Advertisement

ಗಂಡು ಮಕ್ಕಳಿಗೆ ಪೊರಕೆಯಲ್ಲಿ ಹೊಡೆಯಬಾರದೆ!

09:34 AM Mar 29, 2019 | mahesh |

ತುಂಬಾ ಹಟಮಾರಿಯಾಗಿದ್ದ ನನ್ನ ಮಗನಿಗೆ ಆತನ ತಂಟೆ ತಡೆಯಲಾರದೆ ಹೊಡೆಯಲೆಂದು ಅಲ್ಲೇ ಇದ್ದ ಪೊರಕೆಯಿಂದ ಒಂದೆರಡು ಕಡ್ಡಿ ತೆಗೆದು ಹೊಡೆಯತೊಡಗಿದೆ. ಮನೆಪಾಠಕ್ಕೆಂದು ಬಂದಿದ್ದ ಮಕ್ಕಳಲ್ಲಿ ಒಬ್ಬ “ಆಂಟಿ, ಗಂಡುಮಕ್ಕಳಿಗೆ ಹಿಡಿಸೂಡಿಯಲ್ಲಿ ಹೊಡೆಯಬಾರದಂತೆ’ ಎಂದ. “ಸಣ್ಣಮಕ್ಕಳಿಗಂತೂ ಹಿಡಿಸೂಡಿ ಕಡ್ಡಿಯಲ್ಲಿ ಹೊಡೆದರೆ ಕಡ್ಡಿಯ ಹಾಗೇ ಆಗ್ತಾರಂತೆ’ ಅದಕ್ಕೆ ದನಿಯೆಂಬಂತೆ ಆತನ ತಂಗಿಯೂ ದನಿ ಸೇರಿಸಿದಳು.

Advertisement

“ಹೌದಾ, ಯಾರು ಹೇಳಿದ್ದು ನಿಮಗಿದನ್ನೆಲ್ಲ?’ ಎಂದೆ. “ಅಜ್ಜಿ’ ಎಂದರಿಬ್ಬರೂ ಒಕ್ಕೂರಲಿನಲ್ಲಿ. ಅವರ ಅಜ್ಜಿ ಹೇಳಿದ ಮಾತಿಗೆ ನಾನು ಬೆಂಬಲ ಸೂಚಿಸುವುದಾಗಲಿ, ವಿರುದ್ಧ ಹೇಳುವುದಾಗಲಿ ಸರಿಯಲ್ಲ. ಏಕೆಂದರೆ, ಚಿಕ್ಕಂದಿನಲ್ಲಿ ಪೊರಕೆ ಹಿಡಿದ ಅಣ್ಣನನ್ನು ಕಂಡು ರೌದ್ರಾವತಾರ ತಾಳಿದ ಅಜ್ಜಿ ಆತನ ಕೈಯಲ್ಲಿದ್ದ ಪೊರಕೆಯನ್ನು ಬಿಸಾಡಿದ್ದು ನೆನಪಾಯಿತು. ಈ ಹಿಡಿಸೂಡಿ ಮಾತ್ರ ಯಾಕೋ ಪುರುಷ ಪ್ರಧಾನ ವ್ಯವಸ್ಥೆಯ ಪ್ರತೀಕವಿರಬಹುದೇ ಎಂಬ ಜಿಜ್ಞಾಸೆಯಂತೂ ಬಾರದಿರಲಿಲ್ಲ.

