Advertisement

ಹೇಗಿತ್ತು ಭಾರತದ ಧ್ವಜ ಗೊತ್ತಾ? ಈಗಿನ ಧ್ವಜ ಅಂಗೀಕರಿಸಿದ್ದು ಯಾವಾಗ?

04:03 PM Aug 06, 2022 | Team Udayavani |

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಮಂಗಳವಾರದಿಂದ ಆ.15ರ ವರೆಗೆ ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ನಲ್ಲಿ ಧ್ವಜವನ್ನು ಹಾಕಿಕೊಳ್ಳುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.ರಾಷ್ಟ್ರಧ್ವಜವೆಂದರೆ ನಮ್ಮ ದೇಶಾಭಿಮಾನದ ಹೆಮ್ಮೆಯ ಸಂಕೇತ. ಸದ್ಯ ಇರುವ ಧ್ವಜವನ್ನು ರೂಪಿಸಿದವರು, ನಮ್ಮ ನೆರೆಯ ಆಂಧ್ರ ಪ್ರದೇಶದವರಾದ ಪಿಂಗಾಳಿ ವೆಂಕಯ್ಯ. ಈಗ ಅವರ ನೆನಪಿನಲ್ಲಿ ಇಂದಿನಿಂದ ಆಂದೋಲನ ನಡೆಸಲಾಗುತ್ತದೆ. ಹಾಗಾದರೆ, ನಮ್ಮ ರಾಷ್ಟ್ರ ಧ್ವಜ ಇತಿಹಾಸವೇನು? ಇದು ಅಂಗೀಕಾರವಾಗಿದ್ದು ಯಾವಾಗ? ಈ ಕುರಿತ ಒಂದು ನೋಟ ಇಲ್ಲಿದೆ…

Advertisement

ಈಗಿನ ಧ್ವಜ
ಅಂಗೀಕರಿಸಿದ್ದು ಯಾವಾಗ?
1947ರ ಜುಲೈ 22ರಂದು ಈಗ ಇರುವ ಅಶೋಕ ಚಕ್ರ ಒಳಗೊಂಡ ತ್ರಿವರ್ಣ ಧ್ವಜವನ್ನು ಅಸೆಂಬ್ಲಿ ಅಂಗೀಕರಿಸಿತು‡. ಭಾರತಕ್ಕೆ ಸ್ವಾತಂತ್ರ್ಯ ನೀಡುವ ಕುರಿತಾಗಿ ಆಗಲೇ ಬ್ರಿಟಿಷ್‌ ಸರಕಾರದ ಜತೆ ಮಾತುಕತೆಗಳು ನಡೆಯುತ್ತಿದ್ದವು. ಧ್ವಜ ಅಂಗೀಕರಿಸಿದ ಮೇಲೆ 1947ರ ಆ.15ರಂದು ದೇಶದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರು, ಅಶೋಕ ಚಕ್ರವುಳ್ಳ ತ್ರಿವರ್ಣ ಧ್ವಜವನ್ನು ಹಾರಿಸಿದರು. ವಿಶೇಷವೆಂದರೆ, ಈ ಧ್ವಜವನ್ನು ಹಾರಿಸುವ ಮುನ್ನ ಭಾರತದಲ್ಲಿ ವಿವಿಧ ರೀತಿಯ ಧ್ವಜಗಳನ್ನು ಪರಿಚಯಿಸಲಾಗಿತ್ತು.

1931ರಲ್ಲಿ ರೂಪಿಸಲಾಗಿದ್ದ ಧ್ವಜದಲ್ಲಿ ಕೇವಲ ಒಂದು ಬದಲಾವಣೆಯಾಯಿತು. ಚರಕವನ್ನು ಬಿಟ್ಟು, ಅಶೋಕ ಚಕ್ರವನ್ನು ಬಳಸಿಕೊಳ್ಳಲಾಯಿತು. ಚರಕ ಬಳಸಿಕೊಂಡರೆ ಹಿಂಭಾಗದಲ್ಲಿ ಉಲ್ಟಾ ಕಾಣುತ್ತದೆ ಮತ್ತು ಅಶೋಕ ಚಕ್ರ ಆಗಿನ 24 ರಾಜ್ಯಗಳನ್ನು ಪ್ರತಿನಿಧಿಸುತ್ತದೆ ಎಂಬ ಕಾರಣಕ್ಕಾಗಿ ಅಳವಡಿಸಿಕೊಳ್ಳಲಾಯಿತು. ಅಂದ ಹಾಗೆ, ಈ ಧ್ವಜವನ್ನು ಪರಿಚಯಿಸಿದ್ದು ಆಂಧ್ರ ಪ್ರದೇಶ ಮೂಲದ ಪಿಂಗಾಳಿ ವೆಂಕಯ್ಯ ಅವರು. 1916ರಲ್ಲಿ ಮೊದಲ ಬಾರಿಗೆ ಧ್ವಜವನ್ನು ವಿನ್ಯಾಸ ಮಾಡಿದರು. ನಂತರದ ದಿನಗಳಲ್ಲಿ ಇದೇ ಧ್ವಜ ವಿವಿಧ ರೂಪ ತಾಳಿತು.

