಹೋರಾಟ ನಡೆಸುತ್ತಿದ್ದೇವೆಯೇ ಹೊರತು ಸೋಲಿನ ಮುಖ ಹೊತ್ತು ಬದುಕಲು ಸಿದ್ಧರಿಲ್ಲ. ಪರೀಕ್ಷೆಯಲ್ಲಿ ಅಧಿಕ ಅಂಕ ಬಂದಿಲ್ಲ ಎಂದರೆ ಅದು ನಮ್ಮ ಜೀವನದ ಸೋಲು ಎಂದುಕೊಳ್ಳುತ್ತೇವೆ. ಆದರೆ ಅನೇಕ ಬಾರಿ ಜೀವನದ ಯಶಸ್ಸು ಅಂಕಗಳಿಂದ ನಿರ್ಧರಿತವಾಗುವುದಿಲ್ಲ. ಸಾಲ ಮಾಡಿ ತೀರಿಸಲಾಗದವನಿಗೆ ಆತ್ಮಹತ್ಯೆಯೇ ಪರಿಹಾರ ಎಂದೆನಿಸತೊಡಗುತ್ತದೆ. ಆದರೆ ಅದ ರಾಚೆಗೂ ಗೆಲ್ಲುವ ಅವಕಾಶಗಳಿವೆ ಎಂದು ಆ ಕ್ಷಣದಲ್ಲಿ ಎನಿಸುವುದಿಲ್ಲ. ಪ್ರೀತಿ ಸೋತಾಗ ಪ್ರಪಂಚ ದಲ್ಲಿ ನಮ್ಮವರಾರೂ ಇಲ್ಲ ಎನಿಸಿಬಿಡುತ್ತದೆ. ಇರುವ ನಮ್ಮವರೆಲ್ಲರ ಪ್ರೀತಿ ವಾತ್ಸಲ್ಯ ಹಿಂದೆ ಸರಿದು ಬಿಡುತ್ತದೆ. ಕಳೆದು ಹೋದವರಿಗಾಗಿ ಪರಿತಪಿಸುತ್ತಾ ನಮಗಾಗಿ ಇರುವವರನ್ನು ಮರೆತು ಬಿಡುತ್ತೇವೆ. ಹೆಣ್ಣು /ಗಂಡು ತಾನು ಪ್ರೀತಿಸಿದವರಿಂದ ವಂಚಿತರಾದಾಗ ಛಲದಿಂದ ಬದುಕುವುದನ್ನು ಬಿಟ್ಟು ಎಲ್ಲ ಕಳಕೊಂಡವರಂತೆ ಮಂಕಾಗಿ ಆತ್ಮಹತ್ಯೆಯ ದಾರಿಯನ್ನು ಆಯ್ದುಕೊಳ್ಳುವುದು ಪರಿಹಾರವಲ್ಲ. ಬದುಕಿನ ಹೆದ್ದಾರಿಯಲ್ಲಿ ಯಾವಾಗ ಬೇಕಾದರೂ ತಿರುವುಗಳು ಸಿಗಬಹುದು. ಇದನ್ನು ಯೋಚಿಸದೆ ದುಡುಕಿನ ನಿರ್ಧಾರಗಳೇ ಆತ್ಮಹತ್ಯೆಗೆ ಕಾರಣ.

Advertisement

ಸಮಸ್ಯೆಗಳು ಬಂದಾಗ ಕುಸಿದು ಹೋಗುವುದು ಸಹಜ. ಆದರೆ ಇವುಗಳಿಗೆಲ್ಲ ಆತ್ಮಹತ್ಯೆ ಪರಿಹಾರವಾಗ ಕೂಡದು. ಹಾಗೆ ಸತ್ತಾಗ ನೂರಾರು ಸಮಸ್ಯೆಗಳನ್ನು ಬಿಟ್ಟು ಹೋದಂತೆಯೇ. ಸತ್ತವರ ಕುರಿತು ನೂರಾರು ಮಾತುಗಳು ಮನೆಯರಿಗೆ, ಹೆತ್ತವರಿಗೆ ಅಸಹನೀಯ ನೋವು, ಏನೇನೋ ಪ್ರಶ್ನೆಗಳು, ಹಲವಾರು ಸಂಶಯಗಳು ಹೆತ್ತವರನ್ನು ಹಿಂಸಿಸುತ್ತವೆ.

