Advertisement

ನೀರಿಗೆ ಬರವಿಲ್ಲ; ಆದರೆ ಕುಡಿಯಲು ಬರಲ್ಲ

11:10 PM Apr 09, 2019 | sudhir |

ಹೆಮ್ಮಾಡಿ: ಇಲ್ಲಿ ನೀರಿಗೆ ಯಾವುದೇ ರೀತಿಯ ಬರವಿಲ್ಲ. ಮೂರು ಸುತ್ತಲೂ ಸಮೃದ್ಧ ವಾದ ನೀರಿದೆ. ಆದರೆ ಅದು ಕುಡಿಯಲು ಮಾತ್ರ ಯೋಗ್ಯವಲ್ಲ. ಕಾರಣ ಉಪ್ಪು ನೀರು. ಇದು ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕನ್ನಡಕುದ್ರು ಜನರ ದುಃಸ್ಥಿತಿ.

Advertisement

ಕನ್ನಡಕುದ್ರುವಿನಲ್ಲಿ ಸುಮಾರು 40 – 50 ಮನೆಗಳಿವೆ. ಸಾವಿರಾರು ಮಂದಿ ಇಲ್ಲಿ ನೆಲೆಸಿದ್ದಾರೆ. ಸುತ್ತಲೂ ನೀರಿದ್ದರೂ ಒಂದು ಕೊಡಪಾನ ನೀರಿಗೆ ಕಾಯುವ ಪರಿಸ್ಥಿತಿ ಇಲ್ಲಿನ ಜನರದ್ದು.

ಎರಡು ದಿನಕ್ಕೊಮ್ಮೆ ನೀರು
ಹೆಮ್ಮಾಡಿ ಗ್ರಾ.ಪಂ. ವತಿಯಿಂದ ದಿನ ಬಿಟ್ಟು ದಿನ ನಳ್ಳಿ ನೀರು ಪೂರೈಸಲಾಗುತ್ತಿದೆ. ಆದರೆ ಅದು ಎಲ್ಲಿಯೂ ಸಾಲದು ಎನ್ನುವ ಜನ, ಕೆಲವರಿಗೆ 7-8 ಕೊಡ ಸಿಕ್ಕಿದರೆ, ಇನ್ನು ಕೆಲವು ಮನೆಗಳಿಗೆ 2-3 ಕೊಡ ಅಷ್ಟೇ ಸಿಗುತ್ತಿದೆ. ಇದು ಎರಡು ದಿನಕ್ಕೆ ಎಲ್ಲಿ ಸಾಕು ಎಂಬುದು ಇಲ್ಲಿನ ನಿವಾಸಿ ಲಲಿತಾ ಅವರ ಪ್ರಶ್ನೆ.

15 ದಿನಗಳಿಂದ ಬಂದಿರಲಿಲ್ಲ ನೀರು
ಇಲ್ಲಿ ಒಂದು ವಾರದ ಹಿಂದೆ 15 ದಿನಗಳ ಕಾಲ ಪಂಚಾಯತ್‌ನಿಂದ ನೀರೇ ಬಂದಿರಲಿಲ್ಲ. ನಳ್ಳಿ ಮೂಲಕ ಪೂರೈಸುವ ನೀರು ಸ್ಥಗಿತಗೊಂಡಿತ್ತು. ಆ ಬಳಿಕ ಇಲ್ಲಿನ ಜನರೆಲ್ಲ ಸೇರಿ ಪಂಚಾಯತ್‌ಗೆ ಮನವಿ ಸಲ್ಲಿಸಿದ ಬಳಿಕ ಈಗ ವಾರದಿಂದ ಅಂದರೆ ಎ. 1ರಿಂದ ಎರಡು ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ ಎನ್ನುತ್ತಾರೆ ಶಾರದಾ.

ಶಾಶ್ವತ ಪರಿಹಾರಕ್ಕೆ ಆಗ್ರಹ
ಪ್ರತೀ ವರ್ಷ ಫೆಬ್ರವರಿಯಿಂದ ಆರಂಭಗೊಂಡು ಮಾರ್ಚ್‌, ಎಪ್ರಿಲ್‌, ಮೇ ನಲ್ಲಿ ಕನ್ನಡಕುದ್ರುವಿನ ಜನ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆಗೆ ಮುಂದಿನ ದಿನಗಳಲ್ಲಿಯಾದರೂ ಶಾಶ್ವತ ಪರಿಹಾರ ಸಿಗಲಿ ಎನ್ನುವುದು ಇಲ್ಲಿನ ಜನರ ಆಗ್ರಹ.

Advertisement

ಗರಿಷ್ಠ ಪ್ರಯತ್ನ
ಕನ್ನಡಕುದ್ರುವಿಗೆ ಈಗ ಪಂಚಾಯತ್‌ ವತಿಯಿಂದ ಎರಡು ದಿನಕ್ಕೊಮ್ಮೆ ನಳ್ಳಿ ನೀರು ಕೊಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಸ್ವಲ್ಪ ಸಮಸ್ಯೆಯಾಗಿತ್ತು. ಆದರೆ ಈಗ ಕೊಡಲಾಗುತ್ತಿದೆ. ಅಲ್ಲಿರುವ ನೀರಿನ ಮೂಲಗಳಾದ ಬಾವಿ, ಕೊಳವೆ ಬಾವಿಗಳಲ್ಲಿ ಉಪ್ಪು ನೀರಿನಿಂದಾಗಿ ನೀರಿನ ಸಮಸ್ಯೆಯಿದೆ. ಪಂಚಾಯತ್‌ನಿಂದ ನೀರಿನ ಸಮಸ್ಯೆಯಾಗದಂತೆ ಗರಿಷ್ಠ ಪ್ರಯತ್ನ ಮಾಡಲಾಗುವುದು.
-ಮಂಜಯ್ಯ ಬಿಲ್ಲವ, ಹೆಮ್ಮಾಡಿ ಗ್ರಾ.ಪಂ. ಪಿಡಿಒ

ನೂರಲ್ಲ ಐನೂರು ಕೊಡ್ತೇವೆ
ಪಂಚಾಯತ್‌ನಿಂದ ಸರಿಯಾಗಿ ನೀರು ಕೊಡ್ತಿಲ್ಲ. 2 ದಿನಕ್ಕೊಮ್ಮೆ ಕೊಡುತ್ತಿದ್ದರೂ ಅದು ಇಲ್ಲಿರುವ 40ಕ್ಕೂ ಹೆಚ್ಚಿನ ಮನೆಗಳಿಗೆ ಸಾಕಾಗುತ್ತಿಲ್ಲ. ಆದರೂ ತಿಂಗಳು – ತಿಂಗಳು ನೀರಿನ ಬಿಲ್‌ ತೆಗೆದುಕೊಂಡು ಬರುತ್ತಾರೆ. ನೀವು ನಮಗೆ ಸರಿಯಾಗಿ ಕುಡಿಯುವ ನೀರು ಕೊಡಿ. ನಾವು ತಿಂಗಳಿಗೆ ನೂರಲ್ಲ, ಐನೂರು ರೂಪಾಯಿ ಬೇಕಾದರೆ ನೀರಿನ ಬಿಲ್‌ ಕೊಡ್ತೇವೆ.
-ಗಣೇಶ್‌, ಕನ್ನಡಕುದ್ರು ನಿವಾಸಿ

  • ಪ್ರಶಾಂತ್‌ ಪಾದೆ
Advertisement

Udayavani is now on Telegram. Click here to join our channel and stay updated with the latest news.

Next