1857 ಬ್ರಿಟಿಷರ ಧ್ವಜ
ಭಾರತಕ್ಕೇ ಅಂತ ಮೊದಲ ಧ್ವಜ ಪರಿಚಯಿಸಿದ್ದು, ಭಾರತೀಯರಲ್ಲ. ಅದು ಬ್ರಿಟಿಷರು. 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಅನಂತರ, ಎಚ್ಚೆತ್ತುಕೊಂಡ ಬ್ರಿಟಿಷರು, ಭಾರತಕ್ಕೇ ಒಂದು ಧ್ವಜವಿರಲಿ ಅಂತ ಅವರದ್ದೇ ಮಾದರಿಯ ಧ್ವಜ ಪರಿಚಯಿಸಿದರು. ಇದು ನೀಲಿ ಬಣ್ಣ ದ್ದಾಗಿದ್ದು, ಬ್ರಿಟಿಷ್‌ ರಾಜಮನೆತನದ ಅಡಿಯಲ್ಲಿ ಭಾರತವಿದೆ ಎಂಬುದನ್ನು ಸೂಚಿಸುತ್ತಿತ್ತು.

1904 ದೇಶದ ಮೊದಲ ಧ್ವಜ
ಸ್ವಾಮಿ ವಿವೇಕಾನಂದ ಅವರ ಶಿಷ್ಯೆ ಭಗಿನಿ ನಿವೇದಿತಾ ಅವರು ಭಾರತದ ಮೊದಲ ಧ್ವಜವನ್ನು ವಿನ್ಯಾಸಗೊಳಿಸಿದರು. ಇದರಲ್ಲಿ ಎರಡೇ ಬಣ್ಣಗಳಿದ್ದವು. ಹಳದಿ ಮತ್ತು ಕೆಂಪು ಬಣ್ಣದ ಈ ಧ್ವಜದ ಮಧ್ಯದಲ್ಲಿ ವಜ್ರ ಎಂದು ಬರೆಯಲಾಗಿತ್ತು. ಜತೆಗೆ, ವಂದೇ ಮಾತರಂ ಎಂಬುದನ್ನೂ ಧ್ವಜದ ಎಡ ಅಥವಾ ಬಲಭಾಗದಲ್ಲಿ ಬರೆಯ ಲಾಗಿತ್ತು. ಇದರಲ್ಲಿ ಕೆಂಪು ಸ್ವಾತಂತ್ರ್ಯ ಹೋರಾಟವನ್ನು ಪ್ರತಿನಿಧಿಸಿದ್ದರೆ, ಹಳದಿ ಬಣ್ಣವು ಜಯದ ಸಂಕೇತವಾಗಿತ್ತು.

Advertisement

1906ರಲ್ಲಿ ಕೋಲ್ಕತಾದ ಪಾರ್ಸಿ ಬಗನ್‌ ಎಂಬಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಧ್ವಜ ಹಾರಿಸಲಾಯಿತು. ಆದರೆ, ಇದರಲ್ಲಿ ಕೊಂಚ ಬದಲಾವಣೆಯಾಗಿತ್ತು. ಇದು ಮೂರು ಬಣ್ಣಗಳನ್ನು ಒಳಗೊಂಡಿದ್ದು, ಮೇಲೆ ಹಸುರು, ಮಧ್ಯ ಹಳದಿ ಮತ್ತು ಕೆಳಗೆ ಕೆಂಪು ಬಣ್ಣವನ್ನು ಒಳಗೊಂಡಿತ್ತು. ಹಸುರು ಬಣ್ಣದಲ್ಲಿ ಎಂಟು ಕಮಲಗಳು, ಹಳದಿ ಬಣ್ಣದ ಜಾಗದಲ್ಲಿ ವಂದೇ ಮಾತರಂ, ಕೆಳಗಿನ ಭಾಗದಲ್ಲಿ ಸೂರ್ಯ ಮತ್ತು ಚಂದ್ರನ ಚಿತ್ರಗಳಿದ್ದವು.

