Advertisement

ರಾಮಪುರದಲ್ಲಿ ಕುದುರೆಗಳಂತೆ ಓಡುವ ಕತ್ತೆಗಳು

07:02 PM Jun 24, 2022 | Team Udayavani |

ರಬಕವಿ-ಬನಹಟ್ಟಿ : ಕತ್ತೆ ಎಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದುದು ಅದರ ಮೂರ್ಖತನ, ಹೆಡ್ಡತನ ಹಾಗೂ ಶ್ರಮಜೀವಿತನ. ಸಮಾಜದಲ್ಲಿ ಕತ್ತೆಯನ್ನು ಹಿಯಾಳಿಸುವ ಹಾಗೂ ಕೀಳು ಭಾವನೆಯಿಂದ ನೋಡುವ ಜನರೆ ಹೆಚ್ಚಾಗಿದ್ದು, ಕತ್ತೆ ತಾನು ಎಷ್ಟೇ ಪ್ರಾಮಾಣಿಕವಾಗಿ ತನ್ನ ಯಜಮಾನನ ಸೇವೆ ಮಾಡಿದರೂ ಅವನಿಂದ ಬೈಗುಳ ಹಾಗೂ ಹೊಡೆತಗಳು ತಪ್ಪಿದ್ದಲ್ಲ. ಅಂತಹ ಕತ್ತೆಯನ್ನು ಕುದುರೆಯಂತೆ ಪಳಗಿಸಿ ಲಗಾಮು ಹಾಕಿ ರೇಸ್ ನಡೆಸುವುದನ್ನು ತಾವೆಲ್ಲಾದರೂ ಕೇಳಿದ್ದೀರಾ! ಹೌದು, ಇದು ನಡೆಯುವುದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ರಾಮಪುರದಲ್ಲಿ ಗ್ರಾಮ ದೇವತೆ ಲಕ್ಕವ್ವದೇವಿ ಜಾತ್ರೆ ಹಾಗೂ ಹನುಮಾನ ದೇವರ ಓಕಳಿಯ ನಿಮಿತ್ತವಾಗಿದೆ.

Advertisement

“ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ” ಒಟ್ಟಿನಲ್ಲಿ ಕತ್ತೆಯನ್ನು ಹಿಯಾಳಿಸುವ ಕಾಲದಲ್ಲಿ ಕತ್ತೆಯನ್ನು ಪಳಗಿಸಿ ರೇಸ್‌ಗಾಗಿ ಸಿದ್ಧಮಾಡಿ ಅದರಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವ ಖುಸಿ ಮಾತ್ರ ಅಪಾರ. ಅಂತಹ ಅಪರೂಪದ ಸ್ಪರ್ಧೆ ಇಲ್ಲಿಯ ಜನರಿಗೆ ಸಾಕಷ್ಟು ಮನರಂಜನೆ ನೀಡುತ್ತಿರುವುದಂತು ಸತ್ಯ.

ಈ ಕತ್ತೆಗಳು ಅಗಸನ ಕತ್ತೆಗಳಲ್ಲಿ ಇಲ್ಲಿ ವಾಸಿಸುವ ಭಜಂತ್ರಿ ಜನಾಂಗಕ್ಕೆ ಸೇರಿದವು. ಗ್ರಾಮದಲ್ಲಿ ಸುಮರು ೫೦ರಿಂದ ೬೦ ಮನೆತನಗಳನ್ನು ಹೊಂದಿರುವ ಭಜಂತ್ರಿ ಕುಟುಂಬದ ಮೂಲ ಕಸುಬು ಕೂಲಿ ಮಾಡುವುದು ಅದಿಲ್ಲದೇ ಜೀವನವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಇವರು ಹಲವಾರು ವರ್ಷಗಳಿಂದ ಇವರ ಜನಾಂಗದ ಬೇರೆ ಬೇರೆ ತಂಡಗಳನ್ನು ಮಾಂಜರಿಗೆ ಕತ್ತೆಗಳ ಸಮೇತ ೫-೬ತಿಂಗಳು ದುಡಿಯಲು ಹೋಗಿ, ಮಳೆಗಾಲ ಪ್ರಾರಂಭವಾದ ತಕ್ಷಣ ತಮ್ಮ ಸ್ವಂತ ಗ್ರಾಮಕ್ಕೆ ಮರಳುತ್ತಾರೆ. ಅದೇ ಸಮಯಕ್ಕೆ ಈ ಜಾತ್ರೆ ಕಾರ್ಯಕ್ರಮ ಪ್ರಾರಂಭವಾಗುವುದರಿಂದ ಸುಮಾರು ೧೫ವರ್ಷದ ಹಿಂದೆ ಜಾತ್ರಾ ಕಮಿಟಿಯ ಪ್ರಮುಖರು ಸೇರಿದಂತೆ ಗ್ರಾಮದ ಸಮಸ್ತ ಹಿರಿಯರು ಕೂಡಿ ಕತ್ತೆಗಳನ್ನು ಇಷ್ಟೊಂದು ದುಡಿಸಿಕೊಳ್ಳುತ್ತಿದ್ದಾರೆ, ಬರಗಾಲ ಬಂದಾಗ ಮದುವೆ, ಮೆರವಣಿಗೆ ಮಾಡುತ್ತಾರೆ. ನಾವು ಕತ್ತೆಗಳ ರೇಸ ಏಕೆ ಇಡಬಾರದು ಅಂತಾ ಯೋಚಿಸಿ ಇಟ್ಟೆ ಬಿಟ್ಟೆವು ಎನ್ನುತ್ತಾರೆ ಗ್ರಾಮದ ಹಿರಿಯರು.

