Advertisement

ಅಪ್ಪು ಹೆಸರಿನಲ್ಲಿ ಸೂರಿನ ಕೊಡುಗೆ

06:25 PM Aug 15, 2022 | Team Udayavani |

ಸಿಂಧನೂರು: ಗುಡಿಸಲು ವಾಸಿಯಾಗಿರುವ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕೆನ್ನುವುದು ಸರ್ಕಾರದ ಉದ್ದೇಶ. ಆದರೆ, ಸರ್ಕಾರ ಸೂರು ಕೊಟ್ಟರೂ ತಾಂತ್ರಿಕ ಕಾರಣದಿಂದ ಈಡೇರದಿದ್ದಾಗ ಸಮುದಾಯವೇ ಸಹಕಾರ ನೀಡಿ, ಇಬ್ಬರು ಅನಾಥ ಮಕ್ಕಳಿಗೆ ನೆರಳು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.

Advertisement

ದಿ.ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ (ಮಾ.17)ದಂದು ಕೈಗೊಂಡ ಸ್ನೇಹಿತರ ಸಂಕಲ್ಪ ಕೊನೆಗೂ ಈಡೇರಿದೆ. ತಾಲೂಕಿನ ಹೊಸಳ್ಳಿ ಕ್ಯಾಂಪಿನ ಹುಸೇನಮ್ಮ (35), ಬುದ್ಧಿಮಾಂದ್ಯ ಆಗಿರುವ ರೇಣುಕಮ್ಮ (30) ಎರಡು ವರ್ಷದ ಹಿಂದೆ ಪಾಲಕರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಅವರ ತಂದೆ ಹುಸೇನಪ್ಪ ಹಾಗೂ ಲಕ್ಷ್ಮಮ್ಮ ನಿಧನದ ಬಳಿಕ ಇಬ್ಬರೂ ತಬ್ಬಲಿಯಾಗಿದ್ದರು.

ಅಪ್ಪನ ಕನಸು ಈಡೇರಿರಲಿಲ್ಲ: ಹುಸೇನಪ್ಪ ತನ್ನಿಬ್ಬರು ಮಕ್ಕಳಿಗೆ ಸೂರು ಕಲ್ಪಿಸಲು ನಿರ್ಣಯಿಸಿ ಆಶ್ರಯ ಯೋಜನೆಯಡಿ ಮನೆ ಪಡೆದಿದ್ದರು. ಆದರೆ ತಾಂತ್ರಿಕ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ 2 ಬಿಲ್‌ ಪಾವತಿಯಾದ ಮನೆಗೆ ಮತ್ತೆ ಅನುದಾನ ಬಂದಿರಲಿಲ್ಲ. ಕೋವಿಡ್‌ ವೇಳೆ ಹುಸೇನಪ್ಪ ಮೃತಪಟ್ಟ ಹಿನ್ನೆಲೆಯಲ್ಲಿ ನಿರ್ಮಾಣ ಹಂತದ ಮನೆ ಪೂರ್ಣಗೊಂಡಿರಲಿಲ್ಲ.

ಅಕ್ಷಯ ಆಹಾರ ಜೋಳಿಗೆ, ಜೀವಸ್ಪಂದನ ಟ್ರಸ್ಟ್ ನ ಅಶೋಕ ನಲ್ಲಾ, ಅವಿನಾಶ್‌ ದೇಶಪಾಂಡೆ, ನಟ ಪುನೀತ್‌ ಅವರ ಜನ್ಮದಿನ ಆಚರಿಸುವ ಸಂದರ್ಭ ಈ ವಿಷಯ ತಿಳಿದು ಮನೆಗೆ ಧಾವಿಸಿ, ಅಪ್ಪು ಹೆಸರಿನಲ್ಲಿ ಅನಾಥರಿಗೆ ಸೂರು ಕಟ್ಟುವ ನಿರ್ಣಯ ಕೈಗೊಂಡು ಅದನ್ನು ಸಾಕಾರಗೊಳಿಸಿದ್ದಾರೆ.

ಹಲವರ ನೆರವು: ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿ ಜನ್ಮದಿನವನ್ನು ಈ ರೀತಿ ಬಡವರಿಗೆ ನೆರವಾಗುವುದರ ಮೂಲಕ ಆಚರಿಸಬೇಕೆಂಬ ಅಶೋಕ ನಲ್ಲಾ ಆಶಯಕ್ಕೆ ಹಲವರು ಕೈ ಜೋಡಿಸಿದ್ದಾರೆ. ಜೀವಸ್ಪಂದನಾ ಟ್ರಸ್ಟ್‌ನ ಅವಿನಾಶ್‌ ದೇಶಪಾಂಡೆ, ಕಾಲಕಾಲೇಶ್ವರ ಕಲರ್‌ ಕ್ರಿಯೇಶ್ಚನ್‌ ಸಂಸ್ಥೆಯವರು ಮನೆ ಪೂರ್ಣಗೊಳಿಸಲು ಸಿಮೆಂಟ್‌ ಪೂರೈಸಿದರು. ವೆಂಕಟೇಶ್ವರ ಆಗ್ರೋ ಮಾಲೀಕ ನೆಕ್ಕಂಟಿ ಸುರೇಶ್‌ ನೆಲಹಾಸು ಕೊಡಿಸಿದರು.

