Advertisement

ಮಹಿಳಾ ಅಧಿಕಾರಿ ವರ್ಗ ಮಾಡಬಾರದೇ?

09:44 AM Jan 24, 2018 | |

ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ವರ್ಗಾವಣೆ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ವರ್ಗಾವಣೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕಿಡಿ ಕಾರಿರುವ ಅವರು, ಮಹಿಳಾ ಐಎಎಸ್‌ ಅಧಿಕಾರಿಯನ್ನು ವರ್ಗಾವಣೆ ಮಾಡಬಾರದೇ ಎಂದು ಪ್ರಶ್ನಿಸಿದ್ದಾರೆ. 

Advertisement

ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ 121ನೇ ಜನ್ಮದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಮಂಗಳವಾರ ನೇತಾಜಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರ ಒತ್ತಡಕ್ಕೂ ಮಣಿದು ಈ ವರ್ಗಾವಣೆ ಮಾಡಿಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ಕೆಲವೊಂದು ವರ್ಗಾವಣೆ ಮಾಡಲಾಗುತ್ತಿದ್ದು, ಅದರಂತೆ ರೋಹಿಣಿ ಸಿಂಧೂರಿ ದಾಸರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಹಿಳಾ ಅಧಿಕಾರಿಗೆ ಇಲ್ಲಿ ಯಾವುದೇ ಅನ್ಯಾಯ ನಡೆದಿಲ್ಲ ಎಂದರು.

ರೋಹಿಣಿ ವರ್ಗಾವಣೆಗೆ ದೇವೇಗೌಡ ಆಕ್ರೋಶ
ಬೆಂಗಳೂರು: ಹಾಸನ ಡೀಸಿಯಾಗಿದ್ದ ರೋಹಿಣಿ ಸಿಂಧೂರಿ ವರ್ಗಾವಣೆಗೆ ಕೆಂಡಾಮಂಡಲವಾಗಿರುವ ಮಾಜಿ ಪ್ರಧಾನಿ
ಎಚ್‌.ಡಿ. ದೇವೇಗೌಡ, ಮಹಾ ಮಸ್ತಕಾಭಿಷೇಕ ಕಾಮಗಾರಿಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡಲಿಲ್ಲ ಎಂದು ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.  ಈ ಕುರಿತು ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಪತ್ರ ಬರೆಯುವುದಾಗಿಯೂ ಗುಡುಗಿರುವ ಅವರು, ಇನ್ಮುಂದೆ ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸುವ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಮಹಾಮಸ್ತ ಕಾಭಿಷೇಕ ಕಾರ್ಯಕ್ರಮಕ್ಕೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಪದ್ಮನಾಭನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಇಂತಹ ಕೆಟ್ಟ ಸರ್ಕಾರ ನಾನೆಂದೂ ನೋಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಹಾಮಸ್ತಕಾಭಿಷೇಕದ ಸಿದ್ಧತೆ ನಡೆಯುತ್ತಿದೆ, ಕಾಮಗಾರಿಗಳಲ್ಲಿ ಹಣ ಹೊಡೆಯಲು ಆ ಅಧಿಕಾರಿ ಬಿಡಲಿಲ್ಲ. ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ನಡೆದ ಸಭೆಯಲ್ಲೇ ಅಟ್ಟಣಿಗೆ ನಿರ್ಮಾಣ ಟೆಂಡರ್‌ ಕುರಿತು ಗಮನಕ್ಕೆ ತಂದಿದ್ದರು. ಹಿಂದಿನ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಅಟ್ಟಣಿಗೆ ಬಿದ್ದು ಹಲವರು ಗಾಯಗೊಂಡಿದ್ದರು. ಹೀಗಾಗಿ, ಈ ಬಾರಿ ಎಚ್ಚರಿಕೆ ವಹಿಸಬೇಕು. ಕಳಪೆ ಕಾಮಗಾರಿಗೆ ಅವಕಾಶ ಕೊಡಬಾರದು ಎಂದ ಹೇಳಿದ್ದರು.  ಅಲ್ಲಿನ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಇಂಥ ಪವಿತ್ರ ಕಾರ್ಯದಲ್ಲೂ ಕಮೀಷನ್‌ ಬೇಕಾ ಎಂದು ಪ್ರಶ್ನಿಸಿದರು.

ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ಚುನಾವಣಾ ಆಯೋಗ ತಡೆಯಾಜ್ಞೆ ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಾಗದೆ ಚುನಾವಣಾ ಆಯೋಗ ಹೇಗೆ ಮಧ್ಯಪ್ರವೇಶ ಮಾಡಿ ವರ್ಗಾವಣೆಗೆ ತಡೆಯಾಜ್ಞೆ ನೀಡುತ್ತೆ?
 ●ಸಿದ್ದರಾಮಯ್ಯ, ಸಿಎಂ

Advertisement

ಹಾಸನ ಡೀಸಿ ಅವರನ್ನು ವರ್ಗಾವಣೆ ಮಾಡುವ ರಾಜ್ಯ ಸರಕಾರದ ಆದೇಶಕ್ಕೆ ಚುನಾವಣಾ ಆಯೋಗ ತಡೆ ನೀಡಿದೆ. ಪ್ರಾಮಾಣಿಕ ಅಧಿಕಾರಿಗಳಿಗೆ ಎತ್ತಂಗಡಿ ಶಿಕ್ಷೆ ನೀಡುವ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರಿಗೆ ಇದರಿಂದ ಹಿನ್ನಡೆಯಾಗಿದೆ. ಮಹಾಮಸ್ತಕಾಭಿಷೇಕ
ಸಿದ್ಧತೆ ಸಮಯದಲ್ಲಿ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಅಸಲಿ ಕಾರಣವೇನು ಮುಖ್ಯಮಂತ್ರಿಗಳೇ?

 ●ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಹಾಸನ ಡೀಸಿ ವರ್ಗಾವಣೆ ಆಡಳಿತಕ್ಕೆ ಸಂಬಂಧಿಸಿದ್ದಾಗಿದ್ದು, ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ. ಇದನ್ನೇ ನೆಪ ಮಾಡಿಕೊಂಡು ಮಾಜಿ ಪ್ರಧಾನಿಯೊಬ್ಬರು ಶಿಷ್ಟಾಚಾರ ಬಿಟ್ಟು  ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದಿದ್ದಾರೆ. 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುವ ಈ ಕಾರ್ಯಕ್ರಮದಲ್ಲಿ ಶಿಷ್ಟಾಚಾರದಿಂದ ದೂರ ಸರಿಯುವುದು ಸರಿಯಲ್ಲ. ಈ ಮಹಾ ಕಾರ್ಯಕ್ಕೆ ಜಿಲ್ಲಾಧಿಕಾರಿ ವರ್ಗಾವಣೆಯೇ ಕಪ್ಪುಚುಕ್ಕೆಯಾಗಬಾರದು. 
 ●ಟಿ.ಬಿ.ಜಯಚಂದ್ರ, ಸಚಿವ

ಹಾಸನ ಡೀಸಿ ವರ್ಗಾವಣೆ ಸ್ವಾಭಾವಿಕವಾಗಿದೆ. ಆಡಳಿತಾತ್ಮಕ ಕಾರಣಕ್ಕೆ ಸರ್ಕಾರ ವರ್ಗಾವಣೆ ಮಾಡುತ್ತದೆ. ಅದನ್ನು ಪ್ರಶ್ನೆ ಮಾಡುವ ಹಕ್ಕು ನಮಗಿಲ್ಲ. ದೇವೇಗೌಡರ ನಿಲುವು ಅವರಿಗೆ ಬಿಟ್ಟಿದ್ದು. 
 ●ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next