Advertisement

ಹೆಚ್ಚಿನ ಪರಿಹಾರಕ್ಕೆ ದಾಖಲೆ ಸಮೇತ ಪ್ರಸ್ತಾವನೆ: ಹಾಲಪ್ಪ

04:14 PM Aug 14, 2022 | Kavyashree |

ಸಾಗರ: ತಾಲೂಕಿನಲ್ಲಿ ನೆರೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಸರ್ಕಾರಕ್ಕೆ ಹೆಚ್ಚಿನ ಪರಿಹಾರ ನೀಡಲು ದಾಖಲೆ ಸಹಿತ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.

Advertisement

ತಾಲೂಕಿನ ಶಿರವಾಳ, ಬ್ರಾಹ್ಮಣ ಮಂಚಾಲೆ ಮತ್ತು ಕಾಸ್ಪಾಡಿಯಲ್ಲಿ ಮಳೆಯಿಂದ ಮನೆ ಬಿದ್ದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ಬ್ರಾಹ್ಮಣ ಮಂಚಾಲೆಯ ಕಮಲಮ್ಮ ಅವರ ಕುಟುಂಬಕ್ಕೆ ತಾಲೂಕು ಆಡಳಿತದಿಂದ 10 ಸಾವಿರ ರೂಪಾಯಿ ಪರಿಹಾರ ಧನದ ಚೆಕ್ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.

ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದ್ದು ಪರಿಹಾರ ಕಾರ್ಯವನ್ನು ಸಹ ಅಧಿಕಾರಿಗಳು ತ್ವರಿತಗತಿಯಲ್ಲಿ ಕೈಗೊಂಡಿದ್ದಾರೆ. ತಾಲೂಕಿನಲ್ಲಿ ಈ ತನಕ 139 ಮನೆಗಳು ಬಿದ್ದಿದೆ. ಈ ಪೈಕಿ 9 ಮನೆಗಳು ಸಂಪೂರ್ಣ ಕುಸಿದು ಹೋಗಿದ್ದು, 95 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ. ಉಳಿದ ಹಣ ಅವರ ಖಾತೆಗೆ ಜಮೆ ಮಾಡಲಾಗುತ್ತದೆ 110 ಮನೆಗಳು ಭಾಗಶಃ ಕುಸಿದು ಬಿದ್ದಿದ್ದು, 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದ್ದು, 20 ಮನೆಗಳು ಅಲ್ಪಸ್ವಲ್ಪ ಕುಸಿದ ಹಿನ್ನೆಲೆಯಲ್ಲಿ 50 ಸಾವಿರ ರೂಪಾಯಿ ಪರಿಹಾರ ಕೊಡಲಾಗುತ್ತದೆ. ಮನೆ ಕಳೆದುಕೊಂಡವರಿಗೆ ತಕ್ಷಣದ ವಸ್ತುಗಳನ್ನು ಖರೀದಿ ಮಾಡಲು ಸ್ಥಳದಲ್ಲಿಯೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು.

ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಈಗಾಗಲೇ 1,466 ಎಕರೆ ಕೃಷಿ ಜಮೀನು ನಾಶವಾಗಿದ್ದು, 30 ಎಕರೆ ತೋಟಗಾರಿಕೆ ಬೆಳೆ ನಾಶವಾಗಿದೆ. ಮುಖ್ಯವಾಗಿ ನೆರೆಯಿಂದ ಕೃಷಿ ಜಮೀನು ಮತ್ತು ತೋಟದೊಳಗೆ ಮಣ್ಣು ತುಂಬಿಕೊಂಡಿದೆ. ಮಣ್ಣು ತೆಗೆಯದೆ ಕೃಷಿ ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಜಮೀನು ಮತ್ತು ತೋಟದಲ್ಲಿ ತುಂಬಿರುವ ಮಣ್ಣು ತೆಗೆಯಲು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್, ಬಿಜೆಪಿ ಪ್ರಮುಖರಾದ ದೇವೇಂದ್ರಪ್ಪ ಯಲಕುಂದ್ಲಿ, ಪುರುಷೋತ್ತಮ್, ಕಲಸೆ ಚಂದ್ರಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next