ಯಾಕೆ ಮನಸ್ಸು ಅಷ್ಟೊಂದು ದುರ್ಬಲವಾಗುತ್ತದೆ? ನಮ್ಮ ಸಾಮಾಜಿಕ ಪರಿಸ್ಥಿತಿಯೇ ಇದನ್ನು ಪರೋಕ್ಷವಾಗಿ ಪ್ರೇರೇಪಿಸುತ್ತಿದೆಯಾ? ಇನ್ನೊಬ್ಬರ ಸೋಲು, ನೋವುಗಳನ್ನು ಕಂಡು ಸಮಾಧಾನ ಹೇಳುವ ಬದಲು ಖುಷಿಪಡುವ ಮನೋಭಾವ ಹೆಚ್ಚುತ್ತಿದೆಯಾ? ನಮ್ಮನಮ್ಮೊಳಗೆ ಪರಸ್ಪರ ಪ್ರೀತಿ, ನಂಬಿಕೆ, ಸಹಕಾರ, ವಿಶ್ವಾಸಗಳು ಕಳೆದು ಹೋಗಿದೆಯಾ? ಕುಟುಂಬದಲ್ಲಿನ ಕಾಳಜಿ, ಬಾಂಧವ್ಯಗಳು ಕುಸಿದು ಹೋಗಿವೆಯಾ?

ಇದಕ್ಕೇನು ಪರಿಹಾರ?
ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಸೋಲು ಹತಾಶೆಗಳು ಬಂದು ಹೋಗುವುದು ಸಹಜ. ಆರ್ಥಿಕ ಸಂಕಷ್ಟ , ಸಾಂಸಾರಿಕ ತಾಪತ್ರಯಗಳು, ಆರೋಗ್ಯ ಸಮಸ್ಯೆ, ಪ್ರೇಮ ವೈಫ‌ಲ್ಯ, ಅವಮಾನ ಇವೆಲ್ಲವೂ ಬದುಕಿನ ವಿವಿಧ ಮಜಲುಗಳು. ಇವೆಲ್ಲದರ ವಿರುದ್ಧ ಹೋರಾಡಲೇಬೇಕು. ಅಂಥ ದೃಢ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇಲ್ಲಿ ಯಾವುದೂ ಶಾಶ್ವತ ಅಲ್ಲ. ಸೋಲಾಗಲಿ, ಗೆಲು ವಾಗಿರಲಿ ಬದಲಾವಣೆ ಜಗದ ನಿಯಮ. ಸೋಲಿಗೆ ಸೋತು ಸಾವಿಗೆ ಶರಣಾಗುವುದು ಪರಿಹಾರ ಎನ್ನುವ ಮನೋಭಾವ ಬದಲಿಸಿಕೊಳ್ಳಬೇಕು.