ಹಿಂದಿನಿಂದಲೂ ಗಂಡುಮಕ್ಕಳ ಕೈಯಲ್ಲಿ ಹಿಡಿಸೂಡಿ ಕೊಡಬಾರದು ಎಂದು ಕಟ್ಟಪ್ಪಣೆಯನ್ನು ಸ್ವಯಂ ಇಚ್ಛೆಯಿಂದ ವಿಧಿಸಿ ಮನೆಯ ಹೆಣ್ಣು ಮಕ್ಕಳೇ ಗುಡಿಸಬೇಕು ಎಂಬುದರಲ್ಲಿ ಯಾವ ನ್ಯಾಯವಿದೆಯೋ! ಇದಕ್ಕೆ ಬೆಂಬಲ ಸೂಚಿಸಿದವರು ಹೆಂಗಸರೋ ಅಥವಾ ಗಂಡಸರೋ ಎಂದು ತಿಳಿಯದಿದ್ದರೂ ಗಂಡಸರು ಮುಂಚೂಣಿಯಲ್ಲಿ ನಿಂತಿದ್ದಾರೆ ಎಂಬುದನ್ನು ಮಾತ್ರ ಖಡಾಖಂಡಿತವಾಗಿ ಹೇಳಬಲ್ಲೆ. ಮನೆಯ ಮೂಲೆ ಮೂಲೆಯನ್ನೆಲ್ಲ ಗುಡಿಸಿ ಕೊನೆಗೆ ಮೂಲೆ ಸೇರುವ ಈ ಹಿಡಿಸೂಡಿ ಯಂತೆ ಪುರುಷರ ಸ್ಥಿತಿಯಾಗಬಾರದು ಎಂಬ ದೂರಾಲೋಚನೆಯೋ ಅಥವಾ ಇನ್ನೇನೋ.

ಕೈಯಲ್ಲಿ ಹಿಡಿಯುವ ಸೂಡಿಯಾಗಿ, ಕಸಬರಿಕೆಯಾಗಿ, ಜಾಡು ವಾಗಿ, ಪೊರಕೆಯಾಗಿ ಇನ್ನೂ ಏನೇನೋ ಆಗಿ ಸರ್ವೋತ್ಛ ಕಾರ್ಯ ನಿರ್ವಹಣೆ ಮಾಡುವ ಈ ಹಿಡಿಸೂಡಿ ಮಾತ್ರ ಮನೆಯ ಎದುರು ಇದ್ದರೆ ಅಪಶಕುನವಂತೆ. ಅದರಲ್ಲೂ ಕೆಲವೊಮ್ಮೆ ಏಕಾಂಗಿಯಾಗಿ ತೊಟ್ಟಿಲಲ್ಲಿ ಮಲಗಿರುವ ಮಗುವನ್ನು ಮನೆಯಲ್ಲಿ ಯಾರೂ ಇರದಿದ್ದಾಗ ಈ ಹಿಡಿಸೂಡಿಯನ್ನೇ ಪಕ್ಕದಲ್ಲಿರಿಸುವುದು ಬಹುಶಃ ದುಷ್ಟ ಶಕ್ತಿಗಳ ನಿಷೇಧ ಕ್ಕೆ ಬಳಸುವುದು, ಹಾಗೆಯೇ ದೃಷ್ಟಿ ತೆಗೆಯಲೂ ಹಿಡಿಸೂಡಿಯನ್ನೇ ಬಳಸುವುದುಂಟು. ಆದರೆ, ಊಟ ಮಾಡುತ್ತಿರುವ ಸಂದರ್ಭದಲ್ಲಿ ಮಾತ್ರ ಈ ಕಸಬರಿಗೆ ಎದುರಲ್ಲಿ ಇರಬಾರದು ಎಂಬ ನಂಬಿಕೆಯೂ ಇದೆ. ಬಹುಶಃ ಈ ಹಿಡಿಸೂಡಿಯಲ್ಲಿ ಅಂತಹ ನೆಗೆಟಿವ್‌ ಶಕ್ತಿ ಏನಿರಬಹುದು ಎಂಬ ಪ್ರಶ್ನೆಯೂ ಏಳದಿರದು. ಆದರೆ, ನಮ್ಮೂರಿನ ಪ್ರಸಿದ್ಧ ಕ್ಯಾಂಟೀನ್‌ ಒಂದರಲ್ಲಿ ಮಸಾಲೆ ದೋಸೆ ತಿನ್ನಲೆಂದು ಹೋದಾಗ ಮಾತ್ರ ಏಕೋ ಏನೋ ಆ ಮಸಾಲೆ ದೋಸೆ ಮೇಲೆ ವಿರಕ್ತಿ ಬಂದದ್ದಂತೂ ನಿಜ. ಏಕೆಂದರೆ, ಅಡುಗೆಯಾತ ಪಕ್ಕದಲ್ಲಿದ್ದ ದೊಡ್ಡ ಪಾತ್ರೆಯಲ್ಲಿ ನೀರುಮಿಶ್ರಿತ ಎಣ್ಣೆಯನ್ನು ಚಿಕ್ಕ ಪೊರಕೆಯಲ್ಲಿ ಅದ್ದಿ ಕಾವಲಿ ಮೇಲೆ ಸವರಿದ ನಂತರ ದೋಸೆ ಹಿಟ್ಟು ಹಾಕುತ್ತಿದ್ದ. ಅಂತೂ ಆ ದಿನವೇ ಮಸಾಲೆ ದೋಸೆಗೆ ಗುಡ್‌ ಬೈ ಹೇಳಿದ್ದೆ.