1906 ಕಾಮಾ ಧ್ವಜ
ಕೋಲ್ಕತಾದಲ್ಲಿ ಮೊದಲ ಬಾರಿಗೆ ಭಾರತದ್ದೇ ಆದ ಧ್ವಜ ಹಾರಿಸಿದ ಮೇಲೆ, ಮೇಡಮ್‌ ಭಿಕಾಜಿ ಕಾಮಾ, ವೀರ ಸಾವರ್ಕರ್‌ ಮತ್ತು ಶ್ಯಾಮಿj ಕೃಷ್ಣ ವರ್ಮ ಅವರು ಬೇರೊಂದು ಧ್ವಜವನ್ನು ವಿನ್ಯಾಸ ಮಾಡಿದರು. ಇದನ್ನು ಬರ್ಲಿನ್‌ನಲ್ಲಿ ನಡೆದ ಸೋಶಿಯಲಿಸ್ಟ್‌ ಸಮಾವೇಶದಲ್ಲಿ ಪ್ರದರ್ಶಿಸಲಾಗಿತ್ತು. ಇದೂ ಮೂರು ಬಣ್ಣಗಳನ್ನು ಹೊಂದಿದ್ದು, ಮೇಲೆ ಕೇಸರಿ, ಮಧ್ಯ ಹಳದಿ ಮತ್ತು ಕೆಳಗೆ ಹಸುರು ಬಣ್ಣವಿತ್ತು. ಮೇಲಿನ ಕೇಸರಿಯಲ್ಲಿ ಒಂದು ಕಮಲ ಮತ್ತು ಏಳು ನಕ್ಷತ್ರಗಳಿದ್ದವು. ಈ ನಕ್ಷತ್ರಗಳು ಭಾರತದ ಸಪ್ತರಿಷಿಗಳನ್ನು ಪ್ರತಿನಿಧಿಸುತ್ತಿದ್ದವು. ಮಧ್ಯ ವಂದೇಮಾತರಂ, ಕೆಳಗೆ ಸೂರ್ಯ ಮತ್ತು ಚಂದ್ರನ ಚಿತ್ರವಿತ್ತು. ವಿಶೇಷವೆಂದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಲಾದ ಮೊದಲ ಭಾರತದ ಧ್ವಜ ಎಂಬ ಖ್ಯಾತಿಯೂ ಸಿಕ್ಕಿತು.

1917 ಆ್ಯನಿ ಬೆಸೆಂಟ್‌/ಲೋಕಮಾನ್ಯ ತಿಲಕ್‌
ಭಾರತದ ಮೂರನೇ ಧ್ವಜವಿದು. ಆ್ಯನಿ ಬೆಸೆಂಟ್‌ ಮತ್ತು ಲೋಕಮಾನ್ಯ ತಿಲಕ್‌ ಅವರು ಹೋಮ್‌ ರೂಲ್‌ ಆಂದೋಲನದ ವೇಳೆ ಇದನ್ನು ಪರಿಚಯಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ರೂಪರೇಖೆ ಸಿಕ್ಕಿದ್ದು ಈ ಸಂದರ್ಭದಲ್ಲೇ. ಈ ಧ್ವಜ ಬೇರೊಂದು ರೀತಿಯಲ್ಲಿತ್ತು. ಮೇಲೆ ಸಣ್ಣದಾಗಿ ಬ್ರಿಟಿಷ್‌ ಧ್ವಜ, ಮತ್ತೂಂದು ಭಾಗದಲ್ಲಿ ಚಂದ್ರ ಮತ್ತು ನಕ್ಷತ್ರ, ಹಾಗೆಯೇ ಸಪ್ತರಿಷಿಗಳನ್ನು ಪ್ರತಿ ನಿಧಿಸುವ 7 ನಕ್ಷತ್ರಗಳು ಇದ್ದವು. ಮೊದಲಿನ ರೀತಿಯಲ್ಲಿ ಇದು ತ್ರಿವರ್ಣ ಧ್ವಜವಾಗಿರಲಿಲ್ಲ. ಇದರಲ್ಲಿ ಕಪ್ಪು, ಕೆಂಪು, ಹಸಿರು ಬಣ್ಣಗಳು ಇದ್ದವು.

