Advertisement
ಸರಕಾರ ಪತನ ಅಸಾಧ್ಯ: ರಾಮಲಿಂಗಾ ರೆಡ್ಡಿವಿಜಯಪುರ: ಕಾಂಗ್ರೆಸ್ ಸರಕಾರದಲ್ಲಿ ಸಿಎಂ ವರ್ಸಸ್ ಡಿಸಿಎಂ ಮಧ್ಯೆಯಾಗಲಿ, ಕಾಂಗ್ರೆಸ್ ಸರಕಾರದಲ್ಲಾಗಲಿ ಯಾವ ಆಂತರಿಕ ಸಂಘರ್ಷವೂ ಇಲ್ಲ. ಬಿಜೆಪಿ ನಾಯಕರು ಕಾಂಗ್ರೆಸ್ ಸರಕಾರ ಪತನದ ಕನಸು ಕಾಣುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಇದೆಲ್ಲ ಮಾಧ್ಯಮ ಸೃಷ್ಟಿ. ಮಾಧ್ಯಮದವರು ಕೇಳುತ್ತಾರೆ ಎಂದು ಕೆಲವರು ಹೇಳುತ್ತಾರೆ. ಮಹಾರಾಷ್ಟ್ರ ಮಾದರಿಯಲ್ಲಿ ಸರಕಾರ ಬದಲಾವಣೆ ಎಂದು ಬಿಜೆಪಿ ನಾಯಕರು ಕನಸು ಕಾಣುತ್ತಿದ್ದಾರೆ. ಸೋತು ಸುಣ್ಣವಾಗಿರುವ ಬಿಜೆಪಿ ಮೊದಲು ವಿಪಕ್ಷ ನಾಯಕ ಮಾಡಿಕೊಳ್ಳಲಿ. ಸಚಿವ ಸತೀಶ ಜಾರಕಿಹೊಳಿ ದುಬಾೖ ಪ್ರವಾಸ ಸಮಸ್ಯೆಯಲ್ಲ, ಸರಕಾರಕ್ಕೆ ಏನೂ ಆಗುವುದಿಲ್ಲ. ನಮ್ಮ ಸರಕಾರ 10 ವರ್ಷ ಅಧಿಕಾರದಲ್ಲಿರಲಿದೆ ಎಂದರು.
ಅರಸೀಕೆರೆ(ಹಾಸನ): ರಾಜ್ಯ ಸರಕಾರ ಮಹಾರಾಷ್ಟ್ರ ರೀತಿಯಲ್ಲಿ ಪತನವಾಗಲಿದೆ ಎಂಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಕಿಡಿ ಕಾರಿದರು. ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ರಮೇಶ್ ಜಾರಕಿಹೋಳಿ ಅಂತಹದ್ದೇ ಪಾತ್ರವನ್ನು ಅವರ ರಾಜಕೀಯ ಜೀವನದಲ್ಲಿ ಮಾಡಿಕೊಂಡು ಬಂದಿದ್ದಾರೆ. ಅವತ್ತಿನ ಸಮ್ಮಿಶ್ರ ಸರಕಾರದಲ್ಲಿ ಸಕ್ಸಸ್ ಆಗಿದೆ ಅಂಥ ಈ ಸರಕಾರಕ್ಕೆ ಕೈ ಹಾಕಿದರೆ ಭ್ರಮನಿರಸನ ಗ್ಯಾರಂಟಿ ಎಂದು ಎಚ್ಚರಿಸಿದರು. ರಮೇಶ್ ಜಾರಕಿಹೋಳಿ, ಬಿಜೆಪಿಯವರು ಸೇರಿ ಯಾರ್ಯಾರು ಈ ರೀತಿ ಹೇಳ್ತಾರೋ ಅವರೆಲ್ಲ ಹುಚ್ಚರು. ಇವರೆಲ್ಲರಿಗೂ ಭ್ರಮ ನಿರಸನ ಕಾದಿದೆ, ಯಶಸ್ಸು ಸಿಗುವುದಿಲ್ಲ ಎಂದರು.