ಶುಭವೂ ಇದೆ !
ಇದು ಲಕ್ಷ್ಮೀಯ ಸಂಕೇತ. ತ್ರಯೋದಶಿಯಂದು ಖರೀದಿಸಿದರೆ ಲಕ್ಷ್ಮೀ ಶಾಶ್ವತವಾಗಿ ನೆಲೆ ನಿಲ್ಲುತ್ತಾಳೆ. ಅದನ್ನು ಮನೆಯಲ್ಲಿ ಎಂದಿಗೂ ಗೋಡೆಗೊರಗಿಸಿ ನಿಲ್ಲಿಸಬಾರದು. ಹಾಗೆ ನಿಲ್ಲಿಸಿದಾದಲ್ಲಿ ಮನೆಯ ಯಜಮಾನನಿಗೆ ಬೆನ್ನುನೋವು ಬರುವ ಸಾಧ್ಯತೆ ಇದೆ ಎಂದು ಟಿವಿಯಲ್ಲಿ ಜ್ಯೋತಿಷಿಯೊಬ್ಬರು ಹೇಳಿದ್ದನ್ನು ಕೇಳಿ ನನಗೆ ಮಾತನಾಡಲು ಹೊಸ ವಿಷಯ ಸಿಕ್ಕಿತೆಂದು ಅತಿ ಸಂತೋಷದಿಂದ ಗೆಳತಿಯರಲ್ಲಿ ಹೇಳತೊಡಗಿದೆ. ಅವರದನ್ನು ಸಾರಾ ಸಗಟಾಗಿ ತಳ್ಳಿ ಹಾಕಿ ನನ್ನನ್ನು ಒಂದು ಥರಾ ನೋಡಿದ್ದರು. ಅಂದಿನಿಂದ ಈ ಹಿಡಿಸೂಡಿ ಅಂದರೆ ಪೊರಕೆ ಎಲ್ಲಿರಬೇಕೋ ಅಲ್ಲೇ ಇಡುತ್ತೇನೆ. ಒಬ್ಬನಿಗೆ ಅವಮಾನ ಮಾಡಬೇಕು ಅಂತ ಇದ್ದರೆ ಆತನಿಗೆ ಪೊರಕೆಯಲ್ಲಿ ಹೊಡೆಯುತ್ತಾರಂತೆ. ಪೊರಕೆಯಲ್ಲಿ ಪೆಟ್ಟು ತಿಂದ ವ್ಯಕ್ತಿಯನ್ನು ತೀರಾ ನಿಕೃಷ್ಟವಾಗಿ ಕಾಣುವುದೂ ಇದೆ.

