Advertisement
16ನೇ ವಯಸ್ಸಿಗೆ ಎಸ್ಎಸ್ಎಲ್ಸಿ ಮುಗಿಸುವ ಯುವಕ-ಯುವತಿ ಪಿಯುಸಿ ಮುಗಿಸುವ ವೇಳೆಗೆ 18 ವರ್ಷ ತುಂಬುತ್ತದೆ. “ಹುಡುಗ ಬುದ್ಧಿ’ ವಯಸ್ಸಲ್ಲಿ ಕಾಲೇಜಿನಲ್ಲಿ ತಮ್ಮ ಭವಿಷ್ಯ ರೂಪಿಸುವ ವಿಷಯಗಳ ಆಯ್ಕೆಯಲ್ಲೇ ಗೊಂದಲ ಮಾಡಿಕೊಳ್ಳುತ್ತಾರೆ. ಹತ್ತಾರು ಜನರಿಗೆ ಕರೆ ಮಾಡಿ ಕೊನೆಗೆ ವಿಷಯ ಆಯ್ಕೆ ಮಾಡಿಕೊಳ್ಳುವ ಯೌವ್ವನಾವಸ್ಥೆಯಲ್ಲಿ ರಾಜಕೀಯ ರಂಗ ಎಂಬ ಚದುರಂಗ ಪ್ರವೇಶಕ್ಕೆ ಅನುಮತಿ ನೀಡುವುದು ತುಸು ಕಷ್ಟ ಸಾಧ್ಯವಾದೀತು.
Related Articles
Advertisement
ಬಡ, ಸಾಮಾನ್ಯ ವರ್ಗದ ಯುವ ಜನರಿಗಂತೂ ಈ ವಯಸ್ಸಲ್ಲಿ ರಾಜಕೀಯ ಪ್ರವೇಶ ಅಸಾಧ್ಯವೆಂದರೂ ಅತಿಶಯೋಕ್ತಿ ಏನಲ್ಲ. ಆದರೆ, ರಾಜಕಾರಣಿಗಳ ಮಕ್ಕಳು ಅಥವಾ ರಾಜಕೀಯ ಹಿನ್ನೆಲೆ ಇರುವ ಕುಟುಂಬದ ಕುಡಿಗಳು, ಸಿರಿವಂತರು ಚಿಕ್ಕ ವಯಸ್ಸಿನ ತಮ್ಮ ಮಕ್ಕಳಿಗೆ ಜನಪ್ರತಿನಿಧಿಯಾಗಿ ಮಾಡಲು ಅನುಕೂಲವಾಗುವ ಅಪಾಯವಂತೂ ಇದ್ದೇ ಇದೆ. ಕೊಂಚ ಏರುಪೇರಾದರೂ ಅವರ ಮನೆಯ ಹಿರಿಯರು ಸಂಭಾಳಿಸುವ ಇಲ್ಲವೇ ಇವರ ಹೆಸರಲ್ಲೇ ಅವರು ರಾಜಕೀಯ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾದ 28 ವರ್ಷದ ತೇಜಸ್ವಿ ಸೂರ್ಯ, ಒಡಿಶಾದ ಕಿಯೋಂಜರ್ ಕ್ಷೇತ್ರದಿಂದ ಆಯ್ಕೆಯಾದ 25 ವರ್ಷದ ಚಂದ್ರಾಣಿ ಮುರ್ಮು, ಪಶ್ಚಿಮ ಬಂಗಾಳದ ಜಾಧವಪುರ ಕ್ಷೇತ್ರದಿಂದ ಆಯ್ಕೆಯಾದ 30 ವರ್ಷದ ಮಿಮಿ ಚಕ್ರವರ್ತಿ, ಪಶ್ಚಿಮ ಬಂಗಾಳದ ಇನ್ನೊಂದು ಕ್ಷೇತ್ರ ಬಷಿರತ್ನಿಂದ ಆಯ್ಕೆಯಾದ 29 ವರ್ಷದ ನುಸ್ರತ್ ಜಹಾನ್, ಮಹಾರಾಷ್ಟ್ರದ ಜಲಗಾಂವ್ ಕ್ಷೇತ್ರದಿಂದ ಆಯ್ಕೆಯಾದ ರಕ್ಷಾ ಖಡ್ಸೆ ಪಕ್ಷದ ಇಲ್ಲವೇ ರಾಜಕೀಯ ಗಣ್ಯರ ಕೃಪಾಕಟಾಕ್ಷದಿಂದ ಆಯ್ಕೆಯಾದವರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ತರುಣಾವಸ್ಥೆಯಲ್ಲಿ ಮನೆಯ ಜವಾಬ್ದಾರಿ ನಿಭಾಯಿಸಲು ಹೆಣಗಾಡುವ ಯುವಕ ಅಥವಾ ಯುವತಿ ಮೇಲೆ ಕ್ಷೇತ್ರದ ಲಕ್ಷಾಂತರ ಜನರ ಸಮಸ್ಯೆಗೆ ಸ್ಪಂದಿಸುವ ಹೊಣೆಗಾರಿಕೆಯಲ್ಲಿ ಲೋಪವಾಗುವ ಸಾಧ್ಯತೆ ಇದೆ. ರಾಜಕೀಯದ ಆಸೆಗೆ ಶಿಕ್ಷಣದಿಂದ ದೂರವಾಗುವ ಅಪಾಯವೂ ಇದೆ. ಹೀಗಾಗಿ ಕೊಂಚ ತಿಳಿವಳಿಕೆ, ಪ್ರೌಢಿಮೆ ಬರುವವರೆಗೂ ರಾಜಕೀಯ ರಂಗ ಪ್ರವೇಶಿಸಲು ಅನುಮತಿ ನೀಡದಿರುವುದು ಒಳಿತು.
– ಮಡು ಮೂಲಿಮನಿ, ಕವಿವಿ ಪತ್ರಿಕೋದ್ಯಮ ವಿಭಾಗ, ಧಾರವಾಡ