ಮುಖ್ಯವಾಗಿ ಸಾವಿಗೆ ಶರಣಾಗುವ ಮಕ್ಕಳು ಮತ್ತು ಯುವ ಜನಾಂಗದ ಮನಃಸ್ಥಿತಿಯನ್ನು ಬದಲಿಸಬೇಕಿದೆ. ಗೆಲುವಿನ ಮಂತ್ರದ ಬದಲು ಸೋಲಿನ ಪಾಠವನ್ನು ಹೇಳಿಕೊಡಬೇಕು. ಸೋತಾಗ ತಿರಸ್ಕಾರದಿಂದ ನೋಡದೆ ಸೋಲು ಸಾಮಾನ್ಯ ಎನ್ನುವುದನ್ನು ತಿಳಿಸ ಬೇಕು. ಹೆತ್ತವರು ಮಕ್ಕಳಿಗೆ ಕೇವಲ ಅಂಕಗಳನ್ನು ಗಳಿಸುವ ಶಾಲಾ ಶಿಕ್ಷಣಕ್ಕೆ ಮಾತ್ರ ಪ್ರಾಧಾನ್ಯ ನೀಡುವ ಬದಲು ಬದುಕುವ ಕಲೆಯನ್ನು ಕಲಿಸುವ ವಿಚಾರಗಳಿಗೆ ಅವರನ್ನು ತೆರೆದಿಡಬೇಕು. ಕಷ್ಟದ ಬದುಕನ್ನು ಅವರಿಗೆ ತೋರಿಸಬೇಕು. ಆದರೆ ಈಗಿನ ಹೆತ್ತವರು ತಮ್ಮ ಮಕ್ಕಳಿಗೆ ಅತಿಯಾದ ಒತ್ತಡವನ್ನು ಹೇರುವ ಮೂಲಕ ಅವರ ವ್ಯಕ್ತಿತ್ವಕ್ಕೆ ಬೇಲಿ ಹಾಕುವುದರಿಂದ ಹೊರಗಿನ ಪ್ರಪಂಚದ ಅರಿವು ಅವರಲ್ಲಿ ಸೀಮಿತವಾಗುತ್ತದೆ. ಯಶಸ್ಸು ಒಂದೇ ಗುರಿಯಾಗಿರುವ ಅವರು ಸೋಲಿನ ವಾಸ್ತವವನ್ನು ಅರಗಿಸಿಕೊಳ್ಳಲಾಗದೆ ಆತ್ಮಹತ್ಯೆ ಒಂದೇ ಪರಿಹಾರ ಎಂದುಕೊಂಡು ಸಾವಿಗೆ ಶರಣಾಗುತ್ತಾರೆ.

ಮನೆಯಲ್ಲಿ ಮುಕ್ತ ವಾತಾವರಣವಿದ್ದಾಗ ಪರಸ್ಪರ ನೋವನ್ನು ಹಂಚಿಕೊಂಡು ಹಗುರವಾಗಲು ಸಾಧ್ಯವಾಗುತ್ತದೆ. ಪರಸ್ಪರ ಸಹಕಾರದಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಸಮಸ್ಯೆಗಳು ಎದುರಾದಾಗ ಅದನ್ನು ಕೆಣಕಿ ಮತ್ತಷ್ಟು ಹೆಚ್ಚಿಸುವ ಬದಲಾಗಿ ನಂಬಿಕಸ್ಥರ ಜತೆ ಶಾಂತವಾಗಿ ಕುಳಿತು ಮುಕ್ತವಾಗಿ ಮಾತನಾಡುವ ಮೂಲಕ ಮಾನಸಿಕವಾಗಿ ಕುಸಿದು ಹೋದ ಅವರನ್ನು ಸ್ವಲ್ಪ ಮಟ್ಟಿಗೆ ಬದಲಿಸಬಹುದು. ಇನ್ನೊಬ್ಬರ ನೋವು, ಸಮಸ್ಯೆಗಳನ್ನು ಕೆಣಕಿ, ಕೆದಕಿ ಭೂತಕನ್ನಡಿಯಿಂದ ನೋಡುವುದು ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದಂತೆ. ಕಳೆದು ಜೋದ ಜೀವ ಮತ್ತೆ ಬೇಕೆಂದರೂ ಬರಲಾರದು.

ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಆಪ್ತ ಸಲಹಾ ಕೇಂದ್ರಗಳು ಅಗತ್ಯವಾಗಿ ಇರಬೇಕು. ಅವುಗಳು ಕಾಟಾಚಾರಕ್ಕಾಗಿ ಇರಕೂಡದು. ಆಪ್ತ ಸಲಹಾಕಾರರು ಆಪ್ತಮಿತ್ರರಂತಿರಬೇಕು. ಅವರು ಸಾಧ್ಯವಾದಷ್ಟು ಸಂಸ್ಥೆಯ ಹೊರಗಿನವರಿದ್ದರೆ ಉತ್ತಮ. ಏಕೆಂದರೆ ಶಾಲಾ ಕಾಲೇಜುಗಳಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳ ವೈಯಕ್ತಿಕ ಸಮಸ್ಯೆಗಳ ಗೌಪ್ಯತೆಯನ್ನು ಕಾಯ್ದುಕೊಳ್ಳಬಹುದೆಂದು ಮಕ್ಕಳಿಗೆ ನಂಬಿಕೆ ಇರಲಾರದು. ಅವರ ಇತರ ಸಹೋ ದ್ಯೋಗಿಗಳ ಜತೆಗೆ ಹೇಳಬಹುದು, ತಮ್ಮ ವಿಷಯ ಎಲ್ಲರಿಗೂ ತಿಳಿಯಬಹುದು ಎಂಬ ಭಯದಿಂದ ಅವರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂಜರಿಯಬಹುದು. ಹೆಚ್ಚಿನ ಸಲ ಇದು ವಾಸ್ತವ ಕೂಡ ಮತ್ತು ಎಲ್ಲ ಅಧ್ಯಾಪಕರಿಗೆ ಆಪ್ತಸಲಹಾ ಕೌಶಲವಿರುತ್ತದೆ ಎಂದು ಹೇಳಲಾಗದು. ಮಕ್ಕಳ ಸಮಸ್ಯೆಗಳನ್ನು ಆಲಿಸಿ ಅದನ್ನು ಪರಿಹರಿಸಬಲ್ಲ ಮತ್ತು ಮಕ್ಕಳಿಗೆ ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗಬಲ್ಲ ಶಿಕ್ಷಕರನ್ನು ಆಯ್ದು ಇಂತಹ ಸಮಿತಿಯ ಸಂಚಾಲಕರನ್ನಾಗಿ ಮಾಡಿದರೆ ಸ್ವಲ್ಪಮಟ್ಟಿಗೆ ಸಹಾಯವಾಗಬಹುದು ಮತ್ತು ಆಪ್ತ ಸಲಹಾ ಸಮಿತಿಯ ಉದ್ದೇಶವೂ ಪೂರೈಸಬಹುದು. ದುರದೃಷ್ಟವಶಾತ್‌ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಆಪ್ತ ಸಲಹಾ ಕೇಂದ್ರಗಳು ಕೇವಲ ಕಾಟಾಚಾರಕ್ಕಿವೆ. ಅಲ್ಲಿ ಆಪ್ತ ಸಲಹೆ ಇರುವುದಿಲ್ಲ.

ಆತ್ಮಹತ್ಯೆ ಎನ್ನುವುದು ಕೇವಲ ವ್ಯಕ್ತಿಯೊಬ್ಬನ ದೌರ್ಬಲ್ಯವಲ್ಲ. ಇದು ಒಂದು ಸಾಮಾಜಿಕ ಸಮಸ್ಯೆ. ಒಬ್ಬ ವ್ಯಕ್ತಿಯ ಆತ್ಮಹತ್ಯೆಗೆ ಆತ ಮಾತ್ರ ಕಾರಣನಲ್ಲ, ನಾವೆಲ್ಲರೂ ಕಾರಣರಾಗುತ್ತೇವೆ. ಜೀವಂತವಾಗಿರುವಾಗ ಸರಿಯಾಗಿ ಸ್ಪಂದಿಸದೆ ಆ ಕ್ಷಣಕ್ಕೆ ಸಹಾಯಕ್ಕೆ ಒದಗದೆ ಸರಿಯಾದ ಮಾರ್ಗ ದರ್ಶನವಿಲ್ಲದೆ ಇರುವುದರಿಂದ ಆತ್ಮಹತ್ಯೆಯ ಪ್ರಯತ್ನಗಳು ದುರಂತದಲ್ಲಿ ಕೊನೆಯಾಗುತ್ತದೆ. ಸೋತಾಗ ಸಾಯಬೇಕು ಎಂದೆನಿಸಿದಾಗ ಒಂದು ಕ್ಷಣ ಯಾರಲ್ಲಾ ದರೂ ಮಾತನಾಡಿ. ಬದುಕಿನ ದಾರಿ ಬದಲಾಗಬಹುದು.

-ವಿದ್ಯಾ ಅಮ್ಮಣ್ಣಾಯ,ಕಾಪು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next