Advertisement

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ ಮನೆಯೊಡೆಯ ಇದ್ದಾನೋ ಇಲ್ಲವೋ ಎಂಬಲ್ಲಿಯೂ ಬಸವಣ್ಣನವರು ಮನೆಯೊಡತಿ ಎಂಬುದನ್ನು ಎಲ್ಲಿಯೂ ಉಲ್ಲೇಖೀಸಿಲ್ಲ. ಹಾಗಾಗಿ, ನನಗಿನ್ನೂ ಸಂಶಯ. ಏಕೆಂದರೆ ಮನೆ ಸ್ವತ್ಛ ಗೊಳಿಸುವ ಪ್ರಕ್ರಿಯೆ ಮಹಿಳೆಯರಿಗೆ ಯಾಕೆ ಬಂತು? ಮನೆಯಲ್ಲಿದ್ದ ಗಂಡು ಮಕ್ಕಳು, ಗಂಡಸರು ಸುಖ ನಿದ್ದೆಯಲ್ಲಿರುವಾಗ ಅದರಲ್ಲೂ ಹೆಣ್ಣುಮಕ್ಕಳು ಬೇಗನೆ ಎದ್ದು ಗುಡಿಸಿ ಒರೆಸಿ ರಂಗವಲ್ಲಿ ಇಟ್ಟುಬಿಟ್ಟರೆ ಆ ಮನೆ ಫ‌ಳ ಫ‌ಳ ಹೊಳೆಯುತ್ತಿರುತ್ತದೆ ಅಂತ ಹೇಳಿ ಅನಧಿಕೃತ ಆಜ್ಞೆ ಮಾಡಿದ್ದರೋ ಹೇಗೆ? ಏನೇ ಹೇಳಿ ನನಗಂತೂ ಯಾವ ಮನೆಯಲ್ಲಿ ಗಂಡಸರು ಹಿಡಿಸೂಡಿ ಹಿಡಿದು ಗುಡಿಸುತ್ತಿರುತ್ತಾರೋ ಅವರನ್ನು ಕಂಡರೆ ಮಹದಾನಂದ. ಆ ಮನೆಯಲ್ಲಿ ಹೆಣ್ಣುಮಕ್ಕಳು ಸುಖವಾಗಿರುತ್ತಾರೆ ಎಂದರ್ಥ. ಅಲ್ಲದೆ ಗುಡಿಸುವುದರಿಂದ ಗಂಡಸರ ಅಂತಸ್ತಿಗೇನೂ ಧಕ್ಕೆಯಿಲ್ಲ.

ಅದೇ ಕಾರಣಕ್ಕಾಗಿ ನಾನು ಗಂಡುಮಕ್ಕಳ ತಾಯಂದಿರಿಗೆ ಕಿವಿ ಮಾತು ಹೇಳುವುದು- ಮಕ್ಕಳಿಗೆ ಗುಡಿಸಿ ಒರೆಸುವ ಅಡುಗೆ ಮಾಡುವ ಎಲ್ಲಾ ಕೆಲಸ ಹೇಳಿಕೊಡಿ, ಜಗತ್ತಿನ ಯಾವ ಮೂಲೆಯಲ್ಲಾದರೂ ಬದುಕಿಕೊಳ್ಳುತ್ತಾರೆ- ಅಂತ. ಹಾಗೆಂದು, ಅಗತ್ಯ ಬಿದ್ದಾಗ ಮಾತ್ರ ಪೊರಕೆ ಹಿಡಿಯಿರಿ! ನನ್ನ ಗೆಳತಿ ಹೇಳಿದ ಸಂಗತಿಯೊಂದು ನೆನಪಾಗುತ್ತಿದೆ. ಆಕೆಯ ಬಂಧುವಾಗಿದ್ದ ಪುರುಷರೊಬ್ಬರು ಮದುವೆಯಾದ ಹೊಸದರಲ್ಲಿ ಹೆಂಡತಿಗೆ ಪದೇ ಪದೇ ಗರ್ಭಪಾತವಾಗುತ್ತಿದ್ದುದರಿಂದ ವೈದ್ಯರ ಸಲಹೆಯಂತೆ ಹೆಂಡತಿಗೆ ಯಾವುದೇ ಕೆಲಸ ಕೊಡದೆ ತಾನೇ ಮಾಡುತ್ತಿದ್ದರಂತೆ. ಅಂದಿನಿಂದ ಇಂದಿನವರೆಗೂ ಆಕೆಯನ್ನು ಜಗಲಿಯಲ್ಲಿ ಕೂರಿಸಿ ಅಂಗಳವನ್ನು ಗುಡಿಸುತ್ತಿದ್ದಾರಂತೆ. ಇದು ಎಷ್ಟು ವರ್ಷದಿಂದ ನಡೆಯುತ್ತಿದೆಯೆಂದರೆ ಅವರಿಗೆ ಇಬ್ಬರು ಮಕ್ಕಳು ಹುಟ್ಟಿ ಆ ಮಕ್ಕಳು ಕಾಲೇಜು ಶಿಕ್ಷಣ ಮುಗಿಸಿದರೂ ಇದುವರೆಗೂ ಗುಡಿಸುತ್ತಲೇ ಇದ್ದಾರೆ, ಪಾಪ !