Advertisement

ಮೆಡಿಕಲ್‌ ಮಾಲೀಕ ರಾಜಶೇಖರರೆಡ್ಡಿ ಮಲ್ಲಾಪುರ ಮರಳು, ಕಿಟಕಿ, ಬಾಗಿಲಿಗೆ ತಗಲುವ ವೆಚ್ಚ ಭರಿಸಿದರು. ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್‌ನಿಂದ ಮೇಷನ್‌ ಕೆಲಸ ಉಚಿತವಾಗಿ ಮಾಡಿಸಿಕೊಟ್ಟರು. ಕಾರುಣ್ಯಾಶ್ರಮದ ಚನ್ನಬಸಯ್ಯಸ್ವಾಮಿ ಕೂಡ ಸಾಥ್‌ ನೀಡಿದರು. ಇದರ ಫಲವಾಗಿ ಸುಸಜ್ಜಿತ ಸೂರು ನಿರ್ಮಾಣವಾಗಿದ್ದು, ವಿದ್ಯುತ್‌ ವ್ಯವಸ್ಥೆ ಕಲ್ಪಿಸಿ, ಮನೆಗೆ ಸುಣ್ಣ-ಬಣ್ಣ ಬಳಿಯಲಾಗಿದೆ. ಅನಿಲ್‌ ದಾಪತ್ತೆ ಎಂಬುವವರು ಫ್ಯಾನ್‌ ಉಚಿತವಾಗಿ ಕೊಡಿಸಿ ನೆಮ್ಮದಿ ಗಾಳಿ ಬೀಸಿದ್ದಾರೆ.

ಅಪ್ಪು ಮನೆ ಎಂದೇ ಹೆಸರುವಾಸಿ
ಸ್ನೇಹಿತರ ಬಳಗ ಮನಸ್ಸು ಮಾಡಿದರೆ ಸಂಕಷ್ಟದಲ್ಲಿರುವ ಬಡವರಿಗೆ ನೆರವಾಗಬಹುದು ಎಂಬುದಕ್ಕೆ ಈ ಪ್ರಯತ್ನ ಸಾಕ್ಷಿಯಾಗಿದೆ. ಸೂರಿಲ್ಲವೆಂದು ಕೊರಗುತ್ತಿದ್ದ ಇಬ್ಬರು ಮಹಿಳೆಯರು, ಸ್ವಂತ ಸೂರು ಹೊಂದಿದ್ದಾರೆ. ಅವರಿಗೆ ಉಚಿತವಾಗಿ ಗ್ರಾಪಂ ಹೊಸಳ್ಳಿಯ ಅಧಿಕಾರಿಗಳು ಶೌಚಾಲಯ ಕಟ್ಟಿಸಿಕೊಡಬೇಕಿದೆ. ಈ ಹಿಂದೆ ತಾಂತ್ರಿಕ ಕಾರಣಕ್ಕೆ ಬಾಕಿ ಉಳಿದ ಆಶ್ರಯ ಯೋಜನೆ ಬಿಲ್‌ಗ‌ಳನ್ನು ಪಾವತಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.

ನಮ್ಮದೇನೂ ಕೊಡುಗೆಯಿಲ್ಲ. ಎಲ್ಲ ದಾನಿಗಳು, ಕಾಣದ ಕೈಗಳ ನೆರವಿನಿಂದ ಇದು ಸಾಧ್ಯವಾಗಿದೆ. ಅಪ್ಪು ಜನ್ಮದಿನಾಚರಣೆ ಸಂದರ್ಭ ಇಂತಹ ಕುಟುಂಬವೊಂದಕ್ಕೆ ನೆರವಾಗುವ ಇಚ್ಛೆ ವ್ಯಕ್ತಪಡಿಸಿದಾಗ ಹಲವರು ಕೈ ಜೋಡಿಸಿ, ಮನೆ ಪೂರ್ಣಗೊಳಿಸಲು ಸಾಥ್‌ ನೀಡಿದ್ದಾರೆ.
ಅಶೋಕ ನಲ್ಲಾ, ಕಾರ್ಯದರ್ಶಿ
ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್‌

ನಮ್ಮ ತಂದೆ ಹುಸೇನಪ್ಪ ಮನೆ ಕಟ್ಟಿಸಬೇಕೆಂಬ ಕನಸು ಕಂಡಿದ್ದರು. ಅದು ಪೂರ್ಣಗೊಳ್ಳಲೇ ಇಲ್ಲ. ಅವರು ನಿಧನರಾದ ಮೇಲೆ ದಿಕ್ಕು ತೋಚದಂತಾಯಿತು. ಊರ್ಮಿಳಾ ನಲ್ಲಾ ಹಾಗೂ ಅವರ ಪತಿ, ಸಾರ್ವಜನಿಕರ ಸಹಕಾರದೊಂದಿಗೆ ನಮಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ.
ಹುಸೇನಮ್ಮ, ಹೊಸಳ್ಳಿ ಕ್ಯಾಂಪಿನ
ನಿವಾಸಿ, ಸಿಂಧನೂರು ತಾಲೂಕು

ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next