1921 ಪಿಂಗಾಳಿ ವೆಂಕಯ್ಯ
ಮಹಾತ್ಮಾ ಗಾಂಧಿ ಅವರು ಆಂಧ್ರ ಪ್ರದೇಶಕ್ಕೆ ತೆರಳಿದ್ದಾಗ, ಅಲ್ಲಿನ ಯುವಕ ಪಿಂಗಾಳಿ ವೆಂಕಯ್ಯ ಎಂಬವರು, ತಾವೇ ರೂಪಿಸಿದ್ದ ಧ್ವಜವೊಂದನ್ನು ನೀಡಿದರು. ವೆಂಕಯ್ಯ ಅವರು ಕೊಟ್ಟ ಧ್ವಜದಲ್ಲಿ ಕೇವಲ ಎರಡು ಬಣ್ಣಗಳು ಮಾತ್ರ ಇದ್ದವು. ಅಂದರೆ, ಹಸುರು ಮತ್ತು ಕೆಂಪು ಮಾತ್ರ ಇತ್ತು. ಇದು ದೇಶದ ಎರಡು ಪ್ರಮುಖ ಧರ್ಮಗಳನ್ನು ಪ್ರತಿನಿಧಿಸುತ್ತಿದ್ದವು. ಗಾಂಧೀಜಿ ಅವರೇ ವೆಂಕಯ್ಯ ಅವರಿಗೆ ಸಲಹೆ ನೀಡಿ ಬಿಳಿ ಬಣ್ಣ ಸೇರಿಸಲು ಹೇಳಿದರು. ಬಿಳಿ ಉಳಿದ ಎಲ್ಲ ಧರ್ಮಗಳನ್ನು ಪ್ರತಿನಿಧಿಸುತ್ತದೆ ಎಂದಿದ್ದರು. ಅಲ್ಲದೆ, ಮಧ್ಯದಲ್ಲಿ ಚರಕವನ್ನೂ ಸೇರಿಸುವಂತೆ ಸಲಹೆ ನೀಡಿದ್ದರು. ಆಗ ರಾಷ್ಟ್ರೀಯ ಮಟ್ಟದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಸಂಕೇತವಾಗಿ ಈ ಚರಕ ಗುರುತಿಸಿಕೊಂಡಿತ್ತು.

1931 ಹೊಸ ಮಾದರಿ
ಈ ವರ್ಷ ಭಾರತದ ಧ್ವಜದ ಲೆಕ್ಕಾಚಾರದಲ್ಲಿ ಸುವರ್ಣಾ ಕ್ಷರಗಳಲ್ಲಿ ಬರೆದಿಡುವ ದಿನ. ಈಗ ಇರುವ ಧ್ವಜದ ಮಾದರಿಯನ್ನು ಇದೇ ವರ್ಷ ಅಳವಡಿಸಿಕೊಳ್ಳಲಾಯಿತು. ಆಂಧ್ರ ಪ್ರದೇಶದ ಪಿಂಗಾಳಿ ವೆಂಕಯ್ಯ ಅವರೇ ಹೊಸದಾಗಿ ಧ್ವಜವನ್ನು ರೂಪಿಸಿದರು. ಇದರಲ್ಲಿ ಮೇಲೆ ಕೆಸರಿ, ಮಧ್ಯ ಬಿಳಿ ಮತ್ತು ಕೆಳಗೆ ಹಸುರು ಬಣ್ಣವನ್ನು ಬಳಸಿಕೊಳ್ಳಲಾಯಿತು. ಮಧ್ಯದಲ್ಲಿ ಚರಕವನ್ನು ಇಡಲಾಯಿತು. ಮೇಲೆ ಇದ್ದ ಕೆಂಪು ಬಣ್ಣದ ಬದಲಿಗೆ ಕೇಸರಿ ಬಳಸಿಕೊಂಡರೆ, ಮಧ್ಯದ ಹಸಿರು ಬಣ್ಣದ ಬದಲಿಗೆ ಬಿಳಿ ಹಾಗೂ ಕೆಳಗೆ ಹಸಿರು ಬಣ್ಣ ಬಂದಿತು. ಕಾಂಗ್ರೆಸ್‌ ಕಮಿಟಿಯಲ್ಲಿ ಈ ಧ್ವಜವನ್ನು ಅಳವಡಿಸಿಕೊಂಡು, ಭಾರತದಾದ್ಯಂತ ಇದನ್ನೇ ಬಳಸಿಕೊಳ್ಳಲು ತೀರ್ಮಾನಿಸಲಾಯಿತು. ಸ್ವಾತಂತ್ರ್ಯ ಸಿಗುವವರೆಗೂ ಇದೇ ಬಳಕೆಯಲ್ಲಿತ್ತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next