ಆಧುನಿಕತೆ ಬಂದಂತೆ ಎಲ್ಲದರಲ್ಲೂ ಬದಲಾವಣೆ ಆಗುತ್ತದೆ. ಪೊರಕೆಯಲ್ಲೂ ಬದಲಾವಣೆ ಬಂದಿದೆ. ಪೊರಕೆ ತಯಾರಿಸಲು ತೆಂಗಿನ ಮರದಿಂದ ಗರಿ ಬೀಳಬೇಕೆಂದೋ ಅಥವಾ ತೆಗೆಸಬೇಕೆಂದೇನೂ ಇಲ್ಲ. ಹುಲ್ಲಿನಿಂದ ಮಾಡಿರುವಂಥಾರೋ ಪ್ಲಾಸ್ಟಿಕ್‌ನಿಂದ ಮಾಡಿರುವಂಥಾರೋ, ದೊಡ್ಡ ದೊಡ್ಡ ಕಂಪೆನಿಗಳ ಬೆಲೆ‌ಬಾಳುವ ಪೊರಕೆಗಳೂ ಬಂದಿವೆೆ. ಕೆಲಸವಿಲ್ಲದಿದ್ದರೆ ಅದೇ ಪೊರಕೆಯಿಂದ ಬೀಳುವ ಹುಲ್ಲಿನ ಪುಡಿಯನ್ನು ಮತ್ತೆ ಮತ್ತೆ ಗುಡಿಸಿದರಾಯಿತು. ಮತ್ತೂಂದೆಡೆಯಿಂದ ವಾಕ್ಯೂಮ್‌ ಕ್ಲೀನರ್‌ ಮನೆಯನ್ನು ಪ್ರವೇಶಿಸಿದೆ.

ಪೊರಕೆ ಕಡ್ಡಿಯಿಂದ ಪೆಟ್ಟು ತಿಂದ ಮಕ್ಕಳೂ ಬೆಳೆದಿದ್ದಾರೆ. ತಿಳಿಹೇಳುವ ಅಜ್ಜಿಯಂದಿರು ಬಾಯಿ ಮುಚ್ಚಿದ್ದಾರೆ. ಹೆಂಗಸರು ವಾಕಿಂಗ್‌ ಹೋಗಿಯೋ, ಜಿಮ್‌ಗೆ ಹೋಗಿಯೋ ಮೈಯಿಳಿಸಿಕೊಳ್ಳುತ್ತಿದ್ದಾರೆ. ಕೆಲವು ಪುರುಷರು ಸುಖನಿದ್ರೆ ಬಿಟ್ಟು ಪೊರಕೆ ಹಿಡಿದು ಗುಡಿಸುತ್ತಿದ್ದಾರೆ ಎಂದರೆ ಅವರು ಖಂಡಿತವಾಗಿ ಅಮ್ಮನವರ ಗಂಡಂದಿರಲ್ಲ. ತಾವು ಕಷ್ಟ ಪಟ್ಟು ಕಟ್ಟಿಸಿದ ಮನೆ ಹಾಳಾಗದೆ ಸುಂದರವಾಗಿ ಸ್ವತ್ಛವಾಗಿರಲಿ ಎಂಬುದೇ ಅದರಾಳದ ಆಶಯ.

ವಾಸಂತಿ ಅಂಬಲಪಾಡಿ

Advertisement

Udayavani is now on Telegram. Click here to join our channel and stay updated with the latest news.

Next