ಸ್ಪರ್ಧೆಯ ಬಗ್ಗೆ ಮೊದಲೇ ತಿಳಿದುಕೊಳ್ಳುವ ಈ ಜನಾಂಗದವರು ಆ ವೇಳೆಗೆ ಇಲ್ಲಿಗೆ ಆಗಮಿಸಿ ೧೫ ದಿನದ ಮುಂಚೆ ಪ್ರತಿ ರಾತ್ರಿ ೧೦ರ ನಂತರ ಭಾಗವಹಿಸುವ ಕತ್ತೆಗಳು ಮಾರ್ಗ ತಪ್ಪದಿರಲೆಂದು ಕತ್ತೆ ಹಾಗೂ ಸವಾರರು ತರಬೇತಿ ನಡೆಸುತ್ತಾರೆ. ಮರುದಿನ ನಡೆಯುವ ಸ್ಪರ್ಧೆಯಲ್ಲಿ ತಮ್ಮ ಕತ್ತೆಯೊಂದಿಗೆ ಆಗಮಿಸುವ ಯುವಕರು ತುಂಬಾ ಉತ್ಸಾಹದಿಂದಲೇ ಇದರಲ್ಲಿ ಬಾಗವಹಿಸಿ ರಾಮಪುರದ ರಾಮಮಂದಿರದಿಂದ ಆನಂದ ಚಿತ್ರಮಂದಿರದವರೆಗೆ ಸಾಗಿ ಪುನಃ ಪ್ರಾರಂಭದ ಸ್ಥಳಕ್ಕೆ ಬರುವಂತ ಪ್ರದರ್ಶನ ನಡೆಯುತ್ತವೆ. ವಿಜೇತರಿಗೆ ಬಹುಮಾನ ಕೊಡಲಾಗುತ್ತದೆ.

ವರ್ಷದಿಂದ ವರ್ಷಕ್ಕೆ ಇದರ ಜನಪ್ರೀಯತೆ ಹೆಚ್ಚುತ್ತಾ ನಡೆದಿದ್ದು, ಕಳೆದ ಕೆಲವು ವರ್ಷಗಳು ಕೋವಿಡ್‌ನಿಂದಾಗಿ ಸ್ಪರ್ಧೆ ನಡೆದಿರಲಿಲ್ಲ. ರಾಮಪೂರದಲ್ಲಿ ಲಕ್ಕವ್ವದೇವಿ ಜಾತ್ರೆ ನಿಮಿತ್ತ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ೧೦ ಕ್ಕೂ ಅಧಿಕ ಕತ್ತೆಗಳು ಹಾಗು ಅದರ ಮಾಲಿಕರು ಭಾಗವಹಿಸಿದ್ದರು. ಕತ್ತೆ ರೇಸ್ ಸ್ಪರ್ಧೆಗೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವಪ್ರಭು ಹಟ್ಟಿ ಉದ್ಘಾಟಿಸಿದರು.

Advertisement

ಈ ಸಲದ ಸ್ಪರ್ಧೆಯಲ್ಲಿ ರಬಕವಿ-ಬನಹಟ್ಟಿ, ರಾಮಪೂರ ಹಾಗು ಆಸಂಗಿ ಗ್ರಾಮಗಳಿಂದ ಕತ್ತೆಗಳು ಪಾಲ್ಗೊಂಡಿದ್ದವು. ಪ್ರಥಮ ಸ್ಥಾನವನ್ನು ರಾಮಪೂರದ ರವಿ ಭಜಂತ್ರಿಯವರ ಕತ್ತೆ, ದ್ವಿತೀಯ ಸ್ಥಾನವನ್ನು ಬನಹಟ್ಟಿಯ ಮಹಾದೇವ ಭಜಂತ್ರಿ ಹಾಗು ತೃತಿಯ ಸ್ಥಾನವನ್ನು ರಾಮಪೂರದ ನಾಗಪ್ಪ ಭಜಂತ್ರಿಯವರ ಕತ್ತೆ ಪಡೆದಿವೆ ಎಂದು ಸಮಿತಿಯು ತಿಳಿಸಿದೆ.

ಕಾರ್ಯಕ್ರಮದಲ್ಲಿ ಮುಖಂಡರಾದ ಸುನೀಲ ವಜ್ಜರಮಟ್ಟಿ, ಲಕ್ಷ್ಮಣ ತಳವಾರ ಪರಪ್ಪ ಬಿಳ್ಳೂರ, ಸುರೇಶ ಗೊಲಬಾಂವಿ, ಮಹಾದೇವ ತಳವಾರ, ಪ್ರಕಾಶ ಸಿಂಘನ್, ಈರಪ್ಪ ಮೂಡಲಗಿ, ರಮೇಶ ಹೊಸಕೋಟಿ, ಯಲ್ಲಪ್ಪ ತಳವಾರ ಹಾಗು ಭಜಂತ್ರಿ ಸಮುದಾಯದ ಮುಖಂಡರು ಸೇರಿದಂತೆ ಅನೇಕರಿದ್ದರು.

ಒಟ್ಟಿನಲ್ಲಿ ಹೊತ್ತು ಬಂದಾಗ ಕತ್ತೆಯ ಕಾಲು ಹಿಡಿಯಬೇಕು ಎನ್ನುವಂತೆ ಕತ್ತೆಯನ್ನು ಕುದುರೆಯಂತೆ ಓಡಿಸಲು ಸಜ್ಜು ಮಾಡುವ ಹಾಗೂ ಸ್ಫರ್ಧೆಯಲ್ಲಿ ಭಾಗವಹಿಸುವ ಯುವಕರ ಉತ್ಸಾಹ ಮಾತ್ರ ಬಹಳಷ್ಟಿತ್ತು.

ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next